ಸೋಮವಾರ, ಅಕ್ಟೋಬರ್ 29, 2012

ವಿಶ್ವಾಸಾರ್ಹರಾಗಿ, ಘಾತುಕರಾಗಬೇಡಿ


ಅಮಾನತ್ ಎಂಬುದು ನಾವು ಸಾಮಾನ್ಯವಾಗಿ ಕೇಳುವ ಪದವಾಗಿದೆ. ಈ ಪದಕ್ಕೆ ವಿಶಾಲವಾದ ಅರ್ಥಗಳಿವೆ. ವಿಶ್ವಾಸಾರ್ಹತೆ, ಸತ್ಯಸಂಧತೆ ಎಂಬುದೆಲ್ಲಾ ಅಮಾನತ್‍ನ ಭಾಷಾರ್ಥವಾಗಿದೆ. ಓರ್ವನು ಇನ್ನೋರ್ವನ ಮೇಲೆ ವಿಶ್ವಾಸವಿರಿಸಿ ಆತನಿಗೆ ವಹಿಸಿಕೊಡಲಾಗುವ ಎಲ್ಲಾ ಹೊಣೆಗಾರಿಕೆಗಳನ್ನು ಅಮಾನತ್ ಎನ್ನುತ್ತಾರೆ. ಅದು ಕರಾರನ್ನು ಈಡೇರಿಸುವುದು, ಸಾಮೂಹಿಕ ಸಂಧಾನ ಮಾಡಿಸುವುದು, ಸಮಾಜದ ರಹಸ್ಯ ಪಾಲನೆ ಮಾಡುವುದು, ವೈಯಕ್ತಿಕ ಅಥವಾ ಸಾಮೂಹಿಕ ಸೊತ್ತಿನ ಮೇಲ್ನೋಟ ವಹಿಸುವುದು, ಯಾವುದೇ ಪದವಿ ಅಥವಾ ಹುದ್ದೆಯನ್ನು ಸ್ವೀಕರಿಸುವುದು ಮುಂತಾದ ವ್ಯಕ್ತಿಯ ಮೇಲಿನ ಭರವಸೆಯೊಂದಿಗೆ ಸಮಾಜ ಅವನಿಗೆ ನೀಡುವಂತಹ ಯಾವುದೇ ಹೊಣೆಗಾರಿಕೆಯಾಗಿರಬಹುದು. ಅಲ್ಲಾಹನು ಹೇಳುತ್ತಾನೆ, “ಓ ಸತ್ಯವಿಶ್ವಾಸಿಗಳೇ, ತಿಳುವಳಿಕೆ ಇದ್ದೂ ಅಲ್ಲಾಹ್ ಮತ್ತು ರಸೂಲರೊಂದಿಗೆ ವಿಶ್ವಾಸಘಾತುಕವೆಸಗಬೇಡಿರಿ ಮತ್ತು ಅಮಾನತ್(ವಿಶ್ವಸ್ಥ ನಿಧಿ)ಗಳಲ್ಲಿ ವಿದ್ರೋಹವೆಸಗಬೇಡಿ.” (ಅಲ್ ಅನ್‍ಫಾಲ್: 27)
ಅಮಾನತ್ತನ್ನು ಕಾಪಾಡುವುದು ಪ್ರತಿಯೋರ್ವ ವಿಶ್ವಾಸಿಯ ಕರ್ತವ್ಯವಾಗಿದೆ. ಅದನ್ನು ಕಾಪಾಡಲು ಹೇಳಿದವನಿಗೆ ವಿದ್ರೋಹವೆಸಗುವುದು ಸತ್ಯವಿಶ್ವಾಸಿಗಳ ಲಕ್ಷಣವಲ್ಲ. ಅದು ಕಪಟವಿಶ್ವಾಸಿಯ ಸ್ವಭಾವವಾಗಿದೆ. ಕಪಟ ವಿಶ್ವಾಸಿಗಳ ಗುಣಗಳ ಪೈಕಿ ಅಮಾನತಿನಲ್ಲಿ ವಂಚನೆ ನಡೆಸುವುದು ಒಂದಾಗಿದೆ.
ಹುದೈಫ(ರ) ವರದಿ ಮಾಡಿದ್ದಾರೆ: ಪ್ರವಾದಿಯವರು(ಸ) ನಮ್ಮೊಂದಿಗೆ ಹೇಳಿದರು, “ವಿಶ್ವಾಸಾರ್ಹತೆ (ಅಮಾನತ್) ಮನುಷ್ಯರ ಹೃದಯಗಳ ಕೆಳಸ್ತರದಲ್ಲಿರುವುದಾಗಿದೆ.” ಬಳಿಕ ಕುರ್‍ಆನ್ ಅವತೀರ್ಣಗೊಂಡಾಗ ಜನರು ಕುರ್‍ಆನಿನಿಂದಲೂ ಹದೀಸ್‍ಗಳಿಂದಲೂ ಅದನ್ನು ಕಲಿತರು. ಮುಂದುವರಿದು ಪ್ರವಾದಿಯವರು(ಸ) ವಿಶ್ವಾಸಾರ್ಹತೆ ಇಲ್ಲವಾಗುವುದರ ಕುರಿತು ಹೇಳಿದರು. “ಓರ್ವ ವ್ಯಕ್ತಿ ನಿದ್ರಿಸುತ್ತಿರುವಾಗ ಅವನ ಹೃದಯದಿಂದ ವಿಶ್ವಾಸಾರ್ಹತೆಯನ್ನು ನೀಗಿಸಲಾಗುವುದು. ಬಳಿಕ ಅಲ್ಲಿ ಬೆಂಕಿ ತಾಗಿದಾಗ ಉಂಟಾಗುವಂತೆ ಸಣ್ಣ ಕಲೆ ಮಾತ್ರ ಅಲ್ಲಿ ಉಳಿದಿರುತ್ತದೆ. ಅವನು ಮತ್ತೆ ನಿದ್ರಿಸುವಾಗ ಉಳಿದ ಅಮಾನತ್ ಕೂಡಾ ನಷ್ಟವಾಗುವುದು. ಬಳಿಕ ಕೆಂಡ ತಾಗಿದಾಗ ಉಂಟಾಗುವ ಗುಳ್ಳೆಯಂತೆ ಒಂದು ಗುರುತು ಮಾತ್ರ ಉಳಿದಿರುತ್ತದೆ. ಅದು ತುಂಬಿರುವಂತೆ ತೋರುತ್ತದೆ. ಆದರೆ ಅದರೊಳಗೆ ಶೂನ್ಯವಾಗಿರುವುದು. ಜನರು ಪರಸ್ಪರ ಕ್ರಯ-ವಿಕ್ರಯ ನಡೆಯುತ್ತಿರುವರು. ಯಾರು ಕೂಡಾ ವಿಶ್ವಾಸಾರ್ಹತೆ ತೋರಿಸಲಿಕ್ಕಿಲ್ಲ. ಅಂತಹ ಸಂದರ್ಭದಲ್ಲಿ ಜನರು ಆಶ್ಚರ್ಯದಿಂದ ಹೇಳುವರು, “ಇಂತಿಂಥ ಕುಟುಂಬದಲ್ಲಿ ವಿಶ್ವಾಸಾರ್ಹ ವ್ಯಕ್ತಿಯೋರ್ವನಿದ್ದಾನೆ. ಆತ ಮಹಾ ಧೀರ, ವಿವೇಕಶಾಲಿ ಮತ್ತು ಬುದ್ಧಿವಂತನಾಗಿರುವನು. ಆದರೆ ಆತನ ಹೃದಯದಲ್ಲಿ ಒಂದು ಸಾಸಿವೆ ಕಾಳಿನಷ್ಟೂ ಈಮಾನ್ ಇರಲಿಕ್ಕಿಲ್ಲ.”
