ಮಂಗಳವಾರ, ಸೆಪ್ಟೆಂಬರ್ 25, 2012

ಜಾಗ್ರತೆ, ನಿಮ್ಮ ಶತ್ರು ನಿಮ್ಮಲ್ಲೇ ಇದ್ದಾರೆ!

ಸಂಪತ್ತು ಮತ್ತು ಸಂತಾನಗಳು ಅಲ್ಲಾಹನು ನೀಡಿರುವ ದೊಡ್ಡ ಅನುಗ್ರಹಗಳಾಗಿವೆ. ಮಾನವರು ಈ ವಸ್ತುಗಳನ್ನು ಸದಾ ಆಶ್ರಯಿಸಿರುತ್ತಾರೆ. ಸಂಪತ್ತು ಮತ್ತು ಸಂತಾನಗಳ ಗಳಿಕೆಗಾಗಿ ಕಷ್ಟ ಸಾಧ್ಯವಾದ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಅವುಗಳನ್ನು ಪಡೆಯುಲು ಹಾತೊರೆಯದವರಿದ್ದಾರೆಯೇ? ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅವುಗಳನ್ನು ಬಯಸುತ್ತಾರೆ. ಮಾನವನ ಐಹಿಕ ಜೀವನವನ್ನೂ ಪರಲೋಕ ಜೀವನವನ್ನೂ ಯಶಸ್ವಿ ಗೊಳಿಸುವ ಶಕ್ತಿ ಈ ಎರಡೂ ಅನುಗ್ರಹಗಳಿಗಿವೆ. ಐಹಿಕ ಜೀವನಕ್ಕೆ ಸಂಬಂಧಿಸಿದಂತೆ ಇವುಗಳು ಕೇವಲ ಅಲಂಕಾರಗಳಾಗಿವೆ. ಅಲ್ಲಾಹನು ಹೇಳುತ್ತಾನೆ, “ಜನರಿಗೆ ಇಂದ್ರಿಯಾಸಕ್ತಿಗಳಾದ-ಸ್ತ್ರೀಯರು, ಮಕ್ಕಳು, ಚಿನ್ನ-ಬೆಳ್ಳಿಗಳ ರಾಶಿ, ಆಯ್ದ ಕುದುರೆಗಳು ಜಾನುವಾರುಗಳು ಮತ್ತು ಕೃಷಿ ಭೂಮಿ-ಇವುಗಳನ್ನು ಅತ್ಯಾಕರ್ಷಕವಾಗಿ ಮಾಡಲಾಗಿದೆ. ಆದರೆ, ಇವೆಲ್ಲ ಇಹಲೋಕದ ಕೆಲವೇ ದಿನಗಳ ಜೀವನ ಸಾಧನಗಳು. ಯಥಾರ್ಥದಲ್ಲಿ ಅತ್ಯುತ್ತಮ ವಾಸ ಸ್ಥಳವಂತು ಅಲ್ಲಾಹನ ಬಳಿಯಲ್ಲಿದೆ.” (ಆಲಿ ಇಮ್ರಾನ್: 14)
ಇನ್ನೊಂದೆಡೆ ಹೀಗೆ ಹೇಳಲಾಗಿದೆ. “ಈ ಸೊತ್ತು ಮತ್ತು ಸಂತತಿಗಳು ಕೇವಲ ಲೌಕಿಕ ಜೀವನದ (ನಿಮ್ಮ ಪ್ರಭುವಿನ ಬಳಿ) ಕ್ಷಣಿಕ ಸೊಬಗು ಮಾತ್ರ. ವಾಸ್ತವದಲ್ಲಿ, ಉಳಿಯುವ ಪುಣ್ಯ ಕಾರ್ಯಗಳೇ ಪರಿಣಾಮದ ದೃಷ್ಟಿಯಿಂದ ಶ್ರೇಷ್ಠವಾಗಿರುತ್ತವೆ. ಅವುಗಳ ಮೇಲೆಯೇ ಉತ್ತಮ ನಿರೀಕ್ಷೆಗಳನ್ನಿರಿಸಿಕೊಳ್ಳಬಹುದು.” (ಅಹ್‍ಕಾಫ್: 46)
ಸಂಪತ್ತು ಮತ್ತು ಸಂತಾನಗಳನ್ನು ಈ ಲೋಕದಲ್ಲಿ ನಮಗೆ ಆಕರ್ಷಣೀಯ  ವಸ್ತುಗಳನ್ನಾಗಿ ಮಾಡಲಾಗಿದೆ. ಅವುಗಳಿಗೆ ಮಾರು ಹೋಗುವುದು ಮಾನವನ ದೌರ್ಬಲ್ಯಗಳಲ್ಲಿ ಸೇರಿದೆ. ಮನುಷ್ಯನ ಪರಲೋಕ ವಿಜಯವು ಇವುಗಳ ನಿರ್ವಹಣೆಯ ಮೇಲೆ ಅವಲಂಬಿತವಾಗಿದೆ. ನಾವು ಬಹಳ ಪ್ರೀತಿಯಿಂದ ನೋಡಿಕೊಳ್ಳುವ ಈ ವಸ್ತುಗಳು ಕೊನೆಗೊಂದು ದಿನ ನಮ್ಮ ಶತ್ರುಗಳಾಗುತ್ತವೆ. ಇಬ್ನುಮಾಲಿಕುಲ್ ಅಶ್‍ಅರಿಯವರಿಂದ(ರ) ವರದಿಯಾಗಿದೆ. ಪ್ರವಾದಿ(ಸ) ಹೇಳಿದರು.
 لَيْسَ عَدُوُّكَ الَّذِي إِذَا قَتَلَكَ أَدْخَلَكَ الْجَنَّةَ ، وَإِذَا قَتَلْتَهُ كَانَ لَكَ نُورًا أَعْدَى عَدُوًّا لَكَ نَفْسُكَ الَّتِي بَيْنَ جَنْبَيْكَ “ನೀನು ಕೊಂದರೆ ನಿನಗೆ ಪ್ರಕಾಶಮಯವಾಗುವ ಮತ್ತು ನಿನ್ನನ್ನು ಕೊಂದು ಬಿಟ್ಟರೆ ನಿನಗೆ ಸ್ವರ್ಗ ಲಭಿಸಲು ಕಾರಣಕರ್ತನಾಗುವವನಲ್ಲ ನಿನ್ನ ನೈಜ ಶತ್ರು. ಬದಲಾಗಿ ನಿನ್ನ ಬೆನ್ನೆಲುಬಿನಿಂದ ನಿನಗೆ ಹುಟ್ಟಿದ ನಿನ್ನ ಸಂತಾನಗಳಾಗಿರಬಹುದು ನಿನ್ನ ಅತ್ಯಂತ ದೊಡ್ಡ ಶತ್ರು. ಆ ಬಳಿಕ ನೀನು ಶೇಖರಿಸಿಟ್ಟಿರುವ ಸಂಪತ್ತಾಗಿದೆ.”
ನಮ್ಮ ಶತ್ರುಗಳು ಹೊರಗೆಲ್ಲೋ ಇದ್ದಾರೆ ಎಂದು ನಾವು ಭಾವಿಸಿದ್ದೇವೆ. ನೆರೆಕರೆಯವರು ಕೆಲವೊಮ್ಮೆ ನಮಗೆ ಶತ್ರುಗಳಾಗುತ್ತಾರೆ. ಸಂಬಂಧಿಕರನ್ನು ನಾವು ಶತ್ರುಗಳಾಗಿಸುತ್ತೇವೆ. ಆದರೆ ಈ ಹದೀಸಿನ ಪ್ರಕಾರ ನಮ್ಮ ಶತ್ರುಗಳು ನಮ್ಮೊಳಗೇ ಇದ್ದಾರೆ. ನಾವು ಜತನದಿಂದ ಕಾಪಾಡಿಕೊಂಡಿದ್ದ ಸಂಪತ್ತು ಮತ್ತು ಸಂತಾನವು ನಮ್ಮ ಮುಂದೆ ಶತ್ರುಗಳಾಗಿ ನಿಲ್ಲುತ್ತವೆ. ನಮ್ಮ ಪರಲೋಕ ವಿಜಯಕ್ಕೆ ಅಡ್ಡಗಾಲು ಹಾಕುತ್ತವೆ. ನಮ್ಮ ಸ್ವರ್ಗ ಪ್ರಾಪ್ತಿಯನ್ನು ತಡೆಯುತ್ತವೆ.
ಹಣ ಸಂಪಾದಿಸುವ ವಿಚಾರದಲ್ಲಿ ಇಸ್ಲಾಮ್ ನಿಷೇಧ ವಿಧಿಸಿಲ್ಲ. ಆದರೆ ಅದು ಜೀವನದ ಪರಮ ಗುರಿಯಾಗುವುದು ಮತ್ತು ಉಳಿದೆಲ್ಲಾ ವಿಚಾರಗಳು ನಗಣ್ಯವಾಗುವ ಸಂದರ್ಭವನ್ನು ಇಸ್ಲಾಮ್ ಸಹಿಸುವುದಿಲ್ಲ. ಸಂಪತ್ತಿನ ಗಳಿಕೆಯೇ ಪ್ರಧಾನ ಕೆಲಸವಾಗಿ ಬಿಟ್ಟರೆ ಅದನ್ನು ಪಡೆಯಲು ಮನುಷ್ಯನು ಯಾವುದೇ ದಾರಿಯನ್ನು ಸ್ವೀರಿಸಲು ಸಿದ್ಧನಾಗುತ್ತಾನೆ. ಅದು ಅಡ್ಡದಾರಿಯಾದರೂ ಸರಿ. ಆಗ ಅವನಿಗೆ ಒಳಿತು-ಕೆಡುಕುಗಳು ಸಮಸ್ಯೆಯಾಗುವುದಿಲ್ಲ. ಹಣ ಗಳಿಕೆಗಾಗಿ ಎದುರಾಗುವ ಎಲ್ಲಾ ತೊಡಕುಗಳನ್ನೂ ಅವನು ನೀಗಿಸಲು ಪ್ರಯತ್ನಿಸುತ್ತಾನೆ. ತತ್ಪರಿಣಾಮಗಾಗಿ ಅವನಲ್ಲಿ ಸಚ್ಚಾರಿತ್ರ್ಯವು ನಶಿಸಿ ಹೋಗುತ್ತದೆ.
ಇನ್ನು ಸರಿಯಾದ ರೀತಿಯಲ್ಲಿ ಸಂಪತ್ತನ್ನು ಗಳಿಸಿದವನು ಅದನ್ನು ಹಕ್ಕುದಾರರಿಗೆ ನೀಡದೆ ಶೇಖರಿಸಿಡುತ್ತಾನೆ. ಬಡವರ ಹಕ್ಕುಗಳು ಅವನಿಂದ ದಮನಿಸಲ್ಪಡುತ್ತವೆ. ಅಲ್ಲಾಹನು ಹೇಳುತ್ತಾನೆ, “ಅವನು ಸಂಪತ್ತನ್ನು ಸಂಗ್ರಹಿಸಿದನು ಮತ್ತು ಅದನ್ನು ಎಣಿಸಿ ಎಣಿಸಿ ಇಟ್ಟನು. ಅವನ ಸಂಪತ್ತು ಶಾಶ್ವತವಾಗಿ ಅವನ ಬಳಿಯಲ್ಲೇ ಇರುವುದೆಂದು ಅವನು ಭಾವಿಸುತ್ತಾನೆ. ಖಂಡಿತ ಇಲ್ಲ. ಅವನು ಪುಡಿಗಟ್ಟಿ ಬಿಡುವ ಸ್ಥಳಕ್ಕೆ ಎಸೆಯಲ್ಪಡುವನು.” (ಅಲ್ ಹುಮಝ: 2-4)
ಮನುಷ್ಯನು ತನ್ನ ಸಂಪತ್ತು ಶಾಶ್ವತ ಎಂದು ಭಾವಿಸುತ್ತಾನೆ. ಇವೆಲ್ಲವನ್ನೂ ಬಿಟ್ಟು ಒಂದು ದಿನ ಬರಿಗೈಯಲ್ಲಿ ಮರಳಲಿಕ್ಕಿದೆ ಎಂಬ ಪ್ರಜ್ಞೆ ಅವನಲ್ಲಿ ಇರುವುದಿಲ್ಲ. ಪ್ರವಾದಿ(ಸ) ಹೇಳಿದರು,
تعس عبد الدينار، تعس عبد الدرهم، عبد الخميصة، إن أعطي منها رضي، وإن لم يعط سخط، تعس وانتكس، وإذا شيك فلا انتقش “ದಿರ್ಹಮ್ ಮತ್ತು ದೀನಾರ್‍ಗಳ ಗುಲಾಮನು ನಾಶ ಹೊಂದಿದನು. ಅವನಿಗೆ ಏನಾದರೂ ನೀಡಲ್ಪಟ್ಟರೆ ಅವನು ಸಂತುಷ್ಟನಾಗುವನು. ನೀಡದಿದ್ದರೆ ಅವನು ಕೋಪಿಷ್ಠನಾಗುವನು. ಅವನ ಎಲ್ಲಾ ಲೆಕ್ಕಾಚಾರಗಳೂ ತಲೆಕೆಳಗಾಗುವುದು. ಅವನಿಗೆ ಒಂದು ಮುಳ್ಳು ಚುಚ್ಚಿದರೂ ಅದನ್ನು ತೆಗೆಯಲು ಜನರು ಸಿಗದೆ ಅವನು ಕಷ್ಟ ಅನುಭವಿಸುವನು.”
