ಸೋಮವಾರ, ಸೆಪ್ಟೆಂಬರ್ 23, 2013

ಜನರಿಗೆ ಸ್ವರ್ಗ-ನರಕ ನೀಡಲು ನೀವು ಯಾರು?


ಇಂದು ಮನುಷ್ಯನು ಹಲವಾರು ತಪ್ಪು ಗಳನ್ನೆಸಗುತ್ತಾನೆ. ಅದು ತಿಳಿದೋ ತಿಳಿಯದೆಯೋ  ಆಗಿರಬಹುದು. ಆದರೆ ಆ ತಪ್ಪುಗಳನ್ನು ಕಂಡಾಗ ಪರಸ್ಪರ ವಿಮರ್ಶಿಸುವ ಅಥವಾ ತಿದ್ದುವ  ಸ್ವಭಾವವು ಮಾನವ ಸಹಜವಾಗಿದೆ. ಕೆಲವರು ತಪ್ಪುಗಳನ್ನು ಕಂಡು ಪ್ರತ್ಯಕ್ಷವಾಗಿ  ಪ್ರತಿಕ್ರಿಯಿಸದಿದ್ದರೂ ಅವರ ಮನಸ್ಸಿನಲ್ಲಿ ಆ ತಪ್ಪುಗಳ ಬಗ್ಗೆ ಅಸಹನೆ, ತಿರಸ್ಕಾರ ಮನೋಭಾವ  ಮೂಡುತ್ತದೆ. ತಪ್ಪುಗಳನ್ನು ತಿದ್ದುವುದು ಸಮಾಜದಲ್ಲಿರುವ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ.  ಕೆಡುಕು ಮುಕ್ತ ಸಮಾಜದ ನಿರ್ಮಾಣಕ್ಕೆ ಇದು ಅನಿವಾರ್ಯವಾಗಿದೆ. ಇಸ್ಲಾಮ್ ಕೂಡಾ  ಇದನ್ನೇ ಆಜ್ಞಾಪಿಸಿದೆ. ಅಲ್ಲಾಹನ ಪ್ರವಾದಿಯವರು(ಸ) ಹೇಳಿದರು, "ಯಾರಾದರೂ ಕೆಡುಕನ್ನು  ಕಾಣುವುದಾದರೆ ಅದನ್ನು ತನ್ನ ಕೈಯಿಂದ ತಡೆಯಲಿ. ಅದು ಸಾಧ್ಯವಿಲ್ಲವೆಂದಾದರೆ  ನಾಲಗೆಯಿಂದ ತಡೆಯಲಿ. ಅದೂ ಅಸಾಧ್ಯ ಎಂದಾದರೆ ಅದರ ಬಗ್ಗೆ ಮನಸ್ಸಿನಲ್ಲಾದರೂ  ತಿರಸ್ಕಾರ ಮನೋಭಾವ ಮೂಡಬೇಕು. ಇದು ವಿಶ್ವಾಸದ ಅತ್ಯಂತ ದುರ್ಬಲ ಸ್ತರವಾಗಿದೆ."  ಆದ್ದರಿಂದ ತಪ್ಪನ್ನು ಕಂಡಾಗ ಮೌನವಹಿಸುವುದು ಓರ್ವ ವಿಶ್ವಾಸಿಯ ಮಟ್ಟಿಗೆ ಭೂಷಣವಲ್ಲ.  ತಪ್ಪನ್ನು ಕಂಡಾಗ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸದೆ ತಟಸ್ಥರಾಗುವುದಾದರೆ ಅದು  ಆ ತಪ್ಪನ್ನು ಪೆÇ್ರೀತ್ಸಾಹಿಸಿದಂತೆ.
ಆದರೆ ತಪ್ಪೆಸಗಿದಾತನನ್ನು ತಿದ್ದುವಾಗ ಅಥವಾ ವಿಮರ್ಶಿಸುವಾಗ ವಿಶ್ವಾಸಿಗಳು ಪಾಲಿಸಬೇಕಾದ  ಕೆಲವು ಶಿಷ್ಟಾಚಾರಗಳೂ ನಿಯಮಗಳೂ ಇವೆ. ಸಂಸ್ಕರಣೆಯ ಕಾರ್ಯವು ಯಶಸ್ವಿಯಾಗಲು  ಪರಲೋಕದಲ್ಲಿ ಪ್ರತಿಫಲ ಪಡೆಯಲು ಅವುಗಳ ಪಾಲನೆಯು ಅತ್ಯಗತ್ಯವಾಗಿದೆ. ಇಲ್ಲದಿದ್ದರೆ  ತಿದ್ದುವಾತನೇ ತಪ್ಪಿತಸ್ಥನಾಗಬಹುದು. ಅಬೂ ಹುರೈರ(ರ) ವರದಿ ಮಾಡಿರುವ ಒಂದು ಹದೀಸ್  ಹೀಗಿದೆ. "ಅಲ್ಲಾಹನ ಪ್ರವಾದಿ(ಸ) ಹೇಳಿರುವುದಾಗಿ ನಾನು ಕೇಳಿದ್ದೇನೆ. ಇಸ್ರಾಯೀಲ್ಯ ರಾದ  ಎರಡು ಮಂದಿ ಸಹೋದರರಿದ್ದರು. ಇವರ ಪೈಕಿ ಓರ್ವನು ಸದಾ ಕೆಡುಕುಗಳಲ್ಲಿ ಮುಳುಗಿದ್ದನು.  ಮತ್ತೋರ್ವನು ಸದಾ ಆರಾಧನೆ ಗಳಲ್ಲಿ ತಲ್ಲೀನನಾಗಿ ಬದುಕುತ್ತಿದ್ದನು. ಭಕ್ತನು ತನ್ನ  ಸಹೋದರನನ್ನು ಯಾವಾಗಲೂ ತಪ್ಪೆಸ ಗುವವನಾಗಿಯೇ ಕಾಣುತ್ತಿದ್ದನು. ಅವನು  ಉಪದೇಶಿಸುತ್ತಿದ್ದನು." ಪ್ರಿಯ ಸಹೋದರಾ, ಕೆಡುಕುಗಳನ್ನು ತ್ಯಜಿಸು."
ಒಮ್ಮೆ ಒಂದು ತಪ್ಪಿನ ಹೆಸರಿನಲ್ಲಿ ಭಕ್ತನು ಹೇಳಿದನು, "ನೀನು ತಪ್ಪುಗಳಿಂದೆಲ್ಲಾ ದೂರವಿರ  ಬೇಕು." ಆಗ ತಪ್ಪೆಸಗುವ ಸಹೋದರನು ಹೇಳಿದನು, "ಇದು ನನ್ನ ಹಾಗೂ ನನ್ನ ಸೃಷ್ಟಿಕರ್ತನ  ಮಧ್ಯೆ ಇರುವ ವಿಚಾರ. ಇದಕ್ಕೆ ನೀನು ಮೂಗು ತೂರಿಸಬೇಡಾ. ನನ್ನ ಮೇಲ್ನೋಟ  ವಹಿಸುವವನಾಗಿ ನಿನ್ನನ್ನು ನೇಮಿಸಲಾಗಿದೆಯೇ?" ಆಗ ಭಕ್ತನು ಹೇಳಿದನು. "ಅಲ್ಲಾಹನಾಣೆ,  ಅವನು ನಿನ್ನನ್ನು ಎಂದೂ ಕ್ಷಮಿಸಲಿಕ್ಕಿಲ್ಲ. ಒಂದು ದಿವಸವೂ ನಿನ್ನನ್ನು ಸ್ವರ್ಗಕ್ಕೆ ಪ್ರವೇಶ  ಗೊಳಿಸಲಿಕ್ಕಿಲ್ಲ." (ಪ್ರವಾದಿಯವರು(ಸ) ಹೇಳು ತ್ತಾರೆ) ಬಳಿಕ ಅವರ ಆತ್ಮವನ್ನು ಅಲ್ಲಾಹನು  ತೆಗೆದನು. ಹಾಗೆ ಅವರು ಸೃಷ್ಟಿಕರ್ತನ ಸನ್ನಿಧಿಗೆ ತಲುಪಿದರು. ಅಲ್ಲಾಹನು ಭಕ್ತನೊಂದಿಗೆ  ಕೇಳಿದನು, "ನನ್ನ ಬಗ್ಗೆ ಹೆಚ್ಚು ತಿಳಿದವನು ನೀನಾ? ಅಥವಾ ನನ್ನ ಅಧಿಕಾರದಲ್ಲಿ ನಿನಗೆ  ಏನಾದರೂ ಪಾಲಿದೆಯೇ?" ತಪ್ಪೆಸಗುತ್ತಿದ್ದವನೊಂದಿಗೆ ಅಲ್ಲಾಹನು ಹೇಳಿದನು, "ನನ್ನ  ಕರುಣೆಯಿಂದಾಗಿ ನೀನು ಸ್ವರ್ಗಕ್ಕೆ ಹೋಗು" ಭಕ್ತನ ಕುರಿತು ಮಲಕ್‍ಗಳಿಗೆ ಆಜ್ಞಾಪಿಸಿದನು.  "ಇವನನ್ನು ನೀವು ನರಕಕ್ಕೆ ಎಳೆದುಕೊಂಡು ಹೋಗಿರಿ". (ಹದೀಸ್ ವರದಿ ಮಾಡಿದ ಬಳಿಕ)  ಅಬೂ ಹುರೈರ(ರ) ಹೇಳುತ್ತಾರೆ, "ನನ್ನ ಆತ್ಮವು ಯಾರ ಹಸ್ತದಲ್ಲಿ ದೆಯೋ ಆತನಾಣೆ! ಓರ್ವನ  ಇಹ-ಪರಗಳನ್ನು ಬುಡಮೇಲುಗೊಳಿಸಲು ಆತ ಉಚ್ಚರಿಸುವ ಒಂದು ಮಾತು ಸಾಕು."
ತಪ್ಪುಗಳು ಸಂಭವಿಸುವುದು ಮನುಷ್ಯ ಸಹಜವಾಗಿದೆ. ಎಲ್ಲ ತಪ್ಪುಗಳಿಂದ ಮುಕ್ತರಾದ ಪ್ರವಾದಿಗಳ  ಹೊರತು ಇದರಿಂದ ಯಾರೂ ಮುಕ್ತರಾಗಿಲ್ಲ. ಆದ್ದರಿಂದ ತಪ್ಪೆಸಗುವವರನ್ನು ನಿಂದಿಸಬಾರದು  ಮತ್ತು ಅವಹೇಳನಕ್ಕೆ ಗುರಿಪಡಿಸಬಾರದು. ಅದು ರಹಸ್ಯವಾಗಿಯಾದರೂ  ಬಹಿರಂಗವಾಗಿಯಾದರೂ ಸರಿ. ತಪ್ಪೆಸಗುವವರನ್ನು ವೈಯಕ್ತಿಕವಾಗಿ ಕಂಡು ಅವರಿಗೆ ತನ್ನ ತಪ್ಪಿನ  ಕುರಿತು ಮನವರಿಕೆ ಮಾಡಿಕೊಡಬೇಕು. ಅವರ ತಪ್ಪಿನ ಭವಿಷ್ಯದ ಬಗ್ಗೆ ತಿಳಿಹೇಳಬೇಕು. ಆಗ  ಅವರು ತನ್ನ ತಪ್ಪನ್ನು ತಿದ್ದಿಕೊಳ್ಳಲು ತಯಾ ರಾಗುತ್ತಾರೆ. ತಿದ್ದಿದವನ ಕುರಿತು ಗೌರವ  ಮನೋಭಾವ ತಾಳುತ್ತಾರೆ. ತನ್ನ ಮೇಲೆ ಆತನಿಗೆ ಏನೋ ಕಾಳಜಿ ಇದೆ ಎಂದು ಬಾವಿಸಿ ಅವರ  ಸಂಬಂಧವು ಸುದೃಢವಾಗುತ್ತದೆ. ಮುಂದೆ ಹಲವಾರು ಸಲಹೆ, ಉಪದೇಶಗಳಿಗೆ ಆ  ಸಹೋದರನನ್ನು ಸವಿೂಪಿಸುತ್ತಾನೆ.
ಉಮರ್(ರ) ಹೇಳುತ್ತಾರೆ, "ನಿಮ್ಮ ಸಹೋದರನು ಒಂದು ತಪ್ಪೆಸಗಿದರೆ ಅವನನ್ನು ಆ ತಪ್ಪಿನಿಂದ  ಕೈ ಹಿಡಿದು ಮೇಲೆತ್ತಲು ಮತ್ತು ಸನ್ಮಾರ್ಗದಲ್ಲಿ ಮುನ್ನಡೆಸಲು ಪ್ರಯತ್ನಿಸಬೇಕು. ಮಾಡಿದ ತಪ್ಪಿಗೆ  ಪಶ್ಚಾತ್ತಾಪ ಮನೋಭಾವ ಮೂಡಲು ಮತ್ತು ಅವನನ್ನು  ಕ್ಷಮಿಸಲು ಅಲ್ಲಾಹನೊಂದಿಗೆ  ಪ್ರಾರ್ಥಿಸಬೇಕು. ನಿಮ್ಮ ಸಹೋದರರ ವಿಚಾರದಲ್ಲಿ ಯಾವತ್ತೂ ಶೈತಾನ ನನ್ನು  ಸಹಾಯಕನಾಗಿಸಬಾರದು."
ಒಮ್ಮೆ ಅಬೂದರ್ದಾ(ರ) ಒಂದು ದಾರಿಯ ಮೂಲಕ ಸಾಗುತ್ತಿದ್ದಾಗ ಜನರು ಓರ್ವನನ್ನು  ಸಿಕ್ಕಾಪಟ್ಟೆ ಬೈಯುತ್ತಿರುವುದನ್ನು ಕಂಡರು. ಅಬೂದರ್ದಾ ಅವರೊಂದಿಗೆ ಕೇಳಿದರು, "ನಿಮ್ಮ ಈ  ಸಹೋದರನು ಒಂದು ಬಾವಿಗೆ ಬಿದ್ದಿದ್ದಾನೆ ಎಂದು ಭಾವಿಸೋಣ. ಆಗ ನೀವು ಈತನೊಂದಿಗೆ  ಹೇಗೆ ವರ್ತಿಸುವಿರಿ?" ಅವರು ಹೇಳಿದರು. "ನಾವು ಅವರನ್ನು ಬಾವಿಯಿಂದ ಮೇಲೆತ್ತಲು  ಯತ್ನಿಸುವೆವು." ಆಗ ಅಬೂದರ್ದಾ ಹೇಳಿದರು. "ಹಾಗಾದರೆ ಈ ಸಹೋದರನನ್ನು  ಆಕ್ಷೇಪಿಸಬೇಡಿ. ಅವನ ಒಳಿತಿಗಾಗಿ ಪ್ರಾರ್ಥಿಸಿರಿ. ತಪ್ಪುಗಳಲ್ಲಿ ಸಿಲುಕುವುದರಿಂದ ನಿಮ್ಮನ್ನು  ಕಾಪಾಡಿದ ಅಲ್ಲಾಹನನ್ನುಸ್ತುತಿಸಿರಿ." ಆಗ ಅವರು ಕೇಳಿದರು. "ನಾವು ಈತನನ್ನು ದ್ವೇಷಿಸುವುದಕ್ಕೆ  ವಿರೋಧ ವಿದೆಯೇ?" ಅಬೂದರ್ದಾ ಹೇಳಿದರು, "ನಾನು ಈತನ ತಪ್ಪುಗಳನ್ನು ಮಾತ್ರ  ದ್ವೇಷಿಸುತ್ತೇನೆ. ಅದನ್ನು ಆತ ತ್ಯಜಿಸಿದ ಕ್ಷಣದಲ್ಲೇ ಆತ ನನ್ನ ಗೆಳೆಯನಾಗುವನು."
ಇಂದು ತಪ್ಪನ್ನು ತಿದ್ದುವ ವಿಚಾರದಲ್ಲಿ ಹೆಚ್ಚಾಗಿ ಸಂಬಂಧಗಳೇ ಮುರಿಯುತ್ತವೆ. ಕಾರಣ ಅದರ  ಶೈಲಿಯಾಗಿದೆ. ನಾಲ್ಕು ಜನರ ಮುಂದೆ ತಪ್ಪೆಸಗಿದವನನ್ನು ನಾವು ತರಾಟೆಗೆ ತೆಗೆದು ಕೊಳ್ಳುತ್ತೇವೆ.  ಆತನನ್ನು ಅವಹೇಳನ ಮಾಡುತ್ತೇನೆ. ಇಂತಹ ಸಂದರ್ಭಗಳಲ್ಲಿ ತಪ್ಪೆಸಗಿದವನು ತನ್ನ ತಪ್ಪನ್ನು  ತಿದ್ದುವುದಕ್ಕೆ ಬದಲಾಗಿ ತಿದ್ದಿದವನ ಮೇಲೆ ಹಗೆತನ ಕಟ್ಟಿಕೊಳ್ಳುತ್ತಾನೆ. ಆತನ ಮೇಲೆ ಪ್ರತಿಕಾರ  ತೀರಿಸಲು ಅವಕಾಶಕ್ಕಾಗಿ ಕಾಯು ತ್ತಿರುತ್ತಾನೆ. ಈ ರೀತಿಯ ತಿದ್ದುವಿಕೆಯಿಂದಾಗಿ ಆತನು ತನ್ನ  ತಪ್ಪನ್ನು ಮುಂದುವರಿಸುತ್ತಾನೆ ಮತ್ತು ಅದು ಇತರ ತಪ್ಪುಗಳಿಗೆ ನಾಂದಿಯಾಗುತ್ತದೆ. ಕೊನೆಗೆ  ತಿದ್ದಿದವನೇ ತಪ್ಪಿತಸ್ಥನಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಇಂದು ಜನರನ್ನು ಸ್ವರ್ಗಕ್ಕೂ ನರಕಕ್ಕೂ ವಿಂಗಡಿಸಿ ಕಳುಹಿಸುವ ಹೊಣೆಗಾರಿಕೆಯನ್ನು ಕೆಲ ವರು  ವಹಿಸಿಕೊಂಡಂತೆ ಭಾಸವಾಗುತ್ತದೆ. ಅದೂ ಕೂಡಾ ಬಹಿರಂಗವಾಗಿ ಸ್ಟೇಜುಗಳಲ್ಲೂ ಪೇಜು  ಗಳಲ್ಲೂ ನಡೆಯುತ್ತಿದೆ. ತಪ್ಪುಗಳನ್ನು ತಿದ್ದಿ ಕೊನೆಗೆ ಸ್ವರ್ಗ ನರಕದ ತೀರ್ಪು ನೀಡಿ ಬಿಡುತ್ತಾರೆ.  ಇದ ರಿಂದಾಗಿ ಸಮಾಜದಲ್ಲಿ ಅಶಾಂತಿ ಮೂಡುತ್ತದೆಯೇ ಹೊರತು ಶಾಂತಿ ನೆಲೆಸಲು  ಸಾಧ್ಯವಿಲ್ಲ. ಇದು ಜನರ ಮಧ್ಯೆ ದ್ವೇಷವನ್ನು ಬಿತ್ತುತ್ತದೆ.
"ಒಳಿತನ್ನು ಆಜ್ಞಾಪಿಸಿರಿ ಕೆಡುಕನ್ನು ತಡೆಯಿರಿ" ಎಂಬ ಕುರ್‍ಆನ್‍ನ ಆಹ್ವಾನವನ್ನು ಸ್ವೀಕರಿಸಿ  ಕಾರ್ಯವೆಸಗುವುದಾದರೂ ಇತರರ ಅಭಿ ಮಾನಕ್ಕೂ ಪ್ರತಿಷ್ಠೆಗೂ ಕುಂದುಂಟು ಮಾಡ ಬಾರದು.  ಮೇಲೆ ಉದ್ಧರಿಸಲಾದ ಬನೀ ಇಸ್ರಾಯೀಲ್ ಸಹೋದರರ ಕಥೆಯು ಇದನ್ನೇ ಬೆಟ್ಟು  ಮಾಡುತ್ತದೆ. ತಪ್ಪೆಸಗಿದ ಕಾರಣಕ್ಕಾಗಿ ಓರ್ವನಿಗೆ ದೇವನ ಕುರುಣೆಯನ್ನೂ ಸ್ವರ್ಗವನ್ನೂ  ನಿಷೇಧಿಸುವುದು ಪ್ರಾಮಾಣಿಕ ವಿಶ್ವಾಸಿಯ ಕೆಲಸವಲ್ಲ, ಪ್ರವಾದಿಯವರು(ಸ) ಅತ್ಯಂತ  ಗೌರವಯುತವಾಗಿ ಹೇಳಿದ್ದಾರೆ. "ಇಂತಹ ವ್ಯಕ್ತಿ ಸ್ವರ್ಗಕ್ಕೆ ಹೋಗುತ್ತಾನೆ, ಇಂತಹ ವ್ಯಕ್ತಿ ನರಕಕ್ಕೆ  ಹೋಗುತ್ತಾನೆ ಎಂದೆಲ್ಲಾ ತೀರ್ಪು ನೀಡುವ ಸಮುದಾಯದ ಮಂದಿಗೆ ನಾಶ."
ಆದ್ದರಿಂದ ಸ್ವರ್ಗ-ನರಕವನ್ನು ಯಾರಿಗೆ ನೀಡಬೇಕು ಎಂಬುದನ್ನು ತೀರ್ಮಾನಿಸುವುದು  ಅಲ್ಲಾಹನು ಮಾತ್ರ. ಅದರಲ್ಲಿ ಯಾರೂ ಹಸ್ತಕ್ಷೇಪ ನಡೆಸುವಂತಿಲ್ಲ. ಅಲ್ಲಾಹನು ಇಚ್ಛಿಸು ವವನಿಗೆ  ಅದನ್ನು ನೀಡುತ್ತಾನೆ. ಆತನ ಅಧಿಕಾರದಲ್ಲಿ ಹಸ್ತಕ್ಷೇಪ ನಡೆಸುವುದು ಶಿರ್ಕ್ ಆಗಿದೆ. ಶಿರ್ಕ್‍ನ್ನು  ತಡೆಯಲು ಹೋಗಿ ಸ್ವತಃ ಶಿರ್ಕ್‍ನಲ್ಲಿ ಸಿಲುಕಿ ಕೊಳ್ಳುವ ದುರವಸ್ಥೆಯು ಯಾರಿಗೂ  ಬರಬಾರದು. ಸ್ವರ್ಗ-ನರಕ ನೀಡುವ ಮಂದಿಗೆ ತನ್ನ ಸ್ವಂತ ಸ್ಥಿತಿಯ ಕುರಿತು ಹೇಳಲು ಅಸಾಧ್ಯ.  ಹೆಚ್ಚೇಕೆ! ಪ್ರವಾದಿಯವರಿಗೆ(ಸ) ತನ್ನ ಬಗ್ಗೆ ಹೇಳಲಿಕ್ಕಾಗಲಿಲ್ಲ. ಒಮ್ಮೆ ಪ್ರವಾದಿಯವರು(ಸ) ಹೀಗೆ  ಹೇಳಿದರು, "ಅಲ್ಲಾಹನಾಣೆ, ನಾನು ಪ್ರವಾದಿಯಾಗಿದ್ದ ಅಂತ್ಯ ದಿನದಲ್ಲಿ ನನಗೇನು  ಸಂಭವಿಸುತ್ತದೆ ಎಂದು ನನಗೆ ತಿಳಿದಿಲ್ಲ."
ಆದ ಕಾರಣ ಯಾರಿಗೂ ಏನನ್ನೂ ತೀರ್ಮಾನಿಸಲು ಸಾಧ್ಯವಿಲ್ಲ. ಅವೆಲ್ಲವೂ ಅಲ್ಲಾಹನಿಗೆ  ವಿೂಸಲಾದ ವಿಚಾರವಾಗಿದೆ. ತಪ್ಪನ್ನು ತಿದ್ದಲು ಹೋಗಿ ಸ್ವತಃ ತಪ್ಪಿತಸ್ಥರಾಗದಂತೆ ಎಚ್ಚರ  ವಹಿಸಬೇಕು. ಉಮರ್(ರ) ಹೇಳಿದರು. "ನಿಮ್ಮ ವಿಚಾರದಲ್ಲಿ ನಾನು ಅತ್ಯಂತ ಹೆದರುವುದು  ಓರ್ವನು ಸ್ವಂತ ಅಭಿಪ್ರಾಯದಲ್ಲಿ ಹೆಮ್ಮೆ ಪಡುವುದನ್ನಾಗಿದೆ. ತಾನು ಓರ್ವ ವಿದ್ವಾಂಸ ಎಂದು  ಯಾರಾದರೂ ಸ್ವತಃ ಹೇಳಿಕೊಂಡರೆ ಆತ ಅಜ್ಞಾನಿಯಾಗಿದ್ದಾನೆ. ತಾನು ಸ್ವರ್ಗಕ್ಕೆ ಹಕ್ಕುದಾರ  ಎಂದು ಓರ್ವನು ಹೆಮ್ಮೆಪಟ್ಟರೆ ಆತ ನರಕಕ್ಕೆ ಹಕ್ಕುದಾರನಾಗುತ್ತಾನೆ.