ಈಮಾನ್ ಮತ್ತು ಅಮಾನತ್ ಒಂದೇ ಪದದಿಂದ ಉದ್ಭವಗೊಂಡದ್ದಾಗಿವೆ. ಸತ್ಯವನ್ನು ಮನಸಾರೆ ಒಪ್ಪಿಕೊಂಡು ಅದಕ್ಕಾಗಿ ಎಲ್ಲವನ್ನೂ ಅರ್ಪಿಸಿದವನಿಗೆ ಕಪಟಿಯೂ ವಂಚಕನೂ ಆಗಲು ಎಂದೂ ಸಾಧ್ಯವಿಲ್ಲ. ಕಳ್ಳನು, ವಂಚಕನು ವಿಶ್ವಾಸಘಾತುಕನು ಮೊದಲಾದವರೆಲ್ಲರೂ ಸತ್ಯಕ್ಕೆ ವಿರುದ್ಧವಾಗಿದ್ದಾರೆ ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಅನಸ್(ರ) ಹೇಳುತ್ತಾರೆ, “ಪ್ರವಾದಿಯವರು(ಸ) ನಮ್ಮ ಮುಂದೆ ಮಾಡುವ ಎಲ್ಲಾ ಭಾಷಣಗಳಲ್ಲೂ ಈ ರೀತಿ ನೆನಪಿಸುತ್ತಿದ್ದರು. ತಿಳಿಯಿರಿ, ವಿಶ್ವಾಸಾರ್ಹತೆ ಇಲ್ಲದವನಿಗೆ ಈಮಾನಿಲ್ಲ. ಕರಾರು ಪಾಲಿಸದವನಿಗೆ ಧರ್ಮವಿಲ್ಲ.”
ಅಮಾನತ್ ಎಂಬುದು ಮನುಷ್ಯ ಹುಟ್ಟಿನಿಂದಲೇ ಪಡೆದಿರುತ್ತಾನೆ. ಬಳಿಕ ಜನರು ಕುರ್‍ಆನಿನಿಂದಲೂ ಪ್ರವಾದಿ ವಚನಗಳಿಂದಲೂ ಅವರ ಎಲ್ಲಾ ಭಾಗಗಳನ್ನೂ ಕರಗತ ಮಾಡಿಕೊಂಡರು. ವಿಶ್ವಾಸಾರ್ಹತೆ, ಸದಾಚಾರ, ಧಾರ್ಮಿಕ ಪ್ರಜ್ಞೆಗಳೊಂದೂ ಮಾನವರಿಗೆ ಅಪರಿಚಿತವಾದ ವಿಚಾರವಲ್ಲ. ಇವೆಲ್ಲವೂ ಮನುಷ್ಯ ಎಂದು ಕರೆಸಿಕೊಳ್ಳಲಿಕ್ಕೆ ಪೂರಕವಾದ ವಿಚಾರಗಳಾಗಿವೆ. ಜನರಿಗೆ ಅಪರಿಚಿತವಾಗಿರುವ ಹೊಸ ವಿಚಾರಗಳನ್ನು ಮಾತ್ರ ಕಲಿಸಲು ಪ್ರವಾದಿಗಳು ಬಂದದ್ದಲ್ಲ. ಬದಲಾಗಿ ಅವರಲ್ಲಿ ಹುಟ್ಟಿನಿಂದಲೇ ಅಡಕವಾಗಿರುವ ಮಾನವೀಯ ಮೌಲ್ಯಗಳಿಗೆ ಪ್ರಚೋದನೆ ನೀಡಲು ಆಗಮಿಸಿದ್ದರು.