ಸಂತಾನಗಳ ಸ್ಥಿತಿಯೂ ಇದೇ ಆಗಿದೆ. ಅಲ್ಲಾಹನ ಸಂಪ್ರೀತಿಗಿಂತ ಹೆಚ್ಚಿನ ಆದ್ಯತೆಯನ್ನು ಮಕ್ಕಳಿಗೆ ನೀಡುವಾಗ ಅವರು ಹೆತ್ತವರಿಗೆ ಶತ್ರುಗಳಾಗಿ ಮಾರ್ಪಡುತ್ತಾರೆ. ಮಕ್ಕಳೊಂದಿಗಿರುವ ಮೇರೆ ವಿೂರಿದ ಪ್ರೀತ್ಯಾದರವು ಹೆತ್ತವರನ್ನು ಮಕ್ಕಳ ಗುಲಾಮರನ್ನಾಗಿಸುತ್ತದೆ. ಮಕ್ಕಳ ಬೇಡಿಕೆ ಗಳನ್ನು, ಆಸೆ-ಚಪಲಗಳನ್ನು ಪೂರೈಸಲು ಹೆತ್ತವರು ಹಲಾಲ್-ಹರಾಮ್‍ಗಳ ಕಡೆಗೆ ಜಾಣ ಕುರುಡು ಪ್ರದರ್ಶಿಸುವ ಮಟ್ಟಕ್ಕೆ ತಲುಪುತ್ತಾರೆ. ಹೇಗಾದರೂ ಮಾಡಿ ಮಕ್ಕಳನ್ನು ತೃಪ್ತಿ ಪಡಿಸುವುದು ಅವರ ಗುರಿಯಾಗಿರುತ್ತದೆ. ದೇವನ ಮಾರ್ಗದಿಂದ ಪಥ ಭ್ರಷ್ಟಗೊಳ್ಳುವ ಸಾಧ್ಯತೆಯೂ ಇಂತಹ ಸಂದರ್ಭಗಳಲ್ಲಿ ಉಂಟಾಗುತ್ತದೆ. ಹೀಗೆ ಮಕ್ಕಳು ಹೆತ್ತವರ ಪಾಲಿಗೆ ಪರಲೋಕ ಜೀವನವನ್ನು ದುರಂತ ಮಯಗೊಳಿಸುವ ಶತ್ರುಗಳಾಗಿ ಬದಲಾಗುತ್ತಾರೆ. ಪ್ರವಾದಿ(ಸ) ಹೇಳಿದರು.
يأتي على الناس زمان يكون هلاك الرجل على يد زوجته وأبويه وولده ، يعيرونه بالفقر ويكلفونه ما لا يطيق ! فيدخل المداخل التي يذهب فيها دينه فيهلك “ನನ್ನ ಸಮುದಾಯಕ್ಕೆ ಒಂದು ಕಾಲ ಬರಲಿಕ್ಕಿದೆ. ಅಂದು ಓರ್ವನ ನಾಶವು ಅವನ ಪತ್ನಿ ಮತ್ತು ಮಕ್ಕಳ ಮೂಲಕವಾಗಿರಬಹುದು. ದಾರಿದ್ರ್ಯದಿಂದಾಗಿ ಅವರು ಅವನನ್ನು ತೆಗಳುತ್ತಿರುವರು. ಹಾಗೆ ಅವನು ನಿಷಿದ್ಧ ಮಾರ್ಗ ತುಳಿಯಲು ನಿರ್ಬಂಧಿತನಾಗುವನು. ಕೊನೆಗೆ ಅವನು ನಾಶ ಹೊಂದುವನು.”
ಪತ್ನಿ-ಮಕ್ಕಳ ಬೇಡಿಕೆಗಳನ್ನು ಪೂರೈಸಲಿಕ್ಕಾಗಿ ಪಾಪ ಕೃತ್ಯಗಳಿಗೆ ಬಲಿಯಾದ ಎಷ್ಟೋ ಮಂದಿ ನಮ್ಮ ಕಣ್ಮುಂದೆಯೇ ಇದ್ದಾರೆ. ಪತ್ನಿಯ ಆಭರಣದ ವ್ಯಾಮೋಹಕ್ಕೆ ಮಣಿದು, ಮಕ್ಕಳ ಆಟಿಕೆಯ ತೀವ್ರ ಬೇಡಿಕೆಗೆ ಬಲಿಯಾಗಿ ಕಳ್ಳತನ ನಡೆಸಿ ಸಿಕ್ಕಿ ಬೀಳುವವರ ಪಟ್ಟಿಯು ಪುಟ್ಟದಲ್ಲ. ಪತ್ನಿ-ಮಕ್ಕಳಿಗಾಗಿ ತನ್ನ ಅಸ್ತಿತ್ವವನ್ನೇ ಅವರು ಮರೆಯುತ್ತಾರೆ. ತಮ್ಮ ಧಾರ್ಮಿಕ ಪ್ರಜ್ಞೆಯನ್ನೇ ಅವರು ಪಣಕ್ಕಿಡುತ್ತಾರೆ. ಅಂಥವರ ಕುರಿತು ಪ್ರವಾದಿ(ಸ) ಹೀಗೆ ಹೇಳಿದ್ದಾರೆ, “ನಾಳೆ ಪರ ಲೋಕದಲ್ಲಿ ಓರ್ವ ವ್ಯಕ್ತಿಯನ್ನು ಕರೆತರಲಾಗುವುದು. ಅವನ ಕುರಿತು “ಇವನ ಒಳಿತುಗಳನ್ನೆಲ್ಲಾ ಇವನ ಕುಟುಂಬವು ತಿಂದು ಮುಗಿಸಿದೆ” ಎಂದು ಹೇಳಲಾಗುವುದು. ಆದ್ದರಿಂದ ನಾವು ನಮ್ಮ ಸಂಪತ್ತು-ಸಂತಾನಗಳು ನಮ್ಮ ಶತ್ರುಗಳಾಗಿ ಬದಲಾಗದಂತೆ ಎಚ್ಚರ ವಹಿಸಬೇಕು. ಆ ಅನುಗ್ರಹಗಳಿಂದಾಗಿ ನಮಗೆ ಸ್ವರ್ಗಪ್ರಾಪ್ತಿಯಾಗಬೇಕೇ ಹೊರತು ನರಕವಲ್ಲ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಸೋಮವಾರ, ಸೆಪ್ಟೆಂಬರ್ 17, 2012

ಪ್ಲೀಸ್, ಕುಟುಂಬ ಸಂಬಂಧ ಮುರಿಯಬೇಡಿ


 ಮಾನವನು ಸಂಘಜೀವಿಯಾಗಿದ್ದಾನೆ. ಇತರರೊಂದಿಗೆ ಕೂಡಿ ಬಾಳುವುದು ಅವನ ಪ್ರಕೃತಿದತ್ತ ಗುಣವಾಗಿದೆ. ಆದ್ದರಿಂದ ಅವನಿಗೆ ಏಕಾಂಗಿಯಾಗಿ ಜೀವಿಸಲು ಕೆಲವು ದಿನಗಳ ಮಟ್ಟಿಗೆ ಸಾಧ್ಯವಾದರೂ ಅದು ಶಾಶ್ವತವಾಗಿಸಲು ಅವನಿಂದ ಸಾಧ್ಯವಿಲ್ಲ. ಇನ್ನು ಯಾರ ಹಂಗಿಲ್ಲದೇ ಏಕಾಂಗಿಯಾಗಿ ಜೀವಿಸುವುದು ಮಾನಸಿಕ ಸ್ಥಿಮಿತ ಕಳಕೊಂಡಿರುವ ಹುಚ್ಚರು ಮಾತ್ರ.
ಮನುಷ್ಯರಲ್ಲಿ ಕೂಡಿ ಬಾಳುವ ಗುಣ ಇರುವುದರಿಂದಲೇ ಅವನು ಒಂದು ಕುಟುಂಬವನ್ನು ಬಯಸುತ್ತಾನೆ. ಓರ್ವ ಮನುಷ್ಯನ ಸುತ್ತಲೂ ಸಂಬಂಧಗಳ ಸರಪಳಿಯು ಪೋಣಿಸಲ್ಪಟ್ಟಿದೆ. ತಂದೆ, ತಾಯಿ, ಪತ್ನಿ, ಮಕ್ಕಳು, ಸಹೋದರ-ಸಹೋದರಿಯರು, ಅತ್ತೆ, ಮಾವ ಹೀಗೆ ಈ ಸರಪಳಿಯು ಅವನನ್ನು ಬಂಧಿಸಿ ಸಹಬಾಳ್ವೆಯ ಸುಖವನ್ನು ನೀಡುತ್ತಿರುತ್ತದೆ. ಆದ್ದರಿಂದಲೇ ಮಾನವನು ಈ ಸರಪಳಿಯಿಂದ ಬಂಧಮುಕ್ತಗೊಳ್ಳಲು ತಯಾರಾಗುತ್ತಿಲ್ಲ.
ಓರ್ವ ವಿಶ್ವಾಸಿಗೆ ಕುಟುಂಬದ ಮೇಲೆ ಹಲವಾರು ಬಾಧ್ಯತೆಗಳಿವೆ. ಅಲ್ಲಾಹನೊಂದಿಗೂ ಸ್ವಂತದೊಂದಿಗೂ ಇರುವ ಬಾಧ್ಯತೆಗಳ ಬಳಿಕ ಇಸ್ಲಾಮಿನಲ್ಲಿ ಅತ್ಯಂತ ಹೆಚ್ಚು ಮಹತ್ವ ಇರುವುದು ಈ ಸಂಬಂಧಗಳಿಗಾಗಿದೆ. ಆದ್ದರಿಂದ ಕುಟುಂಬ ಸಂಬಂಧಕ್ಕೆ ಧಕ್ಕೆ ಯಾಗುವಂತಹ ಯಾವುದೇ ಕೆಲಸವು ಓರ್ವ ನೈಜ ವಿಶ್ವಾಸಿ ಯಿಂದ ಘಟಿಸಬಾರದು. ಕುಟುಂಬ ಸಂಬಂಧಕ್ಕೆ ಇಸ್ಲಾಮ್ ಅತೀ ಹೆಚ್ಚು ಮಹತ್ವ ನೀಡಿದೆ. ಕುಟುಂಬದೊಂದಿಗೆ ಹಳಸಲು ಸಂಬಂಧವಿರಿಸಿ ನಾವು ಮಾಡುವ ಸತ್ಕರ್ಮಗಳು ನಿರರ್ಥಕ ವಾಗಬಹುದು. ಇಂದು ಸಮಾಜದಲ್ಲಿ ಜನಾನುರಾಗಿಯಾಗಿ ಗುರುತಿಸಿಕೊಳ್ಳುವವರು, ಸಮಾಜದ ಜನರ ಸಂಕಷ್ಟಗಳಿಗೆ ಹೆಗಲು ಕೊಡುವವರು, ಸಮಾಜದಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸಿಕೊಂಡವರು ಕುಟುಂಬದ ವಿಚಾರದಲ್ಲಿ ವಿಫಲರಾಗಿರು ತ್ತಾರೆ. ಅಣ್ಣನ ಅಭಿವೃದ್ಧಿಯನ್ನು ಸಹಿಸದ ತಮ್ಮ, ತಮ್ಮನ ಅಭಿವೃದ್ಧಿಯ ವಿರುದ್ಧ ಅಸೂಯೆ ತೋರುವ ಅಣ್ಣ ಹೀಗೆ ಬಹಳ ಹತ್ತಿರದ ಸಂಬಂಧಗಳಲ್ಲೂ ಬಿದ್ದಿರುವ ಬಿರುಕುಗಳು ನಮ್ಮ ಧಾರ್ಮಿಕ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ.