ಸೋಮವಾರ, ಸೆಪ್ಟೆಂಬರ್ 02, 2013

ಆ ಮೂವರ ಪ್ರಾರ್ಥನೆಯ ಬಗ್ಗೆ ಎಚ್ಚರ ವಹಿಸಿ



ಓರ್ವ ವಿಶ್ವಾಸಿಗೆ ಸಂಬಂಧಿಸಿದಂತೆ ಪ್ರಾರ್ಥನೆ ಎಂಬುದು ಆತನ ಆಯುಧವಾಗಿದೆ. ಪ್ರಾರ್ಥನೆಯು ವಿಶ್ವಾಸಿಯನ್ನು ತನ್ನ ಸೃಷ್ಟಿಕರ್ತನೊಂದಿಗೆ ಜೋಡಿಸುತ್ತದೆ. ವಿಶ್ವಾಸಿಯು ಅಲ್ಲಾಹ ನೊಂದಿಗೆ ಪ್ರಾರ್ಥಿಸುವಾಗ ಅಲ್ಲಾಹನು ಸಂತುಷ್ಟನಾಗುತ್ತಾನೆ. ಪ್ರವಾದಿಯವರು(ಸ) ಪ್ರಾರ್ಥನೆಯನ್ನು ಆರಾಧನೆ ಎಂದಿದ್ದಾರೆ. ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿದರೆ ಅಲ್ಲಾಹನು ಖಂಡಿತವಾಗಿಯೂ ಸ್ವೀಕರಿಸುತ್ತಾನೆ. ಅಲ್ಲಾಹನ ವಿಧಿಯನ್ನು ಬದಲಿಸುವ ಶಕ್ತಿಯು ಪ್ರಾರ್ಥನೆಯಾಗಿದೆ. ಪ್ರವಾದಿಯವರು(ಸ) ಹೇಳಿದರು. “ಪ್ರಾರ್ಥನೆ ಯಲ್ಲದೆ ವಿಧಿಯನ್ನು ಬದಲಿಸುವುದಿಲ್ಲ. ಒಳಿತಲ್ಲದೆ ಆಯುಷ್ಯವನ್ನು ಹೆಚ್ಚಿಸುವುದಿಲ್ಲ.”
ನಾವೆಲ್ಲರೂ ಪ್ರಾರ್ಥಿಸುತ್ತೇವೆ. ನಮ್ಮ ಬೇಡಿಕೆಗಳನ್ನು ಕಷ್ಟ, ಬೇಗುದಿಗಳನ್ನೂ ಅಲ್ಲಾಹನ ಮುಂದೆ ಇಡುತ್ತೇವೆ. ಅಲ್ಲಾಹನು ಬಯಸಿದರೆ ಅದಕ್ಕೆ ಉತ್ತರ ನೀಡುತ್ತಾನೆ ಅಥವಾ ತಿರಸ್ಕರಿಸುತ್ತಾನೆ. ತಿರಸ್ಕರಿಸಲ್ಪಡದ ಮೂರು ಮಂದಿಯ ಪ್ರಾರ್ಥನೆಗಳ ಕುರಿತು ಪ್ರವಾದಿಯವರು(ಸ) ಹೇಳಿದ್ದಾರೆ.
ಅಬೂ ಹುರೈರಾ(ರ) ವರದಿ ಮಾಡಿದ್ದಾರೆ. ಪ್ರವಾದಿ ಯವರು(ಸ) ಹೇಳಿದರು, “ಮೂರು ಮಂದಿಯ ಪ್ರಾರ್ಥನೆಗಳು ತಿರಸ್ಕರಿಸಲ್ಪಡುವುದಿಲ್ಲ. ಉಪವಾಸಿಗನು ಉಪವಾಸ ತೊರೆಯುವ ವರೆಗೆ, ನ್ಯಾಯವಂತ ಆಡಳಿತಗಾರ ಮತ್ತು ಮರ್ದಿತನ ಪ್ರಾರ್ಥನೆ. ಅಲ್ಲಾಹನು ಅದನ್ನು ಮೋಡಗಳಿಗಿಂತ ಮೇಲೆ ಉತ್ತುಂಗಕ್ಕೇರಿಸುವನು ಮತ್ತು ಅದಕ್ಕಾಗಿ ಆಕಾಶದ ಬಾಗಿಲುಗಳನ್ನು ತೆರೆಯುವನು. ಅಲ್ಲಾಹನು ಹೇಳುವನು. “ನನ್ನ ಪ್ರತಾಪದಾಣೆ. ಸ್ವಲ್ಪ ತಡವಾದರೂ ನಾನು ನಿನಗೆ ಖಂಡಿತವಾಗಿಯೂ ಸಹಾಯ ಮಾಡುವೆನು.”
ಈ ಪ್ರವಾದಿ ವಚನದ ಪ್ರಕಾರ ಅಲ್ಲಾಹನು ಮೂರು ವಿಭಾಗದವರ ಪ್ರಾರ್ಥನೆಯನ್ನು ಸ್ವೀಕರಿಸುವನು. ಅವರ ಪೈಕಿ ಮೊದಲಿಗರು ಉಪವಾಸಿಗಳಾಗಿದ್ದಾರೆ. ಅಲ್ಲಾಹನ ಸಂಪ್ರೀತಿಯನ್ನು ಬಯಸಿ ಉಪವಾಸಿಗನು ತನಗೆ ಅನುಮತಿಸಿದ್ದನ್ನೂ ಹಗಲಿಡೀ ತೊರೆಯುತ್ತಾನೆ. ತನ್ನ ಮನಸ್ಸನ್ನೂ ಜೀವನವನ್ನೂ ಶುದ್ಧೀಕರಿಸಲು ಅವನು ರಮಝಾನ್ ತಿಂಗಳಲ್ಲಿ ಪಣತೊಟ್ಟಿರುತ್ತಾನೆ. ಅದಕ್ಕಾಗಿ ಅವನು ಎಲ್ಲಾ ಕಷ್ಟ, ತ್ಯಾಗಗಳನ್ನು ಸಹಿಸುತ್ತಾನೆ. ಶೈತಾನನ ದುರ್ಭೋದನೆಗಳನ್ನು ಮೆಟ್ಟಿ ನಿಲ್ಲುತ್ತಾನೆ. ಅಲ್ಲಾಹನಿಗಾಗಿ ಅನ್ನ ಪಾನೀಯಗಳನ್ನು ತೊರೆಯುತ್ತಾನೆ. ದೈಹಿಕ ವ್ಯಾಮೋಹಗಳನ್ನು ದಮನಿಸುತ್ತಾನೆ. ತನ್ನ ಜೀವವನ್ನೇ ಅಲ್ಲಾಹನಿನಗಾಗಿ ಸಮರ್ಪಿಸು ತ್ತಾನೆ. ಮಾತನಾಡುವಾಗಲೂ, ಇತರರೊಂದಿಗೆ ವ್ಯವಹರಿಸು ವಾಗಲೂ, ವ್ಯಾಪಾರದಲ್ಲೂ ಕೊಡುಕೊಳ್ಳುವಿಕೆಯಲ್ಲೂ ತಪ್ಪು ಸಂಭವಿಸದಂತೆ ಎಚ್ಚರ ವಹಿಸುತ್ತಾನೆ. ಒಟ್ಟಿನಲ್ಲಿ ಆತ ಅಲ್ಲಾಹ ನನ್ನು ಭಯಪಟ್ಟು ಜೀವಿಸುತ್ತಾನೆ. ಆದ್ದರಿಂದ ಅಲ್ಲಾಹನು ಉಪವಾಸಿಗನಿಗೆ ಪ್ರತ್ಯೇಕ ಆದ್ಯತೆ ನೀಡಿದ್ದಾನೆ. ಪ್ರವಾದಿಯವರು(ಸ) ಉಪವಾಸಿಗನ ಕರ್ಮಗಳ ಕುರಿತು ಹೀಗೆ ಹೇಳಿದ್ದಾರೆ. “ಉಪವಾಸಿಗನ ನಿದ್ದೆಯು ಆರಾಧನೆಯಾಗಿದೆ. ಅವನ ಮೌನವು ದೇವಸ್ಮರಣೆಯಾಗಿದೆ. ಅವನ ಕರ್ಮಗಳಿಗೆ ಇಮ್ಮಡಿ ಪ್ರತಿಫಲ ದೊರೆಯುತ್ತದೆ. ಅವನ ಪ್ರಾರ್ಥನೆಗಳು ಸ್ವೀಕಾರಾರ್ಹವಾಗಿವೆ. ಅವನ ಪಾಪಗಳು ಕ್ಷಮಿಸಲ್ಪಡುವುವು.”
ಅಬೂ ಹುರೈರ(ರ) ವರದಿ ಮಾಡಿರುವ ಇನ್ನೊಂದು ಪ್ರವಾದಿ ವಚನವು ಹೀಗಿದೆ. “ಎಲ್ಲಾ ಉಪವಾಸಿಗರಿಗೂ ಅಲ್ಲಾಹನ ಬಳಿ ಸ್ವೀಕರಿಸಲ್ಪಡುವ ಒಂದು ಪ್ರಾರ್ಥನೆ ಇದೆ. ಒಂದೋ ಇಹಲೋಕದಲ್ಲೇ ಅಲ್ಲಾಹನು ನೀಡುವನು. ಇಲ್ಲದಿದ್ದರೆ ಪರಲೋಕಕ್ಕಾಗಿ ತೆಗೆದಿರಿಸುವನು.”
ಆದ್ದರಿಂದ ಉಪವಾಸಿಗನು ಶುದ್ಧ ಮನಸ್ಸಿನಿಂದ ಪ್ರಾರ್ಥಿಸು ವುದಾದರೆ ಖಂಡಿತವಾಗಿಯೂ ಅದಕ್ಕೆ ಉತ್ತರ ಲಭಿಸುತ್ತದೆ. ಇಮಾಮ್ ತಿರ್ಮಿದಿ ವರದಿ ಮಾಡಿರುವ ಇನ್ನೊಂದು ವಚನದಲ್ಲಿ “ಉಪವಾಸಿಗನು ಉಪವಾಸ ತೊರೆಯುವಾಗ” ಎಂದಿದೆ. ಅಂದರೆ ಉಪವಾಸಿಗನಿಗೆ ನೀಡಲಾದ ಈ ಸೌಲ ಭ್ಯವು ಅತ್ಯಂತ ಹೆಚ್ಚು ಸೂಕ್ತವಾಗಿರುವುದು ಉಪವಾಸ ತೊರೆ ಯುವ ವೇಳೆಯಲ್ಲಾಗಿದೆ. ನಮಾಝ್ ನಿರ್ವಹಿಸುವವನ ಪ್ರಾರ್ಥನೆಯು ಹೆಚ್ಚು ಸ್ವೀಕಾರಾರ್ಹವಾಗುವುದು ಅದರ ಕೊನೆಯ ಗಳಿಗೆಯಲ್ಲಾಗಿದೆ ಎಂದು ಪ್ರವಾದಿಯವರು(ಸ) ಹೇಳಿದ್ದಾರೆ, “ಉಪವಾಸವೂ ಕೂಡಾ ಹಾಗೆಯೇ ಆಗಿದೆ. ಕರ್ಮಗಳಿಗೆ ಪ್ರತಿಫಲ ದೊರೆಯುವುದು ಅದರಿಂದ ವಿರಮಿಸುವ ಸಂದರ್ಭದಲ್ಲಾಗಿದೆಯಷ್ಟೇ.”
ಉಪವಾಸಿಗನ ಬಳಿಕ ಸ್ವೀಕಾರಾರ್ಹವಾಗುವ ಪ್ರಾರ್ಥನೆಯು ನ್ಯಾಯವಂತನಾದ ಆಡಳಿತಾಧಿಕಾರಿಯದ್ದಾಗಿದೆ. ಓರ್ವನಿಗೆ ಅಲ್ಲಾಹನು ಅಧಿಕಾರ ನೀಡಿದರೆ ಆ ಅಧಿಕಾರವು ಅಲ್ಲಾಹನ ಅಮಾನತ್ತಾಗಿದೆ. ಅದನ್ನು ಅಲ್ಲಾಹನ ಬಯಕೆಯಂತೆಯೇ ಈ ಭೂಮಿಯಲ್ಲಿ ಸ್ಥಾಪಿಸಬೇಕಾಗಿದೆ. ನ್ಯಾಯ ಪೂರ್ಣವೂ ಅಕ್ರಮ ರಹಿತವೂ ಆದ ಆಡಳಿತ ನಡೆಸುವುದು ಪ್ರತೀ ಆಡಳಿತಾಧಿಕಾರಿಯ ಹೊಣೆಗಾರಿಕೆಯಾಗಿದೆ. ಅಕ್ರಮಿಯಾದ ಆತಳಿತಾಧಿಕಾರಿಯು ಪ್ರಜೆಗಳಿಗೂ, ದೇಶಕ್ಕೂ ಮಾತ್ರವಲ್ಲ ಈ ಲೋಕಕ್ಕೇ ಕಂಟಕ ವಾಗಿರುತ್ತಾನೆ. ಅವನಿಂದಾಗಿ ಸಮಾಜವು ಸರಿದಾರಿಗೆ ಬರುವ ಹೊರತು ತಪ್ಪು ಹಾದಿ ತುಳಿಯುತ್ತದೆ. ಆತ ಎಸಗುವ ಅಕ್ರಮ ಗಳ ದುಷ್ಪರಿಣಾಮಗಳು ಆತನ ಪ್ರಜೆಗಳಿಗೆ ಮಾತ್ರವಲ್ಲ ತಲೆ ತಲಾಂತರಗಳಿಗೂ ವ್ಯಾಪಿಸುತ್ತವೆ. ಇದರಿಂದಾಗಿ ಸಮಾಜದಲ್ಲಿ ಶಾಂತಿಯು ಮರೀಚಿಕೆಯಾಗಿ ಕ್ಷೋಭೆಯು ತಾಂಡವವಾಡುತ್ತದೆ.
ಆದರೆ ನ್ಯಾಯವಂತನಾದ ಆಡಳಿತಾಧಿಕಾರಿಯು ಇದಕ್ಕೆ ನೇರ ವಿರುದ್ಧವಾಗಿರುತ್ತಾನೆ. ಆತ ಯಾವಾಗಲೂ ಪ್ರಜೆಗಳ ಶ್ರೇಯೋಭಿವೃದ್ಧಿಯ ಕುರಿತು ಚಿಂತಿಸುತ್ತಿರುತ್ತಾನೆ. ತನ್ನ ಪ್ರಜೆಗಳಿಗಾಗಿ ತನ್ನ ಬೇಕು-ಬೇಡಗಳನ್ನೆಲ್ಲಾ ಬದಿಗಿರಿಸುತ್ತಾನೆ. ಇತರರಿಗಾಗಿ ಕಷ್ಟ ಅನುಭವಿಸುತ್ತಾನೆ. ಉಮರ್‍ರಂಥ(ರ) ಆಡಳಿತಾಧಿಕಾರಿಗಳ ಜೀವನವನ್ನು ಅಧ್ಯಯನ ನಡೆಸಿದರೆ ಅಧಿಕಾರದಲ್ಲಿ ನ್ಯಾಯ ಪಾಲನೆಯ ನೈಜ ರೂಪವು ಗೋಚರವಾಗಬಹುದು. ಅಲ್ಲಾಹನ ಆಜ್ಞೆಗಳನ್ನು ಸ್ಥಾಪಿಸಲು ಪ್ರಯತ್ನಿಸುವುದರಿಂದ ನ್ಯಾಯವಂತ ಆಡಳಿತಾಧಿಕಾರಿಯು ಅಲ್ಲಾಹನ ಪ್ರಿಯ ದಾಸನಾಗಿರುತ್ತಾನೆ. ಪ್ರವಾದಿಯವರು(ಸ) ಹೇಳಿದರು, “ಅಂತ್ಯ ದಿನದಲ್ಲಿ ಅಲ್ಲಾಹನಿಗೆ ಅತ್ಯಂತ ಪ್ರೀತಿ ಪಾತ್ರನೂ ಅವನ ಸಾಮಿಪ್ಯ ಪಡೆಯುವವನು ನ್ಯಾಯವಂತ ಆಡಳಿತಾಧಿಕಾರಿಯಾಗಿರುತ್ತಾನೆ. ಅಲ್ಲಾಹನಿಗೆ ಅತ್ಯಂತ ಹೆಚ್ಚು ದ್ವೇಷ ಇರುವವನೂ ಅವನಿಂದ ದೂರ ದಲ್ಲಿರುವನನೂ ಅಕ್ರಮಿಯಾದ ಆಡಳಿತಾಧಿಕಾರಿಯಾಗಿರುತ್ತಾನೆ.” (ಅಹ್ಮದ್, ತಿರ್ಮಿದಿ). ಮಾತ್ರವಲ್ಲ, ನಾಳೆ ಪರಲೋಕದಲ್ಲಿ ಅಲ್ಲಾಹನ ನೆರಳು ಲಭಿಸುವ ಏಳು ವಿಭಾಗದವರ ಪೈಕಿ ನ್ಯಾಯವಂತ ಆಡಳಿತಗಾರರೂ ಸೇರಿದ್ದಾರೆ.
ಆದ್ದರಿಂದ ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸುವ ನ್ಯಾಯವಂತ ಆಡಳಿತಾಧಿಕಾರಿಗಳ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸುತ್ತಾನೆ.
ಮೂರನೆಯದಾಗಿ ಹೇಳಿರುವುದು ಮರ್ದಿತನ ಪ್ರಾರ್ಥನೆ ಯಾಗಿದೆ. ಅವನ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸುವನು. ಓರ್ವನು ಅನ್ಯಾಯವಾಗಿ ಆಕ್ರಮಣಕ್ಕೆ ಗುರಿಯಾಗಿರುತ್ತಾನೆ. ಅವನ ನೆರವಿಗೆ ಯಾರೂ ಇರುವುದಿಲ್ಲ. ಯಾರೂ ಇಲ್ಲದವರಿಗೆ ಅಲ್ಲಾಹನು ರಕ್ಷಕನಾಗಿರುತ್ತಾನೆ. ಅವನು ಮನನೊಂದು ನಿಷ್ಕಳಂಕವಾಗಿ ಪ್ರಾರ್ಥಿಸಿದರೆ ಆ ಪ್ರಾರ್ಥನೆಯನ್ನು ಅಲ್ಲಾಹನು ಖಂಡಿತವಾಗಿಯೂ ಸ್ವೀಕರಿಸುವನು. ನೆರವಿಗಾಗಿರುವ ಮರ್ದಿತನ ಮೊರೆಗೆ ಅಲ್ಲಾಹನು ಸ್ಪಂದಿಸುವನು. ಪ್ರವಾದಿಯವರು(ಸ) ಮರ್ದಿತನ ಪ್ರಾರ್ಥನೆಯ ಕುರಿತು ಈ ರೀತಿ ಹೇಳಿದ್ದಾರೆ. “ಮರ್ದಿತನ ಪ್ರಾರ್ಥನೆಯ ಬಗ್ಗೆ ಎಚ್ಚರದಿಂದಿರಿ. ಯಾಕೆಂದರೆ ಅದು ಬೆಂಕಿಯ ಜ್ವಾಲೆಗಳ ಕಣಗಳಂತೆ ಬಾನಲೋಕಕ್ಕೇ ರುತ್ತಿರುತ್ತದೆ.” ಮುಆದ್ ಬಿನ್ ಜಬಲ್‍ರನ್ನು ಯಮನ್‍ಗೆ ರಾಜ್ಯಪಾಲರಾಗಿ ನೇಮಿಸಿದಾಗ ಪ್ರವಾದಿಯವರು(ಸ) ಪ್ರತ್ಯೇಕವಾಗಿ ಹೇಳಿದ್ದರು, “ಮರ್ದಿತನ ಪ್ರಾರ್ಥನೆಯ ಕುರಿತು ನೀನು ಭಯಪಡು. ಕಾರಣ, ಆ ಪ್ರಾರ್ಥನೆ ಮತ್ತು ಅಲ್ಲಾಹನ ಮಧ್ಯೆ ಯಾವುದೇ ಪರದೆಯಿಲ್ಲ.”
ಆದ್ದರಿಂದ ಅಲ್ಲಾಹನೊಂದಿಗೆ ಪ್ರಾರ್ಥಿಸುವುದು ಪ್ರತಿಯೊಬ್ಬ ಸತ್ಯವಿಶ್ವಾಸಿಯ ಕೆಲಸವಾಗಿದೆ. ಪ್ರಾರ್ಥನೆಗೆ ಉತ್ತರ ಲಭಿಸಲಿಲ್ಲ ಎಂದು ನಿರಾಶರಾಗಬಾರದು. ಅಲ್ಲಾಹನು ಪ್ರಾರ್ಥನೆಗಳಿಗೆ ಮೂರು ವಿಧದಲ್ಲಿ ಉತ್ತರ ನೀಡುತ್ತಾನೆ. ಒಂದೋ ಕೂಡಲೇ ಉತ್ತರ ನೀಡುತ್ತಾನೆ. ಅಲ್ಲದಿದ್ದರೆ ಪ್ರಾರ್ಥನೆಯಲ್ಲಿ ಬೇಡಿಕೆ ಯಿರಿಸಿದ್ದಕ್ಕೆ ಸಮಾನವಾದ ಯಾವುದಾದರೂ ಕಾರ್ಯವನ್ನು ನೆರವೇರಿಸಿಕೊಡುತ್ತಾನೆ. ಅದೂ ಅಲ್ಲದಿದ್ದರೆ ಅದನ್ನು ಪರಲೋಕಕ್ಕೆ ವಿೂಸಲಿಡುತ್ತಾನೆ. ಆದ್ದರಿಂದ ನಾವು ನಿಷ್ಕಳಂಕ ಮನಸ್ಸಿನಿಂದ ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥಿಸಬೇಕು. ನಮ್ಮ ಪ್ರಾರ್ಥನೆಗಳಿಗೆ ಉತ್ತರ ನೀಡಲು ಅಲ್ಲಾಹನ ಹೊರತು ಇನ್ನಾರಿಗೂ ಸಾಧ್ಯವಿಲ್ಲ.

ಸೋಮವಾರ, ಆಗಸ್ಟ್ 12, 2013

ದೇವಾ, ಆ 7 ವಿಭಾಗದವರಲ್ಲಿ ನಮ್ಮನ್ನೂ ಸೇರಿಸು


ಈ ಲೋಕದಲ್ಲಿ ಮನುಷ್ಯನು ಹಲವಾರು ಕರ್ಮಗಳನ್ನೆಸಗುತ್ತಾನೆ. ಕೆಲವರು ಒಳಿತುಗಳನ್ನು ಮಾಡಿದರೆ ಇನ್ನು ಕೆಲವರು ಕೆಡುಕುಗಳಲ್ಲಿ ಮುಳುಗಿರುತ್ತಾರೆ. ಕೆಲವರು ಇತರರಿಗೆ ಅನ್ಯಾಯ ವೆಸಗುವವರಾದರೆ ಇನ್ನು ಕೆಲವರು ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುವವರಾಗಿ ದ್ದಾರೆ. ಇವರಿಗೆಲ್ಲಾ ತಕ್ಕ ಪ್ರತಿಫಲ ನಾಳೆ ಪರಲೋಕದಲ್ಲಿ ದೊರೆಯುತ್ತದೆ. ಹಾಗೆ ಪ್ರತಿಫಲ ನೀಡುವುದಕ್ಕಿಂತ ಮುಂಚೆ ಅಲ್ಲಾಹನು ಎಲ್ಲರನ್ನೂ ವಿಚಾರಣೆಗೆ ಗುರಿಪಡಿಸಲಿದ್ದಾನೆ. ಆ ವಿಚಾರಣೆಯ ದಿನವು ಅತ್ಯಂತ ಭಯಾನಕವೂ ಕಳವಳಕಾರಿಯೂ ಆಗಿರುತ್ತದೆ. ಅಂದು ಮನುಷ್ಯರು ‘ಈ ವಿಚಾರಣೆ ಒಮ್ಮೆ ಮುಗಿದಿರುತ್ತಿದ್ದರೆ’ ಎಂದು ಹಂಬಲಿಸುವರು. ಪ್ರವಾದಿಯವರೇ(ಸ) ಹೀಗೆ ಪ್ರಾರ್ಥಿಸುತ್ತಿದ್ದರು. “ಓ ಅಲ್ಲಾಹ್ ನನ್ನನ್ನು ನೀನು ಸರಳ ವಿಚಾರಣೆ ನಡೆಸು.” ಮತ್ತೆ ನಮ್ಮ ಸ್ಥಿತಿ ಹೇಗಿರಬಹುದು?
ಆದರೆ ಈ ವಿಚಾರಣೆಯ ಸಂದರ್ಭಗಳಲ್ಲಿ ಬಹಳ ಶಾಂತ ಚಿತ್ತದಿಂದ ನಿರ್ಭೀತರಾಗಿರುವ ಕೆಲವರಿದ್ದಾರೆ. ಅವರಿಗೆ ಅಲ್ಲಾಹನ ಸಿಂಹಾಸನದ ನೆರಳು ಲಭಿಸುತ್ತಿರುತ್ತದೆ. ಅವನ ಕರುಣೆಯು ಅವರ ಮೇಲಿರುತ್ತದೆ. ಅವರನ್ನು ಅಲ್ಲಿ ಗೌರವಿಸಲಾಗುತ್ತದೆ.
ಅಲ್ಲಾಹನ ಸಿಂಹಾಸನದ ನೆರಳು ಲಭಿಸುವ ಆ ವಿಭಾಗದವರು ಯಾರಾಗಿರಬಹುದು? ಆ ಸೌಭಾಗ್ಯವಂತರ ಯಾದಿಗೆ ಸೇರಲು ನಮಗೆ ಸಾಧ್ಯವೇ? ಅಬೂ ಹುರೈರ(ರ) ವರದಿ ಮಾಡಿದ್ದಾರೆ. ಪ್ರವಾದಿ ಯವರು(ಸ) ಹೇಳಿದರು, “ಅಲ್ಲಾಹನ ನೆರಳ ಹೊರತು ಬೇರಾವುದೇ ನೆರಳಿಲ್ಲದ ಒಂದು ದಿವಸದಲ್ಲಿ ಅಲ್ಲಾಹನು ಏಳು ಜನರಿಗೆ ತನ್ನ ನೆರಳಿನಲ್ಲಿ ಅಭಯ ನೀಡುವನು. ನ್ಯಾಯವಂತ ಇಮಾಮ್ (ನಾಯಕ). ದೇವನ ಆರಾಧನೆಯಲ್ಲಿ ಬೆಳೆದ ಯುವಕ, ಹೃದಯವು ಮಸೀದಿ ಯೊಂದಿಗೆ ಬೆಸೆದುಕೊಂಡಿರುವ ವ್ಯಕ್ತಿ, ಅಲ್ಲಾಹನಿಗಾಗಿ ಪರಸ್ಪರ ಪ್ರೀತಿಸಿ ಆ ಪ್ರೀತಿಯಲ್ಲಿ ಒಂದುಗೂಡಿ ಅದರಲ್ಲೇ ಬೇರ್ಪಟ್ಟ ಎರಡು ವ್ಯಕ್ತಿಗಳು, ಏಕಾಂತವಾಗಿ ಅಲ್ಲಾಹನನ್ನು ಸ್ಮರಿಸುತ್ತಾ ಕಣ್ಣೀರು ಹರಿಸಿದ ವ್ಯಕ್ತಿ, ಅಂತಸ್ತು ಹಾಗೂ ಸೌಂದರ್ಯವತಿಯಾದ ಓರ್ವ ಮಹಿಳೆ ಆಹ್ವಾನಿಸಿ ದಾಗ, “ನಾನು ಸರ್ವಶಕ್ತನಾದ ಅಲ್ಲಾಹನನ್ನು ಭಯಪಡುತ್ತೇನೆ” ಎಂದು ಪ್ರತ್ಯುತ್ತರ ನೀಡಿದ ಮನುಷ್ಯ ಹಾಗೂ ದಾನ ಮಾಡಿ ತನ್ನ ಬಲ ಕೈ ಖರ್ಚು ಮಾಡಿದ್ದನ್ನು ಎಡಗೈ ತಿಳಿಯದಂತೆ ಗೌಪ್ಯವಾಗಿರಿಸಿದ ವ್ಯಕ್ತಿ.”
ನ್ಯಾಯವಂತ ಇಮಾಮ್:
ಇಲ್ಲಿ ಇಮಾಮ್ ಎಂದರೆ ನಾವು ಸಾಮಾನ್ಯವಾಗಿ ಹೇಳುವಂತೆ ಮಸೀದಿಯ ಇಮಾಮ್ ಅಲ್ಲ. ಬದಲಾಗಿ ಮುಸ್ಲಿಮ್ ಸಮುದಾಯದ ಆಡಳಿತಾಧಿಕಾರಿಯಾಗಿದ್ದಾರೆ. ಆದರೂ ಎಲ್ಲಾ ವಿಧದ ನೇತಾರರನ್ನೂ ಈ ಹದೀಸ್ ಒಳಗೊಂಡಿದೆ. ಇಲ್ಲಿ ನ್ಯಾಯವಂತ ಇಮಾಮ್ ಎಂದಿರುವುದು ಅಲ್ಲಾಹನ ಆಜ್ಞಾನುಸಾರ ತನ್ನ ಅನುಯಾಯಿಗಳನ್ನು ಮುನ್ನಡೆಸುವುದಕ್ಕಾಗಿದೆ. ಏಳು ಜನರ ಪೈಕಿ ನ್ಯಾಯವಂತ ಇಮಾಮ ರನ್ನು ಹೆಸರಿಸಿರುವುದರಿಂದ ನಾಯಕತ್ವದ ಮಹತ್ವ ಸ್ಪಷ್ಟವಾಗುತ್ತದೆ. ಓರ್ವ ನಾಯಕನು ತನ್ನ ಅನುಯಾಯಿಗಳಿಗೆ ಉತ್ತಮ ಮಾದರಿ ಯಾಗಿರಬೇಕು. ಒಂದು ಸಮುದಾಯವು ಉತ್ತಮ ಅಥವಾ ಕೆಟ್ಟದಾಗುವುದು ಅವರ ನೇತಾರರಿಗೆ ಹೊಂದಿಕೊಂಡಿರುತ್ತದೆ. ನಾಯಕರು ಹೇಗಿರುತ್ತಾರೋ ಹಾಗೇ ಅವರ ಪ್ರಜೆಗಳು ಇರುತ್ತಾರೆ. ಒಂದು ಸಮಾಜವನ್ನು ಒಳಿತಿನೆಡೆಗೆ ಕೊಂಡೊಯ್ಯುವ ಬಹಳ ಗೌರವಯುತವೂ ಕ್ಲಿಷ್ಟಕರವೂ ಆದ ಜವಾಬ್ದಾರಿ ಆ ಸಮಾಜದ ನೇತಾರನ ಕೈಯಲ್ಲಿರುತ್ತದೆ. ಆದ್ದರಿಂದಲೇ ಅವರಿಗೆ ನಾಳೆ ಪರಲೋಕ ದಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ.
ದೇವಾರಾಧನೆಯಲ್ಲಿ ಬೆಳೆದ ಯುವಕ:


ಯುವತ್ವ ಎಂಬುದು ಮಾನವ ಜೀವನದ ಒಂದು ಸುವರ್ಣ, ಸುಂದರ ಕಾಲವಾಗಿದೆ. ಈ ಕಾಲದಲ್ಲಿ ಮನುಷ್ಯನಿಗೆ ಏನನ್ನೂ ಮಾಡಲು ಸಾಧ್ಯವಿರುತ್ತದೆ. ಹೆಚ್ಚಾಗಿ ಕೆಡುಕಿನ ಕಡೆಗೆ ಆಕರ್ಷಿತರಾಗುವುದು ಈ ಕಾಲದಲ್ಲಾಗಿದೆ. ಸನ್ಮಾರ್ಗದಿಂದ ದುರ್ಮಾರ್ಗಕ್ಕೆ ಕೊಂಡೊಯ್ಯುವ ಶೈತಾನನ ಪ್ರಯತ್ನಗಳಿಗೆ ಸುಲಭವಾಗಿ ಬಲಿಪಶು ಆಗುವುದು ಯೌವ ನದ ಪ್ರಾಯದಲ್ಲಾಗಿದೆ. ಯೌವನವು ಮೋಜು-ಮಸ್ತಿಗಾಗಿ ಇರುವುದು ಎಂಬ ಭಾವನೆ ಯುವಜನತೆಯಲ್ಲಿರುತ್ತದೆ. ಪ್ರಾಯವಾಗುವಾಗ ಸತ್ಕರ್ಮಗಳನ್ನೆಸಗೋಣ ಎಂಬ ನಿರೀಕ್ಷೆಯನ್ನಿಟ್ಟಿರುತ್ತಾರೆ. ಆದ್ದರಿಂದ ಈ ಯೌವನದ ಕಾಲದಲ್ಲಿ ಜೀವನವನ್ನು ಅಲ್ಲಾಹನ ಆರಾಧನೆಗಾಗಿ ಮುಡಿಪಾಗಿರಿಸುವುದು ಕಷ್ಟ ಸಾಧ್ಯವಾದ ಕೆಲಸವಾಗಿರುತ್ತದೆ. ಹಿಂದಿನ ಕಾಲಕ್ಕಿಂತ ಈ ಕಾಲದಲ್ಲಿ ಇದು ಹೆಚ್ಚು ದುಸ್ತರವಾಗಿರುವುದು. ಮೊಬೈಲು ಇಂಟರ್‍ನೆಟ್‍ಗಳ ಈ ಯುಗದಲ್ಲಿ ಯುವತ್ವವು ಕೆಡುಕುಗಳ ಮುಂದೆ ಸುಲಭದಲ್ಲಿ ಶರಣಾಗುತ್ತದೆ. ಆದ್ದರಿಂದ ಈ ಅಡೆತಡೆಗಳನ್ನೆಲ್ಲ ಮೆಟ್ಟಿ ನಿಂತು ಅಲ್ಲಾಹನಿಗಾಗಿ ಯೌವನವನ್ನು ವ್ಯಯಿಸಿದವನಿಗೆ ಸ್ವರ್ಗವಲ್ಲದೆ ಇನ್ನೇನು ಲಭಿಸಲು ಸಾಧ್ಯ.
ಮಸೀದಿಯೊಂದಿಗೆ ಬೆಸೆಯಲ್ಪಟ್ಟ ಮನಸ್ಸು:
ನಮಾಝ್, ದಿಕ್ರ್, ತಸ್ಬೀಹ್, ರಾತ್ರಿ ಜಾಗರಣೆ ಮುಂತಾದವುಗಳಿ ಗಾಗಿ ಮಸೀದಿಯಲ್ಲಿ ಕಳೆಯುವುದು, ಮಸೀದಿಗಳನ್ನು ಪ್ರೀತಿಸುವುದು, ಮಸೀದಿಯ ಪಾಲನೆಯನ್ನು ನೋಡಿಕೊಳ್ಳುವುದು, ಮಸೀದಿಗೆ ಬೇಕಾಗುವ ವ್ಯವಸ್ಥೆಗಳನ್ನು ಮಾಡುವುದು ಮುಂತಾದ ಕಾರ್ಯಗಳು ಈ ಸಾಲಿಗೆ ಸೇರುತ್ತವೆ. ಇಂದು ಮಸೀದಿಯನ್ನು ಬಳಸಿಕೊಳ್ಳುವವರು ಬಹಳ ವಿರಳವಾಗಿದ್ದಾರೆ. ನಮಾಝ್‍ಗಳನ್ನು ನಿರ್ವಹಿಸುವುದಿದ್ದರೂ
ಅದನ್ನು ಮನೆಯಲ್ಲೇ ನಿರ್ವಹಿಸುತ್ತಾರೆ. ಮಸೀದಿಯ ಶೌಚಾಲಯ ಗಳನ್ನು ಮಾತ್ರ ಉಪಯೋಗಿಸುವವರಿದ್ದಾರೆ. ತನ್ನ ಪ್ರಾಥಮಿಕ ಅವಶ್ಯಕತೆ ಮುಗಿಸಿದ ಬಳಿಕ ಮಸೀದಿಯಲ್ಲಿ ಜಮಾಅತ್ ನಮಾಝ್ ನಡೆಯು ತ್ತಿದ್ದರೂ ಅದರಲ್ಲಿ ಭಾಗವಹಿಸದೆ ಹೋಗುವವರಿದ್ದಾರೆ.
ಇಂದು ಈ ಸಮುದಾಯದಲ್ಲಿ ಮಸೀದಿಯ ಪಾಲನೆ ಮಾಡುವವರನ್ನು ತಾತ್ಸಾರ ಭಾವನೆಯಿಂದ ನೋಡಲಾಗುತ್ತದೆ. ‘ಮುಕ್ರಿ’ ಎಂದು ಅವರನ್ನು ಕರೆಯಲಾಗುತ್ತದೆ. ‘ಮುಕ್ರಿ’ ಎಂಬುದು ಯಾವುದೋ ಕೀಳು ಮಟ್ಟದ ಕೆಲಸ ಎಂದು ಭಾವಿಸುತ್ತಾರೆ. ಆದರೆ ಇದು ಅಲ್ಲಾಹನ ಬಳಿ ಅತ್ಯಂತ ಶ್ರೇಷ್ಠ ಕೆಲಸವಾಗಿದೆ. ಮಸೀದಿಗಳು ಅಲ್ಲಾಹನ ಗೃಹವಾಗಿದೆ. ಮಸೀದಿಯೊಂದಿಗಿರುವ ಗೌರವಾದರಗಳು ಅಲ್ಲಾಹನೊಂದಿಗಿರುವ ಭಯಭಕ್ತಿಯ ಭಾಗವಾಗಿದೆ. ಕುರ್‍ಆನ್ ಹೇಳುತ್ತದೆ, “ಅಲ್ಲಾಹನಲ್ಲೂ ಅಂತ್ಯದಿನದಲ್ಲೂ ವಿಶ್ವಾಸ ತಾಳುವವರೂ ನಮಾಝ್ ಸಂಸ್ಥಾಪಿಸುವವರೂ ಝಕಾತ್ ಪಾವತಿಸುವವರೂ ಅಲ್ಲಾಹನ ಹೊರತು ಇತರ ಯಾರನ್ನೂ ಭಯಪಡದವರು ಮಾತ್ರ ಮಸೀದಿಗಳ ಪಾಲನೆ ಮಾಡುವರು.”
ಅಲ್ಲಾಹನಿಗಾಗಿ ಪ್ರೀತಿಸಿದವರು:
ಅಲ್ಲಾಹನಿಗಾಗಿ ಪರಸ್ಪರ ಪ್ರೀತಿಸುವವರೂ ಅದಕ್ಕಾಗಿ ಒಂದು ಗೂಡುವವರೂ ಅದಕ್ಕಾಗಿ ಪರಸ್ಪರ ಬೇರ್ಪಡುವವರೂ ಅಲ್ಲಾಹನ ಸಿಂಹಾಸನದ ನೆರಳು ಲಭಿಸುವ ವಿಭಾಗಕ್ಕೆ ಸೇರಿದವರಾಗಿದ್ದಾರೆ. ಅವರು ಅಲ್ಲಾಹನಿಗಾಗಿ ಪರಸ್ಪರ ಒಂದಾಗುತ್ತಾರೆ. ಅವರ ಮಧ್ಯೆ ಪ್ರೀತಿ, ಸೌಹಾರ್ದತೆಯನ್ನು ಬೆಳೆಸುತ್ತಾರೆ. ಇನ್ನು ಅಲ್ಲಾಹನಿಗಾಗಿ ಪರಸ್ಪರ ಬಿಟ್ಟಗಲುವ ಸಂದರ್ಭವೊದಗಿದಾಗ ಅವರು ಬೇರ್ಪಡುತ್ತಾರೆ. ಪರಸ್ಪರ ಇರುವ ಪ್ರೀತಿಯ ಆಳವು ಅವರನ್ನು ಬೇರ್ಪಡುವುದರಿಂದ ತಡೆದಿರಿಸುವುದಿಲ್ಲ. ಅವರು ತಮ್ಮ ಮಧ್ಯೆ ಇರುವ ಪ್ರೀತಿಯನ್ನು ಕಾಪಾಡುತ್ತಾ ಪರಸ್ಪರ ಬಿಟ್ಟಗಲುತ್ತಾರೆ.
ಅಲ್ಲಾಹನಿಗಾಗಿರುವ ಸ್ನೇಹ ಸಂಬಂಧವು ಒಂದು ದೊಡ್ಡ ಅನುಗ್ರಹವಾಗಿದೆ. ಅಂತಹ ಸಂಬಂಧಗಳ ದೃಢತೆ ಹಾಗೂ ಆಯುಷ್ಯವು ಬೇರಾವುದೇ ಸಂಬಂಧಕ್ಕಿರುವುದಿಲ್ಲ. ಪವಿತ್ರ ಕುರ್‍ಆನ್ ಹೇಳುತ್ತದೆ. “ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಸ್ತ್ರೀಯರು ಇವರೆಲ್ಲ ಪರಸ್ಪರ ಆಪ್ತರು. ಅವರು ಒಳಿತುಗಳ ಅಪ್ಪಣೆ ಕೊಡುತ್ತಾರೆ ಮತ್ತು ಕೆಡುಕುಗಳಿಂದ ತಡೆಯುತ್ತಾರೆ, ನಮಾಝ್ ಸಂಸ್ಥಾಪಿಸುತ್ತಾರೆ, ಝಕಾತ್ ನೀಡುತ್ತಾರೆ ಮತ್ತು ಅಲ್ಲಾಹ್ ಹಾಗೂ ಅವನ ರಸೂಲರ ಅನುಸರಣೆ ಮಾಡುತ್ತಾರೆ. ಇವರ ಮೇಲೆ ಅಲ್ಲಾಹನ ಕರುಣೆ ಅವತೀರ್ಣಗೊಂಡೇ ತೀರುವುದು. ನಿಶ್ಚಯವಾಗಿಯೂ ಅಲ್ಲಾಹನು ಮಹಾ ಪ್ರತಾಪಿಯೂ ಯುಕ್ತಿಪೂರ್ಣನೂ ಆಗಿರುತ್ತಾನೆ.” (ಅತ್ತೌಬ: 71)
ದೇವಸ್ಮರಣೆಯಿಂದ ಕಣ್ಣೀರು ಹರಿಸುವವರು:
ಈ ವಿಭಾಗದವರು ಲೌಕಿಕ ಬೆಡುಗು ಬಿನ್ನಾಣಗಳಿಂದೆಲ್ಲಾ ದೂರ ನಿಂತು ವ್ಯರ್ಥ ಕಾರ್ಯಗಳಲ್ಲಿ ಮುಳುಗದೆ ಏಕಾಂಗಿಯಾಗಿ ಅಲ್ಲಾಹನನ್ನು ಸ್ಮರಿಸುತ್ತಾ ತಮ್ಮ ತಪ್ಪುಗಳಿಗಾಗಿ ಕಣ್ಣೀರು ಹರಿಸಿ ಅಲ್ಲಾಹನೊಂದಿಗೆ ಪ್ರಾರ್ಥಿಸುತ್ತಾರೆ. ಇದು ನೈಜ ಸತ್ಯವಿಶ್ವಾಸಿಗಳ ಗುಣಗಳ ಪೈಕಿ ಒಂದು ಶ್ರೇಷ್ಠ ಗುಣವಾಗಿದೆ. ಇಂಥವರ ಕುರಿತು ಅಲ್ಲಾಹನು ಹೇಳುತ್ತಾನೆ, “ಅಲ್ಲಾಹನ ಪ್ರಸ್ತಾಪ ಕೇಳಿದೊಡನೆ ಹೃದಯದಲ್ಲಿ ನಡುಕ ಉಂಟಾಗುವವರೇ ನಿಜವಾದ ಮುಅïಮಿನರು. ಅವರ ಮುಂದೆ ಅಲ್ಲಾಹನ ಸೂಕ್ತಗಳನ್ನು ಓದಿದಾಗ ಅವರ ಸತ್ಯವಿಶ್ವಾಸ ವೃದ್ಧಿಯಾಗುತ್ತದೆ ಮತ್ತು ಅವರು ತಮ್ಮ ಪ್ರಭುವಿನ ಮೇಲೆ ಭರವಸೆ ಇಡುತ್ತಾರೆ.” (ಅನ್‍ಫಾಲ್- 2)
ಶಿಷ್ಟಾಚಾರದ ಪ್ರಜ್ಞೆ ಇರುವವರು:
ಒಂದು ನಿರ್ಜನ ಪ್ರದೇಶದಲ್ಲಿ ಓರ್ವ ಮಹಿಳೆಯು ನಿಮ್ಮನ್ನು ಆಹ್ವಾನಿಸುವಾಗ ನಿಮ್ಮಲ್ಲಿನ ವಿಶ್ವಾಸದ ಪ್ರಭಾವದಿಂದಾಗಿ ನೀವು ಮನಸ್ಸಿನಲ್ಲೋ ನಾಲಗೆಯಲ್ಲೋ ಹೇಳುತ್ತೀರಿ, “ಇಲ್ಲ, ನಾನಿದಕ್ಕೆ ತಯಾ ರಿಲ್ಲ. ಇದು ಅಲ್ಲಾಹನು ತೀವ್ರವಾಗಿ ವಿರೋಧಿಸಿದ ಅಶ್ಲೀಲ ಕೃತ್ಯ ವಾಗಿದೆ.” ಈ ಶ್ರೇಷ್ಠವಾದ ಧಾರ್ಮಿಕ ಪ್ರಜ್ಞೆ ಹೊಂದಿದವರನ್ನು ಅಲ್ಲಾಹನು ತನ್ನ ಸಿಂಹಾಸನದ ನೆರಳು ನೀಡಿ ಅನುಗ್ರಹಿಸುತ್ತಾನೆ. ಅವರು ದೇಹೆಚ್ಛೆಯ ಬೇಡಿಕೆಗೆ ತಣ್ಣೀರೆರಚಿ ತನ್ನ ಪ್ರಭುವಿನ ಆಜ್ಞೆಯನ್ನು ಪಾಲಿಸುವವರಾಗಿದ್ದಾರೆ. ಇಂತಹ ವ್ಯಕ್ತಿಗಳು ಸ್ವರ್ಗಕ್ಕೆ ಅರ್ಹರಾಗುತ್ತಾರೆ.
ಪ್ರಸಿದ್ಧಿ ಬಯಸದೆ ದಾನ ಮಾಡುವವರು:
ಇವರು ಜನರ ಮಧ್ಯೆ ಪ್ರಸಿದ್ಧಿ ಅಥವಾ ಹೆಸರು ಗಳಿಸಲು ದಾನ ಮಾಡುವವರಲ್ಲ. ಅವರ ದಾನದ ಉದ್ದೇಶವು ಕೇವಲ ಅಲ್ಲಾಹನ ಸಂಪ್ರೀತಿ ಮಾತ್ರವಾಗಿರುತ್ತದೆ. ಅವರ ದಾನದಲ್ಲಿ ಸ್ವಾರ್ಥತೆ ಅಥವಾ ಕಾಪಟ್ಯ ಇರುವುದಿಲ್ಲ. ಪತ್ರಿಕೆಗಳಲ್ಲಿ ಫೆÇೀಟೋ ಪ್ರಕಟಗೊಳ್ಳುವುದಕ್ಕೋಸ್ಕರ ಅವರು ದಾನ ಮಾಡುವುದಲ್ಲ. ಎಷ್ಟರ ವರೆಗೆಂದರೆ ಅವರ ದಾನವು, ಬಲಗೈ ನೀಡಿದ್ದು ಎಡಗೈ ತಿಳಿಯ ದಷ್ಟರ ಮಟ್ಟಿಗೆ ರಹಸ್ಯವಾಗಿರುತ್ತದೆ. ಜನರ ಮಧ್ಯೆ ಹೆಸರು ಗಳಿಸಲಿಕ್ಕಾಗಿ ದಾನ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಅವರು ರಹಸ್ಯವಾಗಿ, ಅಲ್ಲಾಹನ ಸಂಪ್ರೀತಿಗೋಸ್ಕರ ದಾನ ಮಾಡುವವರಾಗಿರುತ್ತಾರೆ. ಅಲ್ಲಾಹನು ನಮ್ಮೆಲ್ಲರನ್ನು ಈ ಏಳು ವಿಭಾಗದವರಲ್ಲಿ ಸೇರಿಸಲಿ.

ಸೋಮವಾರ, ಜುಲೈ 29, 2013

ಈದ್ ಆಚರಣೆ ಹೇಗೆ?


ಸತ್ಯವಿಶ್ವಾಸಿಗಳಿಗೆ ಅಲ್ಲಾಹನು ಎರಡು ಆಚರಣೆಗಳನ್ನು ನೀಡಿದ್ದಾನೆ. ಒಂದು ಈದುಲ್ ಫಿತ್ರ್ ಮತ್ತು ಇನ್ನೊಂದು ಈದುಲ್ ಅಝ್‍ಹಾ. ಒಂದು ತಿಂಗಳ ರಮಝಾನ್ ಉಪವಾಸದ ಬಳಿಕ ಬರುವ ಈದುಲ್ ಫಿತ್ರ್‍ರನ್ನು ಸ್ವಾಗತಿಸಲು ನಾವು ತಯಾರಾಗುತ್ತಿದ್ದೇವೆ. ಅಲ್ಲಾಹನು ನೀಡಿರುವ ಆಚರಣೆಯನ್ನು ಸಂತೋಷ, ಆಹ್ಲಾದದಿಂದ ಆಚರಿಸಲು ನಾವು ತುದಿಗಾಲಲ್ಲಿ ನಿಂತಿದ್ದೇವೆ.
ಈದ್‍ನ ಮುಖ್ಯ ಘಟಕಗಳ ಪೈಕಿ ಎರಡು ರಕಅತ್ ನಮಾಝ್ ಹಾಗೂ ಖುತ್ಬಾ ಬಹು ಪ್ರಾಮುಖ್ಯವಾಗಿದೆ. ಇದು ಪ್ರಬಲ ಸುನ್ನತ್ತಾಗಿದೆ. ಪ್ರವಾದಿಯವರು(ಸ) ಆ ನಮಾಝ್‍ಗಳನ್ನು ಎಲ್ಲಾ ವರ್ಷವೂ ನಿರ್ವಹಿಸುತ್ತಿದ್ದರು ಮತ್ತು ಅದರಲ್ಲಿ ಭಾಗವಹಿಸಲು ಪುರುಷರು ಹಾಗೂ ಮಹಿಳೆಯರಿಗೆ ಆಜ್ಞಾಪಿಸುತ್ತಿದ್ದರು.
ಈದ್‍ನ ದಿನಗಳಲ್ಲಿ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಸುಗಂಧ ದ್ರವ್ಯ ಉಪಯೋಗಿಸುವುದು ಪ್ರವಾದಿ ಚರ್ಯೆಯಾಗಿದೆ. ಪ್ರವಾದಿಯವರು(ಸ) ಎಲ್ಲಾ ಈದ್‍ನ ದಿನಗಳಲ್ಲಿ ಯಮನಿನಲ್ಲಿ ನಿರ್ಮಿಸಲ್ಪಡುವ ಒಂದು ರೀತಿಯ ಸುಂದರ ವಸ್ತ್ರ ಧರಿಸುತ್ತಿದ್ದರು ಎಂದು ಜಅïಫರ್ ಬಿನ್ ಮುಹಮ್ಮದ್ ತನ್ನ ತಂದೆಯ ಮುಖಾಂತರ ವರದಿ ಮಾಡಿದ್ದಾರೆ. (ಶಾಫಿಈ, ಬಗವಿ)
“ಪ್ರವಾದಿಯವರು(ಸ) ಈದ್‍ನ ದಿನಗಳಲ್ಲಿ ಇದ್ದುದರಲ್ಲಿ ಉತ್ತಮ ಬಟ್ಟೆ ತೊಡುತ್ತಿದ್ದರು. ಪ್ರವಾದಿಯವರ(ಸ) ಬಳಿ ಈದ್ ಹಾಗೂ ಜುಮಾದ ದಿವಸ ಧರಿಸಲಿಕ್ಕಾಗಿ ಒಂದು ಉದ್ದ ವಾದ ಬಟ್ಟೆ ಇತ್ತು” ಎಂದು ಇಬ್ನು ಕೈಯ್ಯಿಮ್ ಹೇಳಿದ್ದಾರೆ.
ಈದುಲ್ ಫಿತ್ರ್‍ನ ನಮಾಝ್‍ಗೆ ಹೊರಡುವುದಕ್ಕಿಂತ ಮುಂಚೆ ಆಹಾರ ಸೇವಿಸುವುದು ಸುನ್ನತ್ತಾಗಿದೆ. ಅದು ಬೆಸ ಸಂಖ್ಯೆಯಲ್ಲಿ ಖರ್ಜೂರ ಸೇವಿಸಿದರೂ ಉತ್ತಮ. “ಪ್ರವಾದಿ ಯವರು(ಸ) ಈದುಲ್ ಫಿತ್ರ್‍ನ ದಿವಸ ಸ್ವಲ್ಪ ಖರ್ಜೂರ ಸೇವಿಸುತ್ತಿದ್ದರು. ಅದು ಕೂಡಾ ಬೆಸ ಸಂಖ್ಯೆಯಲ್ಲೇ ಸೇವಿಸಿ ದ್ದರು” ಎಂದು ಅನಸ್(ರ) ವರದಿ ಮಾಡಿದ್ದಾರೆ. (ಅಹ್ಮದ್, ಬುಖಾರಿ)
“ಈದುಲ್ ಫಿತ್ರ್‍ನ ದಿನ ನಮಾಝ್‍ಗೆ ಹೊರಡುವ ಮುಂಚೆ ಆಹಾರ ಸೇವಿಸಲು ಜನರಿಗೆ ಆಜ್ಞಾಪಿಸಲಾಗಿದೆ” ಎಂದು ಸಯೀದ್ ಬಿನ್ ಮುಸಯ್ಯಿಬ್ ವರದಿ ಮಾಡಿದ್ದಾರೆ. ಈದ್ ನಮಾಝಿಗೆ ಹೋಗುವುದಕ್ಕಿಂತ ಮುಂಚೆ ಆಹಾರ ಸೇವಿಸುವ ವಿಚಾರದಲ್ಲಿ ವಿದ್ವಾಂಸರ ಮಧ್ಯೆ ಭಿನ್ನಾಭಿಪ್ರಾಯ ಇರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಇಬ್ನು ಕುದಾಮ ಹೇಳಿದ್ದಾರೆ.
ಈದ್ ನಮಾಝ್‍ಗಳನ್ನು ಮಸೀದಿಗಳಲ್ಲಿ ನಿರ್ವಹಿಸಬಹು ದಾಗಿದ್ದರೂ ಮಳೆಯಂತಹ ಅಡೆತಡೆ ಇಲ್ಲದಿದ್ದರೆ ಹೊರಗೆ ತೆರೆದ ಮೈದಾನದಲ್ಲಿ ನಿರ್ವಹಿಸುವುದು ಉತ್ತಮವಾಗಿದೆ. ಕಾರಣ ಪ್ರವಾದಿಯವರು(ಸ) ಈದ್‍ನ ನಮಾಝ್‍ಗಳನ್ನು ಈದ್ಗಾದಲ್ಲೇ ನಿರ್ವಹಿಸುತ್ತಿದ್ದರು. ಮಳೆಯ ಕಾರಣದಿಂದ ಒಂದು ಬಾರಿ ಮಾತ್ರ ಪ್ರವಾದಿಯವರು(ಸ) ತಮ್ಮ ಮಸೀದಿಯಲ್ಲಿ ನಿರ್ವಹಿಸಿದ್ದರು. ಅಬೂಹುರೈರ(ರ) ವರದಿ ಮಾಡಿದ್ದಾರೆ, “ಒಮ್ಮೆ ಈದ್‍ನ ದಿನ ಮಳೆ ಸುರಿದಿದ್ದರಿಂದ ಪ್ರವಾದಿಯವರು(ಸ) ಜನರೆಲ್ಲರನ್ನು ಸೇರಿಸಿ ಮಸೀದಿಯಲ್ಲಿ ಈದ್ ನಮಾಝ್ ನಿರ್ವಹಿಸಿದರು.”
ಈದ್‍ನ ದಿನ ಮಹಿಳೆಯರು, ಮಕ್ಕಳು, ಈದ್ಗಾಗೆ ಹೋಗಬಹುದಾಗಿದೆ. ಅದಕ್ಕೆ ಶರೀಅತ್‍ನಲ್ಲಿ ಅನುಮತಿ ಇದೆ. ಈ ವಿಚಾರದಲ್ಲಿ ವಿವಾಹಿತೆಯರು, ಅವಿ ವಾಹಿತೆಯರು, ವಿಧವೆಯರು, ವೃದ್ಧರು ಮತ್ತು ಋತುಮತಿಗಳ ಮಧ್ಯೆ ವ್ಯತ್ಯಾಸ ವಿಲ್ಲ. ಉಮ್ಮುತ್ವಯ್ಯಿಬ್(ರ) ವರದಿ ಮಾಡಿ ದ್ದಾರೆ. “ಪುಣ್ಯ ಕರ್ಮಗಳಲ್ಲೂ ವಿಶ್ವಾಸಿಗಳ ಪ್ರಾರ್ಥನೆಗಳಲ್ಲೂ ಭಾಗಿಯಾಗಲಿಕ್ಕಾಗಿ ಅವಿವಾಹಿತೆಯರನ್ನೂ, ಋತುಮತಿ ಯರನ್ನೂ ಕರೆ ತರಲು ನಮಗೆ ಆಜ್ಞಾ ಪಿಸಲಾಗಿತ್ತು. ಆದರೆ ಋತುಮತಿಗಳು ನಮಾಝ್ ನಿರ್ವಹಿಸಬಾರದು.” (ಬುಖಾರಿ, ಮುಸ್ಲಿಮ್)
“ಪ್ರವಾದಿಯವರು(ಸ) ಈದ್‍ನ ದಿವಸ ಗಳಲ್ಲಿ ಪತ್ನಿಯರನ್ನು, ಪುತ್ರಿಯರನ್ನು ಹೊರ ಕರೆತರುತ್ತಿದ್ದರು” ಎಂದು ಇಬ್ನು ಅಬ್ಬಾಸ್ ವರದಿ ಮಾಡಿದ್ದಾರೆ. (ಇಬ್ನು ಮಾಜಃ, ಬೈಹಕಿ)
ಈದ್ ನಮಾಝ್‍ಗೆ ಹೊರಡುವಾಗ ಒಂದು ದಾರಿಯಲ್ಲಿ ಹೋಗುವುದು ಮತ್ತು ಮರಳುವಾಗ ಇನ್ನೊಂದು ದಾರಿಯಲ್ಲಿ ಬರುವುದು ಇಮಾಮ್ ಹಾಗೂ ಇತರ ರಿಗೂ ಸುನ್ನತ್ತಾಗಿದೆ ಎಂಬುದು ಹೆಚ್ಚಿನ ವಿದ್ವಾಂಸರ ಒಮ್ಮತಾಭಿಪ್ರಾಯವಾಗಿದೆ. ಜಾಬಿರ್(ರ) ವರದಿ ಮಾಡಿದ್ದಾರೆ. ಪ್ರವಾದಿಯವರು(ಸ) ಈದ್‍ನ ದಿವಸ ಒಂದು ದಾರಿಯ ಮೂಲಕ ಸಾಗಿ ಇನ್ನೊಂದು ದಾರಿಯಲ್ಲಿ ಮರಳುತ್ತಿದ್ದರು.”(ಬುಖಾರಿ)
“ಪ್ರವಾದಿಯವರು(ಸ) ಈದ್‍ನಂದು ಹೊರಟರೆ ಹೋದ ದಾರಿಯಲ್ಲದೆ ಇನ್ನೊಂದು ದಾರಿಯ ಮೂಲಕ ಮರಳು ತ್ತಿದ್ದರು” ಎಂದು ಅಬೂಹುರೈರಾ(ರ) ವರದಿ ಮಾಡಿದ್ದಾರೆ.