ಮೇಲೆ ತಿಳಿಸಿರುವ ಹದೀಸ್‍ನಲ್ಲಿ ವಿಶ್ವಾಸಾರ್ಹತೆ ಸಷ್ಟವಾಗುವುದರ ಕುರಿತು ತಿಳಿಸಲಾಗಿದೆ. ಒಂದು ಸ್ವಭಾವವು ಓರ್ವನಿಂದ ಒಮ್ಮೆಲೇ ನಷ್ಟ ಹೊಂದುವುದಿಲ್ಲ. ಅದು ಅವನಿಂದ ಸ್ವಲ್ಪ ಸ್ವಲ್ಪವೇ ಸರಿದು ಹೋಗುತ್ತದೆ. ನಾವು ಕ್ಷುಲ್ಲಕವೆಂದು ಭಾವಿಸುವ ತಪ್ಪುಗಳು ನಮ್ಮನ್ನು ಮಹಾಪಾಪಗಳ ವರೆಗೆ ತಲುಪಿಸುತ್ತವೆ. ಪರಿಸ್ಥಿತಿಯ ಒತ್ತಡಕ್ಕೆ ಮಣಿದು ನಾವು ತಪ್ಪು ಮಾಡುತ್ತೇವೆ. ಹಾಗೆ ನಿರಂತರವಾಗಿ ಮಾಡುವಾಗ ತಪ್ಪುಗಳ ಕುರಿತು ಮೊದಲಿದ್ದ ಧೋರಣೆಯು ಸಡಿಲಗೊಳ್ಳುತ್ತದೆ. ಮನಸ್ಸಿನಲ್ಲಿ ಉಂಟಾಗುತ್ತಿದ್ದ ಕಳವಳವು ಕ್ರಮೇಣ ದೂರವಾಗುತ್ತದೆ. ಹಾಗೇ ದೊಡ್ಡ ತಪ್ಪುಗಳನ್ನು ಮಾಡುವಾಗ ಯಾವುದೇ ಪಾಪ ಪ್ರಜ್ಞೆ ಇಲ್ಲದಾಗುತ್ತದೆ. ಅಮಾನತ್ತಿನ ಸ್ಥಿತಿಯೂ ಇದೇ ರೀತಿಯಾಗಿದೆ. ಅದನ್ನು ಪಾಲಿಸಲು ಅನಾಸ್ಥೆ ತೋರುವುದಾದರೆ ಮುಂದೆ ಅದು ನಮ್ಮಿಂದ ಕಳೆದುಹೋಗುತ್ತದೆ. ಅದಕ್ಕೆ ಕೇವಲ ನಿದ್ರೆಯ ಸಮಯವಷ್ಟೇ ಸಾಕು. ಅವನು ಎಚ್ಚೆತ್ತುಕೊಳ್ಳುವಾಗ ಕಪಟಿಯೂ ವಿಶ್ವಾಸಘಾತುಕನೂ ಆಗಿ ಬದಲಾಗಿರುತ್ತಾನೆ. ಇಂತಹವರು ಹೊರ ಪ್ರಪಂಚಕ್ಕೆ ಸಭ್ಯರಾಗಿ ಕಂಡರೂ ಅವರ ಹೃದಯವು ಟೊಳ್ಳಾಗಿರುತ್ತದೆ. ವಂಚನೆಯ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.
ಪ್ರವಾದಿಯವರು(ಸ) ಹೇಳಿದರು, “ನಿಮ್ಮ ಪೈಕಿ ಅತ್ಯುತ್ತಮರು ನನ್ನ ಕಾಲದವರಾಗಿದ್ದಾರೆ. ಬಳಿಕ ಅವರ ನಂತರ ಬರುವವರು. ಕೊನೆಗೆ ಒಂದು ವಿಭಾಗದ ಜನರು ಬರುವರು. ಅವರು ಸಾಕ್ಷಿ ಹೇಳುವರು. ಆದರೆ ಯಾರೂ ಅವರಲ್ಲಿ ಸಾಕ್ಷಿ ನುಡಿಯಲು ಹೇಳಲಿಕ್ಕಿಲ್ಲ. ಅವರು ವಂಚನೆ ನಡೆಸುವರು. ವಿಶ್ವಾಸಘಾತುಕರಾಗುವರು. ಅವರು ಪ್ರತಿಜ್ಞೆಗಳನ್ನು ಮಾಡುವರು. ಆದರೆ ಅವುಗಳನ್ನು ಪಾಲಿಸಲಿಕ್ಕಿಲ್ಲ. ಹೊರ ನೋಟಕ್ಕೆ ಅವರು ಸಭ್ಯರಾಗಿರುವರು.”
ಅತ್ಯಂತ ಹೆಚ್ಚು ವಿಶ್ವಾಸಾರ್ಹತೆ ತೋರಬೇಕಾಗಿರುವುದು ಜನರ ಮಧ್ಯೆ ಇರುವ ಆರ್ಥಿಕ ವ್ಯವಹಾರದಲ್ಲಾಗಿದೆ. ಹಣದ ವಿಚಾರದಲ್ಲಿ ಹೆಚ್ಚಿನ ಮಂದಿ ಎಡವಿ ಬೀಳುವ ಸಾಧ್ಯತೆ ಇದೆ. ಹಣವು ಮನುಷ್ಯನಿಗೆ ಅಲಂಕಾರ ವಸ್ತುವಾಗಿದೆ. ಅವನು ಸದಾ ಅದರ ಕಡೆಗೆ ಆಕರ್ಷಿತನಾಗಿರುತ್ತಾನೆ. ಮಾನವರ ಶರೀರದಲ್ಲಿ ರಕ್ತದಂತೆ ಚಲಿಸುವ ಶೈತಾನನು ಹಣದ ವಿಚಾರದಲ್ಲಿ ವಂಚನೆ ನಡೆಸಲು ಪ್ರೇರೇಪಿಸುತ್ತಿರುತ್ತಾನೆ. ಈ ಸಂದರ್ಭದಲ್ಲಿ ನಮ್ಮ ಧಾರ್ಮಿಕ ಪ್ರಜ್ಞೆಯನ್ನು ಕಡೆಗಣಿಸಿದರೆ ನಾವು ಪಾಪಿಗಳ ಸಾಲಿಗೆ ಸೇರುವುದು ನಿಶ್ಚಿತವಾಗಿದೆ. ಹಣದ ವಿಚಾರದಲ್ಲಿ ವಂಚನೆ ನಡೆಸುವುದು ಮಹಾ ಅಪರಾಧವಾಗಿದೆ. ಅಬ್ದುಲ್ಲಾ ಬಿನ್ ಮಸ್‍ಊದ್(ರ) ಹೇಳುತ್ತಾರೆ,
