ಸೋಮವಾರ, ಸೆಪ್ಟೆಂಬರ್ 17, 2012

ಪ್ಲೀಸ್, ಕುಟುಂಬ ಸಂಬಂಧ ಮುರಿಯಬೇಡಿ


 ಮಾನವನು ಸಂಘಜೀವಿಯಾಗಿದ್ದಾನೆ. ಇತರರೊಂದಿಗೆ ಕೂಡಿ ಬಾಳುವುದು ಅವನ ಪ್ರಕೃತಿದತ್ತ ಗುಣವಾಗಿದೆ. ಆದ್ದರಿಂದ ಅವನಿಗೆ ಏಕಾಂಗಿಯಾಗಿ ಜೀವಿಸಲು ಕೆಲವು ದಿನಗಳ ಮಟ್ಟಿಗೆ ಸಾಧ್ಯವಾದರೂ ಅದು ಶಾಶ್ವತವಾಗಿಸಲು ಅವನಿಂದ ಸಾಧ್ಯವಿಲ್ಲ. ಇನ್ನು ಯಾರ ಹಂಗಿಲ್ಲದೇ ಏಕಾಂಗಿಯಾಗಿ ಜೀವಿಸುವುದು ಮಾನಸಿಕ ಸ್ಥಿಮಿತ ಕಳಕೊಂಡಿರುವ ಹುಚ್ಚರು ಮಾತ್ರ.
ಮನುಷ್ಯರಲ್ಲಿ ಕೂಡಿ ಬಾಳುವ ಗುಣ ಇರುವುದರಿಂದಲೇ ಅವನು ಒಂದು ಕುಟುಂಬವನ್ನು ಬಯಸುತ್ತಾನೆ. ಓರ್ವ ಮನುಷ್ಯನ ಸುತ್ತಲೂ ಸಂಬಂಧಗಳ ಸರಪಳಿಯು ಪೋಣಿಸಲ್ಪಟ್ಟಿದೆ. ತಂದೆ, ತಾಯಿ, ಪತ್ನಿ, ಮಕ್ಕಳು, ಸಹೋದರ-ಸಹೋದರಿಯರು, ಅತ್ತೆ, ಮಾವ ಹೀಗೆ ಈ ಸರಪಳಿಯು ಅವನನ್ನು ಬಂಧಿಸಿ ಸಹಬಾಳ್ವೆಯ ಸುಖವನ್ನು ನೀಡುತ್ತಿರುತ್ತದೆ. ಆದ್ದರಿಂದಲೇ ಮಾನವನು ಈ ಸರಪಳಿಯಿಂದ ಬಂಧಮುಕ್ತಗೊಳ್ಳಲು ತಯಾರಾಗುತ್ತಿಲ್ಲ.
ಓರ್ವ ವಿಶ್ವಾಸಿಗೆ ಕುಟುಂಬದ ಮೇಲೆ ಹಲವಾರು ಬಾಧ್ಯತೆಗಳಿವೆ. ಅಲ್ಲಾಹನೊಂದಿಗೂ ಸ್ವಂತದೊಂದಿಗೂ ಇರುವ ಬಾಧ್ಯತೆಗಳ ಬಳಿಕ ಇಸ್ಲಾಮಿನಲ್ಲಿ ಅತ್ಯಂತ ಹೆಚ್ಚು ಮಹತ್ವ ಇರುವುದು ಈ ಸಂಬಂಧಗಳಿಗಾಗಿದೆ. ಆದ್ದರಿಂದ ಕುಟುಂಬ ಸಂಬಂಧಕ್ಕೆ ಧಕ್ಕೆ ಯಾಗುವಂತಹ ಯಾವುದೇ ಕೆಲಸವು ಓರ್ವ ನೈಜ ವಿಶ್ವಾಸಿ ಯಿಂದ ಘಟಿಸಬಾರದು. ಕುಟುಂಬ ಸಂಬಂಧಕ್ಕೆ ಇಸ್ಲಾಮ್ ಅತೀ ಹೆಚ್ಚು ಮಹತ್ವ ನೀಡಿದೆ. ಕುಟುಂಬದೊಂದಿಗೆ ಹಳಸಲು ಸಂಬಂಧವಿರಿಸಿ ನಾವು ಮಾಡುವ ಸತ್ಕರ್ಮಗಳು ನಿರರ್ಥಕ ವಾಗಬಹುದು. ಇಂದು ಸಮಾಜದಲ್ಲಿ ಜನಾನುರಾಗಿಯಾಗಿ ಗುರುತಿಸಿಕೊಳ್ಳುವವರು, ಸಮಾಜದ ಜನರ ಸಂಕಷ್ಟಗಳಿಗೆ ಹೆಗಲು ಕೊಡುವವರು, ಸಮಾಜದಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸಿಕೊಂಡವರು ಕುಟುಂಬದ ವಿಚಾರದಲ್ಲಿ ವಿಫಲರಾಗಿರು ತ್ತಾರೆ. ಅಣ್ಣನ ಅಭಿವೃದ್ಧಿಯನ್ನು ಸಹಿಸದ ತಮ್ಮ, ತಮ್ಮನ ಅಭಿವೃದ್ಧಿಯ ವಿರುದ್ಧ ಅಸೂಯೆ ತೋರುವ ಅಣ್ಣ ಹೀಗೆ ಬಹಳ ಹತ್ತಿರದ ಸಂಬಂಧಗಳಲ್ಲೂ ಬಿದ್ದಿರುವ ಬಿರುಕುಗಳು ನಮ್ಮ ಧಾರ್ಮಿಕ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ.
ಅಬ್ದುರ್ರಹ್ಮಾನ್ ಬಿನ್ ಔಫ್‍ರಿಂದ(ರ) ವರದಿಯಾಗಿದೆ. ಪ್ರವಾದಿ(ಸ) ಹೇಳಿರುವುದಾಗಿ ನಾನು ಕೇಳಿದ್ದೇನೆ: ಅಲ್ಲಾಹನು ಹೇಳಿದ್ದಾನೆ, “ನಾನು ಅಲ್ಲಾಹನಾಗಿದ್ದೇನೆ. ನಾನು ಪರಮ ದಯಾ ಮಯನಾಗಿದ್ದೇನೆ. ಕುಟುಂಬ ಸಂಬಂಧವನ್ನು ಸೃಷ್ಟಿಸಿದ್ದು ನಾನು. ನನ್ನ ನಾಮಗಳಿಂದ ಅದಕ್ಕೆ ಪಾಲು ಮಾಡಿ ನೀಡಿದ್ದೇನೆ. ಆದ್ದ ರಿಂದ ಕುಟುಂಬ ಸಂಬಂಧವನ್ನು ಸ್ಥಾಪಿಸುವವರೊಂದಿಗೆ ನಾನೂ ಸಂಬಂಧ ಸ್ಥಾಪಿಸುತ್ತೇನೆ. ಕುಟುಂಬದೊಂದಿಗಿನ ಸಂಬಂಧವನ್ನು ಕಡಿಯುವವರೊಂದಿಗೆ ನಾನೂ ಸಂಬಂಧ ಕಡಿಯುತ್ತೇನೆ.”