(ಅಹ್ಮದ್, ಮುಸ್ಲಿಮ್, ತಿರ್ಮಿದಿ)
ಈದ್ ನಮಾಝ್‍ನ ಸಮಯವು ಸೂರ್ಯ ಸರಿ ಸುಮಾರು ಮೂರು ವಿೂಟರ್ ಎತ್ತರಕ್ಕೆ ಬಂದದ್ದರಿಂದ ಮಧ್ಯಾಹ್ನದ ವರೆಗೆ ಇದೆ. ಸೂರ್ಯ ಎರಡು ಈಟಿಯಷ್ಟು ಮೇಲೆ ಬಂದ ಸಮಯದಲ್ಲಿ (ಒಂದು ಈಟಿ ಎಂದರೆ ಸರಿ ಸುಮಾರು 3 ವಿೂಟರ್ ಉದ್ದ) ಈದುಲ್ ಫಿತ್ರ್‍ನ ನಮಾಝ್ ಹಾಗೂ ಒಂದು ಈಟಿಯಷ್ಟು ಮೇಲೆ ಬಂದ ಸಮಯದಲ್ಲಿ ಈದುಲ್ ಅಝ್ಝಾ ನಮಾಝನ್ನು ಪ್ರವಾದಿಯವರ(ಸ) ನೇತೃತ್ವ ದೊಂದಿಗೆ ನಾವು ನಿರ್ವಹಿಸಿದ್ದೆವು ಎಂದು ಜುಂದುಬ್(ರ) ಹೇಳಿರುವುದಾಗಿ ಅಹ್ಮದ್ ಬಿನ್ ಹಸನುಲ್ ಬನ್ನಾ ವರದಿ ಮಾಡಿ ದ್ದಾರೆ. ಫಿತ್ರ್ ಝಕಾತ್ ವಿತರಣೆಗೆ ಸಮಯ ಲಭಿಸಲಿಕ್ಕಾಗಿ ಈದುಲ್ ಫಿತ್ರ್ ನಮಾಝನ್ನು ತಡವಾಗಿ ನಿರ್ವಹಿಸಲಾಗಿದೆ. ನಮಾಝ್‍ನ ಬಳಿಕ ಬಲಿಕರ್ಮ ನೆರ ವೇರಿಸಲಿಕ್ಕಿರುವುದರಿಂದ ಈದುಲ್ ಅಝ್ಝಾ ನಮಾಝನ್ನು ಬೇಗನೇ ನಿರ್ವಹಿಸ ಬೇಕಾಗಿದೆ.
ಈದ್‍ನ ನಮಾಝ್‍ಗಳು ಎರಡು ರಕಅತ್‍ಗಳಾಗಿವೆ. ಒಂದನೇ ರಕಅತ್‍ನಲ್ಲಿ ತಕ್ಬೀರತುಲ್ ಇಹ್ರಾಮ್‍ನ ಬಳಿಕ (ಅಲ್ಲಾಹು ಅಕ್ಬರ್ ಎಂದು ಕೈಕಟ್ಟಿದ ಬಳಿಕ) ಏಳು ಬಾರಿ ಹಾಗೂ ಎರಡನೇ ತಕ್ಬೀರತುಲ್ ಇಹ್ರಾಮ್‍ನ ಬಳಿಕ ಐದು ಬಾರಿ ತಕ್ಬೀರ್ ಹೇಳುವುದು ಪ್ರತೀ ತಕ್ಬೀರ್ ನೊಂದಿಗೆ ಕೈಗಳನ್ನು ಎತ್ತುವುದು ಪ್ರವಾದಿ ಚರ್ಯೆಯಾಗಿದೆ. “ಪ್ರವಾದಿಯವರು(ಸ) ಒಂದು ಈದ್ ನಮಾಝ್‍ನಲ್ಲಿ ಪ್ರಥಮ ರಕಅತ್‍ನಲ್ಲಿ ಏಳು ಎರಡನೇ ರಕಅತ್‍ನಲ್ಲಿ ಐದು ಹಾಗೆ 12 ತಕ್ಬೀರ್ ಹೇಳುತ್ತಿದ್ದರು. ಈ ನಮಾಝ್‍ಗಿಂತ ಮುಂಚೆ ಅಥವಾ ನಂತರ ಪ್ರವಾದಿಯವರು(ಸ) ಬೇರೆ ನಮಾಝ್ ನಿರ್ವಹಿಸುತ್ತಿರಲಿಲ್ಲ” ಎಂದು ಅಮ್ರ್ ಬಿನ್ ಶುಐಬ್ ತನ್ನ ತಂದೆಯ ಮೂಲಕ ವರದಿ ಮಾಡಿದ್ದಾರೆ. ಪ್ರವಾದಿ ಯವರು(ಸ) ತಕ್ಬೀರ್‍ಗಳ ನಂತರವೇ ಕುರ್‍ಆನ್ ಪಾರಾಯಣ ನಡೆಸುತ್ತಿದ್ದರು.
ಪುರುಷರು, ಮಹಿಳೆಯರು, ಮಕ್ಕಳು ಸಾಮೂಹಿಕವಾಗಿ ಅಥವಾ ವೈಯಕ್ತಿಕವಾಗಿ ಮನೆ, ಮಸೀದಿ ಅಥವಾ ಈದ್ಗಾಹ್‍ನಲ್ಲಿ ಈದ್ ನಮಾಝ್ ನಿರ್ವಹಿಸಿದರೆ ಅದು ಸಿಂಧುವಾಗುತ್ತದೆ. ಇನ್ನು ಯಾರಿಗಾದರೂ ಜಮಾಅತ್ ನಮಾಝ್ ನಷ್ಟವಾದರೂ ಅವರು ಎರಡು ರಕಅತ್ ನಮಾಝ್ ನಿರ್ವಹಿಸ ಬೇಕು. ಬುಖಾರಿಯಲ್ಲಿ ಈ ರೀತಿ ಇದೆ, “ಓರ್ವನಿಗೆ ಈದ್ ನಮಾಝ್ ನಷ್ಟವಾದರೆ ಆತ ಎರಡು ರಕಅತ್ ನಮಾಝ್ ನಿರ್ವಹಿಸಬೇಕು. ಮಹಿಳೆ ಯರು, ಮನೆಯಲ್ಲಿರುವವರೂ, ಗ್ರಾಮ ಗಳಲ್ಲಿರುವವರೂ ಇದೇ ರೀತಿ ಮಾಡ ಬೇಕು.” ಅತ್ವಾಯಿಂ ಹೇಳುತ್ತಾರೆ, “ಓರ್ವ ನಿಗೆ ಈದ್ ನಮಾಝ್‍ನಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ ಆತ ಎರಡು ರಕಅತ್ ನಮಾಝ್ ನಿರ್ವಹಿಸಬೇಕು.”
ಈದ್ ನಮಾಝ್‍ನ ಬಳಿಕ ಖುತ್ಬಾ ನಿರ್ವಹಿಸಲಾಗುವುದು. ಅದನ್ನು ಗಮ ನವಿಟ್ಟು ಆಲಿಸಬೇಕು. ಇದು ಪ್ರವಾದಿ ಚರ್ಯೆಯಾಗಿದೆ. ಅಬ್ದುಲ್ಲಾ ಬಿನ್ ಸಾಯಿಬ್(ರ) ಹೇಳುತ್ತಾರೆ: ನಾನು ಪ್ರವಾದಿಯವರೊಂದಿಗೆ(ಸ) ಈದ್‍ನಲ್ಲಿ ಭಾಗವಹಿಸಿದೆ. ನಮಾಝ್ ನಿರ್ವಹಿಸಿದ ಬಳಿಕ ಪ್ರವಾದಿ(ಸ) ಹೇಳಿದರು. “ನಾವು ಖುತ್ಬಾ ನಿರ್ವಹಿಸಲಿದ್ದೇವೆ. ಖುತ್ಬಾ ಆಲಿಸಲು ಬಯಸುವವರು ಇಲ್ಲಿ ಕುಳಿತು ಕೊಳ್ಳಲಿ. ಹೋಗಲಿಚ್ಛಿಸುವವರು ಹೋಗಲಿ.” (ನಸಾಈ, ಅಬೂದಾವೂದ್, ಇಬ್ನು ಮಾಜಃ)
ಅಲ್ಲಾಹನಿಗೆ ಸ್ತುತಿ ಅರ್ಪಿಸುತ್ತಾ ಖುತ್ಬಾ ಆರಂಭಿಸಬೇಕು. ಪ್ರವಾದಿ ಯವರು(ಸ) ಎಲ್ಲಾ ಖುತ್ಬಾವನ್ನು ಹಾಗೆಯೇ ನಿರ್ವಹಿಸುತ್ತಿದ್ದರು. ಪ್ರವಾದಿ ಯವರು(ಸ) ಹೇಳಿದ್ದಾರೆ, “ಅಲ್ಲಾಹನನ್ನು ಸ್ತುತಿಸದೆ ಆರಂಭಿಸುವ ಎಲ್ಲಾ ಕಾರ್ಯ ಗಳೂ ನಿಶ್ಫಲವಾಗಿದೆ.”
ಈದ್‍ನ ದಿನ ವಿಶ್ವಾಸಿಗಳು ಪರಸ್ಪರ ಹಸ್ತಲಾಘವ ನಡೆಸಿ, ಆಲಂಗಿಸಿ ಪರಸ್ಪರ ಪ್ರಾರ್ಥಿಸಬೇಕಾಗಿದೆ. ಎಲ್ಲಾ ದ್ವೇಷ ಕೋಪ ಗಳನ್ನು ಮರೆತು ಪರಸ್ಪರ ಸಹೋದರರಾಗಿ ಬಾಳಬೇಕು. ಪ್ರವಾದಿಯವರು(ಸ) ಮತ್ತು ಅನುಯಾಯಿಗಳು ಈದ್‍ನ ದಿವಸ ಪರಸ್ಪರ ಭೇಟಿಯಾದಾಗ ‘ತಕಬ್ಬಲಲ್ಲಾಹು ಮಿನ್ನಾ ವಮಿಂಕ’ (ನಮ್ಮಿಂದಲೂ ನಿಮ್ಮಿಂದಲೂ ಅಲ್ಲಾಹನು ಸ್ವೀಕರಿಸಲಿ) ಎಂದು ಹೇಳುತ್ತಿದ್ದರೆಂದು ಜುಬೈರ್ ಬಿನ್ ನಫೀರ್ ವರದಿ ಮಾಡಿದ್ದಾರೆ.
ಈದ್‍ನ ದಿನವನ್ನು ಅನಾಚಾರ, ಕೆಟ್ಟ ಕೆಲಸಗಳಲ್ಲಿ ತೊಡಗಿ ಹಾಳು ಮಾಡದಿರಲು ಪ್ರತೀ ವಿಶ್ವಾಸಿಯೂ ಪ್ರಯತ್ನಿಸಬೇಕಾಗಿದೆ. ಆ ಸಂತೋಷ ದಾಯಕವಾದ ದಿವಸವು ಅಲ್ಲಾಹನ ಒಂದು ಅನುಗ್ರಹವಾಗಿದೆ. ಆ ದಿನದಲ್ಲಿ ಅವನಿಗೆ ಸ್ತುತಿ ಸ್ತೋತ್ರಗಳನ್ನು ಅರ್ಪಿಸುತ್ತಾ ಅವನ ಮಹಿಮೆಯನ್ನು ಕೊಂಡಾಡಬೇಕಾಗಿದೆ. ಈದನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲು ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಸೋಮವಾರ, ಜೂನ್ 17, 2013

ನಾವು ಶಅಬಾನ್ ತಿಂಗಳಲ್ಲಿದ್ದೇವೆ

ನಾವು ಅನುಗ್ರಹೀತ ರಮಝಾನ್ ತಿಂಗಳಿಗೆ ಹತ್ತಿರವಾಗುತ್ತಿದ್ದೇವೆ. ಪ್ರತ್ಯೇಕ ಪದವಿ ಹಾಗೂ ಶ್ರೇಷ್ಠತೆ ಇರುವ ಶಅಬಾನ್ ತಿಂಗಳಲ್ಲಿ ನಾವಿದ್ದೇವೆ. ಸಾಮಾನ್ಯವಾಗಿ ಈ ತಿಂಗಳನ್ನು ರಮಝಾನಿಗೆ ತಯಾರಿಯ ತಿಂಗಳಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದಲೇ ಪ್ರವಾದಿಯವರು(ಸ) ಈ ತಿಂಗಳಲ್ಲಿ ಹೆಚ್ಚು ಉಪವಾಸ ವ್ರತ ಕೈಗೊಳ್ಳುತ್ತಿದ್ದರು. ಆಯಿಶಾ(ರ) ಹೇಳುತ್ತಾರೆ, “ರಮಝಾನಿನಲ್ಲಿ ಮಾತ್ರ ಒಂದು ತಿಂಗಳು ಪೂರ್ಣವಾಗಿ ಪ್ರವಾದಿಯವರು(ಸ) ಉಪವಾಸ ವ್ರತ ಕೈಗೊಂಡದ್ದನ್ನು ನಾನು ನೋಡಿದ್ದೇನೆ. ಪ್ರವಾದಿಯವರು(ಸ) ಹೆಚ್ಚು ಉಪವಾಸ ಆಚರಿಸಿದ್ದು ಶಅಬಾನ್ ತಿಂಗಳಿನಲ್ಲಾಗಿತ್ತು.” (ಬುಖಾರಿ, ಮುಸ್ಲಿಮ್).
ಶಅಬಾನ್ ತಿಂಗಳ ಉಪವಾಸಕ್ಕೆ ಮಹತ್ವ ನೀಡಿದುದರ ಕುರಿತು ಇನ್ನೊಂದು ಹದೀಸ್‍ನಲ್ಲಿ ಹೀಗೆ ವಿವರಿಸಲಾಗಿದೆ: ಉಸಾಮರಿಂದ(ರ) ವರದಿಯಾಗಿದೆ, “ಅಲ್ಲಾಹನ ಸಂದೇಶವಾಹಕರೇ ಶಅಬಾನಿನಲ್ಲಿ ಉಪವಾಸ ಆಚರಿಸುವಷ್ಟು ಇತರ ತಿಂಗಳುಗಳಲ್ಲಿ ತಾವು ಉಪವಾಸ ಆಚರಿಸುವುದನ್ನು ನಾವು ಕಂಡಿಲ್ಲವಲ್ಲಾ” ಎಂದು ನಾನು ಪ್ರವಾದಿಯವರೊಂದಿಗೆ(ಸ) ಕೇಳಿದೆ. ಆಗ ಪ್ರವಾದಿಯವರು(ಸ) ಹೇಳಿದರು, “ರಜಬ್ ಹಾಗೂ ರಮಝಾನ್ ತಿಂಗಳ ಮಧ್ಯೆ ಇರುವ ಈ ತಿಂಗಳಲ್ಲಿ ಜನರು ಕರ್ಮಗಳನ್ನೆಸಗುವುದರಲ್ಲಿ ಅನಾಸ್ಥೆ ತೋರುತ್ತಾರೆ. ಪ್ರಸ್ತುತ ತಿಂಗಳ ಕರ್ಮಗಳನ್ನು ಅಲ್ಲಾಹನಲ್ಲಿಗೆ ಎತ್ತಲಾಗುವುದು. ಉಪವಾಸಿಗನಾಗಿರುವ ಸ್ಥಿತಿಯಲ್ಲಿ ನನ್ನ ಕರ್ಮಗಳನ್ನು ಅಲ್ಲಾಹನ ಬಳಿಗೆ ಎತ್ತಲಾಗುವುದನ್ನು ನಾನು ಇಷ್ಟಪಡುತ್ತೇನೆ.”
(ಅಬೂದಾವೂದ್, ನಸಾಈ)
ಆದ್ದರಿಂದ ಈ ತಿಂಗಳಲ್ಲಿ ಅಲ್ಲಾಹನ ಸಂಪ್ರೀತಿ ಗಳಿಸಲಿಕ್ಕಾಗಿ ಹೆಚ್ಚು ಆರಾಧನೆಗಳನ್ನು ನಿರ್ವಹಿಸಬೇಕು. ಆಯಿಶಾ(ರ) ವರದಿ ಮಾಡಿದ್ದಾರೆ: ಪ್ರವಾದಿಯವರು(ಸ) ಹೇಳಿದರು, “ಶಅಬಾನ್ ನನ್ನ ತಿಂಗಳಾಗಿದೆ ಮತ್ತು ರಮಝಾನ್ ಅಲ್ಲಾಹನ ತಿಂಗಳಾಗಿದೆ.”
ಶಅಬಾನ್ 15ರ ಬಳಿಕ ಕಾಯಂ ಆಗಿ ಉಪವಾಸ ಆಚರಿಸುವವರು ಮಾತ್ರ (ಸೋಮವಾರ ಮತ್ತು ಗುರುವಾರ) ಆಚರಿಸಿದರೆ ಸಾಕು. ಕಾರಣ ಅದು ರಮಝಾನಿಗಿರುವ ತಯಾರಿಯ ಒಂದು ಭಾಗವಾಗಿದೆ. ಅಬೂ ಉಮಾಮ(ರ) ಹೇಳುತ್ತಾರೆ: ಪ್ರವಾದಿಯವರ(ಸ) ಸನ್ನಿಧಿಗೆ ಹೋಗಿ ನಾನು ಹೇಳಿದೆ. “ಸ್ವರ್ಗ ಪ್ರವೇಶಕ್ಕೆ ಕಾರಣವಾಗುವ ಒಂದು ಕರ್ಮದ ಕುರಿತು ನನಗೆ ತಿಳಿಸಿರಿ.” ಆಗ ಪ್ರವಾದಿಯವರು(ಸ) ಹೇಳಿದರು, “ಉಪವಾಸ ಆಚರಿಸಿರಿ. ಅದಕ್ಕೆ ಪರ್ಯಾಯವಾಗಿ ಯಾವುದೂ ಇಲ್ಲ.“ ಎರಡನೇ ಬಾರಿ ಪ್ರವಾದಿಯವರನ್ನು(ಸ) ಸಮೀಪಿಸಿದಾಗಲೂ ಅವರು ಉಪವಾಸ ಆಚರಿಸಲು ಆಜ್ಞಾಪಿಸಿದರು. (ಅಹ್ಮದ್, ನಸಾಈ).
ಶಅಬಾನ್ ತಿಂಗಳಿಗೆ ಪ್ರವಾದಿಯವರು(ಸ) ಇಷ್ಟೆಲ್ಲಾ ಮಹತ್ವ ನೀಡಿರುವಾಗ ಇಂದು ಹಲವರು ಶಅಬಾನ್ 15ರ ರಾತ್ರಿಗೆ ಮಾತ್ರ (ಬರಾಅತ್) ಮಹತ್ವ ನೀಡುತ್ತಾರೆ. ಪುರಾವೆಗಳಿಲ್ಲದ ಈ ರಾತ್ರಿಯಲ್ಲಿ ಹಲವಾರು ನವೀನಾಚಾರಗಳು ನಡೆಯುತ್ತವೆ. ಆ ರಾತ್ರಿಯನ್ನು ಒಂದು ಆಚರಣೆಯಾಗಿ ಕಾಣುವವರಿದ್ದಾರೆ. ಅಂದು ವಿಶೇಷ ಧಾರ್ಮಿಕ ಪ್ರವಚನಗಳು ದಿಕ್ರ್, ದುಆಗಳು ನಡೆಯುತ್ತವೆ. ಆ ರಾತ್ರಿಯಲ್ಲಿ ರಮಝಾನಿನ ತರಾವೀಹ್ ನಮಾಝ್‍ನಂತೆ ಸಾಮೂಹಿಕ ನಮಾಝ್ ನಡೆಯುವುದಿದೆ. ಇಶಾ ನಮಾಝ್‍ಗಳು ಪುಟ್ಟ ಸೂರಃಗಳು ಓದಿ ನಂತರದ ಸಾಮೂಹಿಕ ನಮಾಝ್‍ಗೆ ಸಮಯ ಮೀಸಲಿಡುತ್ತಾರೆ. ಆ ರಾತ್ರಿಯಲ್ಲಿ ಲೈಲತುಲ್ ಕದ್ರ್‍ನಂತೆ ರಾತ್ರಿಯಿಡೀ ಜಾಗರಣೆ ಕೂರುವ ಸಂಪ್ರದಾಯವು ಕೂಡಾ ಇದೆ. ಕೆಲವು ಮಂದಿ ತಮ್ಮ ಮನೆಗಳನ್ನೂ ಅಲಂಕರಿಸುತ್ತಾರೆ.
ಆದರೆ ಇವೆಲ್ಲವೂ ನವೀನಾಚಾರಗಳಾಗಿವೆ. ಈ ಆಚರಣೆಗಳನ್ನು ಪ್ರವಾದಿ(ಸ), ಸಹಾಬಿಗಳು ಹಾಗೂ ತಾಬಿಈಗಳು ಮಾಡಿರುವ ಯಾವುದೇ ಪುರಾವೆಗಳಿಲ್ಲ. ಪ್ರವಾದಿಯವರು(ಸ) ಆ ರಾತ್ರಿಯಲ್ಲಿ ಪ್ರಾರ್ಥಿಸಿದ್ದರು ಮತ್ತು ಪಾಪ ವಿಮೋಚನೆಗಾಗಿ ಅಲ್ಲಾಹನಲ್ಲಿ ಬೇಡಿದ್ದರು. ಇದನ್ನು ಈ ಆಚರಣೆಗಳಿಗಿರುವ ಪುರಾವೆಯಾಗಿ ಹಲವರು ಉಲ್ಲೇಖಿಸು ತ್ತಾರೆ. ಪ್ರವಾದಿಯವರು(ಸ) ಅಂದು ಮಾತ್ರವಲ್ಲ, ಎಲ್ಲಾ ದಿವಸವೂ ಪ್ರಾರ್ಥಿಸುತ್ತಿದ್ದರು. ಪ್ರವಾದಿಯವರು(ಸ) ಶಅಬಾನ್ 15ರಂದು ರಾತ್ರಿ ಪ್ರತ್ಯೇಕ ಪ್ರಾರ್ಥನೆ ನಡೆಸಿದ್ದರೆ, ಆ ಪ್ರಾರ್ಥನೆಗಳು ವರದಿ ಮಾಡಲ್ಪಡುತ್ತಿದ್ದವು. ಆದರೆ ಪ್ರಸ್ತುತ ಪ್ರಾರ್ಥನೆಗಳನ್ನು ಯಾರೂ ವರದಿ ಮಾಡಿಲ್ಲ. ಯಾಕೆಂದರೆ ಅದು ಪ್ರವಾದಿಯವರ(ಸ) ದೈನಂದಿನ ಪ್ರಾರ್ಥನೆಯಾಗಿತ್ತು.
ಕೆಲವು ಕಡೆಗಳಲ್ಲಿ, ಪ್ರವಾದಿಯವರು(ಸ) ಬರಾಅತ್‍ನಂದು ರಾತ್ರಿ ಪ್ರಾರ್ಥಿಸಿದ ಪ್ರಾರ್ಥನೆಗಳು ಎಂದು ಹೇಳಿ ಕೆಲವು ಪ್ರಾರ್ಥನೆಗಳನ್ನು ಮುದ್ರಿಸಿ ಮಾರಾಟ ಮಾಡುವವರಿದ್ದಾರೆ. ಆದರೆ ಅದಕ್ಕೆ ಸೂಕ್ತ ಪುರಾವೆಗಳೋ ಹದೀಸ್‍ನ ಪರಂಪರೆಯೋ ಇಲ್ಲ.
ಅವುಗಳ ಪೈಕಿ ಒಂದು ಪ್ರಾರ್ಥನೆ ಇಂತಿದೆ. “ಓ ಅಲ್ಲಾಹ್, ನೀನು `ಉಮ್ಮುಲ್ ಕಿತಾಬ್’ನಲ್ಲಿ ನನಗೆ ದೌರ್ಭಾಗ್ಯ, ಸಂಕಷ್ಟ, ಅಸಹಾಯಕತೆ, ದಾರಿದ್ರ್ಯ ವಿಧಿಸಿದ್ದರೆ ಅವೆಲ್ಲವನ್ನೂ ಅಳಿಸಿ ನನಗೆ ನಿನ್ನ ಔದಾರ್ಯದಿಂದ ಸೌಭಾಗ್ಯವನ್ನು ನೀಡು. ಕಾರಣ ನೀನು ನಿನ್ನ ಸಂದೇಶವಾಹಕರ(ಸ) ನಾಲಗೆಯ ಮೂಲಕ ನಮಗೆ ನೀಡಿರುವ ಗ್ರಂಥದಲ್ಲಿ “ಅಲ್ಲಾಹನು ಇಚ್ಛಿಸುವವನಿಗೆ ಅವನ ಪಾಪಗಳನ್ನು ಅಳಿಸುತ್ತಾನೆ ಮತ್ತು ಅವನಿಚ್ಛಿಸುವವರಿಗೆ ಖಾಯಂ ಗೊಳಿಸುತ್ತಾನೆ” ಎಂದು ಹೇಳಿ ಲ್ಲವೇ! ನಿನ್ನ ವಚನಗಳು ಸತ್ಯವಾಗಿವೆ.”
ಈ ವಾಕ್ಯಗಳಲ್ಲಿ ವೈರುಧ್ಯಗಳಿವೆ. ಕಾರಣ, ದೌರ್ಭಾಗ್ಯವನ್ನು ಅಳಿಸಿ ಸೌಭಾಗ್ಯವನ್ನು ನೀಡಬೇಕು ಎಂಬುದಕ್ಕೆ ಪುರಾವೆಯಾಗಿ ನೀಡುವ ಕುರ್‍ಆನ್ ವಾಕ್ಯದ ಅರ್ಥವು ‘ಉಮ್ಮುಲ್ ಕಿತಾಬ್’ನಿಂದ ಏನನ್ನೂ ಅಳಿಸಿ ಹಾಕಲಾಗುವುದಿಲ್ಲ ಮತ್ತು ಏನನ್ನೂ ಹೊಸದಾಗಿ ಸೇರಿಸಲಾಗುವುದಿಲ್ಲ ಎಂದಾಗಿದೆ. ಮಾತ್ರವಲ್ಲ ಆ ಪ್ರಾರ್ಥನೆಗೆ ನೈಜ ಪ್ರಾರ್ಥನೆಯ ಶೈಲಿಯೂ ಇಲ್ಲ. “ಪ್ರಾರ್ಥಿಸುವಾಗ ನಾವು ಅಲ್ಲಾಹನೊಂದಿಗೆ ದೃಢತೆಯಿಂದ ಬೇಡಬೇಕು” ಎಂದು ಪ್ರವಾದಿಯವರು(ಸ) ಕಲಿಸಿದ್ದಾರೆ. ಆದ್ದರಿಂದ ಇಂತಹ ಪ್ರಾರ್ಥನೆಗಳಲ್ಲಿ ಒಂದು ಆಲಸ್ಯತನ ಎದ್ದು ತೋರುತ್ತದೆ. ಇದು ಓರ್ವ ವಿಶ್ವಾಸಿಗೆ ಭೂಷಣವಲ್ಲ. ಯಾರೋ ಸೃಷ್ಟಿಸಿದ ಪ್ರಾರ್ಥನೆಗಿಂತ ಪ್ರವಾದಿಯವರು(ಸ) ಕಲಿಸಿದ ಪ್ರಾರ್ಥನೆಯೇ ಪ್ರತೀ ವಿಶ್ವಾಸಿಯ ಆಯುಧವಾಗಬೇಕು.
ಶಅಬಾನ್ 15ರಂದು ಜನರು ಪ್ರತ್ಯೇಕವಾಗಿ ಮಾಡುವ ಹಲವು ಕರ್ಮಗಳಿಗೆ ಪ್ರವಾದಿಯವರ(ಸ) ಮಾದರಿಯಿಲ್ಲ. ಇಂತಹ ಅನಾಚಾರಗಳನ್ನೆಸಗಲು ಇಸ್ಲಾಮ್ ಬಯಸುವುದೂ ಇಲ್ಲ. ಆದರೆ ಇಸ್ಲಾಮ್ ಬಯಸುವ ಕಾರ್ಯಗಳನ್ನು ಮಾಡುವಲ್ಲಿ ಈ ಮಂದಿ ಕಾಣುತ್ತಿಲ್ಲ. ಶಅಬಾನ್ 15ರಂದು ರಾತ್ರಿ ಮಸೀದಿಗಳಲ್ಲಿ ಜರಗುವ ಅನ್ನ ಸಂತರ್ಪಣೆ, ಧಾರ್ಮಿಕ ಪ್ರವಚನಗಳಲ್ಲಿ ಮುಂದಿ ರುವವರು ಅಂದಿನ ಮಗ್ರಿಬ್, ಇಶಾ ನಮಾಝ್ ನಿರ್ವಹಿಸಿದ್ದಾರೆಯೇ ಎಂದು ನೋಡಿದರೆ ಅವರ ಈಮಾನಿನ ಕಾಪಟ್ಯವು ಗೋಚರವಾಗಬಹುದು. ಅಂದು ರಾತ್ರಿಯಿಡೀ ಸಕ್ರಿಯರಾಗಿರುವ ಎಷ್ಟು ಮಂದಿ ಮರು ದಿನದ ಸುಬಹ್ ನಮಾಝಿಗೆ ಎದ್ದೇಳುತ್ತಾರೆ?
ಕಡ್ಡಾಯಗೊಳಿಸಲ್ಪಟ್ಟ ರಮಝಾನಿನ ಉಪವಾಸ ವನ್ನು ತ್ಯಜಿಸುವವರು ಕೂಡಾ ಶಅಬಾನ್ 15ರ ಪುರಾವೆಗಳಿಲ್ಲದ ಉಪವಾಸವನ್ನು ಎಷ್ಟೇ ಕಷ್ಟ ಪಟ್ಟಾದರೂ ಆಚರಿಸುತ್ತಾರೆ. ಜನರ ಮನಸ್ಥಿತಿ ವಿಚಿತ್ರವಾಗಿದೆ. ಇಸ್ಲಾಮ್ ಆಜ್ಞಾಪಿಸುವ ಕಾರ್ಯಗಳನ್ನು ಬದಿಗಿಟ್ಟು ತಮ್ಮ ಪೂರ್ವಿಕರು ಮಾಡಿದ್ದ ಕರ್ಮಗಳನ್ನು ಅನುಸರಿಸುತ್ತಿದ್ದಾರೆ. ಇಸ್ಲಾಮ್ ಮಾಡಬಾರದೆಂದು ಹೇಳಿರುವ ಕಾರ್ಯಗಳನ್ನು ಹಟದಿಂದ ಮಾಡುತ್ತಾರೆ. ಇವಕ್ಕೆಲ್ಲಾ ಇಸ್ಲಾಮ್ ಅನುಮತಿ ನೀಡಿಲ್ಲ ಎಂದು ತಿಳಿದಿದ್ದೂ ಜನರಿಂದ ಇವೆಲ್ಲವನ್ನೂ ಮಾಡಿಸುವ ಪುರೋಹಿತ ವರ್ಗವು ತಮ್ಮ ಈ ಕರ್ಮಗಳ ಬಗ್ಗೆ ಪ್ರಜ್ಞಾವಂತರಾಗಬೇಕಾಗಿದೆ ಮತ್ತು ಆತ್ಮಾವಲೋಕನ ನಡೆಸಬೇಕಾಗಿದೆ.
ಈ ರಾತ್ರಿಯನ್ನು ವಿಧಿ ನಿರ್ಣಯದ ರಾತ್ರಿ ಎಂದು ಹೇಳುವವರಿದ್ದಾರೆ. ಅಂದು ಮನುಷ್ಯರ ವಿಧಿಗಳನ್ನು ನಿರ್ಣಯಿಸಲಾಗುತ್ತದಂತೆ. ಆದರೆ ಕುರ್‍ಆನ್ ವಿಧಿ ನಿರ್ಣಯದ ರಾತ್ರಿ ಯಾವುದೆಂದು ಸ್ಪಷ್ಟವಾಗಿ ತಿಳಿಸಿದೆ. ಕುರ್‍ಆನನ್ನು ಅವತೀರ್ಣ ಗೊಳಿಸಲಾದ ರಾತ್ರಿ, ಲೈಲತುಲ್ ಕದ್ರ್. ಈ ರಾತ್ರಿ ವಿಧಿ ನಿರ್ಣಯವಾಗುತ್ತದೆ ಎಂಬ ವಿಷಯದಲ್ಲಿ ತರ್ಕವಿಲ್ಲ. ಈ ರಾತ್ರಿ ರಮಝಾನ್ ತಿಂಗಳಲ್ಲಾಗಿದೆ. ಹಾಗಿರುವಾಗ ಬರಾಅತ್‍ನ ರಾತ್ರಿ ವಿಧಿ ನಿರ್ಣಯದ ರಾತ್ರಿಯಾಗುವುದು ಹೇಗೆ?
ಒಟ್ಟಿನಲ್ಲಿ ಸಮಾಜವು ಹಲವಾರು ಅನಾಚಾರ ಗಳಲ್ಲೂ ನವೀನಾಚಾರಗಳಲ್ಲೂ ಮುಳುಗಿರುವಾಗ ನಾವು ಅದರ ವಾಸ್ತವಿಕತೆಯನ್ನು ಬಲ್ಲ ಮೂಲಗಳಿಂದ ತಿಳಿಯಲು ಪ್ರಯತ್ನಿಸಬೇಕಾಗಿದೆ. ಪೂರ್ವಿಕರ ಅಂಧಾನುಕರಣೆಯು ಇಸ್ಲಾಮಿನ ಶೈಲಿಯಲ್ಲ. ಅದು ಇಸ್ಲಾಮಿನ ಆಚಾರಗಳಿಗೆ ಪುರಾವೆಯೂ ಅಲ್ಲ. ಇಸ್ಲಾಮಿಗೆ ಪುರಾವೆ ಕುರ್‍ಆನ್ ಹಾಗೂ ಪ್ರವಾದಿಚರ್ಯೆಯಾಗಿದೆ. ಆದ್ದರಿಂದ ನಾವು ನಮ್ಮ ಕರ್ಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ. ಅಲ್ಲಾಹನು ನಮ್ಮೆಲ್ಲರಿಗೆ ರಮಝಾನ್ ತಿಂಗಳ ಉಪವಾಸ ಆಚರಿಸುವ ಸೌಭಾಗ್ಯವನ್ನು ಕರುಣಿಸಲಿ.