“ವಿಶ್ವಾಸ ವಂಚನೆ ನಡೆಸದಿದ್ದರೆ ರಕ್ತ ಸಾಕ್ಷಿಯಾದವನ ಎಲ್ಲಾ ಪಾಪಗಳು ಮನ್ನಿಸಲ್ಪಡುತ್ತವೆ. ಅಂತ್ಯ ದಿನದಲ್ಲಿ ಅಂತಹ ವ್ಯಕ್ತಿಯನ್ನು ಕರೆತರಲಾಗುವುದು. ಅವನು ಅಲ್ಲಾಹನ ಮಾರ್ಗದಲ್ಲಿ ತನ್ನ ಪ್ರಾಣವನ್ನು ಅರ್ಪಿಸಿರುವವನಾಗಿರುವನು. ಆತನಲ್ಲಿ ಅಲ್ಲಾಹನು ಅಮಾನತ್ತುಗಳನ್ನು ಪೂರ್ತೀಕರಿಸಲು ಹೇಳುವನು. ಆಗ ಅವನು ಹೇಳುವನು, ‘ಪ್ರಭೂ, ಐಹಿಕ ಜೀವನವು ಕೊನೆಗೊಂಡಿತಲ್ಲವೇ. ಇನ್ನು ನಾನು ಅದನ್ನು ಪೂರ್ತಿಗೊಳಿಸುವುದು ಹೇಗೆ?’ ಆಗ ಆತನನ್ನು ನರಕಕ್ಕೆ ಎಳೆದೊಯ್ಯಲು ಆಜ್ಞೆ ಬರುತ್ತದೆ. ಭೂಮಿಯಲ್ಲಿ ಆತನ ಮೇಲೆ ವಿಶ್ವಾಸವಿರಿಸಿ ಜನರು ನೀಡಿರುವ ಸೊತ್ತುಗಳೆಲ್ಲವೂ ಯಥಾs ಪ್ರಕಾರ ನರಕದಲ್ಲಿ ಆತ ಕಾಣುವನು. 'ಬಚಾವಾದೆ' ಎಂಬ ಭಾವನೆಯಿಂದ ಅವೆಲ್ಲವನ್ನೂ ಬಾಚಿ ನರಕದಿಂದ ಹೊರಬರಲು ಪ್ರಯತ್ನಿಸುವನು. ಆದರೆ ಅವೆಲ್ಲವೂ ಅವನ ಬಾಹು ಬಂಧನದಿಂದ ಜಾರಿ ಬೀಳುವುದು. ಆತ ಮತ್ತೆ ಅದನ್ನು ಹೊತ್ತುಕೊಳ್ಳಲು ಪ್ರಯತ್ನಿಸುವನು. ಆಗಲೂ ಅವು ಕೆಳಗೆ ಬೀಳುತ್ತಿರುವುವು. ಇದೇ ಪ್ರಕಾರ ಆತ ನರಕದಲ್ಲಿ ಕಳೆಯುವನು.” ಇಬ್ನು ಮಸ್‍ಊದ್(ರ) ಮುಂದುವರಿಸುತ್ತಾ ಹೇಳುತ್ತಾರೆ, "ತಿಳಿಯಿರಿ, ಎಲ್ಲವೂ ಅಮಾನತ್ತಾಗಿದೆ. ನಮಾಝ್, ವುಝೂ, ಅಳತೆ, ತೂಕ ಮೊದಲಾದವುಗಳೆಲ್ಲವೂ ಅಮಾನತ್ತಾಗಿದೆ. ಅತ್ಯಂತ ದೊಡ್ಡ ಅಮಾನತ್ ವಿಶ್ವಾಸವಿರಿಸಿ ನೀಡಿರುವ ಸಂಪತ್ತಾಗಿದೆ. ಅಮಾನತ್ತಿನಲ್ಲಿ ವಂಚನೆ ನಡೆಸಿರುವ ರಕ್ತಸಾಕ್ಷಿಗಳ ದುಃಸ್ಥಿತಿಯು ಈ ರೀತಿಯಾದರೆ ನಮ್ಮ ಗತಿ ಏನಾಗಿರಬಹುದು!"
ಪ್ರವಾದಿ(ಸ) ಈ ಕುರಿತು ಎಚ್ಚರಿಕೆ ನೀಡಿರುವರು, "ಎಲ್ಲ ವಂಚಕರಿಗೂ ಅಂತ್ಯ ದಿನದಲ್ಲಿ ಒಂದು ಪತಾಕೆ ನೀಡಲಾಗುವುದು. ವಂಚನೆಯ ಪ್ರಮಾಣಕ್ಕನುಸಾರವಾಗಿ ಅದು ಎತ್ತರಕ್ಕೇರುತ್ತದೆ. ತಿಳಿಯಿರಿ, ನಾಯಕ ನಡೆಸುವ ವಿಶ್ವಾಸ ವಂಚನೆಗಿಂತ ದೊಡ್ಡ ವಿಶ್ವಾಸ ವಂಚನೆ ಬೇರೊಂದಿಲ್ಲ."
ನಾವು ಹಲವು ವೇಳೆ ಅಮಾನತ್ತಿನ ವಿಚಾರದಲ್ಲಿ ಅಸಡ್ಡೆ ತೋರುತ್ತೇವೆ. ಇದರಿಂದ ಮಹಿಳೆಯರೂ ಹೊರತಾಗಿಲ್ಲ. ಯಾರಾದರೂ ಏನಾದರೂ ವಿಚಾರವೊಂದನ್ನು ನಮಗೆ ತಿಳಿಸಿ ಯಾರಿಗೂ ಹೇಳಬಾರದೆಂದು ಹೇಳಿರುತ್ತಾರೆ. ಆದರೆ ನಾವು ಅದನ್ನು ನಿರ್ಲಕ್ಷಿಸುತ್ತೇವೆ. ಅವರು ಹೇಳಿದ ವಿಚಾರವು ಒಂದು ಅಮಾನತ್ತಾಗಿರುತ್ತದೆ. ಅವರು ನಮ್ಮ ಮೇಲೆ ವಿಶ್ವಾಸವಿರಿಸಿ ಹೇಳಿರುತ್ತಾರೆ. ಆದರೆ ನಾವು ಮಾಡುವ ಕೆಲಸವೇ ಬೇರೆ. ನಾವು ಅದನ್ನು ಇತರರಲ್ಲಿ ತಿಳಿಸುತ್ತೇವೆ. ಅದರೊಂದಿಗೆ "ಇದು ನಿನ್ನಲ್ಲಿ ಮಾತ್ರ ಹೇಳುವುದು, ಯಾರಲ್ಲೂ ಹೇಳಬಾರದೆಂದು ಆತ ತಿಳಿಸಿದ್ದಾನೆ" ಎಂಬ ಔದಾರ್ಯದ ಮಾತನ್ನಾಡಲು ಮರೆಯುವುದಿಲ್ಲ. ಅದು ಹಾಗೇ ಬಾಯಿಯಿಂದ ಬಾಯಿಗೆ ಹರಡಿ ರಹಸ್ಯವಿದ್ದದ್ದು ಬಹಿರಂಗವಾಗುತ್ತದೆ. ಇದು ನಮ್ಮ ನಿತ್ಯ ಜೀವನದಲ್ಲಿ ನಡೆಯುವ, ನಾವು ಕ್ಷುಲ್ಲಕವೆಂದು ಭಾವಿಸುವ ದೊಡ್ಡ ವಿಚಾರವಾಗಿದೆ.