قَالَ عَبْدُ الرَّحْمَنِ بْنُ عَوْفٍ : إِنِّي سَمِعْتُ رَسُولَ اللَّهِ يَقُولُ : " قَالَ اللَّهُ جَلَّ وَعَزَّ : " أَنَا اللَّهُ وَأَنَا الرَّحْمَنُ خَلَقْتُ الرَّحِمَ وَشَقَقْتُ لَهَا     مِنَ اسْمِي فَمَنْ وَصَلَهَا وَصَلْتُهُ وَمَنْ قَطَعَهَا بَتَتُّهُ
ಕುಟುಂಬ ಸಂಬಂಧದ ಮಹತ್ವದ ಕುರಿತು ಕುರ್‍ಆನ್ ಮತ್ತು ಹದೀಸ್‍ಗಳಲ್ಲಿ ಹಲವಾರು ಪ್ರಸ್ತಾಪಗಳು ಬಂದಿವೆ. ಅಲ್ಲಾಹನು ಸೂರಃ ಅನ್ನಿಸಾದ ಪ್ರಥಮ ಸೂಕ್ತದಲ್ಲೇ ಈ ರೀತಿ ಹೇಳುತ್ತಾನೆ,
يَـٰٓأَيُّہَا ٱلنَّاسُ ٱتَّقُواْ رَبَّكُمُ ٱلَّذِى خَلَقَكُم مِّن نَّفۡسٍ۬ وَٲحِدَةٍ۬ وَخَلَقَ مِنۡہَا زَوۡجَهَا وَبَثَّ مِنۡہُمَا رِجَالاً۬ كَثِيرً۬ا وَنِسَآءً۬‌ۚ وَٱتَّقُواْ ٱللَّهَ ٱلَّذِى تَسَآءَلُونَ بِهِۦ وَٱلۡأَرۡحَامَ‌ۚ إِنَّ ٱللَّهَ كَانَ عَلَيۡكُمۡ رَقِيبً۬ا  
“ಜನರೇ, ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು. ಅದೇ ಜೀವದಿಂದ ಅದರ ಜೋಡಿಯನ್ನು ಉಂಟು ಮಾಡಿದನು ಮತ್ತು ಅವೆರಡರಿಂದ ಅನೇಕಾನೇಕ ಸ್ತ್ರೀ-ಪುರುಷರನ್ನು ಲೋಕದಲ್ಲಿ ಹಬ್ಬಿಸಿದನು. ನೀವು ಯಾರ ಹೆಸರನ್ನೆತ್ತಿ ಪರಸ್ಪರ ಹಕ್ಕು ಬಾಧ್ಯತೆಗಳನ್ನು ಕೇಳುತ್ತೀರೋ ಆ ಅಲ್ಲಾಹನನ್ನು ಭಯಪಡಿರಿ. ಕುಟುಂಬ ಸಂಬಂಧವನ್ನು ಕೆಡಿಸಬೇಡಿರಿ. ಅಲ್ಲಾಹನು ನಿಮ್ಮ ಮೇಲೆ ಮೇಲ್ನೊಟ ಇರಿಸಿ ಕೊಂಡಿದ್ದಾನೆ ಎಂಬುದನ್ನು ಚೆನ್ನಾಗಿ ಅರಿತುಕೊಳ್ಳಿರಿ.”