ಸೋಮವಾರ, ಮೇ 20, 2013

ಹ್ರದಯಕ್ಕೆ ತಕ್ವಾದ ಉಡುಪು ತೊಡಿಸಿ


ಕೆಡುಕು ರಹಿತ ಜೀವನ ನಡೆಸುವುದು ಪ್ರತಿಯೋರ್ವ ವಿಶ್ವಾಸಿಯ ಗುರಿಯಾಗಿದೆ. ಆ ಮೂಲಕ ಶಾಶ್ವತವಾದ ಸ್ವರ್ಗಗಳಿಸುವುದು ಆತನ ಅದಮ್ಯ ಬಯಕೆಯಾಗಿರುತ್ತದೆ. ಓರ್ವನ ಜೀವನವನ್ನು ಉತ್ತಮ ಅಥವಾ ಕೆಟ್ಟದ್ದಾಗಿ ಪರಿವರ್ತಿಸುವುದು ಆತನ ಕರ್ಮಗಳಾಗಿವೆ. ಆತನ ಕರ್ಮಗಳನ್ನು ಮಾನದಂಡವಾಗಿಸಿ ಅವನ ಸೋಲು-ಗೆಲುವು ನಿರ್ಣಯವಾಗುತ್ತದೆ. ಕೆಡುಕು ಗಳು ತುಂಬಿ ತುಳುಕುವ ಒಂದು ಸಮಾಜದಲ್ಲಿ ಬದುಕುವಾಗ ಅವುಗಳು ಮನಸ್ಸು ಹಾಗೂ ಶರೀರಕ್ಕೆ ವ್ಯಾಪಿಸದಿರಬೇಕಾದರೆ ಅಲ್ಲಾಹನ ಅನುಗ್ರಹವೇ ಬೇಕು. ಆ ಕೆಡುಕುಗಳಿಂದ ಮನಸ್ಸಿಗೋ ಕರ್ಮಗಳಿಗೋ ಕೇಡುಂಟಾಗದಂತೆ ತೋರುವ ಜಾಗೃತಾ ಮನೋಭಾವವು ತಕ್ವಾ (ದೇವಭಯ) ಆಗಿದೆ.
ಉಮರ್‍ರವರು(ರ) ಉಬಯ್ಯ್ ಬಿನ್ ಕಅಬ್ ರೊಂದಿಗೆ ಪ್ರಶ್ನಿಸಿದರು. “ಉಬಯ್ಯ್ ತಕ್ವಾ ಎಂದರೇನು?” ಉಬಯ್ಯ್ ಉತ್ತರಿಸಿದರು. “ಕಲ್ಲು, ಮುಳ್ಳುಗಳು ತುಂಬಿದ ಹಾದಿಯಲ್ಲಿ ನಗ್ನ ಪಾದಗಳೊಂದಿಗೆ ನಡೆಯುವ ಸಂದರ್ಭವೊದಗಿ ದಾಗ ಕಲ್ಲು ಕಾಲಿಗೆ ತಾಗದಂತೆ ಮುಳ್ಳು ಕಾಲಿಗೆ ಚುಚ್ಚದಂತೆ ನಾವು ಎಚ್ಚರ ವಹಿಸಿ ಒಂದೊಂದು ಹೆಜ್ಜೆ ಮುಂದಿಡುತ್ತೇವಲ್ಲವೇ. ಈ ಜಾಗ್ರತೆ ಹಾಗೂ ಎಚ್ಚರವೇ ತಕ್ವಾ ಆಗಿದೆ.” ಇದು ತಕ್ವಾದ ಕುರಿತು ಸರಳ ಹಾಗೂ ಮನಮುಟ್ಟುವ ಉದಾ ಹರಣೆಯಾಗಿದೆ. ತಕ್ವಾವು ಹೃದಯಾಂತರಾಳದಿಂದ ಉದ್ಭವಗೊಂಡಾಗಲೇ ಅದು ಕರ್ಮಗಳ ಮೇಲೆ ಪ್ರಭಾವ ಬೀರುತ್ತದೆ. ಕರ್ಮಗಳಿಗೆ ಪ್ರಾಮಾಣಿಕತೆ ಯನ್ನು ನೀಡುತ್ತದೆ. ಕೇವಲ ಬಾಹ್ಯವಾಗಿ ಗೋಚರಿಸುವ ತಕ್ವಾವು ಮನುಷ್ಯನನ್ನು ವಿಜಯ ಪಥದೆಡೆಗೆ ಕೊಂಡೊಯ್ಯಲಾರದು. ಬಾಹ್ಯ ರೂಪ ದಲ್ಲಿ ಪ್ರಕಟವಾಗುವ ತಕ್ವಾವು ಕೇವಲ ತೋರಿಕೆ ಗಾಗಿರುತ್ತದೆ. ಅಂತಹ ತಕ್ವಾಗಳಿಂದ ಉದ್ಭವಿಸುವ ಕರ್ಮಗಳು ವ್ಯರ್ಥ. ನೀರಿನಲ್ಲಿ ಬರೆದಂತೆ ಅವು ನಿಷ್ಫಲಗೊಳ್ಳುವುದು.
ಅಲ್ಲಾಹನು ಮನುಷ್ಯರನ್ನು ಅತ್ಯುತ್ತಮ ಪ್ರಕೃತಿ ಯಲ್ಲಿ ಸೃಷ್ಟಿಸಿದನು. ಸುಂದರವಾದ ಅಂಗಾಂಗ ಗಳನ್ನೂ ನೀಡಿದನು. ಆ ಅಂಗಾಂಗಗಳನ್ನು ಕಾಪಾಡುವುದು ಮನುಷ್ಯನ ಬಾಧ್ಯತೆಯಾಗಿದೆ. ಅವುಗಳಿಗೆ ಬೇಕಾದ ವ್ಯವಸ್ಥೆಗಳನ್ನು ನೀಡುವುದು ಮನುಷ್ಯನ ಹೊಣೆಗಾರಿಕೆಯಾಗಿದೆ. ಆದರೆ ಅಲ್ಲಾಹನು ನಾಳೆ ನಾವು ಎಂತಹಾ ಬಟ್ಟೆ ಧರಿಸಿದ್ದೇವೆ. ಶರೀರದ ರಕ್ಷಣೆಗೆ ಯಾವೆಲ್ಲಾ ಮಾರ್ಗಗಳನ್ನು ಕೈಗೊಂಡಿದ್ದೇವೆ ಎಂದು ನೋಡುವುದಿಲ್ಲ. ಬದಲಾಗಿ ಅವನು ನೋಡುವುದು ನಮ್ಮ ಹೃದಯವನ್ನಾಗಿದೆ. ನಮ್ಮ ಹೃದಯದಲ್ಲಿರುವ ತಕ್ವಾಕ್ಕನುಸಾರವಾಗಿ ನಮ್ಮ ಜಯಾಪಜಯಗಳು ನಿರ್ಣಯವಾಗುತ್ತವೆ. ಪ್ರವಾದಿಯವರು(ಸ) ಹೇಳಿದರು, “ಅಲ್ಲಾಹನು ನಿಮ್ಮ ಶರೀರ ಅಥವಾ ರೂಪವನ್ನೋ ನೋಡುವುದಿಲ್ಲ. ಅವನು ನೋಡು ವುದು ನಿಮ್ಮ ಹೃದಯ ಹಾಗೂ ಕರ್ಮಗಳನ್ನಾ ಗಿದೆ.” ಆದ್ದರಿಂದ ಹೃಯದಕ್ಕೆ ರೋಗ ಬಾಧಿಸದಂತೆ
ಎಚ್ಚರ ವಹಿಸುವವರು ವಿಶ್ವಾಸಿಗಳು ಮಾತ್ರ.
ಪರಲೋಕದ ವಿಜಯಕ್ಕಾಗಿ ತಯಾರಿಯಾಗು ವಾಗ ಪ್ರಥಮ ಆದ್ಯತೆ ನೀಡಬೇಕಾದುದು ಹೃದಯಕ್ಕಾಗಿದೆ. ಕುರ್‍ಆನ್ ಹಾಗೂ ಪ್ರವಾದಿ ಚರ್ಯೆಯ ಹಿನ್ನೆಲೆಯಲ್ಲಿ ತರಬೇತಿಯ ಮಾರ್ಗಗಳು ಹಾಗೂ ಶೈಲಿಗಳು ವಿವರಿಸಲ್ಪಡುವಾಗ ಪ್ರಥಮವಾಗಿ ಪ್ರಸ್ತಾಪಗೊಳ್ಳುವುದು ಹೃದಯವಾಗಿದೆ. ಕೆಡುಕುಗಳು ಹೃದಯಕ್ಕೆ ಸೋಂಕದಂತೆ ಸದಾ ಹೃದಯವನ್ನು ಶೋಭಾಯಮಾನಗೊಳಿಸಲು ನಿರಂತರ ಕರ್ಮ ನಿರತರಾಗಬೇಕೆಂದು ಪ್ರವಾದಿ ಯವರು(ಸ) ಸಲಹೆ ನೀಡಿದ್ದಾರೆ. ಪ್ರವಾದಿ ಯವರು(ಸ) ಹೇಳಿದರು, “ಅರಿಯಿರಿ, ಶರೀರದಲ್ಲಿ ಮಾಂಸದ ತುಂಡೊಂದಿದೆ. ಅದು ಉತ್ತಮವಾದರೆ ಸಮಸ್ತ ಶರೀರ ಉತ್ತಮಗೊಂಡಂತೆ. ಅದು ಕೆಟ್ಟು ಹೋದರೆ ಶರೀರವಿಡೀ ಕೆಟ್ಟಂತೆ. ಅದುವೇ ಹೃದಯವಾಗಿದೆ.” (ಬುಖಾರಿ) ಈ ವಚನವನ್ನು ವಿವರಿಸುತ್ತಾ ಇಬ್ನು ಹಜರ್ ಬರೆಯುತ್ತಾರೆ, “ಪ್ರವಾದಿಯವರು(ಸ) ಹೃದಯಕ್ಕೆ ಒತ್ತು ನೀಡಿರು ವುದು ಅದು ಶರೀರದ ಆಡಳಿತಾಧಿ ಕಾರಿಯಾಗಿ ರುವುದರಿಂದಾಗಿದೆ. ಆಡಳಿತಾಧಿಕಾರಿ ಉತ್ತಮ ಗೊಂಡರೆ ಪ್ರಜೆಗಳೂ ಉತ್ತಮರಾಗುವರು. ಆಡಳಿತಾಧಿಕಾರಿ ಕೆಟ್ಟು ಹೋದರೆ ಪ್ರಜೆಗಳೂ ಕೆಟ್ಟು ಹೋಗುವರು.” (ಫತ್‍ಹುಲ್ ಬಾರಿ)
ಹೃದಯವು ರೋಗಪೀಡಿತವಾದರೆ ಅದರ ದುಷ್ಪರಿಣಾಮ ಶರೀರ ಹಾಗೂ ಕರ್ಮಗಳ ಮೇಲೂ ಗೋಚರವಾಗುತ್ತದೆ. ಅದು ತಕ್ವಾದಿಂದ ಕೂಡಿದ್ದರೆ ಅದರ ಸತ್ಪರಿಣಾಮ ಶರೀರದಲ್ಲೂ ಕಾಣಿಸ ತೊಡಗುತ್ತದೆ. ಮಾತ್ರವಲ್ಲ, ಸಮಾಜದಲ್ಲೂ ಅದರ ಪ್ರಭಾವ ಗೋಚರವಾಗುತ್ತದೆ. ಇಮಾಮ್ ಇಬ್ನು ಕಯ್ಯಿಮ್ ಹೇಳುತ್ತಾರೆ, “ಶರೀರಕ್ಕೆ ರೋಗಬಾಧೆಯಾಗುವಂತೆ ಹೃದಯವೂ ರೋಗ ಪೀಡಿತವಾಗುತ್ತದೆ. ಅದನ್ನು ಶಮನಗೊಳಿಸುವುದು ತೌಬಾ ಹಾಗೂ ಈಮಾನ್ ವಧರ್ನೆಗೊಳಿಸುವ ಕರ್ಮಗಳಿಂದಾಗಿದೆ. ಕನ್ನಡಿಯ ಹೊಳಪೂ ಮಾಸುವಂತೆ ಹೃದಯದ ಹೊಳಪು ಮಾಸುತ್ತದೆ. ಅದಕ್ಕೆ ಹೊಳಪು ನೀಡಬೇಕಾದದ್ದು ದೇವ ಸ್ಮರಣೆಯ ಮೂಲಕವಾಗಿದೆ. ಶರೀರ ನಗ್ನವಾಗು ವಂತೆ ಹೃದಯ ಕೂಡಾ ನಗ್ನವಾಗುತ್ತದೆ. ಅದಕ್ಕೆ ಬಟ್ಟೆ ತೊಡಿಸಬೇಕಾದದ್ದು ತಕ್ವಾದ ಮೂಲಕವಾಗಿದೆ. ಶರೀರದಂತೆ ಹೃದಯಕ್ಕೂ ಹಸಿವು, ಬಾಯಾರಿಕೆ ಗಳಿವೆ. ಅದರ ಅನ್ನ-ಪಾನೀಯಗಳು ಜ್ಞಾನ, ದೇವ ಸಂಪ್ರೀತಿ, ತ್ಯಾಗ, ಪಶ್ಚಾತ್ತಾಪ, ಸೇವಾ ಮನೋಭಾವಗಳಾಗಿವೆ.”
ತಕ್ವಾವು ಹೃದಯಕ್ಕೆ ಅಂಧಕಾರ ಆವರಿಸುವು ದನ್ನು ತಡೆಯುತ್ತದೆ. ತಕ್ವಾದಿಂದಾಗಿ ಹೃದಯವು ಯಾವಾಗಲೂ ಎಚ್ಚರದಲ್ಲಿರುತ್ತದೆ. ತಪ್ಪೆಸಗುವ ಸಂದರ್ಭವೊದಗಿದಾಗ ದೇವಭಯವು ಅದರಿಂದ ತಡೆಯುತ್ತದೆ. ದೇಹೇಚ್ಛೆಯ ದುಷ್ಟ ಆಜ್ಞೆಗಳನ್ನು ಧಿಕ್ಕರಿಸಿದಾಗ ಜೀವನವು ಸನ್ಮಾರ್ಗದಲ್ಲಿ ನೆಲೆ ಯೂರುತ್ತದೆ. ಇಂತಹ ಸ್ವಭಾವ ಹೊಂದಿದವರಿಗೆ ನಾಳೆ ಪರಲೋಕದಲ್ಲಿ ವಿಜಯಿಗಳಾಗಲು ಸಾಧ್ಯ.
ಹಾಫಿಝ್ ಇಬ್ನು ಅಸಾಕಿರ್ ಉದ್ಧರಿಸುವ ಒಂದು ಘಟನೆ ಇಂತಿದೆ. “ಓರ್ವ

ಯುವಕನು ಮಸೀದಿಯಲ್ಲಿ ಸದಾ ಆರಾಧನೆ ನಿರತನಾಗಿದ್ದನು. ಅವನು ತನ್ನ ಹೆಚ್ಚಿನ ಸಮಯವನ್ನು ಮಸೀದಿಯಲ್ಲೇ ಕಳೆಯುತ್ತಿದ್ದನು. ಹೀಗಿರುವಾಗ ಓರ್ವ ಯುವತಿ ಆತನನ್ನು ಬಯಸಿದಳು. ಮಾತ್ರವಲ್ಲ ದೇಹ ಸಂಬಂಧಕ್ಕೂ ಆಹ್ವಾನಿಸಿದಳು. ಆತ ನಿರಾಕರಿಸಿದರೂ ಆಕೆ ಬಿಡಲಿಲ್ಲ. ಹಾಗೆ ಒತ್ತಾಯಕ್ಕೆ ಮಣಿದು ಆತ ಅವಳ ಮನೆಗೆ ಆಗಮಿಸಿದನು. ಈ ಸಂದರ್ಭದಲ್ಲಿ ಆತನಿಗೆ ಈ ಸೂಕ್ತವು ಸ್ಮ್ರತಿ ಪಟಲದಲ್ಲಿ ಮೂಡುತ್ತದೆ. “ವಾಸ್ತವದಲ್ಲಿ ಧರ್ಮನಿಷ್ಠರಾದವರಿಗೆ ಶೈತಾನನ ಪ್ರಭಾವದಿಂದ ದುರಾಲೋಚನೆಗಳು ಸೋಂಕಿದರೂ ಅವರು ತಕ್ಷಣ ಜಾಗೃತರಾಗುತ್ತಾರೆ ಮತ್ತು ಅವರಿಗೆ ಸರಿಯಾದ ಕರ್ಮ ವಿಧಾನ ಯಾವು ದೆಂದು ಸ್ಪಷ್ಟವಾಗಿ ತೋರುತ್ತದೆ.” (ಅಲ್ ಅಅïರಾಫ್: 201) ಈ ಸೂಕ್ತವು ನೆನಪಾದ ಕೂಡಲೇ ಆತ ಪ್ರಜ್ಞೆ ಕಳಕೊಂಡು ಬಿದ್ದನು. ಪ್ರಜ್ಞೆ ಮರಳಿದಾಗ ಆತ ಮತ್ತೆ ಆ ಸೂಕ್ತವನ್ನು ಸ್ಮರಿಸಿದನು. ಆಗ ಆತನ ಪ್ರಾಣ ಪಕ್ಷಿ ಹಾರಿ ಹೋಯಿತು. ಉಮರ್(ರ) ಬಂದು ಆ ಯುವಕನ ತಂದೆಗೆ ಸಾಂತ್ವನ ನೀಡಿದರು. ಆ ಯುವಕನನ್ನು ರಾತ್ರಿ ದಫನ ಮಾಡಲಾಗಿತ್ತು. ಬಳಿಕ ಉಮರ್(ರ) ಮತ್ತು ಸಂಗಡಿಗರು ಗೋರಿಯ ಬಳಿ ನಮಾಝ್ ನಿರ್ವಹಿಸಿದರು. ಬಳಿಕ ಉಮರ್(ರ) ಹೇಳಿದರು, “ಓ ಯುವಕಾ! ತನ್ನ ಪ್ರಭುವಿನ ಸನ್ನಿಧಿಯಲ್ಲಿ ಹಾಜರಾಗ ಬೇಕಾಗಬಹುದು ಎಂದು ಹೆದರಿದ ಪ್ರತಿಯೋರ್ವರಿಗೂ ಎರಡು ಉದ್ಯಾನಗಳಿವೆ.” ಆಗ ಗೋರಿಯ ಒಳಗಿನಿಂದ ಆ ಯುವಕ ಹೇಳಿದನು, “ಓ ಉಮರ್! ನನ್ನ ಪ್ರಭು ನನಗೆ ಸ್ವರ್ಗದಲ್ಲಿ ಅವುಗಳನ್ನು ಎರಡು ಬಾರಿ ನೀಡಿಯಾಗಿದೆ.”
(ಇಬ್ನು ಕಸೀರ್ ಭಾಗ- 2, ಪುಟ- 279)