ವಿಶ್ವಾಸಿಯಾದವನು ವಿಶ್ವಾಸದ್ರೋಹವೆಸಗುವುದು ಧರ್ಮವನ್ನೇ ಅವಹೇಳನ ಮಾಡಿದಂತೆ. ಅಂತಹವರು ಇಹಲೋಕದಲ್ಲೂ ಪರಲೋಕದಲ್ಲೂ ಮೌಲ್ಯಹೀನರಾಗುವರು. ಜನರ ಮಧ್ಯೆ ವಿಶ್ವಾಸ ಗಳಿಸಲು ವರ್ಷಗಳ ಸಭ್ಯ ವರ್ತನೆ ಬೇಕಾಗಬಹುದು. ಆದರೆ ಅದನ್ನು ಕಳೆದುಕೊಳ್ಳಲು ಒಂದು ಕ್ಷದ ವಂಚನೆ, ಕಪಟತನದ ವರ್ತನೆ ಧಾರಾಳ ಸಾಕು. ವಿಶ್ವಾಸ ದ್ರೋಹವು ಕಪಟ ವಿಶ್ವಾಸಿಗಳ ಸ್ವಭಾವವಾದುದರಿಂದ ನಾವು ಅವರ ಸಾಲಿಗೆ ಸೇರದಂತಾಗಲು ಗರಿಷ್ಠ ಪ್ರಯತ್ನ ನಡೆಸಬೇಕಾಗಿದೆ. ಅದಕ್ಕೆ ನಮ್ಮ ಧಾರ್ಮಿಕ ಪ್ರಜ್ಞೆಯನ್ನು ಧಾರೆಯೆರೆಯುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಕರ್ಮಗಳ ಬಗ್ಗೆ ಜಾಗೃತರಾಗಬೇಕು. ಸರ್ವಶಕ್ತನಾದ ಅಲ್ಲಾಹನು ಅದಕ್ಕಾಗಿ ನಮ್ಮೆಲ್ಲರನ್ನೂ ಅನುಗ್ರಹಿಸಲಿ.


ಸೋಮವಾರ, ಅಕ್ಟೋಬರ್ 15, 2012

ನಿಮ್ಮ ಸಂಪತ್ತು ಪಿಶಾಚಿಯ ಹಿಡಿತದಲ್ಲಿರಬಹುದೇ?


ದಾನ ಧರ್ಮವು ಶ್ರೇಷ್ಠ ಕರ್ಮಗಳ ಪೈಕಿ ಒಂದಾಗಿದೆ. ಇದು ಧನಿಕರ ಮೇಲಿನ ಹೊಣೆಗಾರಿಕೆಯಾಗಿದೆ. ಸಮಾಜದಲ್ಲಿನ ಬಡತನವನ್ನು ಹೋಗಲಾಡಿಸಲು ದಾನ ಮಾಡುವುದು ಅನಿವಾರ್ಯವಾಗಿದೆ. ಪ್ರವಾದಿಯವರು(ಸ) ಮತ್ತು ಅವರ ಅನುಯಾಯಿಗಳ ಜೀವನದ ಕಡೆಗೊಮ್ಮೆ ಕಣ್ಣೋಡಿಸುವುದಾದರೆ ದಾನ ಧರ್ಮದ ಉಜ್ವಲ ಉದಾಹರಣೆಯನ್ನು ದರ್ಶಿಸಲು ಸಾಧ್ಯವಿದೆ. ಅವರು ಎಲ್ಲವನ್ನೂ ಅಲ್ಲಾಹನ ಮಾರ್ಗದಲ್ಲಿ ದಾನ ಮಾಡುತ್ತಿದ್ದರು. ಮಾತ್ರವಲ್ಲ, ಈ ವಿಷಯದಲ್ಲಿ ಪರಸ್ಪರ ಪೈಪೋಟಿ  ನಡೆಸುತ್ತಿದ್ದರು. ಸಂಪತ್ತನ್ನು ದಾನ ಮಾಡಿದರೆ ಅಲ್ಲಾಹನು ಹೆಚ್ಚು ಹೆಚ್ಚು ನೀಡುತ್ತಾನೆ ಎಂಬ ಅಚಲ ನಂಬಿಕೆ ಅವರಲ್ಲಿತ್ತು. ದಾನ ಮಾಡಿದ್ದರಿಂದ ಯಾರು ಕೂಡಾ ದಿವಾಳಿಯಾಗಿಲ್ಲ. ದಿವಾಳಿಯಾಗುವುದೂ ಇಲ್ಲ.
ಸಂಪತ್ತೆಲ್ಲ ಒಂದು ಕಡೆಯೇ ವ್ಯಕ್ತಿಗತವಾಗಿ ಶೇಖರಣೆಯಾಗುವಾಗ ಬಡತನ, ದಾರಿದ್ರ್ಯ ಹೆಚ್ಚಾಗುತ್ತಲೇ ಹೋಗುತ್ತದೆ. ಈ ಸಂಪತ್ತು ಜನರ ಮಧ್ಯೆ ಹರಿದಾಡುವಾಗ ಬಡತನದ ಸಮಸ್ಯೆಗೆ ಪರಿಹಾರ ದೊರಕಿದಂತಾಗುತ್ತದೆ. ಅದಕ್ಕಾಗಿಯೇ ಅಲ್ಲಾಹನು ಝಕಾತ್, ದಾನ ಧರ್ಮಗಳನ್ನು ಪುಣ್ಯ ಕಾರ್ಯಗಳ ಸಾಲಿಗೆ ಸೇರಿಸಿದ್ದಾನೆ. ಮರಣದ ಬಳಿಕವೂ ಪ್ರತಿಫಲ ಲಭಿಸುವ ಕರ್ಮಗಳ ಪೈಕಿ ಒಂದು ಕರ್ಮವನ್ನಾಗಿ ಮಾಡಿದ್ದಾನೆ.