ಇಲ್ಲಿ ಅಲ್ಲಾಹನು ‘ಕುಟುಂಬ ಸಂಬಂಧವನ್ನು ಕೆಡಿಸಬೇಡಿರಿ’ ಎಂದು ಸ್ಪಷ್ಟವಾಗಿ ಆಜ್ಞಾಪಿಸಿದ್ದಾನೆ. ಈ ಸಂಬಂಧವನ್ನು ಮುರಿಯುವವರು ಮತ್ತು ಭೂಮಿಯಲ್ಲಿ ಕ್ಷೋಭೆ ಹರಡುವವರಿಗೆ ಅಲ್ಲಾಹನು ಈ ರೀತಿ ಎಚ್ಚರಿಕೆ ನೀಡಿದ್ದಾನೆ,
فَهَلۡ عَسَيۡتُمۡ إِن تَوَلَّيۡتُمۡ أَن تُفۡسِدُواْ فِى ٱلۡأَرۡضِ وَتُقَطِّعُوٓاْ أَرۡحَامَكُمۡ 
 فَأَصَمَّهُمۡ وَأَعۡمَىٰٓ أَبۡصَـٰرَهُمۡ ‭۝ ‬أُوْلَـٰٓٮِٕكَ ٱلَّذِينَ لَعَنَهُمُ ٱللَّهُ  ‭  
 “ನೀವು ವಿಮುಖರಾಗಿ ಬಿಟ್ಟರೆ ಭೂಮಿಯಲ್ಲಿ ಪುನಃ ಕ್ಷೋಭೆಯನ್ನುಂಟು ಮಾಡುವ ಹಾಗೂ ನಿಮ್ಮ ಕುಟುಂಬ ಸಂಬಂಧವನ್ನು ಕೆಡಿಸುವ ಹೊರತು ನಿಮ್ಮಿಂದ ಬೇರೇನನ್ನಾದರೂ ನಿರೀಕ್ಷಿಸಬಹುದೇ? ಅಲ್ಲಾಹನು ಶಪಿಸಿರುವುದು ಮತ್ತು ಕಿವುಡರಾಗಿಯೂ ಕುರುಡರಾಗಿಯೂ ಮಾಡಿ ಬಿಟ್ಟಿರುವುದು ಇವರನ್ನೇ.” (ಮುಹಮ್ಮದ್: 22-23)
ಈ ಸೂಕ್ತದ ತಾತ್ಪರ್ಯವೇನೆಂದರೆ ಪ್ರವಾದಿ(ಸ) ಮತ್ತು ಅವರ ಅನುಯಾಯಿಗಳಾದ ಸತ್ಯವಿಶ್ವಾಸಿಗಳು ನಡೆದು ತೋರಿಸಿರುವ ಹಾದಿಯಿಂದ ನೀವು ವಿಮುಖರಾಗುವುದಾದರೆ ಅದರ ಪರಿಣಾಮ ವಾಗಿ ನೀವು ಅಜ್ಞಾನದಲ್ಲೇ ಬಿದ್ದುಕೊಂಡಿರುತ್ತೀರಿ. ಮಾತ್ರವಲ್ಲ, ನೀವು ಪರಸ್ಪರ ರಕ್ತ ಹರಿಸುತ್ತಾ ಶತಮಾನಗಳನ್ನೇ ಕಳೆಯುತ್ತೀರಿ. ಸ್ವಂತ ಸಂತಾನವನ್ನೇ ಜೀವಂತ ಹೂಳಲು ಹೇಸದ ಮನಸ್ಥಿತಿ ಯವರಾಗುತ್ತೀರಿ ಎಂಬುದಾಗಿದೆ.
ಪ್ರವಾದಿಯವರು(ಸ) ಮಕ್ಕಾದಲ್ಲಿ ಧರ್ಮ ಪ್ರಚಾರ ನಡೆಸುತ್ತಿದ್ದ ಆರಂಭ ಕಾಲದಲ್ಲೇ ಕುಟುಂಬ ಸಂಬಂಧದ ಕಡೆಗೆ ಹೆಚ್ಚಿನ ಮಹತ್ವ ನೀಡಿದ್ದರು. ಅಮ್ರ್ ಬಿನ್ ಆಸ್(ರ) ಹೇಳುತ್ತಾರೆ: ಜಾಹಿಲಿಯಾ ಕಾಲದಲ್ಲಿ ಅರೇಬಿಯಾದಲ್ಲಿ ಓರ್ವ ಪ್ರವಾದಿ ಬಂದಿದ್ದಾರೆಂದೂ ಅವರು ಕೆಲವು ವಿಚಾರಗಳನ್ನು ಹೇಳುತ್ತಿದ್ದಾರೆಂದೂ ಯಾರೋ ಹೇಳುವುದನ್ನು