ಅಬ್ದುರ್ರಹ್ಮಾನ್ ಬಿನ್ ಔಫ್‍ರಿಂದ(ರ) ವರದಿಯಾಗಿದೆ. ಪ್ರವಾದಿ(ಸ) ಹೇಳಿರುವುದಾಗಿ ನಾನು ಕೇಳಿದ್ದೇನೆ: ಅಲ್ಲಾಹನು ಹೇಳಿದ್ದಾನೆ, “ನಾನು ಅಲ್ಲಾಹನಾಗಿದ್ದೇನೆ. ನಾನು ಪರಮ ದಯಾ ಮಯನಾಗಿದ್ದೇನೆ. ಕುಟುಂಬ ಸಂಬಂಧವನ್ನು ಸೃಷ್ಟಿಸಿದ್ದು ನಾನು. ನನ್ನ ನಾಮಗಳಿಂದ ಅದಕ್ಕೆ ಪಾಲು ಮಾಡಿ ನೀಡಿದ್ದೇನೆ. ಆದ್ದ ರಿಂದ ಕುಟುಂಬ ಸಂಬಂಧವನ್ನು ಸ್ಥಾಪಿಸುವವರೊಂದಿಗೆ ನಾನೂ ಸಂಬಂಧ ಸ್ಥಾಪಿಸುತ್ತೇನೆ. ಕುಟುಂಬದೊಂದಿಗಿನ ಸಂಬಂಧವನ್ನು ಕಡಿಯುವವರೊಂದಿಗೆ ನಾನೂ ಸಂಬಂಧ ಕಡಿಯುತ್ತೇನೆ.”
قَالَ عَبْدُ الرَّحْمَنِ بْنُ عَوْفٍ : إِنِّي سَمِعْتُ رَسُولَ اللَّهِ يَقُولُ : " قَالَ اللَّهُ جَلَّ وَعَزَّ : " أَنَا اللَّهُ وَأَنَا الرَّحْمَنُ خَلَقْتُ الرَّحِمَ وَشَقَقْتُ لَهَا     مِنَ اسْمِي فَمَنْ وَصَلَهَا وَصَلْتُهُ وَمَنْ قَطَعَهَا بَتَتُّهُ
ಕುಟುಂಬ ಸಂಬಂಧದ ಮಹತ್ವದ ಕುರಿತು ಕುರ್‍ಆನ್ ಮತ್ತು ಹದೀಸ್‍ಗಳಲ್ಲಿ ಹಲವಾರು ಪ್ರಸ್ತಾಪಗಳು ಬಂದಿವೆ. ಅಲ್ಲಾಹನು ಸೂರಃ ಅನ್ನಿಸಾದ ಪ್ರಥಮ ಸೂಕ್ತದಲ್ಲೇ ಈ ರೀತಿ ಹೇಳುತ್ತಾನೆ,
يَـٰٓأَيُّہَا ٱلنَّاسُ ٱتَّقُواْ رَبَّكُمُ ٱلَّذِى خَلَقَكُم مِّن نَّفۡسٍ۬ وَٲحِدَةٍ۬ وَخَلَقَ مِنۡہَا زَوۡجَهَا وَبَثَّ مِنۡہُمَا رِجَالاً۬ كَثِيرً۬ا وَنِسَآءً۬‌ۚ وَٱتَّقُواْ ٱللَّهَ ٱلَّذِى تَسَآءَلُونَ بِهِۦ وَٱلۡأَرۡحَامَ‌ۚ إِنَّ ٱللَّهَ كَانَ عَلَيۡكُمۡ رَقِيبً۬ا  
“ಜನರೇ, ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು. ಅದೇ ಜೀವದಿಂದ ಅದರ ಜೋಡಿಯನ್ನು ಉಂಟು ಮಾಡಿದನು ಮತ್ತು ಅವೆರಡರಿಂದ ಅನೇಕಾನೇಕ ಸ್ತ್ರೀ-ಪುರುಷರನ್ನು ಲೋಕದಲ್ಲಿ ಹಬ್ಬಿಸಿದನು. ನೀವು ಯಾರ ಹೆಸರನ್ನೆತ್ತಿ ಪರಸ್ಪರ ಹಕ್ಕು ಬಾಧ್ಯತೆಗಳನ್ನು ಕೇಳುತ್ತೀರೋ ಆ ಅಲ್ಲಾಹನನ್ನು ಭಯಪಡಿರಿ. ಕುಟುಂಬ ಸಂಬಂಧವನ್ನು ಕೆಡಿಸಬೇಡಿರಿ. ಅಲ್ಲಾಹನು ನಿಮ್ಮ ಮೇಲೆ ಮೇಲ್ನೊಟ ಇರಿಸಿ ಕೊಂಡಿದ್ದಾನೆ ಎಂಬುದನ್ನು ಚೆನ್ನಾಗಿ ಅರಿತುಕೊಳ್ಳಿರಿ.”
ಇಲ್ಲಿ ಅಲ್ಲಾಹನು ‘ಕುಟುಂಬ ಸಂಬಂಧವನ್ನು ಕೆಡಿಸಬೇಡಿರಿ’ ಎಂದು ಸ್ಪಷ್ಟವಾಗಿ ಆಜ್ಞಾಪಿಸಿದ್ದಾನೆ. ಈ ಸಂಬಂಧವನ್ನು ಮುರಿಯುವವರು ಮತ್ತು ಭೂಮಿಯಲ್ಲಿ ಕ್ಷೋಭೆ ಹರಡುವವರಿಗೆ ಅಲ್ಲಾಹನು ಈ ರೀತಿ ಎಚ್ಚರಿಕೆ ನೀಡಿದ್ದಾನೆ,
فَهَلۡ عَسَيۡتُمۡ إِن تَوَلَّيۡتُمۡ أَن تُفۡسِدُواْ فِى ٱلۡأَرۡضِ وَتُقَطِّعُوٓاْ أَرۡحَامَكُمۡ 
 فَأَصَمَّهُمۡ وَأَعۡمَىٰٓ أَبۡصَـٰرَهُمۡ ‭۝ ‬أُوْلَـٰٓٮِٕكَ ٱلَّذِينَ لَعَنَهُمُ ٱللَّهُ  ‭  
 “ನೀವು ವಿಮುಖರಾಗಿ ಬಿಟ್ಟರೆ ಭೂಮಿಯಲ್ಲಿ ಪುನಃ ಕ್ಷೋಭೆಯನ್ನುಂಟು ಮಾಡುವ ಹಾಗೂ ನಿಮ್ಮ ಕುಟುಂಬ ಸಂಬಂಧವನ್ನು ಕೆಡಿಸುವ ಹೊರತು ನಿಮ್ಮಿಂದ ಬೇರೇನನ್ನಾದರೂ ನಿರೀಕ್ಷಿಸಬಹುದೇ? ಅಲ್ಲಾಹನು ಶಪಿಸಿರುವುದು ಮತ್ತು ಕಿವುಡರಾಗಿಯೂ ಕುರುಡರಾಗಿಯೂ ಮಾಡಿ ಬಿಟ್ಟಿರುವುದು ಇವರನ್ನೇ.” (ಮುಹಮ್ಮದ್: 22-23)
ಈ ಸೂಕ್ತದ ತಾತ್ಪರ್ಯವೇನೆಂದರೆ ಪ್ರವಾದಿ(ಸ) ಮತ್ತು ಅವರ ಅನುಯಾಯಿಗಳಾದ ಸತ್ಯವಿಶ್ವಾಸಿಗಳು ನಡೆದು ತೋರಿಸಿರುವ ಹಾದಿಯಿಂದ ನೀವು ವಿಮುಖರಾಗುವುದಾದರೆ ಅದರ ಪರಿಣಾಮ ವಾಗಿ ನೀವು ಅಜ್ಞಾನದಲ್ಲೇ ಬಿದ್ದುಕೊಂಡಿರುತ್ತೀರಿ. ಮಾತ್ರವಲ್ಲ, ನೀವು ಪರಸ್ಪರ ರಕ್ತ ಹರಿಸುತ್ತಾ ಶತಮಾನಗಳನ್ನೇ ಕಳೆಯುತ್ತೀರಿ. ಸ್ವಂತ ಸಂತಾನವನ್ನೇ ಜೀವಂತ ಹೂಳಲು ಹೇಸದ ಮನಸ್ಥಿತಿ ಯವರಾಗುತ್ತೀರಿ ಎಂಬುದಾಗಿದೆ.
ಪ್ರವಾದಿಯವರು(ಸ) ಮಕ್ಕಾದಲ್ಲಿ ಧರ್ಮ ಪ್ರಚಾರ ನಡೆಸುತ್ತಿದ್ದ ಆರಂಭ ಕಾಲದಲ್ಲೇ ಕುಟುಂಬ ಸಂಬಂಧದ ಕಡೆಗೆ ಹೆಚ್ಚಿನ ಮಹತ್ವ ನೀಡಿದ್ದರು. ಅಮ್ರ್ ಬಿನ್ ಆಸ್(ರ) ಹೇಳುತ್ತಾರೆ: ಜಾಹಿಲಿಯಾ ಕಾಲದಲ್ಲಿ ಅರೇಬಿಯಾದಲ್ಲಿ ಓರ್ವ ಪ್ರವಾದಿ ಬಂದಿದ್ದಾರೆಂದೂ ಅವರು ಕೆಲವು ವಿಚಾರಗಳನ್ನು ಹೇಳುತ್ತಿದ್ದಾರೆಂದೂ ಯಾರೋ ಹೇಳುವುದನ್ನು ನಾನು ಕೇಳಿದೆ ಹಾಗೂ ನಾನು ಅವರನ್ನು ಭೇಟಿಯಾಗಲು ಹೋದೆ. ಅವರ ಬಳಿ ಹೋಗಿ ಕೇಳಿದೆ, “ತಾವು ಯಾರು?” ಪ್ರವಾದಿಯವರು(ಸ) ಹೇಳಿದರು. “ನಾನು ಪ್ರವಾದಿಯಾಗಿದ್ದೇನೆ. ಅಲ್ಲಾಹನು ನನ್ನನ್ನು ಜನರ ಬಳಿಗೆ ಪ್ರವಾದಿಯಾಗಿ ನೇಮಿಸಿದ್ದಾನೆ.” ನಾನು ಕೇಳಿದೆ, “ಯಾವ ಸಂದೇಶದೊಂದಿಗೆ ಅಲ್ಲಾಹನು ನಿಮ್ಮನ್ನು ಕಳುಹಿಸಿದ್ದಾನೆ?” ಪ್ರವಾದಿಯವರು(ಸ) ಹೇಳಿದರು,
أَرْسَلَنِي بِصِلَةِ الْأَرْحَام وَكَسْر الْأَوْثَان وَأَنْ يُوَحَّد اللَّه لَا يُشْرَك بِهِ شَيْء
 “ಕುಟುಂಬ ಸಂಬಂಧವನ್ನು ಸ್ಥಾಪಿಸಬೇಕು. ವಿಗ್ರಹಗಳನ್ನು ಧ್ವಂಸಗೊಳಿಸಬೇಕು. ಅಲ್ಲಾಹನೊಂದಿಗೆ ಇತರರನ್ನು ಸಹಭಾಗಿಗಳಾಗಿ ಮಾಡದೆ ಅವನ ಏಕತ್ವವನ್ನು ಸ್ಥಾಪಿಸಬೇಕು.”