ಸಂಪತ್ತನ್ನು ದಾನ ಮಾಡುವ ವಿಚಾರದಲ್ಲಿ ಜನರು ಹಿಂದೆ ಸರಿಯುವುದನ್ನು ನಾವು ಕಾಣುತ್ತೇವೆ. ಕಾರಣ ಸಂಪತ್ತು ಮನುಷ್ಯರನ್ನು ಆಕರ್ಷಣೆಗೆ ಒಳಪಡಿಸುವ ಒಂದು ಸಾಧನವಾಗಿದೆ. ಗಳಿಸಿದಷ್ಟೂ ಬೇಕೆನಿಸುವ ಒಂದು ಅನುಗ್ರಹವಾಗಿದೆ ಸಂಪತ್ತು. ಸುಖ ಸೌಲಭ್ಯಗಳೆಲ್ಲ ಇದ್ದೂ ಅದನ್ನು ದೇವಮಾರ್ಗದಲ್ಲಿ ವ್ಯಯಿಸದೆ ಆಡಂಬರದ ಪ್ರದರ್ಶನಕ್ಕೆ ವ್ಯಯಿಸಿ ಕೊನೆಗೆ ಮರಣ ಸನ್ನಿಹಿತವಾಗುವಾಗ “ನಾನು ನನ್ನ ಸಂಪತ್ತೆಲ್ಲವನ್ನು ದಾನ ಮಾಡುತ್ತೇನೆ” ಎಂದು ಉಯಿಲು ಬರೆದಿಡುವ ಕೆಲವರಿದ್ದಾರೆ. ಇವರು ತಮ್ಮ ಜೀವಿತಾವಧಿಯಲ್ಲಿ ಬಡವರ್ಗವನ್ನು ಕಂಡೂ ಕಾಣದಂತೆ ನಟಿಸುತ್ತಿದ್ದವರಾಗಿರುತ್ತಾರೆ. ಸ್ವಂತ ಸುಖಾಡಂಬರಗಳಿಗೆ ಮಹತ್ವ ನೀಡಿದವರು. ಕೊನೆಗೆ ಜೀವನವು ಕೊನೆಗೊಂಡಿತೆಂದು ಅರಿವಾಗುವಾಗ ಎಲ್ಲವನ್ನೂ ದೇವನ ಮಾರ್ಗದಲ್ಲಿ ವ್ಯಯಿಸುವ ತೀರ್ಮಾನ ಕೈಗೊಂಡು ದೇವನನ್ನು ಮರುಳು ಮಾಡುವ ವ್ಯರ್ಥ ಪ್ರಯತ್ನಕ್ಕೆ ಮುಂದಾಗುತ್ತಾರೆ. ಅಲ್ಲಾಹನ ಪ್ರೀತಿ ಗಳಿಸಲಿಕ್ಕೆ ಮರಣಾಸನ್ನ ಸಮಯದಲ್ಲಿ ನಡೆಸುವ ಇಂತಹ ನಟನೆಗಳು ಸಾಕೆಂದು ಅವರು ಭಾವಿಸುತ್ತಾರೆ.
ದಾನವು ಅತ್ಯಂತ ಪ್ರತಿಫಲಾರ್ಹವಾಗುವುದು ವ್ಯಕ್ತಿಯ ಆರೋಗ್ಯ ಸಮಯದಲ್ಲಿ ವ್ಯಯಿಸುವ ಮೂಲಕವಾಗಿದೆ. ಅಬೂ ಹುರೈರಾ(ರ) ವರದಿ ಮಾಡುತ್ತಾರೆ: ಓರ್ವರು ಪ್ರವಾದಿಯವರ(ಸ) ಬಳಿ ಬಂದು ಕೇಳಿದರು, “ಅಲ್ಲಾಹನ ಸಂದೇಶವಾಹಕರೇ! ಅತ್ಯಂತ ಪ್ರತಿಫಲಾರ್ಹವಾದ ದಾನ ಯಾವುದು?” ಆಗ ಪ್ರವಾದಿಯವರು(ಸ) ಹೇಳಿದರು, “ನಾನು ಹೇಳಿಕೊಡುತ್ತೇನೆ. ನೀನು ಆರೋಗ್ಯವಂತನೂ ಜಿಪುಣನೂ ಆಗಿರಬೇಕು. ಅದೇ ವೇಳೆ ಬಡತನವನ್ನು ಹೆದರುತ್ತಿ ಮತ್ತು ಐಶ್ವರ್ಯವನ್ನು ಬಯಸುತ್ತಿ. ಈ ಸಂದರ್ಭದಲ್ಲಿ ನೀನು ಮಾಡುವ ದಾನವು ಶ್ರೇಷ್ಠ ದಾನವಾಗಿದೆ. ದಾನ ಮಾಡಲು ನೀನು ಆತ್ಮವು ಗಂಟಲಿಗೆ ತಲುಪುವವರೆಗೆ ಕಾಯಬಾರದು. ಇಂತಿಂಥವನಿಗೆ ಇಂತಿಷ್ಟು ಕೊಡಬೇಕು ಇಂತಿಂಥವನಿಗೆ ಅಷ್ಟು ಕೊಡಬೇಕು ಎಂದೆಲ್ಲಾ ಆಗ ನೀನು ಹೇಳುತ್ತಿರುವೆ. ಆದರೆ ವಾಸ್ತವದಲ್ಲಿ ಆ ಸಂದರ್ಭ ಬಂದೊದಗಿದಾಗಲೇ ಸೊತ್ತೆಲ್ಲವೂ ಇತರರದ್ದಾಗಿರುತ್ತದೆ.”
ತನ್ನ ಅವಶ್ಯಕತೆಗಳನ್ನು ಪೂರೈಸುವುದರೊಂದಿಗೆ ಇತರರ ಅಗತ್ಯತೆಗಳಿಗೂ ಸ್ಪಂಧಿಸುವ ಉನ್ನತ ಗುಣವನ್ನು ಓರ್ವ ವಿಶ್ವಾಸಿ ಹೊಂದಿರುತ್ತಾನೆ. ತನ್ನ ಎಲ್ಲಾ ಬೇಡಿಕೆಗಳನ್ನು ಬದಿಗಿಟ್ಟು ಇತರರ ಕರೆಗೆ ಆತನು ಓಗೊಡುತ್ತಾನೆ. ತನ್ನ ಹಸಿವೆಯನ್ನು ಕಡೆಗಣಿಸಿ ಇತರರ ಹಸಿವಿನ ಶಮನಕ್ಕೆ ಪ್ರಯತ್ನಿಸುತ್ತಾನೆ. ಪವಿತ್ರ ಕುರ್‍ಆನ್ ಸತ್ಯವಿಶ್ವಾಸಿಗಳನ್ನು ಈ ರೀತಿ ಪರಿಚಯಿಸುತ್ತದೆ. “ಅಲ್ಲಾಹನ ಮೇಲಿನ ಪ್ರೇಮದಿಂದ ದರಿದ್ರರಿಗೂ ಅನಾಥರಿಗೂ ಸೆರೆಯಾಳುಗಳಿಗೂ ಊಟ ಕೊಡುತ್ತಾರೆ. (ಮತ್ತು ಅವರೊಡನೆ ಹೇಳುತ್ತಾರೆ) ನಾವು ನಿಮಗೆ ಕೇವಲ ಅಲ್ಲಾಹನಿಗಾಗಿ ಉಣಿಸುತ್ತಿದ್ದೇವೆ. ನಾವು ನಿಮ್ಮಿಂದ ಯಾವುದೇ ಪ್ರತಿಫಲವನ್ನಾಗಲಿ, ಕೃತಜ್ಞತೆಯನ್ನಾಗಲಿ ಬಯಸುವುದಿಲ್ಲ. ನಮಗಂತು ನಮ್ಮ ಪ್ರಭುವಿನಿಂದ ಆ ತೀವ್ರ ಕಾಠಿಣ್ಯದ ಅತ್ಯಂತ ಸುದೀರ್ಘ ದಿನದ ಭಯವಿದೆ.” (ಅದ್ದಹ್ರ್: 8-10) ಅದೇ ರೀತಿ ಸೂರಃ ಅಲ್‍ಹಶ್ರ್‍ನ 9ನೇ ಸೂಕ್ತದಲ್ಲಿ ಅಲ್ಲಾಹನು ಈ ರೀತಿ ಹೇಳುತ್ತಾನೆ, “ಸ್ವತಃ ತಮಗೆ ಅಗತ್ಯವಿದ್ದರೂ ಇತರರಿಗೆ ತಮ್ಮ ಮೇಲಿನದಕ್ಕಿಂತ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ವಾಸ್ತವದಲ್ಲಿ ಯಾರು ತಮ್ಮ ಮನಸ್ಸಿನ ಸಂಕುಚಿತತೆಯಿಂದ ರಕ್ಷಿಸಲ್ಪಟ್ಟರೋ ಅವರೇ ವಿಜಯಿಗಳು.”