ಸೋಮವಾರ, ಮಾರ್ಚ್ 04, 2013

ಕೈಗೆ ನಾಲ್ಕು ಕಾಸು ಬಂದಾಗ ಧರ್ಮವನ್ನು ಮರೆಯಬೇಡಿ


ಇಸ್ಲಾಮ್ ಒಂದು ಸಂಪೂರ್ಣ ಜೀವನ ಕ್ರಮವಾಗಿದೆ. ಅದು ಜೀವನದ ಎಲ್ಲಾ ರಂಗಗಳಿಗೂ ವ್ಯಾಪಿಸಿದೆ. ಐಹಿಕ ಜೀವನದ ಸುಖಾಡಂಬರಗಳಿಗಾಗಿಯೇ ಜೀವಿಸುವುದನ್ನು ಮತ್ತು ಎಲ್ಲಾ ಸುಖಾಡಂಬರಗಳಿಂದ ವಿರಕ್ತರಾಗಿ ಜೀವಿಸುವುದನ್ನು ಇಸ್ಲಾಮ್ ವಿರೋಧಿಸುತ್ತದೆ. ಪರಲೋಕ ಮೋಕ್ಷಕ್ಕಾಗಿ ಐಹಿಕ ಜೀವನವನ್ನು ತ್ಯಜಿಸಲು ಅಥವಾ ಐಹಿಕ ಜೀವನಕ್ಕಾಗಿ ಪರಲೋಕ ಜೀವನವನ್ನು ತ್ಯಜಿಸಲು ಇಸ್ಲಾಮ್ ಅನುಮತಿಸುವುದಿಲ್ಲ. ಎರಡೂ ಲೋಕಗಳು ಒಂದಕ್ಕೊಂದು ಪೂರಕವಾಗಿವೆ.
ಮನುಷ್ಯರು ಈ ಲೋಕದಲ್ಲಿ ಹೆಚ್ಚಾಗಿ ಮಾರುಹೋಗುವುದು ಸಂಪತ್ತಿಗಾಗಿದೆ. ವಾಸ್ತವದಲ್ಲಿ ಸಂಪತ್ತು ಒಂದು ಶತ್ರುವೋ, ಶಾಪವೋ, ಕೆಡುಕೋ ಅಲ್ಲ. ಬದಲಾಗಿ ಲೌಕಿಕ ಜೀವನದ ಅವಶ್ಯಕತೆಗಾಗಿ ಅಲ್ಲಾಹನು ನೀಡಿರುವ ಅನುಗ್ರಹಗಳ ಪೈಕಿ ಒಂದು ಅನುಗ್ರಹ ಮಾತ್ರವಾಗಿದೆ. ಅದಿಲ್ಲದಿದ್ದರೆ ಈ ಲೋಕದಲ್ಲಿ ಮನುಷ್ಯನಿಗೆ ಜೀವಿಸಲು ಕಷ್ಟ ಸಾಧ್ಯ. ಪ್ರತೀ ಅನುಗ್ರಹಗಳಿಗೂ ಪರೀಕ್ಷೆಯ ಇನ್ನೊಂದು ಮಗ್ಗುಲಿದೆ. ಐಹಿಕ ಜೀವನದ ಎಲ್ಲಾ ಅನುಗ್ರಹಗಳು ಒಂದರ್ಥದಲ್ಲದಿದ್ದರೆ ಮತ್ತೊಂದರ್ಥದಲ್ಲಿ ಪರೀಕ್ಷೆಯಾಗಿದೆ. ಅಲ್ಲಾಹನು ಹೇಳುತ್ತಾನೆ, “ನಿಮ್ಮನ್ನು ಪರೀಕ್ಷಿಸಿ ನಿಮ್ಮ ಪೈಕಿ ಯಾರು ಸತ್ಕರ್ಮವೆಸಗುವವನೆಂದು ನೋಡಲಿಕ್ಕಾಗಿ ಅವನು ಜೀವನವನ್ನೂ ಮರಣವನ್ನೂ ಆವಿಷ್ಕರಿಸಿದನು. ಅವನು ಪ್ರಬಲನೂ ಕ್ಷಮಾಶೀಲನೂ ಆಗಿರುತ್ತಾನೆ.” (ಅಲ್‍ಮುಲ್ಕ್- 2) ಅಂದರೆ ಭೂಮಿಯಲ್ಲಿ ಮಾನವನ ಹುಟ್ಟು ಸಾವುಗಳ ಸರಣಿಯನ್ನು ಅವನು ಆರಂಭಿಸಿದನು. ಯಾವ ಮಾನವ ಹೆಚ್ಚು ಉತ್ತಮವಾದ ಕರ್ಮಗಳನ್ನೆಸಗುತ್ತಾನೆ ಎಂದು ಪರೀಕ್ಷಿಸುವುದೇ ಇದರ ಉದ್ದೇಶ.
ಸಂಪತ್ತು ಕೂಡಾ ಏಕ ಕಾಲದಲ್ಲಿ ಅನುಗ್ರಹವೂ ಪರೀಕ್ಷೆಯೂ ಆಗಿದೆ. ಮನುಷ್ಯನು ಇಹಲೋಕದಲ್ಲಿ ಸಂಪತ್ತಿನ ನಿರ್ವಹಣೆಯನ್ನು ಹೇಗೆ ನಿರ್ವಹಿಸಿದ್ದಾನೆ ಎಂಬ ಬಗ್ಗೆ ನಾಳೆ ಪರಲೋಕದಲ್ಲಿ ವಿಚಾರಣೆ ನಡೆಯಲಿದೆ. ಮನುಷ್ಯನು ವ್ಯಯಿಸಿದ ಸಂಪತ್ತು, ಕಟ್ಟಿಟ್ಟ ಸಂಪತ್ತು, ವಂಚಿಸಿದ ಸಂಪತ್ತು ಹೀಗೆ ಎಲ್ಲದರ ಬಗ್ಗೆಯೂ ವಿಚಾರಣೆ ನಡೆಯಲಿದೆ. ಒಂದು ನಯಾ ಪೈಸೆಯೂ ವಿಚಾರಣೆಯ ಮೇರೆ ವಿೂರಿ ಹೋಗದು. ಅಲ್ಲಾಹನು ಹೇಳುತ್ತಾನೆ, “ನಿಮ್ಮ ಸೊತ್ತುಗಳು ಮತ್ತು ನಿಮ್ಮ ಸಂತಾನಗಳು ವಾಸ್ತವದಲ್ಲಿ ಪರೀಕ್ಷಾ ಸಾಧನಗಳೆಂದೂ ಪ್ರತಿಫಲ ನೀಡಲು ಅಲ್ಲಾಹನ ಬಳಿ ಬೇಕಾದಷ್ಟಿದೆಯೆಂದೂ ತಿಳಿದುಕೊಳ್ಳಿರಿ.” (ಅಲ್ ಅನ್‍ಫಾಲ್- 28)
ಪ್ರವಾದಿಯವರು(ಸ) ಹೇಳಿದ್ದಾರೆ, “ಖಂಡಿತವಾಗಿಯೂ ಎಲ್ಲಾ ಸಮುದಾಯಗಳಿಗೂ ಒಂದೊಂದು ಪರೀಕ್ಷಾ ಸಾಧನಗಳಿವೆ. ನನ್ನ ಸಮುದಾಯದ ಪರೀಕ್ಷಾ ವಸ್ತು ಸಂಪತ್ತಾಗಿದೆ.” ಸಂಪತ್ತು ಮತ್ತು ಸುಖಾಡಂಬರಗಳು ಕೆಲವರ ವಿಶ್ವಾಸಕ್ಕೂ ಧಾರ್ಮಿಕ ಕಾರ್ಯ ಚಟುವಟಿಕೆಗಳಿಗೂ ಆರಾಧನೆಗಳಿಗೂ ತೊಡಕಾಗುವುದಿದೆ. ಹಲವು ವೇಳೆ ಸಂಪನ್ನತೆಯು ವ್ಯಕ್ತಿಗಳ ಕರ್ಮ ರಂಗವನ್ನು ಉತ್ತೇಜಿಸುವುದಿಲ್ಲ. ಬದಲಾಗಿ ಅದನ್ನು ಕುಂಠಿತಗೊಳಿಸುತ್ತದೆ. ಕೆಲವು ಮೇರೆಗಳಿಗೆ ಸೀಮಿತ ಗೊಳಿಸುತ್ತದೆ. ಈ ವಿಷಯದಲ್ಲಿ ಒಂದು ಪ್ರವಾದಿ ವಚನವು ಹೀಗಿದೆ. “ಅಲ್ಲಾಹನಾಣೆ! ನಿಮ್ಮ ವಿಚಾರದಲ್ಲಿ ನಾನು ದಾರಿದ್ರ್ಯವನ್ನು ಭಯಪಡುತ್ತಿಲ್ಲ. ನಿಮ್ಮ ಪೂರ್ವಿಕರಿಗುಂಟಾಗಿರುವಂತೆ ನಿಮಗೆ ಸಂಪತ್ತು ವೃದ್ಧಿಯಾಗುವುದರ ಬಗ್ಗೆ ನಾನು ಕಳವಳಗೊಳ್ಳುತ್ತೇನೆ. ಅವರು ಪರಸ್ಪರ ಪೈಪೋಟಿ ನಡೆಸಿದಂತೆ ನೀವು ಕೂಡಾ ಪರಸ್ಪರ ಪೈಪೋ ಟಿ ನಡೆಸುವಿರಿ. ಅವರು ನಾಶ ಹೊಂದಿದಂತೆ ನೀವೂ ನಾಶ ಹೊಂದುವಿರಿ.”
ಉಮರ್(ರ) ಹೇಳಿದರು, “ಸಂಪತ್ತು ಒಂದು ಮಾದಕ ಪದಾರ್ಥದಂತಿದೆ. ಮದ್ಯದಲ್ಲಿ ಅಮಲಿರುವಂತೆ ಸಂಪತ್ತಿನಲ್ಲೂ ಒಂದು ರೀತಿಯ ಅಮಲಿದೆ.”
ಸಂಪತ್ತು ಅಲ್ಲಾಹನೊಂದಿಗಿರುವ ಸಂಬಂಧಕ್ಕೆ ಮಾತ್ರವಲ್ಲ ವ್ಯಕ್ತಿಗಳ ಮಧ್ಯೆ ಇರುವ ಸಂಬಂಧಕ್ಕೂ ಧಕ್ಕೆ ತರುತ್ತದೆ. ಹಣಕ್ಕಾಗಿ ಸಂಬಂಧ ಹಳಸಿದ ಎಷ್ಟೋ ಕುಟುಂಬಗಳು, ವ್ಯಕ್ತಿಗಳು ನಮ್ಮ ಸಮಾಜದಲ್ಲಿದ್ದಾರೆ. ಅಲ್ಪ ಹಣಕ್ಕಾಗಿ ಬೆಲೆಕಟ್ಟಲಾಗದ ರಕ್ತ ಸಂಬಂಧವನ್ನೂ ಮುರಿಯುವವರಿದ್ದಾರೆ. ಸಂಪತ್ತು ಕೈ ಸೇರಿದಾಗ ಮನುಷ್ಯನು ಸಂಬಂಧಗಳ  ಮಹತ್ವವನ್ನೇ ಮರೆತು ಬಿಡುತ್ತಾನೆ. ಅವನು ಸಂಪತ್ತಿನ ಅಮಲಿನಲ್ಲಿ ಯಾರದೇ ನೆರವು ತನಗೆ ಬೇಕಾಗಿಲ್ಲ ಎಂದು ತೀರ್ಮಾನಿಸುತ್ತಾನೆ. ಕಷ್ಟ ಕಾಲದಲ್ಲಿ ತನಗೆ ನೆರವಾದವರನ್ನು ಮರೆತು ಬಿಡುತ್ತಾನೆ.
ಮುಸ್ಲಿಮ್ ಸೇನೆಯು ಇರಾಕನ್ನು ಜಯಿಸಿದ ಸಂದರ್ಭದಲ್ಲಿ ಧಾರಾಳ ಸ್ವರ್ಣಾಭರಣಗಳನ್ನು ಇತರ ಸೊತ್ತುಗಳನ್ನೂ ಉಮರ್‍ರವರ(ರ) ಮುಂದಿರಿಸಲಾಯಿತು. ಅವುಗಳನ್ನು ನೋಡಿ ಉಮರ್‍ರವರು(ರ) ಅಳಲು ಪ್ರಾರಂಭಿಸಿದರು. ಆಗ ಅನುಯಾಯಿಗಳು ಕೇಳಿದರು, “ಅಮೀರುಲ್ ಮುಅಮಿನೀನ್. ತಾವು ಏತಕ್ಕೆ ಅಳುತ್ತಿದ್ದೀರಿ? ಅಲ್ಲಾಹನು ತಮಗೆ ವಿಜಯ ನೀಡುವ ಮೂಲಕ ಶತ್ರುಗಳನ್ನು ಸೋಲಿಸಿದ್ದಾನೆ. ಮಾತ್ರವಲ್ಲ ತಮ್ಮ ಕಣ್ಣಿಗೂ ತಂಪೆರೆದಿದ್ದಾನೆ.” ಆಗ ಉಮರ್(ರ) ಹೇಳಿದರು, “ಪ್ರವಾದಿಯವರು(ಸ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ. ಯಾವ ಸಮುದಾಯಕ್ಕೆ ಐಹಿಕ ಲೋಕವು ತೆರೆಯಲ್ಪಡುವುದೋ ಅವರ ಮಧ್ಯ ಅಂತ್ಯದಿನದ ವರೆಗೆ ನೆಲೆನಿಲ್ಲುವ ಶತ್ರುತ್ವ ವನ್ನೂ ದ್ವೇಷವನ್ನೂ ಉಂಟು ಮಾಡುವನು.”
ಬೇಕಾದಷ್ಟು ಸಂಪತ್ತು ಲಭಿಸುವಾಗ ಜೀವನದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು. ಬಳಿಕ ಅಲ್ಲಾಹನ ಮಾರ್ಗದಲ್ಲಿ ಪೂರ್ಣವಾಗಿ ಕಾರ್ಯ ನಿರತರಾಗಬಹುದು ಎಂದು ಭಾವಿಸುವವರಿದ್ದಾರೆ. ಆದರೆ ಇದು ಕೇವಲ ವ್ಯಾಮೋಹವಷ್ಟೇ. ಸಂಪತ್ತು ಹೆಚ್ಚಾದಾಗ ಮನುಷ್ಯನು ಸಮಯವನ್ನು ಆರಾಧನೆಗಾಗಿ ವಿೂಸಲಿರಿಸುವುದಿಲ್ಲ. ಅವನು ಹೆಚ್ಚು ಹೆಚ್ಚು ಗಳಿಸಲಿಕ್ಕಾಗಿ ಆರಾಧನೆಗಳನ್ನು ಬದಿಗಿರಿಸುತ್ತಾನೆ.
ಸಂಪತ್ತು ಮನುಷ್ಯನನ್ನು ಹೇಗೆ ವಿನಾಶಕ್ಕೊಡ್ಡುತ್ತದೆ ಎಂಬುದಕ್ಕೆ ಸಅಲಬತ್ ಬಿನ್ ಹಾತ್ತಿಬ್‍ರ ಇತಿಹಾಸವು ಉತ್ತಮ ಉದಾಹರಣೆಯಾಗಿದೆ. ಒಂದು ಕಾಲದಲ್ಲಿ ಅವರು ‘ಹಮಾಮತುಲ್ ಮಸ್ಜಿದ್’ (ಮಸೀದಿಯ ಪಾರಿವಾಳ) ಎಂದು ಕರೆಯಲ್ಪಡುವ ಶ್ರೇಷ್ಠ ವ್ಯಕ್ತಿಯಾಗಿದ್ದರು. ನಮಾಝ್‍ಗಾಗಿಯೂ ಇತರ ಸಂದರ್ಭಗಳಲ್ಲೂ ಮಸೀದಿಯಲ್ಲೇ ಅವರು ಕಾಲ ಕಳೆಯುತ್ತಿದ್ದರು. ಆದ್ದರಿಂದ ಅವರಿಗೆ ಈ ಬಿರುದು ಲಭಿಸಿತ್ತು. ಉಡಲು ವಸ್ತ್ರಗಳಿಲ್ಲದಷ್ಟು ಬಡತನವನ್ನು ಅವರು ಅನುಭವಿಸುತ್ತಿದ್ದರು. ಆದರೂ ಅವರು ಅಲ್ಲಾಹನ ಮಾರ್ಗದಿಂದ ವಿಚಲಿತರಾಗಲಿಲ್ಲ. ಯಾವುದೇ ಸಾಮೂಹಿಕ ನಮಾಝ್ ನಷ್ಟವಾಗದ ರೀತಿಯಲ್ಲಿ ಎಚ್ಚರ ವಹಿಸುತ್ತಿದ್ದರು.
ಅಬೂಉಮಾಮ(ರ) ಹೇಳುತ್ತಾರೆ, “ಬಡತನವನ್ನು ಸಹಿಸಲು ಸಾಧ್ಯವಾಗದೆ ಒಮ್ಮೆ ಸಅಲಬ ಪ್ರವಾದಿಯವರ(ಸ) ಬಳಿಗೆ ಬಂದು ಹೇಳಿದರು. “ಅಲ್ಲಾಹನ ಸಂದೇಶವಾಹಕರೇ ನನಗೆ ಸ್ವಲ್ಪ ಸಂಪತ್ತು ಲಭಿಸಲು ತಾವು ಅಲ್ಲಾಹನೊಂದಿಗೆ ಪ್ರಾರ್ಥಿಸಬೇಕು.” ಪ್ರವಾದಿಯವರು(ಸ) ಹೇಳಿದರು, “ಸಅïಲಬಾ ಧಾರಾಳವಾಗಿ ಸಂಪತ್ತುಂಟಾಗಿ ಅಲ್ಲಾಹ ನಿಗೆ ಕೃತಘ್ನನಾಗುವುದಕ್ಕಿಂತ ಸ್ವಲ್ಪ ಹಣ ಉಂಟಾಗಿ ಅಲ್ಲಾಹನಿಗೆ ಕೃತಜ್ಞನಾಗುವುದು ವಾಸಿಯಲ್ಲವೇ?” ಆಗ ಸಅïಲಬ ಹೇಳಿದರು, “ಪ್ರವಾದಿಯವರೇ(ಸ) ನನಗೆ ಸಂಪತ್ತುಂಟಾಗುವುದಾದರೆ ನಾನು ಅಲ್ಲಾಹನ ಮಾರ್ಗದಲ್ಲಿ ಧಾರಾಳ ದಾನ ಮಾಡುವೆ. ಸಂಪತ್ತಿನ ಹಕ್ಕುಗಳೆಲ್ಲವನ್ನು ಪೂರೈಸುವೆನು. ಆದ್ದರಿಂದ ತಾವು ನನಗಾಗಿ ಪ್ರಾರ್ಥಿಸಬೇಕು.”
ಅಬೂಉಮಾಮ(ರ) ಮುಂದುವರಿಸುತ್ತಾರೆ. “ಸಅಲಬರಿಗಾಗಿ ಪ್ರವಾದಿಯವರು(ಸ) ಪ್ರಾರ್ಥಿಸಿದರು. ಹಾಗೆ ಅವರ ಜೀವನದಲ್ಲಿ ಆರ್ಥಿಕ ಅಭಿವೃದ್ಧಿ ಉಂಟಾಗತೊಡಗಿತು. ಅವರಿಗೆ ಆಡು-ದನಗಳೆಲ್ಲ ಲಭಿಸಿದವು. ಮೊದಲೆಲ್ಲಾ ಅವರು ದಿನನಿತ್ಯ ಪ್ರವಾದಿಯವರನ್ನು(ಸ) ಭೇಟಿಯಾಗಲು ಬರುತ್ತಿದ್ದರು. ಆದರೆ ಜಾನುವಾರುಗಳು ವರ್ಧಿಸಿ ಸಂಪತ್ತು ಹೆಚ್ಚಾದಾಗ ಅವರು ಪ್ರವಾದಿಯವರ(ಸ) ಬಳಿ ಬರುವುದನ್ನು ಕಡಿಮೆ ಮಾಡಿದರು. ಮಗ್ರಿಬ್, ಇಶಾ ನಮಾಝ್‍ಗೆ ಮಾತ್ರ ಮಸೀದಿಗೆ ಬರಲಾಂರಭಿಸಿದರು. ಸಂಪತ್ತು ಇನ್ನೂ ಹೆಚ್ಚಾದಾಗ ತನ್ನ ವಾಸ್ತವ್ಯವನ್ನು ಮದೀನಾದ ಹೊರಭಾಗಕ್ಕೆ ಬದಲಾಯಿಸಿದರು. ಬಳಿಕ ಶುಕ್ರವಾರಗಳಂದು ಮಾತ್ರ ಪ್ರವಾದಿಯವರನ್ನು(ಸ) ಭೇಟಿಯಾಗಲು ಬರುತ್ತಿದ್ದರು. ಕೆಲ ಕಾಲಗಳ ನಂತರ ಅದೂ ಇಲ್ಲವಾಯಿತು. ನಮಾಝ್‍ನ ಬಳಿಕ ಪ್ರವಾದಿಯವರು(ಸ) ತನ್ನ ಅನುಯಾಯಿಗಳೊಂದಿಗೆ ಕುಳಿತುಕೊಳ್ಳುವಾಗ ಕೇಳುತ್ತಿದ್ದರು. “ಸಅಲಬರಿಗೆ ಏನಾಯಿತು? ಈಗ ಅವರನ್ನು ಕಾಣುತ್ತಿಲ್ಲವಲ್ಲ?”
ಹೀಗಿರುವಾಗ ಝಕಾತನ್ನು ಕಡ್ಡಾಯಗೊಳಿ ಸುತ್ತಾ ಅಲ್ಲಾಹನ ಆದೇಶ ಬಂತು. ಪ್ರವಾದಿಯವರು(ಸ) ಒಂದು ಪತ್ರ ಬರೆದು ತನ್ನ ಅನುಯಾಯಿಗಳ ಮೂಲಕ ಸಅಲಬಗೆ ಕಳುಹಿಸಿದರು. ಪತ್ರ ಓದಿದ ಬಳಿಕ ಅವರು ಕೇಳಿದರು, “ನಿಮಗೆ ಬೇರೆ ಸ್ಥಳಗಳಿಂದ ಝಕಾತ್ ಶೇಖರಿಸಲಿಕ್ಕಿದೆಯೇ? ಹಾಗಾದರೆ ಅದು ಮುಗಿದ ಬಳಿಕ ಬನ್ನಿ” ಹಾಗೆ ಎಲ್ಲಾ ಕಡೆಗಳಲ್ಲೂ ಝಕಾತ್ ಶೇಖರಿಸಿದ ಬಳಿಕ ಕೊನೆಗೆ ಅವರು ಸಅಲಬರ ಬಳಿಗೆ ಬಂದರು. ಆಗ ಸಅಲಬ ಹೇಳಿದರು, “ಅಲ್ಲಾಹನಾಣೆ, ಇದೆಂಥಾ ಒಂದು ತೆರಿಗೆ. ನೀವು ಮರಳಿ ಹೋಗಿರಿ. ನನಗೆ ಒಂದು ಸಲ ಆಲೋಚಿಸಲಿಕ್ಕಿದೆ.”
ಅವರು ಪ್ರವಾದಿಯವರ(ಸ) ಬಳಿಗೆ ಮರಳಿದರು. ಆಗ ಪವಿತ್ರ ಕುರ್‍ಆನಿನ ಈ ಸೂಕ್ತ ಅವತೀರ್ಣಗೊಂಡಿತು. “ಅವನು ತನ್ನ ಅನುಗ್ರಹದಿಂದ ನಮಗೇನಾದರೂ ಕೊಟ್ಟರೆ ನಾವೂ ದಾನ ಮಾಡುವೆವೆಂದೂ ಸಜ್ಜನರಾಗಿ ಬಾಳುವೆವೆಂದೂ ಅಲ್ಲಾಹನೊಡನೆ ಕರಾರು ಮಾಡಿದವರೂ ಅವರಲ್ಲಿ ಕೆಲವರಿದ್ದಾರೆ. ಆದರೆ, ಅಲ್ಲಾಹನು ತನ್ನ ಅನುಗ್ರಹದಿಂದ ಅವರನ್ನು ಸಂಪನ್ನರನ್ನಾಗಿ ಮಾಡಿದಾಗ ಅವರು ಜಿಪುಣತೆಗೆ ಇಳಿದರು ಮತ್ತು ತಮ್ಮ ಕರಾರಿನ ಗೊಡವೆಯೇ ಇಲ್ಲದಂತೆ ಅದರಿಂದ ವಿಮುಖರಾದರು. ಪರಿಣಾಮವಾಗಿ ಅವರು ಅಲ್ಲಾಹನೊಡನೆ ಮಾಡಿದ ಕರಾರು ಭಂಗಕ್ಕಾಗಿಯೂ ಅವರು ಸುಳ್ಳು ಹೇಳಿದುದಕ್ಕಾಗಿಯೂ ಅಲ್ಲಾಹನು ಅವರ ಹೃದಯದಲ್ಲಿ `ಕಾಪಟ್ಯ’ವನ್ನು ಇರಿಸಿ ಬಿಟ್ಟನು. ಅದು ಅವರು ಅವನ ಸನ್ನಿಧಿಯಲ್ಲಿ ಹಾಜರಾಗುವವರೆಗೂ ಅವರ ಬೆನ್ನು ಬಿಡದು.” (ಅತ್ತೌಬ: 75-77)
ಸಂಪತ್ತು ಮತ್ತು ಸುಖಾಡಂಬರಗಳು ಸಅಲಬ ಹಾಗೂ ಅವರಂತಹವರ ಧಾರ್ಮಿಕತೆಯನ್ನು ಬುಡಮೇಲು ಗೊಳಿಸಿದರೆ ಆರ್ಥಿಕ ಸಮೃದ್ಧಿಯಿಂದ ಜೀವನವನ್ನು ಸನ್ಮಾರ್ಗದಲ್ಲೇ ವ್ಯಯಿಸಿದ ಸಹಾಬಿಗಳೂ ಇದ್ದಾರೆ. ಮಿಸ್‍ಅಬ್ ಬಿನ್ ಉಮೈರ್‍ರಂಥ(ರ) ಅಗರ್ಭ ಶ್ರೀಮಂತರು ಅದಕ್ಕೆ ಉದಾ ಹರಣೆಯಾಗಿದ್ದಾರೆ. ಒಟ್ಟಿನಲ್ಲಿ ಸಂಪತ್ತು ಜೀವನದ ನೈಜಗುರಿಯನ್ನು ತಪ್ಪಿಸುವಂತಹದ್ದಾಗಬಾರದು. ಸಂಪತ್ತನ್ನು ನೀಡಿದರೂ ನೀನು ನಮ್ಮನ್ನು ಸನ್ಮಾರ್ಗದಲ್ಲೇ ದೃಢವಾಗಿ ನಿಲ್ಲುವಂತೆ ಮಾಡು ಎಂದು ನಾವು ಅಲ್ಲಾಹನಲ್ಲಿ ಪ್ರಾರ್ಥಿಸಬೇಕಾಗಿದೆ.

ಸೋಮವಾರ, ಫೆಬ್ರವರಿ 11, 2013

ಯಾರೊಂದಿಗೋ ಪ್ರಾರ್ಥಿಸಿ ಉತ್ತರ ಲಭಿಸಲಿಲ್ಲ ಎಂದು ಅಲ್ಲಾಹನನ್ನು ದೂರಿದರೆ ಹೇಗೆ?