ಇಮಾಮ್ ನವವಿ(ರ) ಈ ಹದೀಸಿನ ಕುರಿತು ಹೀಗೆ ವಿವರಿಸಿದ್ದಾರೆ, “ಕುಟುಂಬ ಸಂಬಂಧಗಳನ್ನು ಸ್ಥಾಪಿಸುವುದಕ್ಕೆ ಇಸ್ಲಾಮ್ ನೀಡುವ ಪ್ರೇರಣೆ ಹಾಗೂ ಪ್ರೋತ್ಸಾಹಗಳಿಗೆ ಈ ಹದೀಸಿನಲ್ಲಿ ಪುರಾವೆ ಇದೆ. ಯಾಕೆಂದರೆ, ಪ್ರವಾದಿಯವರು(ಸ) ಕುಟುಂಬ ಸಂಬಂಧವನ್ನು ಪರಾಮರ್ಶಿಸಿರುವುದು ತೌಹೀದ್ ನೊಂದಿಗಾಗಿದೆ. ಧರ್ಮದ ಇತರ ವಿಷಯಗಳನ್ನು ಪ್ರಸ್ತಾಪಿಸದೆ ಕುಟುಂಬದ ಮಹತ್ವವನ್ನು ಸ್ಮರಿಸುತ್ತಾ ಅದನ್ನು ಪ್ರಥಮವಾಗಿ ಅವರು ಹೇಳಿದ್ದಾರೆ.”
ಇಸ್ಲಾಮಿನಲ್ಲಿ ಎಲ್ಲಾ ವಿಧದ ಸಂಬಂಧಗಳಿಗಿಂತಲೂ ಆದರ್ಶ ಸಂಬಂಧವು ದೊಡ್ಡದಾಗಿದೆ. ಆದರ್ಶದಲ್ಲಿ ವೈರುಧ್ಯತೆ ಇದ್ದರೂ ಕುಟುಂಬ ಸಂಬಂಧಿಗಳೊಂದಿಗೆ ಉತ್ತಮ ರೀತಿಯಿಂದ ವರ್ತಿಸಲು ಇಸ್ಲಾಮ್ ಧರ್ಮವು ಆಜ್ಞಾಪಿಸುತ್ತದೆ. ಈ ಸೂಕ್ತವು ಅದಕ್ಕಿರುವ ಒಂದು ಉದಾಹರಣೆಯಾಗಿದೆ. ಸೂರಃ ಲುಕ್ಮಾನ್‍ನ 15ನೇ ಸೂಕ್ತ ದಲ್ಲಿ ಅಲ್ಲಾಹನು ಹೆತ್ತವರ ಕುರಿತು ಈ ರೀತಿ ಹೇಳುತ್ತಾನೆ, “ಅವರು ನಿನಗೆ ತಿಳಿಯದುದನ್ನು ನನ್ನೊಂದಿಗೆ ಸಹಭಾಗಿಯಾಗಿ ಮಾಡಬೇಕೆಂದು ನಿನ್ನ ಮೇಲೆ ಒತ್ತಡ ಹಾಕಿದರೆ ಅವರ ಮಾತನ್ನು ಎಷ್ಟು ಮಾತ್ರಕ್ಕೂ ಕೇಳಬೇಡ. ಆದರೆ ಈ ಲೋಕದಲ್ಲಿ ಅವ ರೊಂದಿಗೆ ಸದ್ವರ್ತನೆ ಮಾಡುತ್ತಿರು.”
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್(ರ) ಹೇಳುತ್ತಾರೆ: ಪ್ರವಾದಿ ಯವರು(ಸ) ಏರು ದನಿಯಲ್ಲಿ ಹೀಗೆ ಹೇಳುವುದನ್ನು ನಾನು ಕೇಳಿದೆ,
" إِنَّ آلَ أَبِي فُلانٍ لَيْسُوا لِي بِأَوْلِيَاءَ , إِنَّمَا وَلِيِّ اللَّهُ وَصَالِحُو الْمُؤْمِنِينَ " . 
 “ಇಂತಿಂತಹ ವ್ಯಕ್ತಿಯ ಕುಟುಂಬವು ನನ್ನ ಸಹಾಯಕರಲ್ಲ. ನನ್ನ ಸಹಾಯಿಗಳು ಅಲ್ಲಾಹ್ ಮತ್ತು ಸಚ್ಚರಿತ ಸತ್ಯವಿಶ್ವಾಸಿಗಳಾಗಿದ್ದಾರೆ. ಆದರೆ ಇಂತಿಂತಹ ವ್ಯಕ್ತಿಗಳಿಗೆ ನನ್ನೊಂದಿಗೆ ಕೌಟುಂಬಿಕ ಸಂಬಂಧವಿದೆ. ನಾನು ಆ ಸಂಬಂಧವನ್ನು ಹಸನುಗೊಳಿಸಿಯೇ ಸಿದ್ಧ.”
ಇಸ್ಲಾಮಿನಲ್ಲಿ ಕುಟುಂಬ ಸಂಬಂಧಕ್ಕೆ ಇಷ್ಟು ಮಹತ್ವ ಇರುವಾಗ ಅದನ್ನು ಮುರಿಯುವುದು ದೊಡ್ಡ ಅಪರಾಧವಾಗುತ್ತದೆ. ಕುಟುಂಬ ಸಂಬಂಧವನ್ನು ಕೆಡಿಸುವುದರಿಂದ ದೇವ ಕೋಪಕ್ಕೆ ಪಾತ್ರರಾಗಬಹುದು. ಮಾಡಿದ ಸತ್ಕರ್ಮಗಳು ನೀರಿನಲ್ಲಿ ಬರೆದಂತಾಗಬಹುದು. ಅಬೂ ಹುರೈರಾ(ರ) ವರದಿ ಮಾಡುತ್ತಾರೆ:
 إِنَّ أَعْمَالَ بَنِي آدَمَ تُعْرَضُ عَلَى اللَّهِ تَبَارَكَ وَتَعَالَى عَشِيَّةَ كُلِّ خَمِيسٍ لَيْلَةَ الْجُمُعَةِ ، فَلا يَقْبَلُ عَمَلَ قَاطِعِ رَحِمٍ 
ಪ್ರವಾದಿಯವರು(ಸ) ಹೇಳಿದರು, “ಮನುಷ್ಯರ ಕರ್ಮಗಳನ್ನು ಎಲ್ಲಾ ಶುಕ್ರವಾರದ ಮುಂಜಾನೆ ಅಲ್ಲಾಹನ ಮುಂದೆ ಪ್ರದರ್ಶಿಸಲಾಗುವುದು. ಆದರೆ ಕುಟುಂಬ ಸಂಬಂಧವನ್ನು ಮುರಿದವನ ಕರ್ಮಗಳನ್ನು ತಿರಸ್ಕರಿಸಲಾಗುವುದು.”
ಅಬ್ದುಲ್ಲಾ ಬಿನ್ ಅಬೀ ಔಫ್(ರ) ಹೇಳುತ್ತಾರೆ: ಒಮ್ಮೆ ನಾವು ಪ್ರವಾದಿಯವರೊಂದಿಗೆ(ಸ) ಕುಳಿತಿದ್ದೆವು. ಆಗ ಪ್ರವಾದಿಯವರು(ಸ) ಹೇಳಿದರು,لَا يُجَالِسُنَا الْعَشِيَّةَ قَاطِعُ رَحِمٍ “ಕುಟುಂಬ ಸಂಬಂಧವನ್ನು ಮುರಿದವರು ಇಂದು ನಮ್ಮೊಂದಿಗೆ ಕುಳಿತುಕೊಳ್ಳಬಾರದು.” ಆಗ ಅಲ್ಲಿಂದ ಓರ್ವರು ಎದ್ದು ಹೊರ ನಡೆದರು. ಅವರ ಮಾತೃ ಸಹೋದರಿ ಹಾಗೂ ಅವರ ಮಧ್ಯೆ ಮನಸ್ತಾಪವಿತ್ತು. ಹಾಗೆ ಅವರು ಅದನ್ನು ಸರಿಪಡಿಸಿ ಮರಳಿದರು. ಆಗ ಪ್ರವಾದಿಯವರು(ಸ) ಹೇಳಿದರು,
 إِنَّ الرَّحْمَةَ لَا تَنْزِلُ عَلَى قَوْمٍ فِيهِمْ قَاطِعُ رَحِمٍ“ಕುಟುಂಬ ಸಂಬಂಧವನ್ನು ಕಡಿದುಕೊಂಡವನು ಇರುವಲ್ಲಿಗೆ ಅಲ್ಲಾಹನ ಕರುಣೆಯು ವರ್ಷಿಸುವು ದಿಲ್ಲ” ಅದೇ ರೀತಿ ಪ್ರಮುಖ ಸಹಾಬಿಯಾದ ಅಬ್ದುಲ್ಲಾ ಬಿನ್ ಮಸ್‍ಊದ್ ಸುಬ್‍ಹಿ ನಮಾಝ್‍ನ ಬಳಿಕ ನಡೆಸುತ್ತಿದ್ದ ಧಾರ್ಮಿಕ ಪ್ರವಚನದ ಬಳಿಕ ಪ್ರಾರ್ಥನೆ ನಡೆಸುವುದಕ್ಕಿಂತ ಮುಂಚೆ ಈ ರೀತಿ ಹೇಳುತ್ತಿದ್ದರು,
  أَنْشُدُ اللَّهَ قَاطِعَ الرَّحِمِ إِمَّا قَامَ عَنَّا ، فَإِنَّا نُرِيدُ أَنْ نَدْعُوَا رَبَّنَا ، وَإِنَّ أَبْوَابَ السَّمَاءِ مُرَتَجَةٌ دُونَ قَاطِعِ الرَّحِمِ“ಅಲ್ಲಾಹನ ಮೇಲೆ ಆಣೆ ಹಾಕಿ ಹೇಳುತ್ತಿದ್ದೇನೆ. ಕುಟುಂಬ ಸಂಬಂಧವನ್ನು ಮುರಿದವರು ಇಲ್ಲಿಂದ ಎದ್ದು ಹೋಗಲಿ. ಯಾಕೆಂದರೆ ನಾವು ಅಲ್ಲಾಹನೊಂದಿಗೆ ಪ್ರಾರ್ಥಿಸಲಿದ್ದೇವೆ. ಕುಟುಂಬ ಸಂಬಂಧವನ್ನು ಮುರಿದವನಿಗೆ ಆಕಾಶದ ಬಾಗಿಲುಗಳು ಮುಚ್ಚಲ್ಪಡುತ್ತವೆ.”
ಇದರಿಂದ ಕುಟುಂಬ ಸಂಬಂಧಕ್ಕೆ ಎಷ್ಟು ಮಹತ್ವ ಇದೆಯೆಂದು ಸ್ಪಷ್ಟವಾಗುತ್ತದೆ. ಆದ್ದರಿಂದ ನಾವು ಕುಟುಂಬ ಸಂಬಂಧಿಗಳೊಂದಿಗೆ ಮಾತು ಬಿಟ್ಟಿದ್ದರೆ ಅದನ್ನು ಮರುಸ್ಥಾಪಿಸಬೇಕಾಗಿದೆ. ಇಲ್ಲದಿದ್ದರೆ ನಾವು ನಿರ್ವಹಿಸುವ ಎಲ್ಲಾ ಸತ್ಕರ್ಮಗಳು ನಿಶ್ಫಲವಾಗುವುದು. ಈ ನಿಟ್ಟಿನಲ್ಲಿ ನಾವು ಕುಟುಂಬ ಸಂಬಂಧದ ಸ್ಥಾಪನೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಅದಕ್ಕೆ ಸರ್ವಶಕ್ತನಾದ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಮಂಗಳವಾರ, ಸೆಪ್ಟೆಂಬರ್ 11, 2012

ಪದಾರ್ಥದಲ್ಲಿ ಕೂದಲು ಸಿಕ್ಕಿದರೆ...