“ನಮ್ಮ ಅವಶ್ಯಕತೆಗಳೆಲ್ಲಾ ಮುಗಿದ ಬಳಿಕ ಇತರರಿಗೆ ನೆರವಾಗುವ” ಎಂದು ತೀರ್ಮಾನಿಸುವ ಹಲವರಿದ್ದಾರೆ. ಇಂತಹ ಮನೋಭಾವವು ಒಂದು ಮೌಢ್ಯವಾಗಿದೆ. ಮನುಷ್ಯನ ಅವಶ್ಯಕತೆಗಳಿಗೆ ಕೊನೆಯೆಂಬುದಿಲ್ಲ. ಅದು ನಿರಂತರ ಮುಂದುವರಿಯುತ್ತದೆ. ಒಂದು ಸಿಕ್ಕಿದರೆ ಮತ್ತೊಂದನ್ನು ಗಳಿಸಬೇಕು ಎಂಬ ಹಂಬಲ ಅವನಲ್ಲಿರುತ್ತದೆ. ಮನಸ್ಸಿನಲ್ಲಿ ಸಂತೃಪ್ತಿ ಎಂಬ ಅಂಶವಿಲ್ಲದ ವ್ಯಕ್ತಿಗೆ ಎಷ್ಟೇ ಲಭಿಸಿದರೂ ಅದು ಸಾಕಾಗಲಿಕ್ಕಿಲ್ಲ. “ಮಣ್ಣಲ್ಲದೆ ಮನುಷ್ಯನ ಬಾಯಿಯನ್ನು ತುಂಬಲಿಕ್ಕಿಲ್ಲ” ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಆದ್ದರಿಂದ ವಿಶ್ವಾಸಿಗಳು ದಾನ ಧರ್ಮದ ವಿಚಾರದಲ್ಲಿ ಎಂದೂ ಮುಂದಿರುತ್ತಾರೆ. ಅಲ್ಪವನ್ನು ತಮಗಿಟ್ಟು ಮಿಕ್ಕಿದ್ದನ್ನು ಇತರರಿಗೆ ನೀಡುತ್ತಾರೆ. ಕುರ್‍ಆನಿನಲ್ಲಿ ವಿಶ್ವಾಸಿಗಳ ಸ್ವಭಾವದ ಕುರಿತು ಹೀಗೆ ಹೇಳಲಾಗಿದೆ. “ಅವರು ಸ್ಥಿತಿವಂತರಾಗಿರುವಾಗಲೂ ದುಃಸ್ಥಿತಿಯಲ್ಲಿರುವಾಗಲೂ ತಮ್ಮ ಸಂಪತ್ತನ್ನು ದಾನ ಮಾಡುತ್ತಾರೆ, ಕೋಪವನ್ನು ನುಂಗಿಕೊಳ್ಳುತ್ತಾರೆ ಮತ್ತು ಇತರರ ಅಪರಾಧಗಳನ್ನು ಕ್ಷಮಿಸುತ್ತಾರೆ. ಇಂತಹ ಸಜ್ಜನರು ಅಲ್ಲಾಹನಿಗೆ ಅತ್ಯಂತ ಮೆಚ್ಚುಗೆಯವರು.” (ಆಲಿಇಮ್ರಾನ್: 134)
ದಾನಧರ್ಮದಿಂದ ಬಡತನ ಬರುತ್ತದೆ. ಎಂಬ ಅಂಜಿಕೆಯು ವಿಶ್ವಾಸಿಗೆ ತರವಲ್ಲ. ಅಲ್ಲಾಹನು ಸಂಪತ್ತನ್ನು ವ್ಯಯಿಸುವುದು ಅಲ್ಲಾಹನ ಬೇಡಿಕೆಯಾಗಿದೆ. ಹಾಗೆ ವ್ಯಯಿಸಿದರೆ ಅಲ್ಲಾಹನು ಹೆಚ್ಚು ಹೆಚ್ಚು ನೀಡುತ್ತಾನೆಯೇ ಹೊರತು ಕಡಿತಗೊಳಿಸುವುದಿಲ್ಲ. ದಾನ ಮಾಡಿ ಬೀದಿ ಪಾಲಾದವರಿಲ್ಲ. ಬಡತನಕ್ಕೆ ಹೆದರಿ ದಾನ ಧರ್ಮಗಳಿಂದ ಹಿಂದೆ ಸರಿಯುವವರನ್ನು ಅಲ್ಲಾಹನು ವಿಮರ್ಶಿಸಿದ್ದಾನೆ. “ಶೈತಾನನು ನಿಮ್ಮನ್ನು ದಾರಿದ್ರ್ಯದಿಂದ ಭಯಭೀತಗೊಳಿಸುತ್ತಾನೆ ಮತ್ತು ಅಶ್ಲೀಲ ಕಾರ್ಯಗಳನ್ನೆಸಗುವ ಪ್ರಚೋದನೆಯನ್ನೀಯುತ್ತಾನೆ. ಆದರೆ, ಅಲ್ಲಾಹನು ನಿಮಗೆ ತನ್ನ ಕ್ಷಮೆ ಹಾಗೂ ಅನುಗ್ರಹದ ವಚನವನ್ನೀಯುತ್ತಾನೆ. ಅಲ್ಲಾಹನು ಮಹಾ ವಿಶಾಲನೂ ಸರ್ವಜ್ಞನೂ ಆಗಿರುತ್ತಾನೆ.”