 ಮಾನವರೆಲ್ಲರೂ ಅಲ್ಲಾಹನ ಸೃಷ್ಟಿಗಳು. ಪ್ರತಿಯೋರ್ವನ ಜನನವೂ ಮರಣವೂ ದೇವ ಲಿಖಿತವಾಗಿದೆ. ಅಲ್ಲಾಹನು ಮನುಷ್ಯರನ್ನು ಕೇವಲ ಸೃಷ್ಟಿಸಿಬಿಟ್ಟದ್ದು ಮಾತ್ರವಲ್ಲ, ಅವನಿಗೆ ಜೀವನ ನಡೆಸಲಿಕ್ಕಿರುವ ಎಲ್ಲಾ ಸೌಕರ್ಯಗಳನ್ನೂ ಒದಗಿಸಿದ್ದಾನೆ. ಆದ್ದರಿಂದ ಸೌಕರ್ಯಗಳ ಕೊರತೆ ಉಂಟಾದಾಗ ಅವುಗಳ ಬೇಡಿಕೆ ಸಲ್ಲಿಸಬೇಕಾದುದು ಕೂಡಾ ಅಲ್ಲಾಹನಲ್ಲೇ ಆಗಿದೆ. ಅದಕ್ಕಾಗಿ ಅಲ್ಲಾಹನು ನಮಗೆ ಪ್ರಾರ್ಥನೆ ಎಂಬ ಮಾರ್ಗವನ್ನು ನೀಡಿದ್ದಾನೆ. ಪ್ರಾರ್ಥನೆ ಎಂಬುದು ಓರ್ವ ವಿಶ್ವಾಸಿಯನ್ನು ತನ್ನ ಸೃಷ್ಟಿಕರ್ತನಾದ ಅಲ್ಲಾಹನೊಂದಿಗೆ ಜೋಡಿಸುವ ಪಾಶವಾಗಿದೆ. ಬಾನ ಲೋಕದ ಬಾಗಿಲುಗಳನ್ನು ಬಡಿಯುವ ಪ್ರಾರ್ಥನೆಗಳು ವಿಶ್ವಾಸಿಗಳ ಆಯುಧಗಳಾಗಿವೆ. ಪ್ರವಾದಿಯವರು(ಸ) ಹೇಳಿದರು, “ನೀವು ಪ್ರಾರ್ಥನೆಯಲ್ಲಿ ಅನಾಸ್ಥೆ ತೋರಬಾರದು. ಪ್ರಾರ್ಥಿಸುವವನು ನಾಶವನ್ನು ಎದುರಿಸಬೇಕಾಗಲಿಕ್ಕಿಲ್ಲ.” ಪ್ರಾರ್ಥನೆಯನ್ನು ರೂಢಿಯಾಗಿಸಿದವನು ಹೇಡಿಯಾಗಲಿಕ್ಕಿಲ್ಲ. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಹೆದರಿ ಅವನು ಮುಖ ತಿರುಗಿಸಲಿಕ್ಕಿಲ್ಲ. ಅದನ್ನು ಕೆಚ್ಚೆದೆಯಿಂದ ಎದುರಿಸುತ್ತಾನೆ. ಸರ್ವಶಕ್ತನಾದ ಅಲ್ಲಾಹನ ಸಾನ್ನಿಧ್ಯವು ಜೀವನದಲ್ಲಿ ಮುನ್ನುಗ್ಗಲು ಅವನನ್ನು ಸದಾ ಪ್ರೇರೇಪಿಸುತ್ತಿರುತ್ತದೆ.
ಪ್ರವಾದಿಯವರು(ಸ) ಹೀಗೆ ಕಲಿಸಿದ್ದಾರೆ, “ಪ್ರಾರ್ಥನೆಯು ವಿಶ್ವಾಸಿಯ ಆಯುಧವಾಗಿದೆ. ಧರ್ಮದ ಸ್ಥಂಭವಾಗಿದೆ. ಭೂಮ್ಯಾಕಾಶಗಳ ಪ್ರಕಾಶವಾಗಿದೆ.” ಸಂಕಷ್ಟಕ್ಕೆ ಸಿಲುಕಿ ದಡ ಸೇರಲು ಸಾಧ್ಯವಾಗದೆ ಚಡಪಡಿಸುತ್ತಿರುವಾಗ ಕಗ್ಗತ್ತಲೆಯಲ್ಲಿ ದೀಪ ಲಭಿಸಿದಂತೆ ಪ್ರಾರ್ಥನೆಯು ನೆರವಿಗೆ ಬರುತ್ತದೆ. ಅಲ್ಲಾಹನು ನೆರವಾಗುತ್ತಾನೆ ಎಂಬ ಸಂಕಲ್ಪದೊಂದಿಗೆ ಪ್ರಾರ್ಥಿಸುವಾಗ ಮನಸ್ಸಿನಲ್ಲಿ ಒಂದು ರೀತಿಯ ಸ್ಥೈರ್ಯ ಮೂಡುತ್ತದೆ. ಒಮ್ಮೆ ಪ್ರವಾದಿಯವರು(ಸ) ಮಸೀದಿಗೆ ಪ್ರವೇಶಿಸಿದಾಗ ಅಬೂ ಉಮಾಮ(ರ) ಮಸೀದಿಯ ಮೂಲೆಯಲ್ಲಿ ದುಃಖದಿಂದ ಕುಳಿತಿರುವುದನ್ನು ಕಾಣುತ್ತಾರೆ.
       “ಓ ಅಬೂ ಉಮಾಮ! ತಾವೇಕೆ ಹೀಗೆ ಕುಳಿತಿದ್ದೀರಿ. ಇದು ನಮಾಝಿನ ಸಮಯ ಅಲ್ಲವಲ್ಲ?” ಪ್ರವಾದಿಯವರು(ಸ) ಕೇಳಿದರು.
      “ಪ್ರವಾದಿಯವರೇ(ಸ) ಹಲವಾರು ಸಂಕಷ್ಟಗಳು, ದುಃಖ-ದುಮ್ಮಾನಗಳು, ಸಾಲಗಳು ನನ್ನನ್ನು ಆವರಿಸಿ ಕೊಂಡಿವೆ” ಅಬೂ ಉಮಾಮ(ರ) ದುಃಖದಿಂದ ಉತ್ತರಿಸಿದರು.
       “ನಾನು ನಿಮಗೆ ಒಂದು ಪ್ರಾರ್ಥನೆ ಕಲಿಸಿಕೊಡುತ್ತೇನೆ. ನೀವು ಅದನ್ನು ಪ್ರಾರ್ಥಿಸುತಲಿದ್ದರೆ ನಿಮ್ಮ ಸಾಲಗಳು ತೀರುವುದು, ಸಂಕಷ್ಟಗಳು ನೀಗುವುದು, ಸಂತೋಷವು ಮರಳುವುದು.”
        “ಸರಿ ಪ್ರವಾದಿಯವರೇ(ಸ) ತಾವು ಹೇಳಿರಿ” ಅಬೂ ಉಮಾಮ(ರ) ಹೇಳಿದರು,
     “ಅಲ್ಲಾಹನೇ ದುಃಖಗಳಿಂದಲೂ ವ್ಯಥೆಗಳಿಂದಲೂ ಮಾನಸಿಕ ಸಂಘರ್ಷಗಳಿಂದಲೂ ನಾನು ನಿನ್ನಿಂದ ಅಭಯ ಯಾಚಿಸುತ್ತೇವೆ. ದೌರ್ಬಲ್ಯಗಳಿಂದಲೂ ಆಲಸ್ಯ ಗಳಿಂದಲೂ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತೇನೆ. ಹೇಡಿತನದಿಂದಲೂ ಜಿಪುಣತೆಯಿಂದಲೂ ಸಾಲಗಳಿಂದಲೂ ಜನರ ಅವಹೇಳನಗಳಿಂದಲೂ ನೀನು ನನ್ನನ್ನು ರಕ್ಷಿಸು.” ಅಬೂ ಉಮಾಮ(ರ) ಈ ಪ್ರಾರ್ಥನೆಯನ್ನು ರೂಢಿಯಾಗಿಸಿದರು. ಅಲ್ಲಾಹನು ತನ್ನ ಎಲ್ಲಾ ಸಂಕಷ್ಟಗಳನ್ನು ನೀಗಿಸಿರುವುದಾಗಿ ಅವರು ಬಳಿಕ ಹೇಳುತ್ತಿದ್ದರು.
ನನ್ನ ದಾಸನು ನನ್ನೊಂದಿಗೇ ಬೇಡಬೇಕು ಮತ್ತು ನಿರಂತರವಾಗಿ ಸಂಬಂಧವಿರಿಸಬೇಕು ಎಂದು ಅಲ್ಲಾಹನು ಬಯಸುತ್ತಾನೆ. ದಾಸರ ಪ್ರಾರ್ಥನೆಗೆ ಉತ್ತರಿಸಲು ಅಲ್ಲಾಹನು ಸಿದ್ಧನಾಗಿದ್ದಾನೆ. ಮನುಷ್ಯರ ಬೇಡಿಕೆಗಳನ್ನು ಈಡೇರಿಸಲು ಅಲ್ಲಾಹನಿಗೆ ಮಾತ್ರ ಸಾಧ್ಯ. ಅಲ್ಲಾಹನು ಹೇಳುತ್ತಾನೆ, “ಓ ಪೈಗಂಬರರೇ, ನನ್ನ ದಾಸರು ನಿಮ್ಮೊಡನೆ ನನ್ನ ಬಗ್ಗೆ ಕೇಳಿದರೆ, ನಾನು ಅವರಿಗೆ ನಿಕಟನಾಗಿದ್ದೇನೆಂದೂ ಪ್ರಾರ್ಥಿಸುವವನು ನನ್ನೊಂದಿಗೆ ಪ್ರಾರ್ಥಿಸಿದಾಗ ಅವರ ಪ್ರಾರ್ಥನೆಯನ್ನು ಆಲಿಸು ತ್ತೇನೆಂದೂ ಅವರಿಗೆ ಹೇಳಿರಿ. ಆದುದರಿಂದ ಅವರು ನನ್ನ ಕರೆಗೆ ಓಗೊಡಲಿ ಮತ್ತು ನನ್ನ ಮೇಲೆ ವಿಶ್ವಾಸವಿರಿಸಲಿ. ಅವರು ಸನ್ಮಾರ್ಗ ಪಡೆಯಲೂ ಬಹುದು.” (ಅಲ್ ಬಕರ: 186)
‘ನಿಮ್ಮ ಪ್ರಾರ್ಥನೆಗೆ ನಾನು ಉತ್ತರ ನೀಡುತ್ತೇನೆ’ ಎಂದು ಅಲ್ಲಾಹನು ಸ್ಪಷ್ಟವಾಗಿ ಹೇಳಿರುವಾಗ ಅಲ್ಲಾಹೇತರರೊಂದಿಗೆ ಪ್ರಾರ್ಥಿಸುವುದರ ವಾಸ್ತವಿಕತೆ ಯಾದರೂ ಏನು? ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥಿಸುತ್ತಿದ್ದ ಮಹಾನರು ಮರಣ ಹೊಂದಿದ ಬಳಿಕ ಜನರು ಅವರ ಘೋರಿಗಳ ಬಳಿ ನಿಂತು ಅವರೊಂದಿಗೆ ಪ್ರಾರ್ಥಿಸುವುದು ಅಜ್ಞಾನವೋ ದೇವ ಧಿಕ್ಕಾರವೋ? ಹಣಗಳಿಸಲಿಕ್ಕಾಗಿ ಜನರ ನಂಬಿಕೆಗಳನ್ನು ಪಣಕ್ಕಿಡುವವರು ನಾಳೆ ಅಲ್ಲಾಹನ ಮುಂದೆ ಹಾಜರಾಗಲಿಕ್ಕಿದೆ ಎಂಬ ವಾಸ್ತವಿಕತೆ ಯನ್ನು ಮರೆತಿದ್ದಾರೆಯೇ?
ಮಕ್‍ಬರಗಳ ಹೆಸರಿನಲ್ಲಿ ಜನರ ಸಂಪತ್ತನ್ನು ಕೊಳ್ಳೆ ಹೊಡೆಯುವ ಒಂದು ದಂಧೆಯೇ ನಡೆಯುತ್ತಿದೆ. ‘ಈಗ ಎಲ್ಲಕ್ಕಿಂತ ಲಾಭದಾಯಕ ವ್ಯವಸಾಯ ಮಕ್‍ಬರ ವ್ಯವಸಾಯ’ ಎಂದು ನನ್ನ ಗೆಳೆಯರೊಬ್ಬರು ಹೇಳುತ್ತಿದ್ದರು. ಅವರು ಇದನ್ನು ತಮಾಷೆಗಾಗಿ ಹೇಳುತ್ತಿದ್ದರೂ ಅದು ವಾಸ್ತವದಂತೆ ಭಾಸವಾಗುತ್ತಿತ್ತು. ಇಂತಹ ಕೇಂದ್ರ ಗಳಿಗೆ ಹೋಗಿ ಪ್ರಾರ್ಥನೆ ನಡೆಸಿದರೆ ಉತ್ತರ ಲಭಿಸುತ್ತದೆ ಎಂಬುದು ದೇವ ಧಿಕ್ಕಾರವಲ್ಲವೇ? ಶಾಲೆಯಲ್ಲಿ ಪರೀಕ್ಷೆ ಹತ್ತಿರ ಬರುವಾಗ ವಿದ್ಯಾರ್ಥಿ ಗಳು ಇಂತಹ ಮಕ್‍ಬರಗಳ ಬಳಿ ನಿಂತು ಪರೀಕ್ಷೆ ಉತ್ತೀರ್ಣರಾಗಲು ಪ್ರಾರ್ಥಿಸುವುದನ್ನು ಇಂದು ನಾವು ವ್ಯಾಪಕವಾಗಿ ಕಾಣುತ್ತಿದ್ದೇವೆ. ಉತ್ತರ ಸಿಗದಂತಹ ಪ್ರಾರ್ಥನೆ ನಡೆಸಿ ಕೊನೆಗೆ ಅನುತ್ತೀರ್ಣರಾದಾಗ ದೇವನ ಮೇಲೆ ಕೋಪ ಗೊಂಡು ಪ್ರಯೋಜನವಾದರೂ ಏನು? ಅಲ್ಲಾಹ ನೊಂದಿಗಿನ ಪ್ರಾರ್ಥನೆಗೆ ಮಾತ್ರ ಉತ್ತರ ಲಭಿಸುವುದು ಎಂಬುದು ಹಗಲಿನಂತೆ ಸತ್ಯವಾಗಿದೆ. ಆದ್ದರಿಂದ ಪ್ರಾರ್ಥನೆ ಅಲ್ಲಾಹನೊಡನೆ ಮಾತ್ರ.
ಅಲ್ಲಾಹನು ನಮಗೆ ಹಲವಾರು ಅನುಗ್ರಹಗಳನ್ನು ನೀಡಿದ್ದಾನೆ. ಅದನ್ನು ಎಣಿಸಲು ಸಾಧ್ಯವಿಲ್ಲ. ಆದ್ದರಿಂದ ಅದಕ್ಕಾಗಿ ಕೃತಜ್ಞತೆ ಸಲ್ಲಿಸಬೇಕಾದದ್ದು ಪ್ರತೀ ವಿಶ್ವಾಸಿಯ ಕಡ್ಡಾಯ ಹೊಣೆಗಾರಿಕೆಯಾಗಿದೆ. ಓರ್ವ ಪತ್ನಿಯು ತನ್ನ ಪತಿಯನ್ನು ಪ್ರೀತಿಸುತ್ತಾಳೆ. ಅವನಿಗೆ ಬೇಕಾದ ಆಹಾರ ವಸ್ತುಗಳನ್ನು ತಯಾರಿ ಸುತ್ತಾಳೆ. ಅವನ ಬಟ್ಟೆಬರೆಗಳನ್ನು ಒಗೆಯುತ್ತಾಳೆ. ಅವನಿಗೆ ರೋಗ ಬಂದರೆ ಶುಶ್ರೂಷೆ ಮಾಡುತ್ತಾಳೆ. ಆದರೆ ಇವೆಲ್ಲವನ್ನು ಅನುಭವಿಸುವ ಪತಿಯು ಪ್ರೀತಿಸುವುದು ಬೇರೊಬ್ಬಳನ್ನಾದರೆ ಹೇಗಾಗಬಹುದು? ಅಲ್ಲಾಹನು ನೀಡಿದ ಎಲ್ಲಾ ಅನುಗ್ರಹಗಳನ್ನು ಸವಿದು ಪ್ರಾರ್ಥನೆ, ಆರಾಧನೆ ಇನ್ನಾರಿಗೋ ಆದರೆ ಅದು ಎಷ್ಟು ದೊಡ್ಡ ಅಪರಾಧ ಎಂದು ಚಿಂತಿಸುವ ಯಾರಿಗೂ ಅರ್ಥವಾಗಬಹುದು. ಅಲ್ಲಾಹನು ‘ನನ್ನೊಂದಿಗೆ ಪ್ರಾರ್ಥಿಸಿರಿ, ಉತ್ತರ ನೀಡುತ್ತೇನೆ’ ಎಂದು ಭರವಸೆ ನೀಡುವಾಗ ಇತರರೊಂದಿಗೆ ಪ್ರಾರ್ಥಿಸುವುದು ಅಲ್ಲಾಹನ ಮೇಲೆ ನಂಬಿಕೆ ಇಲ್ಲದ್ದರಿಂದಲ್ಲವೇ?
ಪ್ರವಾದಿಯವರು(ಸ) ಹೇಳಿದರು, “ತನ್ನ ಮುಂದೆ ಬೊಗಸೆ ಕೈಯೊಂದಿಗೆ ಬಂದು ಪ್ರಾರ್ಥಿಸುವವರನ್ನು ಬರಿಗೈಯಿಂದ ಮರಳಿಸುವುದು ಅಲ್ಲಾಹ ನಿಗೆ ನಾಚಿಕೆಗೇಡಿನ ವಿಚಾರವಾಗಿದೆ.” (ಅಬೂ ದಾವೂದ್, ತಿರ್ಮಿದಿ). ಅಲ್ಲಾಹನು ಕುದ್ಸಿಯಾದ ಹದೀಸ್‍ನಲ್ಲಿ ಹೇಳುತ್ತಾನೆ, “ನನ್ನ ದಾಸನು ನನ್ನ ಕುರಿತು ಏನಾದರೂ ಯೋಚಿಸಿದರೆ ನಾನು ಆ ಯೋಚನೆಯೊಂದಿಗಿರುತ್ತೇನೆ. ಅವನು ನನ್ನೊಂದಿಗೆ ಪ್ರಾರ್ಥಿಸಿದರೆ ನಾನು ಅವನೊಂದಿಗಿರುವೆನು.” (ಬುಖಾರಿ, ಮುಸ್ಲಿಮ್)
ಪ್ರಾರ್ಥನೆಗಳು ಹೃದಯಾಂತರಾಳದಿಂದ ಬರುವುದಾದರೆ ಅವುಗಳಿಗೆ ಉತ್ತರ ಬೇಗನೇ ಲಭಿಸುತ್ತದೆ. ಏನು ಪ್ರಾರ್ಥಿಸುತ್ತಿದ್ದೇವೆ ಎಂಬ ಬಗ್ಗೆ ಪ್ರಜ್ಞಾವಂತರಾಗಿರಬೇಕು. ಅನಾಸ್ಥೆಯಿಂದ ಯಾಂತ್ರಿಕವಾಗಿ ಪ್ರಾರ್ಥಿಸುವುದಾದರೆ ಅದರಿಂದ ಪ್ರಯೋಜನವೇನೂ ಸಿಗಲಿಕ್ಕಿಲ್ಲ. ಪ್ರಾರ್ಥಿಸುವಾಗ ಇರಬೇಕಾದ ಮನಃಸ್ಥಿತಿಯ ಕುರಿತು ಪ್ರವಾದಿಯವರು(ಸ) ಹೀಗೆ ಹೇಳಿದ್ದಾರೆ, “ಹೃದಯಗಳೆಲ್ಲವೂ ಪ್ರಜ್ಞೆ ಇರುವಂಥದ್ದಾಗಿವೆ. ಆದರೆ ಕೆಲವು ಹೃದಯಗಳು ಇತರ ಕೆಲವು ಹೃದಯಗಳಿಗಿಂತ ಹೆಚ್ಚು ಪ್ರಜ್ಞೆ ಇರುವವುಗಳಾಗಿರುತ್ತವೆ. ಆದ್ದರಿಂದ ಜನರೇ, ನೀವು ಅಲ್ಲಾಹನ ಮುಂದೆ ಪ್ರಾರ್ಥಿಸುವಾಗ ಪ್ರಾರ್ಥನೆಗೆ ಉತ್ತರ ಲಭಿಸುತ್ತದೆ ಎಂಬ ದೃಢ ವಿಶ್ವಾಸದೊಂದಿಗೆ ಪ್ರಾರ್ಥಿಸಬೇಕು. ಅನಾಸ್ಥೆಯಿಂದ ಕೂಡಿದ ಹೃದಯಗಳಿಂದ ಹೊರಡುವ ಪ್ರಾರ್ಥನೆಗೆ ಅಲ್ಲಾಹನು ಉತ್ತರಿಸಲಿಕ್ಕಿಲ್ಲ.”
ಪ್ರಾರ್ಥನೆಗಳಿಗೆ ಉತ್ತರ ನೀಡಲು ಅಲ್ಲಾಹನಿಗೆ ಹೊರತು ಇನ್ನಾರಿಗೂ ಸಾಧ್ಯವಿಲ್ಲ. ಆದ್ದರಿಂದ ನಾವು ಅಲ್ಲಾಹನೊಂದಿಗೇ ಪ್ರಾರ್ಥಿಸಬೇಕು. ಪ್ರಾರ್ಥಿಸುವುದು ಸೃಷ್ಟಿಗಳ ಕೆಲಸವಾದರೆ ಉತ್ತರ ನೀಡುವುದು ಸೃಷ್ಟಿಕರ್ತನ ಕೆಲಸವಾಗಿದೆ. ಎಷ್ಟೇ ಪ್ರಾರ್ಥಿಸಿದರೂ ಉತ್ತರ ಲಭಿಸುವುದಿಲ್ಲ ಎಂದು ಯಾರೂ ವ್ಯಥೆ ಪಡಬೇಕಾಗಿಲ್ಲ. ಪ್ರವಾದಿಯವರು(ಸ) ಹೇಳಿದರು, “ಅಲ್ಲಾಹನು ತನ್ನ ದಾಸರ ಪ್ರಾರ್ಥನೆಗೆ ಮೂರು ವಿಧದಲ್ಲಿ ಉತ್ತರ ನೀಡುವನು. ಒಂದೋ ಪ್ರಾರ್ಥನೆಗೆ ಶೀಘ್ರ ಉತ್ತರ. ಇಲ್ಲದಿದ್ದರೆ ಅದನ್ನು ಪರಲೋಕಕ್ಕೆ ಮೀಸಲಿರಿಸುವನು. ಅದಲ್ಲದಿದ್ದರೆ ನಿಮ್ಮ ಬೇಡಿಕೆಗೆ ಸಮಾನಾಂತರವಾದ ಯಾವುದಾದರೂ ಸಂಕಷ್ಟವನ್ನು ನೀಗಿಸುವನು.” (ಅಹ್ಮದ್)
ಆದ್ದರಿಂದ ಪ್ರಾರ್ಥನೆಗಳನ್ನು ಅಲ್ಲಾಹನಿಗೆ ಮಾತ್ರ ಸೀಮಿತಗೊಳಿಸಬೇಕು. ಅಲ್ಲಾಹೇತರರೊಂದಿಗೆ ಪ್ರಾರ್ಥಿಸುವುದು ಶಿರ್ಕ್ ಆಗಿದೆ. ಶಿರ್ಕ್ ಎಂಬುದು ಮಹಾ ಪಾಪವಾಗಿದೆ. ಮಾತ್ರವಲ್ಲ, ಅದಕ್ಕೆ ಅಲ್ಲಾಹನ ಬಳಿ ಕ್ಷಮೆಯಿಲ್ಲ. ಹಾಗಾಗಿ ನಾವು ನಮ್ಮ ಜೀವನದಲ್ಲಿ ಶಿರ್ಕ್ ಬರದಂತೆ ಎಚ್ಚರ ವಹಿಸಬೇಕು. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಸೋಮವಾರ, ಜನವರಿ 14, 2013

ರಕ್ತ ಸಾಕ್ಷಿತ್ವಕ್ಕೂ ಪರಿಹರಿಸಲಾಗದ ಪಾಪಗಳು

ಓರ್ವ ವಿಶ್ವಾಸಿಯ ಜೀವನದಲ್ಲಿ ರಕ್ತ ಸಾಕ್ಷಿತ್ವ ಎಂಬುದು ಸಾಟಿಯಿಲ್ಲದ ಶ್ರೇಷ್ಠ ಕರ್ಮವಾಗಿದೆ. ಅದಕ್ಕಿಂತ ಶ್ರೇಷ್ಠ ಕರ್ಮ ಬೇರೊಂದಿಲ್ಲ. ಅದು ಸ್ವರ್ಗ ವಾಗ್ದಾನ ಮಾಡಲ್ಪಟ್ಟ ಕರ್ಮವಾಗಿದೆ. ಇತರ ಯಾವುದೇ ಆರಾಧನಾ ಕರ್ಮಗಳು ರಕ್ತ ಸಾಕ್ಷಿತ್ವಕ್ಕೆ ಸಮಾನವಾಗಲಾರವು. ಅದು ತ್ಯಾಗ ಹಾಗೂ ಸಮರ್ಪಣೆಯ ಪರಾಕಾಷ್ಠೆಯಾಗಿದೆ. ಜೀವವನ್ನೇ ಸೃಷ್ಟಿಕರ್ತನಿಗೆ ಸಮರ್ಪಿಸುವ ಆರಾಧನೆ. ಆದರೆ ದೇವನ ಮುಂದೆ ಗುರುತರವಾಗಿ ಪರಿಗಣಿಸಲ್ಪಡುವ, ರಕ್ತ ಸಾಕ್ಷಿತ್ವದಿಂದ ಪರಿಹರಿಸಲ್ಪಡದ ಕೆಲವು ಪಾಪಗಳಿವೆ. ನಾವು ಅವನ್ನು ಮೇಲ್ನೋಟಕ್ಕೆ ಕ್ಷುಲ್ಲಕವೆಂದು ಭಾವಿಸುತ್ತೇವೆ.
ಅನಸ್‍ರಿಂದ(ರ) ವರದಿಯಾಗಿದೆ. “ಉಹುದ್ ಯುದ್ಧದಲ್ಲಿ ನಮ್ಮ ಪೈಕಿ ಓರ್ವರು ರಕ್ತ ಸಾಕ್ಷಿಯಾದರು. ಹಸಿವೆ ತಾಳಲಾರದೆ ಅವರು ತನ್ನ ಉದರಕ್ಕೆ ಕಲ್ಲನ್ನು ಕಟ್ಟಿದ್ದರು. ಅವರ ತಾಯಿ ಅವರ ಮುಖದಿಂದ ಮಣ್ಣನ್ನು ಒರೆಸುತ್ತಾ ಹೇಳಿದರು. “ಮಗನೇ, ಸಂತೋಷಪಡು. ನಿನಗೆ ಸ್ವರ್ಗವಿದೆ.” ಇದನ್ನು ಆಲಿಸಿದ ಪ್ರವಾದಿಯವರು(ಸ) ಹೇಳಿದರು. “ನಿಮಗೇನು ಗೊತ್ತು. ಒಂದು ವೇಳೆ ಅವರು ಅನಗತ್ಯ ಮಾತುಗಳನ್ನು ಆಡಿರಬಹುದು ಅಥವಾ ತನಗೆ ಉಪದ್ರವ ನೀಡದ್ದನ್ನು ತಡೆದಿರಲೂ ಬಹುದು.”
ಈ ಹದೀಸ್‍ನಲ್ಲಿ ಪ್ರಥಮವಾಗಿ ತಿಳಿಸಿರುವುದು ಅನಗತ್ಯವಾಗಿ ಮಾತಾಡುವುದನ್ನಾಗಿದೆ. ಇದು ಸಮಾಜದಲ್ಲಿ ಇಂದು ನಾವು ಕಾಣುತ್ತಿರುವ ಒಂದು ದುಶ್ಚಟವಾಗಿದೆ. ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸಿ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸುತ್ತಾರೆ. ಅಗತ್ಯವಾದುದನ್ನೂ ಅನಗತ್ಯವಾದುದನ್ನೂ ಯಾವುದೇ ನಿಯಂತ್ರಣವಿಲ್ಲದೆ ಮಾತಾಡುತ್ತಿರುತ್ತಾರೆ. ಬಾಯಿಂದ ಹೊರಡುವ ಮಾತುಗಳ ಅವಶ್ಯಕತೆಯ ಕುರಿತೋ ಅವು ಸಮಾಜದಲ್ಲಿ ಸೃಷ್ಟಿಸುವ ಬಿರುಕುಗಳ ಕುರಿತೋ ಅವರು ಪ್ರಜ್ಞಾವಂತರಲ್ಲ. ಸಮಯ, ಸಂದರ್ಭ, ಅವಶ್ಯಕತೆಯನ್ನು ನೋಡದೆ ಅನಗತ್ಯವಾಗಿ ಮಾತಾಡುವವರನ್ನು ಪ್ರವಾದಿಯವರು(ಸ) ಹಗಲಿಡೀ ಮೇಯ್ದು ಬಂದು ರಾತ್ರಿ ಮೆಲುಕು ಹಾಕುವ ದನಗಳಿಗೆ ಹೋಲಿಸಿದ್ದಾರೆ. ಪ್ರವಾದಿಯವರು(ಸ) ಹೇಳಿದರು, “ಹಸುಗಳು ಮೆಲುಕು ಹಾಕುವಂತೆ ಸದಾ ಮಾತನಾಡುತ್ತಿರುವವರೊಂದಿಗೆ ಅಲ್ಲಾಹನು ಕೋಪಿಷ್ಠನಾಗುತ್ತಾನೆ.”
ಅನಗತ್ಯ ಮಾತುಗಳು ಮನುಷ್ಯರನ್ನು ಹಲವು ಪಾಪಗಳಿಗೆ ಕೊಂಡೊಯ್ಯುತ್ತವೆ. ಇಬ್ಬರ ಮಧ್ಯೆ ತಪ್ಪು ತಿಳುವಳಿಕೆಗಳನ್ನೂ ವೈರತ್ವವನ್ನೂ ಸೃಷ್ಟಿಸುತ್ತವೆ. ಇಂದು ಸಮಾಜದಲ್ಲಿ ಹಲವಾರು ಮಿತಭಾಷಿಗಳಿದ್ದಾರೆ. ಅವರು ಬೇಕಾದಷ್ಟನ್ನು ಮಾತ್ರ ಮಾತನಾಡಿ ಸುಮ್ಮನಿರುತ್ತಾರೆ. ಆದರೆ ನಾವು ಅವರನ್ನು ಮೂಕನೆಂದೂ ಮೌನ ವ್ರತ ಆಚರಿಸಿದ್ದಾನೆಂದೂ ಮೂದಲಿಸುತ್ತೇವೆ. ನಿಜವಾಗಿ ಅಂಥವರು ಮಾತುಗಳ ಮೂಲಕ ಸಂಭವಿಸುವ ಪಾಪಗಳಿಂದ ಕನಿಷ್ಠ ಮುಕ್ತರಾಗಿರುತ್ತಾರೆ. ನಾವು ಅವರನ್ನು ಗೇಲಿಯಾಡುವುದರ ಮೂಲಕ ಪಾಪಗಳನ್ನು ಕಟ್ಟಿಕೊಳ್ಳುತ್ತೇವೆ. ಪ್ರವಾದಿಯವರು(ಸ) ಹೇಳಿದರು, “ಯಾರ ಮಾತುಗಳು ಹೆಚ್ಚಾಗುತ್ತವೋ ಅಂಥವರ ತಪ್ಪುಗಳು ಹೆಚ್ಚಾಗುತ್ತವೆ. ತಪ್ಪುಗಳು ಹೆಚ್ಚಾದಾಗ ಪಾಪಗಳೂ ವರ್ದಿಸುತ್ತವೆ. ಪಾಪಗಳು ಹೆಚ್ಚಾದಾಗ ಕೊನೆಗೆ ನರಕದ ಹಕ್ಕುದಾರರಾಗಿ ಮಾರ್ಪಡುತ್ತಾರೆ.”
ಒಮ್ಮೆ ಓರ್ವರು ಪ್ರವಾದಿಯವರ(ಸ) ಬಳಿ ಬಂದು ನಿರಂತರವಾಗಿ ಮಾತನಾಡುತ್ತಿದ್ದರು. ಅವರ ಮಾತಿನಲ್ಲಿ ತೀವ್ರ ಅಸಂತೃಪ್ತರಾದ ಪ್ರವಾದಿಯವರು(ಸ) ಅವರೊಂದಿಗೆ ಹೇಳಿದರು, “ತಮ್ಮ ನಾಲಗೆಗೆ ಎಷ್ಟು ತಡೆಗಳಿವೆ.” ಅವರು ಹೇಳಿದರು, ‘ಎರಡು ನನ್ನ ಹಲ್ಲುಗಳು ಹಾಗೂ ತುಟಿಗಳು.’ ಆಗ ಪ್ರವಾದಿಯವರು(ಸ) ಕೇಳಿದರು. “ಆದರೂ ನಿಮಗೆ ನಿಮ್ಮ ಮಾತುಗಳಿಗೆ ನಿಯಂತ್ರಣ ಹೇರಲು ಸಾಧ್ಯವಾಗುವುದಿಲ್ಲವೇ?”
ಪ್ರವಾದಿಯವರು(ಸ) ಅನಗತ್ಯ ಮಾತುಗಳನ್ನಾಡುತ್ತಿರಲಿಲ್ಲ. ಸಹಾಬಿಗಳು ಕೂಡಾ ಅದೇ ಶಿಕ್ಷಣವನ್ನು ಪಡೆದಿದ್ದರು. ತಮ್ಮನ್ನು ತರಾಟೆಗೆ ತೆಗೆದುಕೊಂಡವರಿಗೆ ಅನವಶ್ಯಕ ಮಾತುಗಳಿಂದ ಉತ್ತರ ನೀಡುತ್ತಿರಲಿಲ್ಲ. ಹೆಚ್ಚು ಮಾತನಾಡುವ ಅಸಂಸ್ಕøತ ವ್ಯಕ್ತಿಗಳನ್ನು ಪ್ರವಾದಿಯವರು(ಸ) ದ್ವೇಶಿಸುತ್ತಿದ್ದರು. ಪ್ರವಾದಿಯವರು(ಸ) ಹೇಳುತ್ತಿದ್ದರು. “ನಾಳೆ ಪರಲೋಕದಲ್ಲಿ ನನಗೆ ಅತ್ಯಂತ ಪ್ರಿಯರೂ ಸಮೀಪಸ್ಥರೂ ಆದವರು ಉತ್ತಮ ಸ್ವಾಭಾವಗಳನ್ನು ಹೊಂದಿದವರಾಗಿದ್ದಾರೆ. ನನಗೆ ಇಷ್ಟವಿಲ್ಲದವರು ಮತ್ತು ನನ್ನಿಂದ ದೂರ ನಿಲ್ಲುವವರು ಅನಗತ್ಯವಾಗಿ ಮಾತನಾಡುವವರು, ಅಹಂಕಾರಿಗಳು ಮತ್ತು ಮಾತಿನಲ್ಲಿ ಕಾಪಟ್ಯ ಹೊಂದಿದ ನಿಕೃಷ್ಟ ಸ್ವಭಾವ ಹೊಂದಿದವರಾಗಿದ್ದಾರೆ.”
ಆದ್ದರಿಂದ ನಾವು ಅನಗತ್ಯ ಮಾತುಕತೆಗಳಿಂದ ದೂರವಿರಬೇಕಾಗಿದೆ. ಆಡಿದ ಮಾತನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಮಾತನಾಡುವಾಗಲೇ ಯೋಚಿಸಿ ಮಾತನಾಡುವುದು ಉತ್ತಮ.
ಸ್ವರ್ಗ ಪ್ರವೇಶವನ್ನು ತಡೆಯುವ ಎರಡನೇ ಪಾಪಕೃತ್ಯ ‘ಸ್ವಂತಕ್ಕೆ ಉಪದ್ರವ ಉಂಟುಮಾಡದ ವಿಚಾರಗಳನ್ನು ತಡೆಯುವುದಾಗಿದೆ. ಅಂದರೆ ಜನರಿಗೆ ಪ್ರಯೋಜನವನ್ನುಂಟು ಮಾಡುವ ಕಾರ್ಯಗಳಿಂದ ಮನಃಪೂರ್ವಕವಾಗಿ ಹಿಂದೆ ಸರಿಯುವುದಾಗಿದೆ. ತನಗೋ, ತನ್ನ ಕುಟುಂಬಕ್ಕೋ ತನ್ನ ಸಂಪತ್ತಿಗೋ ಯಾವುದೇ ನಷ್ಟವನ್ನುಂಟು ಮಾಡದ ಅದೇ ವೇಳೆ ಇತರರಿಗೆ ಪ್ರಯೋಜನಕಾರಿಯಾದಂತಹ ಕಾರ್ಯಗಳನ್ನು ಅಸೂಯೆಂದಲೋ ಇನ್ನಾವುದರಿಂದಲೋ ಮಾಡದಿರುವುದು. ಕುರ್‍ಆನ್ ಇಂತಹ ಪುಟ್ಟ ಪುಟ್ಟ ಉಪಕಾರಗಳಿಗೆ ‘ಮಾಊನ್’ ಎಂದು ಹೇಳಿದೆ. (ಅಲ್ ಮಾಊ ನ್-7)
ಸಮಾಜದಲ್ಲಿ ಇಂತಹ ಪುಟ್ಟ ಉಪಕಾರಗಳಿಗೆ ಬಹುದೊಡ್ಡ ಸ್ಥಾನವಿದೆ. ಅದು ಮಾನವರ ಮಧ್ಯೆ ಬಾಂಧವ್ಯ ಸೃಷ್ಟಿಯಾಗಲೂ ವೃದ್ಧಿಯಾಗಲೂ ಸಹಕಾರಿಯಾಗಿವೆ. ಇಂತಹ ಉಪಕಾರಗಳು ಅಪರಿಚಿತರ ಮಧ್ಯೆ ಪರಿಚಿತತೆಯನ್ನು ಸೃಷ್ಟಿಸುತ್ತವೆ. ನಾವು ಈ ಉಪಕಾರಗಳನ್ನು ಕ್ಷುಲ್ಲಕವೆಂದು ಭಾವಿಸಿದರೂ ಅದನ್ನು ಪಡೆಯುವವರ ಪಾಲಿಗೆ ಅವು ಮಹತ್ತರವಾಗಿರಲೂ ಬಹುದು. ಪ್ರವಾದಿಯವರು(ಸ) ಮುಸ್ಲಿಮ್ ಮಹಿಳೆಯರನ್ನು ಅಭಿಸಂಬೋಧಿಸುತ್ತಾ ಒಮ್ಮೆ ಹೀಗೆ ಹೇಳಿದರು. “ಓ ಸತ್ಯವಿಶ್ವಾಸಿಯರೇ, ನೀವು ನಿಮ್ಮ ನೆರೆಯವರಿಗೆ ನೀಡುವ ಯಾವುದೇ ವಸ್ತುವನ್ನು ಕ್ಷುಲ್ಲಕವೆಂದು ಭಾವಿಸಬೇಡಿ. ಅದು ಆಡಿನ ಒಂದು ಗೊರಸಾದರೂ ಸರಿ.”
ನಾವು ಇತರರಿಗೆ ಇಂತಹ ಪುಟ್ಟ ಸಹಾಯವನ್ನೂ ಮಾಡದೆ ನಮ್ಮ ಸ್ವಂತಕ್ಕಾಗಿ ಮಾತ್ರ ಬದುಕುತ್ತಿದ್ದೇವೆ. ಈ ಕರ್ಮಗಳನ್ನು ಮಾಡುವ ಸಂದರ್ಭವೊದಗಿದಾಗ ಅದರಿಂದ ಹಿಂದೆ ಸರಿದು ಎಷ್ಟೇ ಆರಾಧನೆಗಳನ್ನೆಸಗಿದರೂ ಪ್ರಯೋಜನವಿಲ್ಲ ಎಂದು ಮೊದಲಿನ ಹದೀಸ್‍ನಿಂದ ಸೃಷ್ಟವಾಗುತ್ತದೆ. ರಕ್ತಸಾಕ್ಷಿಗಳಿಗೂ ರಕ್ಷಣೆ ಹೊಂದಲು ಸಾಧ್ಯವಿಲ್ಲದಂತಹ ಈ ಕಾರ್ಯಗಳು ಎಷ್ಟು ಮಹತ್ವದ್ದಾಗಿದೆಯೆಂದು ಇದರಿಂದ ಮನದಟ್ಟಾಗುತ್ತದೆ. ಆದ್ದರಿಂದ ನಾವು ಇತರರಿಗೆ ಸಹಾಯ ಮಾಡುವ ಅವಕಾಶ ಒದಗಿದಾಗ ಅದರಿಂದ ಹಿಂದೆ ಸರಿಯಬಾರದು. ಅದೇ ರೀತಿ ವ್ಯರ್ಥ, ಅನಗತ್ಯ ಮಾತುಗಳಿಂದಲೂ ದೂರ ಸರಿಯಬೇಕು. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.