ದಾಂಪತ್ಯದ ಮೂಲ ಘಟಕಗಳು ಪತಿ ಮತ್ತು ಪತ್ನಿಯಾಗಿದ್ದಾರೆ. ದಾಂಪತ್ಯ ಎಂಬ ಗಾಡಿಯು ಸುಸೂತ್ರವಾಗಿ ಮುಂದೆ ಸಾಗಬೇಕಾದರೆ ಪತಿ-ಪತ್ನಿಯರ ಮುಂದೆ ಸಮತೋಲನಾತ್ಮಕ ವರ್ತನೆಗಳು ಅತ್ಯಗತ್ಯವಾಗಿವೆ. ದಾಂಪತ್ಯ ಜೀವನದ ಯಶಸ್ವಿಗಾಗಿ ಕುರ್‍ಆನ್ ಹಾಗೂ ಹದೀಸ್‍ಗಳಲ್ಲಿ ಹಲವಾರು ಸಲಹೆ, ಆಜ್ಞೆಗಳು ಬಂದಿವೆ. ಕಾರಣ ದಾಂಪತ್ಯದಷ್ಟು ಪರಿಶುದ್ಧವೂ ಆನಂದಮಯವೂ ಆದ ಸಂಬಂಧ ಇನ್ನೊಂದಿಲ್ಲ. ಅದು ಸೃಷ್ಟಿಕರ್ತನು ತನ್ನ ಸೃಷ್ಟಿಗಳ ಪೈಕಿ ಶ್ರೇಷ್ಠರಾದ ಮಾನವರಿಗೆ ಮೀಸಲಿರಿಸಿದ ಸೌಭಾಗ್ಯವಾಗಿದೆ.
ಅಬೂ ಸಈದುಲ್ ಕುದ್ರಿ(ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿದರು, “ಓರ್ವ ಪರುಷನು ತನ್ನ ಪತ್ನಿಯನ್ನು ಮತ್ತು ಓರ್ವ ಮಹಿಳೆಯು ಅವಳ ಪತಿಯನ್ನು ಪರಸ್ಪರ ನೋಡಿದರೆ ಅಲ್ಲಾಹನು ಅವರೀರ್ವರನ್ನೂ ಕರುಣೆಯ ದೃಷ್ಟಿಯಿಂದ ನೋಡುತ್ತಾನೆ. ಇನ್ನು, ಅವನು ತನ್ನ ಪತ್ನಿಗೆ ಹಸ್ತಲಾಘವ ಮಾಡಿದರೆ ಅವರು ಮಾಡಿದ ಪಾಪಗಳು ಅವರ ಕೈ ಬೆರಳುಗಳ ಎಡೆಯಿಂದ ಜಾರಿ ಹೋಗುವುದು.” ಕುರ್‍ಆನ್ ಕೂಡಾ ಈ ರೀತಿ ಹೇಳಿದೆ, “ಅವನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ ನೀವು ಅವರ ಬಳಿ ಪ್ರಶಾಂತಿಯನ್ನು ಪಡೆಯುವಂತೆ ಮಾಡಿದುದು ಮತ್ತು ನಿಮ್ಮ ನಡುವೆ ಪ್ರೇಮ ಮತ್ತು ಅನುಕಂಪವನ್ನುಂಟು ಮಾಡಿದುದೂ ಅವನ ನಿದರ್ಶನಗಳಲ್ಲೊಂದಾಗಿದೆ. ನಿಶ್ಚಯವಾಗಿಯೂ ವಿವೇಚಿಸುವವರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.”
ಪತಿ ಮತ್ತು ಪತ್ನಿಯು ಪರಸ್ಪರ ಪೂರಕವಾಗಿ ವರ್ತಿಸಿದರೆ ಮಾತ್ರ ದಾಂಪತ್ಯ ಜೀವನವು ಸುಖಮಯವಾಗುವುದು. ಪತಿಯು ಪತ್ನಿಯೊಂದಿಗೆ ಮತ್ತು ಪತ್ನಿಯು ಪತಿಯೊಂದಿಗೆ ಮನ ಮುದಗೊಳಿಸುವ ವರ್ತನೆಗಳು ತೋರಬೇಕು. ಪತಿಗೆ, ತಾನು ಯಜಮಾನ ಮತ್ತು ಪತ್ನಿಗೆ ತಾನು ಗುಲಾಮಳು ಎಂಬ ಭಾವನೆ ಉಂಟಾಗತೊಡಗಿದರೆ ಆ ದಾಂಪತ್ಯ ಸಂಬಂಧದಲ್ಲಿ ಬಿರುಕು ಕಾಣಿಸತೊಡಗುತ್ತದೆ. ಹಾಗೇ ಮುಂದುವರಿದರೆ ಅದು ದೊಡ್ಡ ಪ್ರಪಾತವಾಗಿ ಪರಸ್ಪರ ಸಂಬಂಧ ಕಡಿದುಹೋಗುತ್ತದೆ.
ಇಂದು ಹಲವು ಪುರುಷರು ತಮ್ಮ ಪತ್ನಿಗೆ `ಪತ್ನಿ’ ಎಂಬ ಸ್ಥಾನವನ್ನು ನೀಡದೆ ಗುಲಾಮಳನ್ನಾಗಿಸಿದ್ದಾರೆ. ಅವಳ ಬೇಕು ಬೇಡಗಳ ಕಡೆಗೆ ಗಮನ ಹರಿಸುತ್ತಿಲ್ಲ. ಪುರುಷರು ಮಹಿಳೆಯರಿಗಿಂತ ಶ್ರೇಷ್ಠರು ಎಂಬ ಒಣ ಜಂಭವು ಪುರುಷರಲ್ಲಿ ತಲೆ ಎತ್ತಿದೆ. ಹಗಲೆಲ್ಲಾ ತಾನು ದುಡಿದು ಬರುವವನಾಗಿದ್ದರಿಂದ ತನ್ನ ಮುಂದೆ ಮನೆ ಮಂದಿ ತಲೆ ಬಾಗಬೇಕು ಎಂದು ಅವರು ಸ್ವತಃ ತೀರ್ಮಾನಿಸಿದ್ದಾರೆ. ಪುರುಷರು ತೋಳ್ಬಲದಲ್ಲೂ ಇತರ ವಿಷಯಗಳಲ್ಲೂ ಮಹಿಳೆಯರಿಗಿಂತ ಶ್ರೇಷ್ಠರು ನಿಜ. ಆದರೆ ಅದು ದಾಂಪತ್ಯ ಜೀವನದಲ್ಲಿ ಗಣನಾರ್ಹವಾದ ವಿಚಾರವಾಗಬಾರದು. ಅಲ್ಲಿ ಸ್ತ್ರೀಯರು ಮತ್ತು ಪುರುಷರು ಸಮಾನವಾಗಿದ್ದಾರೆ. ಒಬ್ಬರಿಗೊಬ್ಬರು ನೆರವಾಗಬೇಕಾದುದು ದಾಂಪತ್ಯ ಸುಖಮಯವಾಗಲಿಕ್ಕಿರುವ ಮಾನದಂಡವಾಗಿದೆ. ಓರ್ವ ಪತ್ನಿಯನ್ನು ಸತಾಯಿಸುವುದು ಪತಿಯಾದವನಿಗೆ ಭೂಷಣವಲ್ಲ.
ಮಹಿಳೆಯರೊಂದಿಗೆ ಗೌರವಾದರದಿಂದ ವರ್ತಿಸಲು ಇಸ್ಲಾಮ್ ಆಜ್ಞಾಪಿಸುತ್ತದೆ. ಮಹಿಳೆಗೆ ಇಸ್ಲಾಮ್ ನೀಡಿದಷ್ಟು ಸ್ಥಾನಮಾನ ಬೇರಾವುದೇ ಧರ್ಮವು ನೀಡಿಲ್ಲ. ಅಲ್ಲಾಹನು ಹೇಳುತ್ತಾನೆ, “ನೀವು ಅವರೊಂದಿಗೆ ಉತ್ತಮ ರೀತಿಯಿಂದ ಜೀವನ ನಡೆಸಿರಿ.“ (ಅನ್ನಿಸಾ: 19) ಪ್ರವಾದಿ(ಸ) ಹಜ್ಜತುಲ್ ವಿದಾಅïನ ಭಾಷಣದಲ್ಲಿ ಮಹಿಳೆಯರ ಕುರಿತು ಹೇಳಲು ಮರೆಯಲಿಲ್ಲ. “ತಿಳಿಯಿರಿ, ಪತ್ನಿಯರೊಂದಿಗೆ ಉತ್ತಮವಾಗಿ ವರ್ತಿಸಲಿಕ್ಕಿರುವ ನನ್ನ ಉಪದೇಶವನ್ನು ನೀವು ಸ್ವೀಕರಿಸಿರಿ. ಅವರು ನಿಮ್ಮೊಂದಿಗಿರುವ ನಿಮ್ಮ ಆಶ್ರಿತರಾಗಿದ್ದಾರೆ. ನಿಮಗೆ ಇತರ ಯಾವುದೇ ಅಧಿಕಾರ ಅವರ ಮೇಲಿಲ್ಲ. ಅರಿಯಿರಿ, ನಿಮಗೆ ಮಹಿಳೆಯರ ಮೇಲೆ ಕೆಲವು ಹಕ್ಕುಗಳಿವೆ. ಹಾಗೆಯೇ ಅವರಿಗೂ ನಿಮ್ಮ ಮೇಲೆ ಕೆಲವು ಹಕ್ಕುಗಳಿವೆ.”
ಒಮ್ಮೆ ಓರ್ವರು ಪ್ರವಾದಿಯವರೊಂದಿಗೆ(ಸ) ಕೇಳಿದರು, “ಅಲ್ಲಾಹನ ಸಂದೇಶವಾಹಕರೇ, ನಮ್ಮ ಪತ್ನಿಯರಿಗೆ ನಮ್ಮಿಂದ ಲಭಿಸಬೇಕಾದ ಹಕ್ಕುಗಳು ಯಾವುವು?” ಆಗ ಪ್ರವಾದಿ(ಸ) ಹೇಳಿದರು, “ನೀನು ತಿನ್ನುವುದಾದರೆ ಅವಳಿಗೂ ತಿನ್ನಿಸಬೇಕು. ನೀನು ಬಟ್ಟೆ ಧರಿಸಿದರೆ ಅವಳಿಗೂ ತೊಡಿಸಬೇಕು. ಮುಖಕ್ಕೆ ಹೊಡೆಯಬಾರದು. ಅಸಭ್ಯ ಮಾತುಗಳಿಂದ ಜರೆಯಬಾರದು. ಅವರೊಂದಿಗೆ ವಿರಸಗೊಳ್ಳುವುದಾದರೆ ಅದು ಮನೆಯ ಒಳಗೆ ಮಾತ್ರವಾಗಿರಬೇಕು.”
ಇಷ್ಟೆಲ್ಲಾ ನಿಯಮ-ನಿರ್ದೇಶನಗಳು ಕಣ್ಮುಂದೆಯೇ ಇರುವಾಗ ಇಂದು ಪತಿಯಂದಿರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಪ್ರವಾದಿಯವರ(ಸ) ಜೀವನ ಚರ್ಯೆಯನ್ನು ಬೇಕಾದ ಕಡೆಗೆ ಮಾತ್ರ ತೆಗೆದುಕೊಳ್ಳುವುದಲ್ಲ. ದಾಂಪತ್ಯ ಜೀವನಕ್ಕೂ ಅದು ಅನ್ವಯವಾಗುತ್ತದೆ. ಪ್ರವಾದಿಎಸಏ ಓರ್ವ ಉತ್ತಮ ಪತಿಯಾಗಿ ತನ್ನ ಜೀವನವನ್ನು ಇತರರಿಗೆ ಕಲಿಸಿಕೊಟ್ಟಿದ್ದಾರೆ. ಅವರು(ಸ) ತನ್ನ ಪತ್ನಿಯರೊಂದಿಗೆ ಉತ್ತಮವಾಗಿ ವರ್ತಿಸುತ್ತಿದ್ದರು. ನೀವೊಬ್ಬ ಉತ್ತಮ ಪತಿಯಾಗಬೇಕಾದರೆ ಅದಕ್ಕಿರುವ ಮಾರ್ಗದರ್ಶನವು ಪ್ರವಾದಿಯವರ(ಸ) ಜೀವನದಲ್ಲಿದೆ. ಪ್ರವಾದಿ (ಸ)  ಹೇಳಿದರು, “ನಿಮ್ಮ ಪೈಕಿ ಶ್ರೇಷ್ಠರು ಯಾರೆಂದರೆ ಪತ್ನಿಯೊಂದಿಗೆ ಉತ್ತಮವಾಗಿ ವರ್ತಿಸುವವರಾಗಿದ್ದಾರೆ. ನಾನು ನನ್ನ ಪತ್ನಿಯರೊಂದಿಗೆ ಅತ್ಯುತ್ತಮವಾಗಿ ವರ್ತಿಸುವವನಾಗಿದ್ದೇನೆ.”