ಪ್ರವಾದಿಯವರು(ಸ) ಹೇಳಿದರು, “ದಾನ ಮಾಡುವುದನ್ನು ತಡೆಯುತ್ತಾ ತನ್ನ ಸಂಪತ್ತಿನಲ್ಲಿ ಕಚ್ಚಿ ಹಿಡಿದಿರುವ ಎಪ್ಪತ್ತು ಪಿಶಾಚಿಗಳ ದವಡೆಗಳನ್ನು ಅದರಿಂದ ಬೇರ್ಪಡಿಸದೆ ಯಾರಿಗೂ ಏನನ್ನೂ ದಾನ ಮಾಡಲು ಸಾಧ್ಯವಿಲ್ಲ.” ದಾನ ಮಾಡಲು ಒಪ್ಪದ ಮನಸ್ಥಿತಿಯನ್ನು ಈ ಪ್ರವಾದಿ ವಚನವು ಬೆಟ್ಟು ಮಾಡುತ್ತದೆ. ಸಂಪತ್ತನ್ನು ದಾನ ಮಾಡುವ ವಿಚಾರದಲ್ಲಿ ಹಿಂದೇಟು ಹಾಕುವರ ಸಂಪತ್ತನ್ನು ಶೈತಾನನು ಹಿಡಿದಿಟ್ಟುಕೊಂಡಿರುತ್ತಾನೆ ಎಂಬುದು ಮೇಲಿನ ಪ್ರವಾದಿ ವಚನದ ಸಾರವಾಗಿದೆ. ಇದು ಶೈತಾನನಿಗೆ ತಲೆಬಾಗಿದಂತೆ. ಹಾಗೆ ಮಾಡುವುದು ವಿಶ್ವಾಸಿಯ ಮಟ್ಟಿಗೆ ಭೂಷಣವಲ್ಲ.
ಎಲ್ಲ ಕರ್ಮಗಳಿಗೂ ಸಂಕಲ್ಪ ಶುದ್ಧಿ ಇರಬೇಕು. ದಾನ ಧರ್ಮದ ವಿಚಾರದಲ್ಲೂ ಇದು ಬಹಳ ಮುಖ್ಯವಾಗಿದೆ. ತಮ್ಮ ಸಂಪತ್ತನ್ನು ಯಥೇಚ್ಛವಾಗಿ ದಾನ ಮಾಡಿ ಅದರ ಹಿಂದೆ ‘ತಾನು ಕೊಡುಗೈ ದಾನಿ’ ಎಂದು ಜನರಿಂದ ಕರೆಸಿಕೊಳ್ಳಬೇಕೆಂಬ ಉದ್ದೇಶವಿದ್ದರೆ, ಆ ದಾನವು ವ್ಯರ್ಥ ಎಂಬುದರಲ್ಲಿ ಎರಡು ಮಾತಿಲ್ಲ. ದಾನ ಮಾಡಬೇಕಾದುದು ಅಲ್ಲಾಹನ ಸಂತೃಪ್ತಿಯನ್ನು ಬಯಸಿಯೇ ಹೊರತು ಅದನ್ನು ಪಡೆಯುವವನ ಸಂತೃಪ್ತಿಗಾಗಿ ಅಲ್ಲ. ಅಂತಹ ದಾನದಿಂದ ಅವನಿಗೆ ಈ ಭೂಮಿಯಲ್ಲಿ ಗೌರವಾದರಗಳು ಲಭಿಸಬಹುದು. ಆದರೆ ಪರಲೋಕದಲ್ಲಿ ಯಾವುದೇ ಬೆಲೆ ಇರಲಿಕ್ಕಿಲ್ಲ. ಅದ್ದರಿಂದ ನಾವು ನಮ್ಮ ದಾನಧರ್ಮಗಳ ಹಿಂದೆ ತೋರಿಕೆಯ ಭಾವವು ಬರದಂತೆ ಎಚ್ಚರ ವಹಿಸಬೇಕು. ತೋರಿಕೆಗಾಗಿ ಮಾಡುವ ಕರ್ಮಗಳು ಅತ್ಯಂತ ಸಣ್ಣ ಶಿರ್ಕಾಗಿದೆ ಎಂದು ಪ್ರವಾದಿಯವರು(ಸ) ಕಲಿಸಿದ್ದಾರೆ. ಆದ್ದರಿಂದ ದಾನ ಮಾಡಿ ಶಿಕ್ಷೆಗೆ ಗುರಿಯಾಗುವ ದು:ಸ್ಥಿತಿಯಿಂದ ಪಾರಾಗಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಮಂಗಳವಾರ, ಅಕ್ಟೋಬರ್ 09, 2012

ಇಸ್ಲಾಂ ಶಾಂತಿಯ ಧರ್ಮವಾಗಿದೆ . ಅದು ಯಾರನ್ನೂ ......

ಇಸ್ಲಾಂ ಶಾಂತಿಯ ಧರ್ಮವಾಗಿದೆ . ಅದು ಯಾರನ್ನೂ ಕೊಲ್ಲಲು ಹೇಳಿಲ್ಲ . ಆದರೂ ಎಲ್ಲರೂ ಇಸ್ಲಾಮನ್ನು  ದೂರುತ್ತಾರೆ ... ಯಾಕೆ ?  ಇತರರ ಮಾತು ಕೇಳಿ ನೀವು ಮೂರ್ಕರಾಗಬೇಡಿ . ಇಸ್ಲಾಮಿನ ಕುರಿತು ಕಲಿಯಿರಿ . ಇಸ್ಲಾಂ ಧರ್ಮವು  ರಹಸ್ಯವಲ್ಲ . ಅದು ತೆರೆದ ಪುಸ್ತಕವಾಗಿದೆ . ಯಾರಿಗೂ ಅದರ ಬಗ್ಗೆ ಅಧ್ಯಯನ ನಡೆಸಬಹುದು .. ಇನ್ನೇಕೆ ತಡ .. ಕೂಡಲೇ ತಯಾರಾಗಿ .