ಬುಧವಾರ, ಡಿಸೆಂಬರ್ 05, 2012

ಸೆಯ್ಯದ್ ಕುತುಬರ ಮರಣದ ಕ್ಷಣಗಳು


 1966 ಆಗಸ್ಟ್ 29, 20ನೇ ಶತಮಾನದಲ್ಲಿ ಇಸ್ಲಾಮೀ  ಚಳುವಳಿಗೆ ಕಿಡಿ ಹೊತ್ತಿಸಿದ ಅದರ ದಿಕ್ಸೂಚಿಯಂತಿದ್ದ ಸಯ್ಯದ್  ಕುತುಬ್‍ರನ್ನು ಈಜಿಪ್ಟಿನ ಅಧ್ಯಕ್ಷರಾಗಿದ್ದ ಜಮಾಲ್ ಅಬ್ದುನ್ನಾಸಿರ್ ಜೈಲಿಗೆ ತಳ್ಳಿದ ದಿನವಾಗಿತ್ತದು. ಚಿಂತಕ, ಸಾಹಿತಿ, ಬರಹಗಾರ, ಗ್ರಂಥಕರ್ತ, ಇಖ್ವಾನುಲ್ ಮುಸ್ಲಿಮೂನ್ ಸಂಘಟನೆಯ ಮುಖ್ಯಧಾರೆ ‘ಫಿ ಝಿಲಾಲಿಲ್’ ಕುರ್‍ಆನ್ ಎಂಬ ಪ್ರಸಿದ್ಧ ಕುರ್‍ಆನ್ ವ್ಯಾಖ್ಯಾನ ಗ್ರಂಥದ ರಚನಾಕಾರ ಎಂಬ ನೆಲೆಯಲ್ಲಿ ಜಗತ್ತು ಒಪ್ಪಿಕೊಂಡ ಆ ಸಯ್ಯದ್ ಕುತುಬ್‍ರನ್ನು ಗಲ್ಲಿಗೇರಿಸಿ ನಾಲ್ಕೂವರೆ ದಶಕಗಳು ಕಳೆದು ಇಂದು ಕೂಡಾ ಅವರ ಚಿಂತನೆಗಳು ರಚನೆಗಳು ಎಲ್ಲೆಂದರಲ್ಲಿ ಚರ್ಚೆಗಳಿಗೆ ಗ್ರಾಸವಾಗುತ್ತವೆ. ಸಯ್ಯದ್  ಕುತುಬ್‍ರ ಚಿಂತನೆ ಹಾಗೂ ಧೋರಣೆಗಳಲ್ಲಿ ಬೆಂಬಲ ಸೂಚಿಸದಿರುವವರೂ ಅವರು ಇಸ್ಲಾಮಿಗೆ ನೀಡಿರುವ ಕೊಡುಗೆ ಗಳನ್ನು ಅಲ್ಲಗಳೆಯಲಿಲ್ಲ. ಒಂದು ಕಾಲದಲ್ಲಿ ದಂತಕತೆಯಾಗಿದ್ದ ಸಯ್ಯದ್ ಕುತುಬ್‍ರಂತಹ ಪ್ರತಿಭಾಶಾಲಿಗಳನ್ನು ನೈಲ್ ನದಿಯ ತೀರವು ಜಗತ್ತಿಗೆ ಕೊಡುಗೆಯಾಗಿ ನೀಡಿತು. ಇಖ್ವಾನುಲ್ ಮುಸ್ಲಿಮೂನ್‍ನ ಸ್ಥಾಪನೆಯಾದಂದಿನಿಂದಲೇ ಆ ಸಂಘಟನೆಯ ಚುಕ್ಕಾಣಿ ಹಿಡಿದ ಸಯ್ಯದ್ ಕುತುಬ್ ‘ಫ್ರೀ ಆಫಿಸರ್ಸ್ ಕ್ಲಬ್’ನಲ್ಲಿ ಸದಸ್ಯತ್ವ ಇರುವ ಏಕೈಕ ಪ್ರಜೆಯಾಗಿದ್ದರು. ಬಳಿಕ ನಿರ್ವಹಣೆ ಸಂಬಂಧಿ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿದ್ದರಿಂದ ಅವರು ಅದರಿಂದ ಹೊರಬಂದರು.
1954ರಲ್ಲಿ ಅಲೆಗ್ಸಾಂಡ್ರಿಯಾದ ಬಳಿ ಇರುವ ಮಿನ್‍ಶಿಯಾದಲ್ಲಿ ಅಧ್ಯಕ್ಷ ಜಮಾಲ್ ಅಬ್ದುಲ್ ನಾಸಿರ್‍ರ ಕೊಲೆಯತ್ನ ನಡೆದಾಗ ಅದರಲ್ಲಿ ಇಖ್ವಾನುಲ್ ಮುಸ್ಲಿಮೂನ್‍ನ ಕೈವಾಡವಿದೆ ಎಂದು ಆರೋಪಿಸಿ ಹಲವಾರು ಇಖ್ವಾನೀ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟಲಾಯಿತು. ಅವರಲ್ಲಿ ಸಯ್ಯದ್ ಕುತುಬ್ ಕೂಡಾ ಇದ್ದರು. ಅವರಿಗೆ 15 ವರ್ಷಗಳ ಜೈಲು ವಾಸ ವಿಧಿಸಲಾಯಿತು. ಅವರ ಶಿಕ್ಷೆಯ ಅವಧಿಯು 10 ವರ್ಷವಾದಾಗ ಅವರನ್ನು ಮಾಜಿ ಇರಾಕ್ ಅಧ್ಯಕ್ಷ ಅಬ್ದುಸ್ಸಲಾಮ್ ಆರಿಫ್ ಬಿಡುಗಡೆ ಗೊಳಿಸಲು ಪ್ರಯತ್ನಿಸಿ ಯಶಸ್ವಿಯಾದರೂ ಎಂಟು ತಿಂಗಳ ಬಳಿಕ ಮತ್ತೆ ಅಬ್ದುನ್ನಾಸಿರ್ ವಿವಿಧ ಆರೋಪ ಹೊರಿಸಿ ಕುತುಬ್‍ರನ್ನು ಪುನಃ ಜೈಲಿಗಟ್ಟಿದರು. ಭೀಕರ ದೌರ್ಜನ್ಯಗಳಿಗೆ ಸಯ್ಯದ್ ಕುತುಬ್ ಮತ್ತು ಇಖ್ವಾನೀ ಕಾರ್ಯಕರ್ತರು ಬಲಿಯಾದರು. ಪೆÇಲೀಸ್ ಸುಪರಿಡೆಂಟ್ ಬದರ್‍ನ ನೇತೃತ್ವದಲ್ಲಿ ಜರಗಿದ ಕಿರಾತ ದೌರ್ಜನ್ಯಗಳ ಮನಕರಗಿಸುವ ಕಥೆಗಳು ಝೈನಬುಲ್ ಗಝ್ಝಾಲಿಯವರ ಆತ್ಮ ಕಥೆಯಲ್ಲಿ ಪ್ರ್ರಸ್ತಾ ಪಿಸಲಾಗಿದೆ. 1965 ಜುಲೈ 30ರಂದು ತನ್ನ ಸಹೋದರ ಮುಹಮ್ಮದ್ ಕುತುಬ್‍ರ ಬಂಧನದ ವಿರುದ್ಧ ಪ್ರತಿಭಟಿಸಿ ಸೆಂಟ್ರಲ್ ಇಂಟೆಲಿಜೆನ್ಸ್ ಏಜನ್ಸಿಗೆ ಸಯ್ಯದ್ ಕುತುಬ್ ಬರೆದ ಪತ್ರವು ಮತ್ತೆ ಅವರನ್ನು ಬಂಧಿಸಲಿಕ್ಕಿರುವ ನೆಪವಾಯಿತು. ಇಖ್ವಾನುಲ್ ಮುಸ್ಲಿಮೂನ್‍ನ ಇತರ ಏಳು ಮಂದಿಯೊಂದಿಗೆ ಬಂಧಿಸಲ್ಪಟ್ಟ ಸಯ್ಯದ್  ಕುತುಬ್‍ರನ್ನು ಸರಕಾರವು ವಿಚಾರಣೆಯ ನಾಟಕವಾಡಿ ಕೊನೆಗೆ ವಧೆ ಶಿಕ್ಷೆ ವಿಧಿಸಿತು. 1966 ಆಗಸ್ಟ್ 29 ಸೋಮವಾರ ಮುಂಜಾನೆ ಅವರನ್ನು ನೇಣುಗಂಭಕ್ಕೇರಿಸಲಾಯಿತು.
ಗಲ್ಲಿಗೇರಿಸುವ ದಿನ ಸಯ್ಯದ್ ಕುತ್‍ಬ್‍ರೊಂದಿಗೆ ಸೇನಾಧಿ ಕಾರಿಯು “ಶರೀಅತ್ ಕಾನೂನನ್ನು ಜಾರಿಗೊಳಿಸಲಿಕ್ಕಿರುವ ಬೇಡಿಕೆ ಮತ್ತು ಅದಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಸ್ಥಗಿತಗೊಳಿಸಿ ಈ ಶಿಕ್ಷೆಯಿಂದ ಪಾರಾಗಬಹುದಲ್ಲವೇ” ಎಂದು ಕೇಳಿದನು. ಮರಣವು ಕಣ್ಮುಂದೆ ಬಂದು ನಿಂತಿದ್ದರೂ ಸಯ್ಯದ್ ಕುತುಬೆಂಬ ಆ ಧೀರ ಮುಜಾಹಿದ್‍ರು ದಿಟ್ಟವಾಗಿ ಮರುತ್ತರ ನೀಡಿದರು, “ಅಲ್ಲಾಹನಿಗಾಗಿ ರುವ ಕೆಲಸದ ವಿಚಾರದಲ್ಲಿ ನಾನು ಕ್ಷಮೆ ಕೋರಲು ಸಿದ್ಧನಿಲ್ಲ. ನಮಾಝಿನಲ್ಲಿ ಅಲ್ಲಾಹನ ಏಕತ್ವವನ್ನು ಪ್ರತಿಪಾದಿಸುವ ಈ ತೋರು ಬೆರಳಿನಲ್ಲಿ ಅಕ್ರಮಿಯಾದ ಆಡಳಿತಾಧಿಕಾರಿಯ ವಿಧಿಯನ್ನು ಬೆಂಬಲಿಸುವ ಒಂದಕ್ಷರವನ್ನು ಬರೆಯಲು ನಾನು ತಯಾರಿಲ್ಲ.” ಅಧ್ಯಕ್ಷರಿಗೆ ಒಂದು ದಯಾ ಅರ್ಜಿ ಸಲ್ಲಿಸಬಾರದೇ ಎಂದು ಮುಂದಿನ ಪ್ರಶ್ನೆ ಕೇಳಲಾಯಿತು. ಸಯ್ಯದ್ ಕುತುಬ್ ಉತ್ತರಿಸಿದರು. “ನಾನು ಯಾಕೆ ದಯೆ ಕೋರಬೇಕು. ವಾಸ್ತವದಲ್ಲಿ ನಾನು ಈ ತೀರ್ಪಿಗೆ ಅರ್ಹನಾಗಿದ್ದರೆ ಈ ತೀರ್ಪಿನಲ್ಲಿ ನಾನು ಸಂತೃಪ್ತನಾಗಿದ್ದೇನೆ. ಇನ್ನು ಸುಳ್ಳಾರೋಪಗಳ ಹೆಸರಿನಲ್ಲಿ ಈ ತೀರ್ಪಾದರೆ ಒಂದು ಅಸತ್ಯದ ವ್ಯವಸ್ಥೆಗಾಗಿ ಪ್ರಾಣ ಭಿಕ್ಷೆ ಬೇಡಲು ನಾನು ಅಷ್ಟು ಕೀಳುಮಟ್ಟದವನಲ್ಲ.”
ಗಲ್ಲಿಗೇರಿಸುವುದಕ್ಕಿಂತ ಮುಂಚೆ ಶಹಾದತ್ ಕಲಿಮ ಹೇಳಿಕೊಡಲು ಬಂದ ಅಧಿಕಾರಿಯು “ಶಹಾದತ್ ಕಲಿಮ ಹೇಳು” ಎಂದು ಹೇಳಿದನು. ಸಯ್ಯದ್ ಕುತುಬ್ ಕೂಡಲೇ ಪ್ರತಿಕ್ರಿಯಿಸಿದರು. “ಈ ನಾಟಕ ರಂಗವನ್ನು ಪೂರ್ತಿಗೊಳಿಸಲು ನೀವು ಕೂಡಾ ಬಂದು ತಲುಪಿದರಲ್ಲವೇ? ಸಹೋದರಾ. ನೀವು ಉಚ್ಚರಿಸಲು ಹೇಳಿದ `ಲಾ ಇಲಾಹ ಇಲ್ಲಲ್ಲಾಹ್’ನ ಕಾರಣದಿಂದಾಗಿ ನಾವು ಗಲ್ಲಿಗೇರಿಸಲ್ಪಡುತ್ತಿದ್ದೇವೆ. ನಿಮ್ಮ ಆಹಾರಗಳಿಗೂ ಅದೇ `ಲಾ ಇಲಾಹ ಇಲ್ಲಲ್ಲಾಹ್’ ಬೇಕು.”
ಈಜಿಪ್ಟಿನಲ್ಲಿ ಒಂದು ಕಾಲದಲ್ಲಿ ಹೋರಾಟದ ಪ್ರೇರಕ ಶಕ್ತಿಯೂ ಆಗಿದ್ದ ಶೈಖ್ ಅಬ್ದುಲ್ ಹವಿೂದ್ ಕಶಕ್ ತಮ್ಮ ನೆನಪುಗಳನ್ನು ಮೆಲುಕು ಹಾಕುತ್ತಾರೆ. ತನ್ನ ಕೈಕಾಲುಗಳನ್ನು ಬಂಧಿಸಲು ಮುಂದಾದ ಜೈಲ್ ವಾರ್ಡನ್‍ನೊಂದಿಗೆ ಸಯ್ಯದ್  ಕುತುಬ್ ಹೇಳಿದರು. “ಆ ಹಗ್ಗವನ್ನು ನನಗೆ ನೀಡಿ. ನನ್ನ ಕೈಕಾಲು ಗಳನ್ನು ನಾನೇ ಬಂಧಿಸಿಡುವೆನು. ನನ್ನ ಸೃಷ್ಟಿಕರ್ತನ ಸ್ವರ್ಗದಿಂದ ನಾನು ಓಡಿ ಹೋಗುವೆನೇ?”
ನೇಣಿನ ಹಗ್ಗವನ್ನು ಕುತ್ತಿಗೆಗೆ ಬಿಗಿದಾಗ ಸಯ್ಯದ್ ಕುತುಬ್ ಕೊನೆಗೆ ಉಚ್ಚರಿಸಿದ್ದು ಪ್ರವಾದಿ ನೂಹ್(ಅ) ಕೊನೆಗೆ ಉಚ್ಚರಿಸಿದ ಅದೇ ಶಬ್ದಗಳಾಗಿತ್ತು. ‘ರಬ್ಬಿ ಇನ್ನೀ ಮಗ್‍ಲೂಬುನ್ ಪಂತಸ್ವಿರ್’ (ನನ್ನ ಪ್ರಭು! ನಾನು ಶರಣಾಗಿದ್ದೇನೆ. ಇನ್ನು ನೀನು ಪ್ರತಿಕಾರ ನಡೆಸು).
“ನೇಣು ಕಂಬ ನೆಟ್ಟ ಕೊಠಡಿಯ ಮುಂದಿನ ಕೊನೆಯ ಕ್ಷಣಗಳು. ಅಪರಾಧಿಯ ಹೆಸರನ್ನು ಕೂಗಿ ಕರೆಯಲಾಯಿತು. ಸಯ್ಯದ್ ಕುತುಬ್ ಇಬ್ರಾಹೀಮ್ 60 ವರ್ಷ ಕೆಲಸ: ಮಾಜಿ ಪ್ರೊಫೆಸರ್, ಅಪರಾಧ: ಸರಕಾರವನ್ನು  ಬುಡಮೇಲು ಗೊಳಿಸುವ ಯತ್ನ. ಸಯ್ಯದ್ ಕುತುಬ್‍ರನ್ನು ಗಲ್ಲಿಗೇರಿಸಲು ನೇಮಿಸಲ್ಪಟ್ಟ ಆಶ್ಮಾಮಿ ಎಂಬವನ ಮುಖದಲ್ಲಿದ್ದ ವಿಷಾದವು ನಿಟ್ಟುಸಿರಾಗಿ ಹೊರಹೊಮ್ಮಿತು. ತಾನು ಕೂಡಾ ಓರ್ವ ಮಾನವ ಎಂದು ಆಶ್ಮಾಮಿಗೆ ಭಾಸವಾದ ಐತಿಹಾಸಿಕ ಕ್ಷಣವಾಗಿತ್ತದು. ಎಂದಿನಂತೆ ತನ್ನ ಕೆಲಸವನ್ನು ಅವನಿಗೆ ಇಂದು ನಿರ್ವಹಿಸಲಾಗುತ್ತಿಲ್ಲ. ಆದರೂ ಅದನ್ನು ನಿರ್ವಹಿಸಲೇ ಬೇಕು. ಸಯ್ಯದ್ ಕುತುಬ್‍ರನ್ನು ನೇರ ವಾಗಿ ಕಂಡಿಲ್ಲದಿದ್ದರೂ ಜನರು ಮಾತುಗಳಿಂದ ಆಶ್ಮಾಮಿಯು ಅವರ ಕುರಿತು ತಿಳಿದುಕೊಂಡಿದ್ದನು.
ಅಂತಹ ವ್ಯಕ್ತಿಯನ್ನು ಸ್ವಂತ ಕೈಗಳಿಂದ ಮೃತ್ಯುಗೊಪ್ಪಿಸುವುದೆಂದರೆ ಆಶ್ಮಾಮಿಗೆ ಮಾತ್ರವಲ್ಲ ಎಂಥವರಿಗೂ ನಡುಕದ ವಿಚಾರವೇ ಆಗಿದೆ. ಆ ಕಣ್ಣುಗಳಿಗೆ ಕಣ್ಣು ನೆಟ್ಟು ಕುತ್ತಿಗೆಗೆ ನೇಣಿನ ಹಗ್ಗವನ್ನು ಹಾಕುವುದು! ಆಶ್ಮಾಮಿಯ ಧರ್ಮ ಸಂಕಟವನ್ನು ವಿವರಿಸಲು ಮಾತುಗಳು ಸಾಲದು. ಅಂದು ಬೇರೆ ಎರಡು ಇಖ್ವಾನೀ ನಾಯಕ ರನ್ನು ಗಲ್ಲಿಗೇರಿಸಬೇಕಾಗಿತ್ತು. ಮುಹಮ್ಮದ್ ಯೂಸುಫ್ ಹವಾಣಿ ಮತ್ತು ಅಬ್ದುಲ್ ಫತ್ತಾಹ್ ಇಸ್ಮಾಈಲ್.
ಸಯ್ಯದ್ ಕುತುಬ್‍ರನ್ನು ಗಲ್ಲಿಗೇರಿಸಲು ನೇಮಿಸಲ್ಪಟ್ಟ ಆಶ್ಮಾಮಿ ಯೊಂದಿಗೆ ಇನ್ನಿಬ್ಬರು ಸಹಾಯಿಗಳೂ ಇದ್ದರು. ಬಳಿಕ ಅವರು ಪಶ್ಚಾತ್ತಾಪಪಟ್ಟುಕೊಂಡು ಆ ಕ್ಷಣವನ್ನು ಹೀಗೆ ಬಿಚ್ಚಿಟ್ಟಿದ್ದಾರೆ, “ಕೊನೆಗೆ ನಾವು ಕಾವಲುಗಾರರಾಗಿ ನಿಲ್ಲಬೇಕಾದದ್ದು ಕಂಟೆಂಡ್ ಸೆಲ್ಲಿನಲ್ಲಿರಿಸಿದ್ದ ಓರ್ವ ಕೈದಿಗಾಗಿತ್ತು. ಅತ್ಯಂತ ಅಪಾಯಕಾರೀ ವ್ಯಕ್ತಿ ಎಂದು ಆ ಕೈದಿಯ ಕುರಿತು ನಮಗೆ ಮುನ್ನೆಚ್ಚರಿಕೆ ನೀಡ ಲಾಗಿತ್ತು. ಭಯೋತ್ಪಾದಕರು, ಬುಡಮೇಲು ಕೃತ್ಯ ನಡೆಸುವವರ ಮೆದುಳು ಎಂದು ಅವರನ್ನು ವಿಶ್ಲೇಷಿಸಲಾಗಿತ್ತು. ಶರೀರದಲ್ಲಿ ಕಿರಾತ ದೌರ್ಜನ್ಯಗಳ ಚಿಹ್ನೆಗಳು ವ್ಯಾಪಕವಾಗಿವೆ. ಅವರು ಸಯ್ಯದ್ ಕುತುಬಾಗಿದ್ದರು. ಎದ್ದು ನಿಲ್ಲಲೂ ಸಾಧ್ಯವಿಲ್ಲದ ಅವ ರನ್ನು ನಾವು ಸೈನಿಕ ನ್ಯಾಯಾಲಯಕ್ಕೆ ಹೊತ್ತುಕೊಂಡು ಹೋದೆವು. ಒಂದು ರಾತ್ರಿ, ನೇಣುಗಂಬವನ್ನು ಸಿದ್ಧಪಡಿಸಲಿಕ್ಕಿರುವ ಆಜ್ಞೆ ಬಂತು. ಕೊನೆಯ ಉಪದೇಶ ನೀಡಲೂ, ಪ್ರಾರ್ಥಿಸಲೂ ಓರ್ವ ಶೈಖ್‍ರನ್ನು ಸೆಲ್ಲಿಗೆ ಕಳುಹಿಸಲಾಯಿತು. ಮರುದಿನ ಮುಂಜಾನೆ ನಾನು ಮತ್ತು ನನ್ನ ಗೆಳೆಯ ಅವರನ್ನು ಹೊತ್ತುಕೊಂಡು ಹೋಗಿ ದೂರ ನಿಲ್ಲಿಸಿದ್ದ ಸೈನಿಕ ಜೀಪೊಂದರಲ್ಲಿ ಕುಳ್ಳಿರಿಸಿದೆವು. ವಧೆ ಶಿಕ್ಷೆ ನೀಡುವ ಸ್ಥಳಕ್ಕಾಗಿತ್ತು ಪ್ರಯಾಣ. ಶಸ್ತ್ರಧಾರಿಗಳಾದ ಸೈನಿಕರು ನಮ್ಮನ್ನು ಹಿಂಬಾಲಿಸುತ್ತಿದ್ದರು. ವಾಹನಗಳು ನಿಶ್ಚಿತ ಸ್ಥಳಕ್ಕೆ ತಲುಪಿದುವು. ಸೈನಿಕರು ಜೀಪ್‍ನಿಂದ ಜಿಗಿದರು. ಸೇನಾಧಿಕಾರಿಗಳು ಎಲ್ಲವನ್ನು ಮೊದಲೇ ಸಿದ್ಧಪಡಿಸಿಟ್ಟಿದ್ದರು. ಎಲ್ಲರೂ ತಮಗಾಗಿ ತಯಾರಿಸಿಟ್ಟಿದ್ದ ನೇಣುಗಂಬದ ಬಳಿಗೆ ಸಾಗಿದರು. ನೇಣುಗಂಬದ ಬಳಿಗೆ ಸಾಗುವಾಗ ಪರಸ್ಪರ ಕೈ ಬೀಸಿ ಹೇಳಿದ ಮಾತುಗಳು ಇಂದಿಗೂ ನಮ್ಮ ಕಿವಿಗಳಲ್ಲಿ ಮಾರ್ದನಿಸುತ್ತಿದೆ. `ನಲ್‍ತಕೀ ಫೀ ಜನ್ನತಿಲ್ ಖುಲ್ದಿ ಮಅ ಮುಹಮ್ಮದಿನ್ ವ ಅಸ್ಹಾಬಿಹೀ’ [ಮುಹಮ್ಮದ್(ಸ) ಮತ್ತು ಅವರ ಸಹಾಬಿಗಳೊಂದಿಗೆ ನಾವು ಸ್ವರ್ಗದಲ್ಲಿ ಭೇಟಿಯಾಗೋಣ].
ಓರ್ವ ಸೇನಾಧಿಕಾರಿಯು ಸಯ್ಯದ್  ಕುತುಬ್‍ರ ಬಳಿಗೆ ಬಂದನು. ಕಣ್ಣುಗಳಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಲಾಯಿತು. ಕುತ್ತಿಗೆ ಯಿಂದ ನೇಣು ಹಗ್ಗವನ್ನು ತೆಗೆಯಲಾಯಿತು. ಮೆಲ್ಲನೆ ಕುತುಬ್ ರೊಂದಿಗೆ ಹೇಳಿದನು, “ಕರುಣಾಮಯಿಯೂ ಸ್ನೇಹಮಯಿಯೂ ಆದ ಅಧ್ಯಕ್ಷರ ಒಂದು ಉಡುಗೊರೆಯೊಂದಿಗೆ ನಾನು ಬಂದಿದ್ದೇನೆ. ಒಂದೇ ಒಂದು ಮಾತು ಬರೆದು ಸಹಿ ಹಾಕಿದರೆ ಸಾಕು. ನಿಮ್ಮನ್ನು ಈಗಲೇ ಬಿಡುಗಡೆಗೊಳಿಸುವುದು. ‘ನನಗೆ ತಪ್ಪು ಸಂಭವಿ ಸಿತು. ನಾನು ಕ್ಷಮೆ ಕೋರುತ್ತೇನೆ’ ಎಂಬ ವಾಕ್ಯ ಬರೆದರೆ ಸಾಕು.” ಅಂದು ಸಯ್ಯದ್ ಕುತುಬ್ ಮುಗುಳ್ನಗೆಯೊಂದಿಗೆ ಅ ಅಧಿಕಾರಿಯ ಮುಖವನ್ನು ದಿಟ್ಟಿಸಿದ ಆ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ. ವಿಚಲಿತವಾಗದ ಕಣ್ಣುಗಳೊಂದಿಗೆ ಮಂದಸ್ಮಿತ ಮುಖಭಾವದೊಂದಿಗೆ ಸಯ್ಯದ್ ಕುತುಬ್ ಹೇಳಿದರು, “ಖಂಡಿತಾ ಸಾಧ್ಯವಿಲ್ಲ... ಒಮ್ಮೆಯೂ ಅಳಿದು ಹೋಗದ ಒಂದು ಸುಳ್ಳು ಮಾತು ಆಡಿ ನಶ್ವರವಾದ ಈ ಜೀವನವನ್ನು ಬದಲಿಯಾಗಿ ಪಡೆದುಕೊಳ್ಳಲು ನಾನು ತಯಾರಿಲ್ಲ.” ದುಃಖದ ಕಟ್ಟೆಯೊಡೆದ ಸೇನಾಧಿಕಾರಿಯು “ಸಯ್ಯದ್, ಇನ್ನು ಮರಣವಾಗಿದೆ ನಿಮ್ಮ ಮುಂದಿರುವುದು.” ಸಯ್ಯದ್  ಕುತುಬ್‍ರ ಅಚಲವಾದ ಉತ್ತರ, ಯಾ ಮರ್‍ಹಬನ್ ಬಿಲ್ ಮೌತಿ ಫೀ ಸಬೀಲಿಲ್ಲಾಹ್. (ಅಲ್ಲಾಹನ ಮಾರ್ಗದ ಮರಣಕ್ಕೆ ಸ್ವಾಗತ).
ಅಧಿಕಾರಿಯು ಅಶ್ಮಾಮಿಗೆ ಆಜ್ಞಾಪಿಸಿದನು. ಅವರು ಸಯ್ಯದ್ ಕುತುಬ್ ನಿಂತುಕೊಂಡಿದ್ದ ಕುರ್ಚಿಯನ್ನು ತಪ್ಪಿಸಿದರು. ಇಸ್ಲಾಮಿನ ಮಾರ್ಗದ ಕರ್ಮ ಯೋಧರ ಜಡ ಶರೀರವು ನೇಣುಗಂಬದಲ್ಲಿ ತೂಗಾಡಿದವು. ಆ ಪವಿತ್ರ ಆತ್ಮವು ಸೃಷ್ಟಿಕರ್ತನ ಸನ್ನಿಧಿಗೆ ಯಾತ್ರೆ ಹೊರಟಿತು.
 ಪಿ . ಕೆ. ಜಮಾಲ್