ಪತ್ನಿಯರ ಅವಶ್ಯಕತೆಗಳು, ಬೇಡಿಕೆಗಳು, ಆಗ್ರಹಗಳನ್ನು ಅರಿತು ಅವರ ಮನಸ್ಸಿಗೆ ಮುದ ನೀಡುವ, ಅವರನ್ನು ಸಂತೋಷಪಡಿಸುವ ವಾತಾವರಣವನ್ನು ಪ್ರವಾದಿ(ಸ) ಸೃಷ್ಟಿ ಮಾಡುತ್ತಿದ್ದರು. ಪ್ರವಾದಿ(ಸ) ಪತ್ನಿಯರೊಂದಿಗಿರುವಾಗ ಅವರ ಮಾನಸಿಕ ಸ್ಥಿತಿಗೆ ಪ್ರವಾದಿಯವರೂ ಮರಳುತ್ತಿದ್ದರು. ಪ್ರವಾದಿಯವರ(ಸ) ಉಪಸ್ಥಿತಿಯನ್ನು ಅವರು ಯಾವಾಗಲೂ ಬಯಸುತ್ತಿದ್ದರು. ಹಾಸ್ಯದ ಮಾತುಗಳಿಂದ ಪತ್ನಿಯರನ್ನು ನಗಿಸುತ್ತಿದ್ದರು. ಅನಸ್(ರ) ವರದಿ ಮಾಡುತ್ತಾರೆ, “ಪ್ರವಾದಿ(ಸ) ಜನರ ಪೈಕಿ ಅತೀ ಹೆಚ್ಚು ಹಾಸ್ಯ ಪ್ರಜ್ಞೆ ಇರುವ ವ್ಯಕ್ತಿಯಾಗಿದ್ದರು.”
ಇಂದಿನ ಪತಿಯಂದಿರು ಇದಕ್ಕೆ ನೇರ ವಿರುದ್ಧವಾಗಿದ್ದಾರೆ. ಪತಿಯು ಮನೆಯಲ್ಲಿದ್ದರೆ ಪತ್ನಿಗೆ ಕಿರಿಕಿರಿಯಾಗುತ್ತದೆ. “ಈ ಮನುಷ್ಯ ಒಮ್ಮೆ ಹೊರಗಡೆ ಹೋಗಿದ್ದರೆ” ಎಂದು ಪತ್ನಿಯು ಬಯಸುವ ವಾತಾವರಣವು ಸೃಷ್ಟಿಯಾಗಿದೆ. ಇದು ಸೃಷ್ಟಿಯಾದದ್ದಲ್ಲ. ಪತಿಯರೇ ಸೃಷ್ಟಿ ಮಾಡಿದ್ದು. ಇಂತಹ ಒಂದು ಮನಸ್ಥಿತಿಯು ದಾಂಪತ್ಯದಲ್ಲಿ ಸೃಷ್ಟಿಯಾದರೆ ಆ ದಾಂಪತ್ಯ ಜೀವನಕ್ಕೆ ಉಳಿಗಾಲವಿದೆಯೇ?
ಆಯಿಶಾರೊಂದಿಗೆ(ರ) ಪ್ರವಾದಿ(ಸ) ಹಲವು ವೇಳೆ ಓಟದ ಸ್ಪರ್ಧೆ ನಡೆಸುತ್ತಿದ್ದರು. ಕೆಲವು ವೇಳೆ ಪ್ರವಾದಿಯವರು(ಸ) ವಿಜಯಿಯಾಗುತ್ತಿದ್ದರು. ಇನ್ನು ಕೆಲವು ವೇಳೆ ಆಯಿಶಾರು(ರ). ಆಯಿಶಾ(ರ) ಕೆಲವು ವರ್ಷಗಳ ಬಳಿಕ ಈ ಘಟನೆಯನ್ನೆಲ್ಲಾ ವಿವರಿಸುತ್ತಾ ಈ ರೀತಿ ಬೋಧಿಸಿದ್ದಾರೆ, “ಆದ್ದರಿಂದ ಕೌಮಾರ ಪ್ರಾಯದವರೂ ವಿನೋದ ಪ್ರಿಯರೂ ಆದ ಸ್ತ್ರೀಯರಿಗೆ ಅರ್ಹವಾದದ್ದನ್ನು ನೀವು ನೀಡಬೇಕು.”
ಆಟಗಳಲ್ಲೂ ವಿನೋದಗಳಲ್ಲೂ ಭಾಗವಹಿಸಲು ಪತ್ನಿಯರಿಗೆ ಅನುಮತಿ ನೀಡುವುದು ದಾಂಪತ್ಯದ ಭದ್ರತೆ ಹಾಗೂ ಬಾಂಧವ್ಯವನ್ನು ಉಳಿಸಿಕೊಳ್ಳಲು ಸಹಾಯಕವಾಗಿದೆ. ಉಮರ್(ರ) ಒಮ್ಮೆ ಹೇಳಿದರು, “ಪುರುಷನು ತನ್ನ ಪತ್ನಿ-ಮಕ್ಕಳ ಬಳಿಗೆ ಹೋದರೆ ಒಂದು ಮಗುವಿನಂತೆ ವರ್ತಿಸಲಿ. ಆದರೆ ಅವನ ಬಳಿಯಿರುವ ಪೌರುಷವು ಏನೆಂದು ಅವರು ತಿಳಿಯಬಯಸುವುದಾದರೆ ಅವನು ಓರ್ವ ಪುರುಷನಾಗಿ ಬದಲಾಗಲಿ.”
ಪ್ರವಾದಿ(ಸ) ತನ್ನನ್ನು ವಿಮರ್ಶಿಸುವ ಮತ್ತು ವಿರೋಧಿಸುವ ಸ್ವಾತಂತ್ರ್ಯವನ್ನು ಪತ್ನಿಯರಿಗೆ ನೀಡಿದ್ದರು. ಎಷ್ಟೊಂದು ಉದಾತ್ತ ಮಾದರಿ, ಇಂದು ಈ ಕುರಿತು ಆಲೋಚಿಸಲೂ ಸಾಧ್ಯವಿಲ್ಲ. ಪತ್ನಿಗೆ ಪತಿಯ ಮುಂದೆ ಸ್ವರ ಎತ್ತುವಂತಿಲ್ಲ. ತನ್ನ ತಪ್ಪುಗಳನ್ನು ತಿದ್ದುವಂತಿಲ್ಲ. “ತಾನು ಮಾಡಿದ್ದೇ ಸರಿ, ತಾನು ಹೇಳಿದ್ದೇ ವೇದ” ಎಂಬ ಧೋರಣೆಯು ಹಲವು ಪುರುಷರಲ್ಲಿ ತಲೆ ಎತ್ತಿದೆ. ಸ್ವಂತ ತೀರ್ಮಾನ ಕೈಗೊಂಡರೆ ಅದನ್ನು ಅನುಸರಿಸಲು ಪತ್ನಿಯರಿಗೆ ನಿರ್ಬಂಧಿಸಲಾಗುತ್ತದೆ. ಪ್ರತಿಯೊಬ್ಬರಿಗೂ ಒಂದೊಂದು ಆಯ್ಕೆಗಳಿರುತ್ತವೆ. ಎಲ್ಲರ ಮನಸ್ಸೂ ಒಂದೇ ತೆರನಾಗಿರುವುದಿಲ್ಲ. ಹಾಗಿರುವಾಗ ಪುರುಷನ ತೀರ್ಮಾನಗಳನ್ನು ಬಲಾತ್ಕಾರವಾಗಿ ಪತ್ನಿಯ ಮೇಲೆ ಜಪಹೊರಿಸುವುದು ಎಷ್ಟರ ಮಟ್ಟಿಗೆ ಸರಿ. ಪತ್ನಿಗೂ ಒಂದು ಮನಸ್ಸಿದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಬೇಕು.
ಒಮ್ಮೆ ಆಯಿಶಾರ(ರ) ಮತ್ತು ಪ್ರವಾದಿಯವರ(ಸ) ಮಧ್ಯೆ ಯಾವುದೋ ಒಂದು ವಿಚಾರದಲ್ಲಿ ವಿರಸ ಉಂಟಾಯಿತು. ಆಗ ಆಯಿಶಾ(ರ) ಹೇಳಿದರು, “ಅಲ್ಲಾಹನ ಪ್ರವಾದಿ ಎಂದು ವಾದಿಸುವ ವ್ಯಕ್ತಿ ನೀವಾ?” ಈ ತರದ ಒಂದು ಪ್ರಶ್ನೆ ಇಂದಿನ ಪತಿಯರಲ್ಲಿ ಕೇಳಿದ್ದರೆ ಅಲ್ಲಿನ ವಾತಾವರಣವೇ ಯುದ್ಧಮಯವಾಗುತ್ತಿತ್ತು. ಆದರೆ ಪ್ರವಾದಿ(ಸ) ಕೇವಲ ಒಂದು ಮುಗುಳ್ನಗೆ ಮಾತ್ರ ಬೀರಿದ್ದರು.
ನಾವು ಕ್ಷುಲ್ಲಕವೆಂದು ಭಾವಿಸುವ ಹಲವಾರು ವಿಚಾರಗಳಿಗೆ ದಾಂಪತ್ಯದಲ್ಲಿ ಮಹತ್ವವಿದೆ. ಪ್ರೀತಿಯಿಂದ ಕೂಡಿದ ಕುಡಿನೋಟ, ಕನಿಕರದಿಂದ ತಲೆ ಸವರುವುದು, ಮನಸ್ಸು ಪುಳಕಗೊಳ್ಳುವಂತಹ ಮಾತುಗಳು ಮೊದಲಾದವುಗಳೆಲ್ಲಾ ದಾಂಪತ್ಯ ಜೀವನದಲ್ಲಿ ಪ್ರಭಾವ ಬೀರುವವುಗಳಾಗಿವೆ. ಒಂದು ನೋಟ, ಒಂದು ಸ್ಪರ್ಶ, ಒಂದು ಉತ್ತಮ ಮಾತು ಇವುಗಳ ಕೊರತೆಯು ಕೆಲವು ವೇಳೆ ಸಮಸ್ಯೆಯ ಸೃಷ್ಟಿಗೆ ಕಾರಣವಾಗಿರಬಹುದು. ಒಂದು ಮಂದಹಾಸವು ಎಲ್ಲಾ ಸಮಸ್ಯೆಗಳನ್ನು ಮರೆಯುವಂತೆ ಮಾಡುವ ಶಕ್ತಿ ಹೊಂದಿದೆ. ಪತಿ-ಪತ್ನಿಯರ ನಡುವಿನ ನೋಟವು ಅಲ್ಲಾಹನ ಕರುಣೆಯ ಭಾಗವಾಗಿ ಪ್ರವಾದಿ(ಸ) ಬಣ್ಣಿಸಿದ್ದಾರೆ. ಆದ್ದರಿಂದ ದಾಂಪತ್ಯದ ಯಶಸ್ವಿಯು ನಮ್ಮ ಕೈಯಲ್ಲೇ ಇದೆ. ಅದನ್ನು ನಾವೇ ಪಡೆದುಕೊಳ್ಳಬೇಕಾಗಿದೆ. “ಪದಾರ್ಥದಲ್ಲಿ ಕೂದಲು” ಸಿಕ್ಕಿದರೆ ಅಂತಹ ಕ್ಷುಲ್ಲಕ ವಿಚಾರಗಳು ದಾಂಪತ್ಯ ಛಿದ್ರಗೊಳ್ಳುವುದಕ್ಕೆ ಕಾರಣವಾಗದಿರಲಿ. ದಾಂಪತ್ಯದಲ್ಲಿನ ಯಶಸ್ವಿಯೇ ಇಹಪರಗಳ ವಿಜಯವಾಗಿದೆ.

ಸೋಮವಾರ, ಸೆಪ್ಟೆಂಬರ್ 03, 2012

ಅನುಗ್ರಹಗಳಿಗೆ ಕೃತಘ್ನರಾಗುತ್ತೀರಾ?


 ಅಲ್ಲಾಹನು ನಮಗೆ ಲೆಕ್ಕವಿಲ್ಲದಷ್ಟು ಅನುಗ್ರಹಗಳನ್ನು ದಯಪಾಲಿಸಿದ್ದಾನೆ. ಲೋಕದ ವೈಭವವನ್ನು ನೋಡಲು ಕಣ್ಣುಗಳು, ಶಬ್ದ ತರಂಗಗಳನ್ನು ಆಲಿಸಲು ಕಿವಿಗಳು, ಜನರ ಮಧ್ಯೆ ಪರಸ್ಪರ ವಿಚಾರ ವಿನಿಮಯ ನಡೆಸಲು ನಾಲಗೆ, ವಸ್ತುಗಳನ್ನು ಹಿಡಿದುಕೊಳ್ಳಲು ಕೈಗಳು, ನಡೆದಾಡಲು ಕಾಲುಗಳು, ಆಲೋಚಿಸಲು ಬುದ್ಧಿ ಶಕ್ತಿ ಇವೆಲ್ಲವೂ ಅಲ್ಲಾಹನ ಅಪಾರ ಅನುಗ್ರಹಗಳ ಪೈಕಿ ಕೆಲವೊಂದಾಗಿವೆ. ಇವ್ಯಾವುದೂ ಕ್ಷುಲ್ಲಕ ವಿಚಾರಗಳಲ್ಲ. ಅಲ್ಲಾಹನು ನೀಡಿರುವ ಅನುಗ್ರಹಗಳನ್ನು ಎಣಿಸಲು ಅದು ನಿಮ್ಮಿಂದ ಸಾಧ್ಯವಿಲ್ಲ. ಇದು ಅಲ್ಲಾಹನೇ ಸ್ವತಃ ತಿಳಿಸಿರುವ ವಿಚಾರವಾಗಿದೆ. ಅಲ್ಲಾಹನು ನೀಡಿರುವ ಅನುಗ್ರಹಗಳನ್ನು ಅವನ ಆಜ್ಞೆ, ಆದೇಶಗಳನುಸಾರ ಬಳಸಿದರೆ ಅವು ಅನುಗ್ರಹವಾಗಿ ಉಳಿಯುತ್ತವೆ. ಬದಲಾಗಿ ಆ ಅನುಗ್ರಹಗಳನ್ನು ಸ್ವೇಚ್ಛೆಯಂತೆ ಅಲ್ಲಾಹನ ನಿಯಮಗಳನ್ನು ಉಲ್ಲಂಘಿಸಿ ಬಳಸಿದರೆ ಅದು ನಮ್ಮ ಪಾಲಿಗೆ ಪರೀಕ್ಷೆಯಾಗಿ ಬದಲಾಗುತ್ತವೆ.
ನಮಗೆ ಲಭಿಸುವ ಪ್ರತಿಯೊಂದು ಅನುಗ್ರಹದ ಕುರಿತು ನಾವು ನಾಳೆ ಪರಲೋಕದಲ್ಲಿ ಪ್ರಶ್ನಿಸಲ್ಪಡಲಿದ್ದೇವೆ. ಅನುಗ್ರಹಗಳ ಕುರಿತ ಪ್ರಶ್ನೆಗಳನ್ನು ಎದುರಿಸದೆ ಯಾರು ಕೂಡಾ ಒಂದಡಿ ಮುಂದೆ ಸಾಗಲಿಕ್ಕಿಲ್ಲ. ಭೂಮಿಯಲ್ಲಿ ಲಭಿಸಿದ ಅನುಗ್ರಹಗಳನ್ನು ಅಲ್ಲಾಹನ ಇಚ್ಛೆಗನುಸಾರವಾಗಿ ಬಳಸಿಕೊಂಡವನು ತನ್ನ ವಿಚಾರಣೆಯಲ್ಲಿ ಯಶಸ್ವಿಯಾಗುವನು ಇನ್ನು ಅದನ್ನು ಒಂದು ಪರೀಕ್ಷೆಯಾಗಿ ಪರಿವರ್ತಿಸಿದವನು ಹಲವು ಸಂಕಷ್ಟಗಳನ್ನು ಎದುರಿಸಬೇಕಾದೀತು. ಪ್ರವಾದಿಯವರು(ಸ) ಪ್ರತೀ ಸಂದರ್ಭಗಳಲ್ಲೂ ಅಲ್ಲಾಹನ ಅನುಗ್ರಹಗಳನ್ನು ಬಳಸುವಾಗ ಅವರಲ್ಲಿ ನಾಳೆ ಪರಲೋಕದಲ್ಲಿ ಈ ಅನುಗ್ರಹಗಳಿಗೆ ಸೂಕ್ತ ಉತ್ತರ ನೀಡಲಿಕ್ಕಿದೆ ಎಂಬ ಪ್ರಜ್ಞೆಯು ಜಾಗೃತವಾಗುತ್ತಿತ್ತು. ಅವರು ತಮ್ಮ ಅನುಯಾಯಿಗಳಿಗೂ ಅದೇ ಶಿಕ್ಷಣ ನೀಡಿದ್ದರು. ಆದರೆ ನಮ್ಮಲ್ಲಿ ಇಂದು ಅಂತಹ ಪ್ರಜ್ಞೆ ಅಸ್ತಂಗತವಾಗಿದೆ. ದಿನನಿತ್ಯ ಹಲವಾರು ಅನುಗ್ರಹಗಳನ್ನು ಬೇಕಾಬಿಟ್ಟಿಯಾಗಿ ನಾವು ಬಳಸುತ್ತಿದ್ದರೂ ನಾಳೆ ಅದಕ್ಕೆಲ್ಲಾ ಉತ್ತರಿಸಲಿಕ್ಕಿದೆ ಎಂಬ ಪ್ರಜ್ಞೆ ನಮ್ಮಲ್ಲಿ ಎಂದಾದರೂ ಮೂಡಿದೆಯೇ?
ಆರೋಗ್ಯವು ಅತ್ಯಂತ ಶ್ರೇಷ್ಠ ಅನುಗ್ರಹವಾಗಿದೆ. ಅವಯವಗಳ ರಚನೆ, ಜ್ಞಾನೇಂದ್ರಿಯಗಳ ವ್ಯವಸ್ಥೆಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಅನುಗ್ರಹಗಳನ್ನು ಋಜುಮಾರ್ಗದಲ್ಲಿ ವಿನಿಯೋಗಿಸಿ ಅದನ್ನು ನೀಡಿದಾತನಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಂದಿ ಈ ಎರಡು ಅನುಗ್ರಹಗಳಿಂದ ವಂಚಿತರಾಗಿರುತ್ತಾರೆ ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಅವುಗಳ ಪೈಕಿ ಒಂದು ಆರೋಗ್ಯವಾಗಿದೆ.
ಅಲ್ಲಾಹನು ಹಲವರಿಗೆ ಉತ್ತಮ ಆರೋಗ್ಯವನ್ನು ದಯಪಾಲಿಸಿದ್ದರೂ ಅವರು ಹಲವು ಚಟಗಳನ್ನು ಮೈಗೂಡಿಸಿ ತಮ್ಮ ಆರೋಗ್ಯವನ್ನು ಹಾಳುಗೆಡಹುತ್ತಿದ್ದಾರೆ. ಮದ್ಯಪಾನ, ಮಾದಕ ವಸ್ತುಗಳ ಸೇವನೆಯಿಂದ ತಮ್ಮ ಉತ್ತಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ. ಕ್ಷಣಿಕ ಸುಖದ ಲಾಲಸೆಗಾಗಿ ಮಹಾ ಅನುಗ್ರಹವೊಂದನ್ನು ಕೈಚೆಲ್ಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸೃಷ್ಟಿಕರ್ತನ ಕುರಿತು ಜ್ಞಾನದ ಕೊರತೆಯಾಗಿದೆ. ನಾಳೆ ಅಲ್ಲಾಹನ ಮುಂದೆ ಆರೋಗ್ಯವೆಂಬ ಅನುಗ್ರಹದ ಕುರಿತು ವರದಿ ಒಪ್ಪಿಸಲಿಕ್ಕಿದೆ ಎಂಬ ಪ್ರಜ್ಞೆಯು ಮನಸ್ಸಲ್ಲಿದ್ದರೆ ಅವರು ಆರೋಗ್ಯವನ್ನು ದೇವ ಮಾರ್ಗಕ್ಕಾಗಿಯೇ ಮುಡಿಪಾಗಿರಿಸುತ್ತಿದ್ದರು.
ನಮಗೆ ಲಭಿಸಿರುವ ಆರೋಗ್ಯದ ಬೆಲೆ ತಿಳಿಯಬೇಕಾದರೆ ರೋಗ ಪೀಡಿತರನ್ನು ಸಂದರ್ಶಿಸಬೇಕು. ಕಣ್ಣಿನ ಬೆಲೆ ತಿಳಿಯಬೇಕಾದರೆ ಕುರುಡನ ಪರದಾಟನ್ನು ನೋಡಿದರೆ ಸಾಕು. ಬುದ್ಧಿಶಕ್ತಿಯ ಬೆಲೆ ಅರಿಯಬೇಕಾದರೆ ಬುದ್ಧಿಮಾಂದ್ಯನ ವರ್ತನೆಗಳನ್ನು ಗಮನಿಸಿದರೆ ಮನದಟ್ಟಾಗುತ್ತದೆ. ನಗರದ ಆಸ್ಪತ್ರೆಗಳಿಗೆ ನೀವು ಒಮ್ಮೆ ಭೇಟಿ ನೀಡಿದರೆ, ಅಲ್ಲಾಹನು ನಮಗೆ ದಯಪಾಲಿಸಿರುವ ಈ ಆರೋಗ್ಯದ ಮೌಲ್ಯವು ಹಗಲಿನಂತೆ ವ್ಯಕ್ಯವಾಗುವುದು. ಕ್ಯಾನ್ಸರ್‍ನಂತಹ ಮಾರಕ ರೋಗಗಳಿಂದ ಬಳಲುತ್ತಿರುವವರು, ಪ್ರಾರ್ಥಮಿಕ ಆವಶ್ಯಕತೆಗಳ ಪೂರೈಕೆಗಾಗಿ ಇತರರನ್ನು ಆಶ್ರಯಿಸುವವರು, ಎದ್ದು ಸರಿಯಾಗಿ ನಡೆದಾಡಲಾಗದವರು, ನಿದ್ದೆಯಿಲ್ಲದೆ ರಾತ್ರಿಯಿಡಿ ಹಾಸಿಗೆಯಲ್ಲಿ ಹೊರಳಾಡುವವರು, ಮಾನಸಿಕ ರೋಗಗಳಿಂದ ನರಳುವವರು ಮೊದಲಾದವರೆಲ್ಲರೂ ನಮ್ಮ ಆರೋಗ್ಯದ ಬೆಲೆಯನ್ನು ನಮಗೆ ನೆನಪಿಸುತ್ತಿದ್ದಾರೆ.
ನಮ್ಮಲ್ಲಿರುವ ಸಂಪತ್ತು, ಪದವಿ, ಅಧಿಕಾರಗಳು ಆರೋಗ್ಯದ ಮುಂದೆ ಕ್ಷುಲ್ಲಕ ವಸ್ತುಗಳಾಗಿವೆ. ಅನಾರೋಗ್ಯ ಪೀಡಿತರಾದಾಗ ಇದು ಹೆಚ್ಚು ಖಾತ್ರಿಯಾಗುತ್ತದೆ. ಸಂಪತ್ತು, ಅಧಿಕಾರದ ಮೂಲಕ ದರ್ಪ ಪ್ರದರ್ಶಿಸಿದವರು ಕೊನೆಗೆ ತಮ್ಮ ಅನಾರೋಗ್ಯದ ಚಿಕಿತ್ಸೆಗಾಗಿ ತಮ್ಮ ಸಂಪತ್ತನ್ನೆಲ್ಲಾ ವ್ಯಯಿಸಿ ದಿವಾಳಿಯಾದವರು ಹಲವರಿದ್ದಾರೆ. ಆರೋಗ್ಯವಿದೆ ಎಂಬ ಹುಂಬ ಧೈರ್ಯದಿಂದ ಸಂಪತ್ತು, ಅಧಿಕಾರದಿಂದ ಅಹಂಕಾರಿಗಳಾದವರು ಆರೋಗ್ಯವನ್ನೇ ಕಳಕೊಂಡಾಗ ಪಶ್ಚಾತ್ತಾಪ ಪಡುತ್ತಾರೆ. ಆರೋಗ್ಯದ ಮರಳಿಕೆಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ.
ಅಬ್ಬಾಸಿ ಖಲೀಫರಾದ ಹಾರೂನ್ ರಶೀದ್ ಒಮ್ಮೆ ಇಬ್ನು ಸಮಾಕ್ ಎಂಬ ವಿದ್ವಾಂಸರೊಂದಿಗೆ, “ನನಗೆ ಉಪದೇಶ ಮಾಡಿರಿ” ಎಂದು ಭಿನ್ನವಿರಿಸಿಕೊಂಡರು. ಆ ಸಂದರ್ಭದಲ್ಲಿ ಖಲೀಫರಿಗೆ ಕುಡಿಯಲಿಕ್ಕಾಗಿ ಸ್ವಲ್ಪ ನೀರು ತಂದಿಟ್ಟಿದ್ದರು. ಇಬ್ನು ಸಮಾಕ್ ಹೇಳಿದರು. “ಓ ಅವಿೂರುಲ್ ಮುಅïಮಿನೀನ್ ನಿಮಗೆ ಈ ನೀರನ್ನು ಕುಡಿಯಲು ಅಸಾಧ್ಯವಾದಂತಹ ಸ್ಥಿತಿ ಬಂದೊದಗಿದರೆ ತಮ್ಮ ಅಧಿಕಾರವನ್ನೆಲ್ಲಾ ಅದರ ಚಿಕಿತ್ಸೆಗಾಗಿ ವ್ಯಯಿಸಲಿಕ್ಕಿಲ್ಲವೇ?” ಖಲೀಫ ಹೌದೆಂದು ಉತ್ತರಿಸಿದರು. “ಇನ್ನು ಅದನ್ನು ಸೇವಿಸಿದ ಬಳಿಕ ಅದು ಹೊರ ಹೋಗದಿದ್ದರೆ ಆಗಲೂ ತಾವು ತಮ್ಮ ಅಧಿಕಾರವನ್ನೆಲ್ಲಾ ವಿನಿಯೋಗಿಸಲಿಕ್ಕಿಲ್ಲವೇ?” ಆಗಲೂ ಹೌದೆಂದು ಖಲೀಫರು ಉತ್ತರಿಸಿದರು. ಆಗ ಇಬ್ನು ಸಮಾಕ್ ಹೇಳಿದರು, “ನೀರು ಸೇವಿಸಲು ಮತ್ತು ಅದನ್ನು ವಿಸರ್ಜಿಸಲು ಅಸಾಧ್ಯವಾದುದಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲದ ನಿಮ್ಮ ಅಧಿಕಾರದ ಬೆಲೆಯಾದರೂ ಏನು?” ಇಲ್ಲಿ ರಾಷ್ಟ್ರ ಹಾಗೂ ಅಧಿಕಾರಕ್ಕಿಂತ ಹೆಚ್ಚಿನ ಬೆಲೆ ಆರೋಗ್ಯಕ್ಕಿದೆ ಎಂದು ಉಪದೇಶಿಸಲಾಗಿದೆ.
ನಾವು ಆರೋಗ್ಯವಂತರಾಗಿದ್ದರಿಂದ ನಮಗೆ ಆರೋಗ್ಯದ ಬೆಲೆ ತಿಳಿಯುತ್ತಿಲ್ಲ. ಅದರ ಮಹತ್ವವನ್ನು ಅರ್ಥಮಾಡಿಕೊಳ್ಳಲು ಯಾರೂ ಪ್ರಯತ್ನಿಸುತ್ತಿಲ್ಲ. ಒಂದು ವಸ್ತುವು ನಮ್ಮಲ್ಲಿರುವಾಗ ನಮಗೆ ಅದರ ಬೆಲೆ ತಿಳಿಯುವುದಿಲ್ಲ. ಅದು ಕಳೆದು ಹೋದಾಗ ಮಾತ್ರ ನಮಗೆ ಅದರ ಮೌಲ್ಯ ತಿಳಿಯುತ್ತದೆ. ಬಳಿಕ ಪಶ್ಚಾತ್ತಾಪಪಟ್ಟರೂ ಏನೂ ಪ್ರಯೋಜನವಾಗುವುದಿಲ್ಲ. ನಾಳೆ ಅನುಗ್ರಹದ ವಿಚಾರಣೆಯ ಕುರಿತು ಯಾರೂ ಸಂಶಯ ಪಡಬೇಕಾಗಿಲ್ಲ. ಅದು ನಡೆದೇ ತೀರುವುದು.
ಪ್ರವಾದಿಯವರು(ಸ) ಹೇಳಿದರು, “ನನ್ನ ಆತ್ಮ ಯಾರ ಕೈಯಲ್ಲಿದೆಯೋ, ಅವನಾಣೆ! ನಿಶ್ಚಯವಾಗಿಯೂ ಅಂತ್ಯದಿನದಲ್ಲಿ ಸತ್ಕರ್ಮಗಳೊಂದಿಗೆ ಓರ್ವನು ಬರುವನು. ಅವುಗಳನ್ನು ಒಂದು ಪರ್ವತದ ಮೇಲಿಟ್ಟರೆ ಆ ಪವರ್ತವು ಭಾರದಿಂದ ಕುಸಿಯುವುದು. ಆಗ ಅಲ್ಲಾಹನ ಅನುಗ್ರಹಗಳ ಪೈಕಿ ಒಂದು ಅನುಗ್ರಹವು ಎದ್ದು ನಿಲ್ಲುತ್ತದೆ. ಅಲ್ಲಾಹನ ಅನುಗ್ರಹವು ಅವನನ್ನು ಆವರಿಸದಿರುತ್ತಿದ್ದರೆ ಅದು ಅವನ ಸತ್ಕರ್ಮಗಳೆಲ್ಲವನ್ನು ನಾಶಪಡಿಸುತ್ತಿತ್ತು.” (ತ್ವಬ್ರಾನಿ)
ಇಸ್ಲಾಮ್ ಜೀವನವನ್ನೇ ಒಂದು ಒಂದು ಅನುಗ್ರಹವಾಗಿ ಕಾಣುತ್ತದೆ. ನಮಗೆ ನೀಡಲಾಗಿರುವ ಮನೆ, ರಾತ್ರಿ-ಹಗಲುಗಳ ಸೃಷ್ಟಿ, ಸಂಚಾರ ಸೌಕರ್ಯ ಇವೆಲ್ಲವೂ ಅಲ್ಲಾಹನ ಅನುಗ್ರಹಗಳ ಸಾಲಿಗೆ ಸೇರಿವೆ. ಇವುಗಳಿಗೆಲ್ಲಾ ಕೃತಜ್ಞತೆ ಸಲ್ಲಿಸಲು ಅಲ್ಲಾಹನು ಹೇಳಿದ್ದಾನೆ. ಶ್ರೇಷ್ಠವಾದ ಈ ಜೀವನವು ಅಲ್ಲಾಹನ ವತಿಯಿಂದಿರುವ ಮಹಾ ಸೌಭಾಗ್ಯವಾಗಿದೆ. ಆದ್ದರಿಂದ ಅಲ್ಲಾಹನ ಹಕ್ಕುಗಳನ್ನು ಪೂರೈಸಬೇಕಾದುದೂ ಅತ್ಯಗತ್ಯವಾಗಿದೆ. ಅಲ್ಲಾಹನು ಹೇಳುತ್ತಾನೆ, “ನೀವು ಅಲ್ಲಾಹನನ್ನು ಹೇಗೆ ನಿರಾಕರಿಸುತ್ತೀರಿ? ನೀವಾದರೋ ನಿರ್ಜೀವಿಗಳಾಗಿದ್ದಿರಿ. ಅವನು ನಿಮಗೆ ಜೀವವಿತ್ತನು. ಇನ್ನು ಅವನೇ ನಿಮ್ಮ ಪ್ರಾಣ ತೆಗೆಯುವನು ಮತ್ತು ಅವನೇ ನಿಮಗೆ ಪುನರ್ಜೀವನ ನೀಡುವನು. ತರುವಾಯ ನಿಮಗೆ ಆತನೆಡೆಗೇ ಮರಳಿ ಹೋಗಬೇಕಾಗಿದೆ.”
ಅಲ್ಲಾಹನ ಅನುಗ್ರಹಗಳನ್ನು ಗುರುತಿಸಲಿಕ್ಕಾಗಿ ಅವನು ನಮಗೆ ಪಂಚೇಂದ್ರಿಯಗಳನ್ನು ನೀಡಿದ್ದಾನೆ. ಈ ಮೂಲಕ ನಾವು ಜಗದ ಸೌಂದರ್ಯವನ್ನು ಸವಿಯುತ್ತೇವೆ. ಜೀವನದ ಎಲ್ಲಾ ರಂಗಗಳಲ್ಲೂ ಅದು ವ್ಯಾಪಿಸುವಾಗ ಅದನ್ನು ನೀಡಿದಾತನಿಗೆ ನಾವು ಕೃತಜ್ಞರಾಗಬೇಕಾಗಿದೆ. ಅಲ್ಲಾಹನು ಅನ್ನಹ್ಲ್ ಅಧ್ಯಾಯದ 78ನೇ ಸೂಕ್ತದಲ್ಲಿ ಹೇಳುತ್ತಾನೆ, “ಅಲ್ಲಾಹನು ನೀವು ಏನೂ ಅರಿಯದ ಸ್ಥಿತಿಯಲ್ಲಿ ನಿಮ್ಮನ್ನು ನಿಮ್ಮ ತಾಯಂದಿರ ಹೊಟ್ಟೆಗಳಿಂದ ಹೊರ ತಂದನು. ನೀವು ಕೃತಜ್ಞರಾಗಲಿಕ್ಕಾಗಿ ಅವನು ನಿಮಗೆ ಶ್ರವಣ ಶಕ್ತಿಯನ್ನೂ ದೃಷ್ಟಿಗಳನ್ನೂ ವಿಚಾರ ಮಾಡುವ ಮನಸ್ಸುಗಳನ್ನೂ ನೀಡಿದನು.”
ಆದ್ದರಿಂದ ಅನುಗ್ರಹಗಳನ್ನು ನೀಡಿದಾತನ ಆರಾಧನೆಯು ನಮ್ಮ ನಿಮ್ಮೆಲ್ಲರ ಕಡ್ಡಾಯ ಕರ್ತವ್ಯವಾಗಿದೆ. ಇಷ್ಟೆಲ್ಲಾ ಅನುಗ್ರಹಗಳನ್ನು ಅಲ್ಲಾಹನು ನೀಡಿದ್ದರೂ ಅವನಿಗೆ ಕೃತಜ್ಞತೆ ಸಲ್ಲಿಸುವಲ್ಲಿ ನಾವು ಜಿಪುಣರಾಗುತ್ತಿದ್ದೇವೆ ಅಥವಾ ಆ ಕಡೆಗೆ ಗಮನಹರಿಸುತ್ತಿಲ್ಲ. ನಾಳೆ ಅಲ್ಲಾಹನು ಅನುಗ್ರಹಗಳ ಕುರಿತು ವಿಚಾರಿಸುವಾಗ ಸಮರ್ಪಕ ಉತ್ತರ ನೀಡಲು ನಮಗೆ ಸಾಧ್ಯವಾಗಬೇಕು. ಅವುಗಳನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸುವವರ ಪಟ್ಟಿಯಲ್ಲಿ ಸೇರಲು ನಮಗೆ ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ನಾವು ಸಾಧ್ಯವಾದಷ್ಟು ಪ್ರಯತ್ನ ನಡೆಸಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.