ನಾನು ಕೇಳಿದೆ ಹಾಗೂ ನಾನು ಅವರನ್ನು ಭೇಟಿಯಾಗಲು ಹೋದೆ. ಅವರ ಬಳಿ ಹೋಗಿ ಕೇಳಿದೆ, “ತಾವು ಯಾರು?” ಪ್ರವಾದಿಯವರು(ಸ) ಹೇಳಿದರು. “ನಾನು ಪ್ರವಾದಿಯಾಗಿದ್ದೇನೆ. ಅಲ್ಲಾಹನು ನನ್ನನ್ನು ಜನರ ಬಳಿಗೆ ಪ್ರವಾದಿಯಾಗಿ ನೇಮಿಸಿದ್ದಾನೆ.” ನಾನು ಕೇಳಿದೆ, “ಯಾವ ಸಂದೇಶದೊಂದಿಗೆ ಅಲ್ಲಾಹನು ನಿಮ್ಮನ್ನು ಕಳುಹಿಸಿದ್ದಾನೆ?” ಪ್ರವಾದಿಯವರು(ಸ) ಹೇಳಿದರು,
أَرْسَلَنِي بِصِلَةِ الْأَرْحَام وَكَسْر الْأَوْثَان وَأَنْ يُوَحَّد اللَّه لَا يُشْرَك بِهِ شَيْء
 “ಕುಟುಂಬ ಸಂಬಂಧವನ್ನು ಸ್ಥಾಪಿಸಬೇಕು. ವಿಗ್ರಹಗಳನ್ನು ಧ್ವಂಸಗೊಳಿಸಬೇಕು. ಅಲ್ಲಾಹನೊಂದಿಗೆ ಇತರರನ್ನು ಸಹಭಾಗಿಗಳಾಗಿ ಮಾಡದೆ ಅವನ ಏಕತ್ವವನ್ನು ಸ್ಥಾಪಿಸಬೇಕು.”
ಇಮಾಮ್ ನವವಿ(ರ) ಈ ಹದೀಸಿನ ಕುರಿತು ಹೀಗೆ ವಿವರಿಸಿದ್ದಾರೆ, “ಕುಟುಂಬ ಸಂಬಂಧಗಳನ್ನು ಸ್ಥಾಪಿಸುವುದಕ್ಕೆ ಇಸ್ಲಾಮ್ ನೀಡುವ ಪ್ರೇರಣೆ ಹಾಗೂ ಪ್ರೋತ್ಸಾಹಗಳಿಗೆ ಈ ಹದೀಸಿನಲ್ಲಿ ಪುರಾವೆ ಇದೆ. ಯಾಕೆಂದರೆ, ಪ್ರವಾದಿಯವರು(ಸ) ಕುಟುಂಬ ಸಂಬಂಧವನ್ನು ಪರಾಮರ್ಶಿಸಿರುವುದು ತೌಹೀದ್ ನೊಂದಿಗಾಗಿದೆ. ಧರ್ಮದ ಇತರ ವಿಷಯಗಳನ್ನು ಪ್ರಸ್ತಾಪಿಸದೆ ಕುಟುಂಬದ ಮಹತ್ವವನ್ನು ಸ್ಮರಿಸುತ್ತಾ ಅದನ್ನು ಪ್ರಥಮವಾಗಿ ಅವರು ಹೇಳಿದ್ದಾರೆ.”
ಇಸ್ಲಾಮಿನಲ್ಲಿ ಎಲ್ಲಾ ವಿಧದ ಸಂಬಂಧಗಳಿಗಿಂತಲೂ ಆದರ್ಶ ಸಂಬಂಧವು ದೊಡ್ಡದಾಗಿದೆ. ಆದರ್ಶದಲ್ಲಿ ವೈರುಧ್ಯತೆ ಇದ್ದರೂ ಕುಟುಂಬ ಸಂಬಂಧಿಗಳೊಂದಿಗೆ ಉತ್ತಮ ರೀತಿಯಿಂದ ವರ್ತಿಸಲು ಇಸ್ಲಾಮ್ ಧರ್ಮವು ಆಜ್ಞಾಪಿಸುತ್ತದೆ. ಈ ಸೂಕ್ತವು ಅದಕ್ಕಿರುವ ಒಂದು ಉದಾಹರಣೆಯಾಗಿದೆ. ಸೂರಃ ಲುಕ್ಮಾನ್‍ನ 15ನೇ ಸೂಕ್ತ ದಲ್ಲಿ ಅಲ್ಲಾಹನು ಹೆತ್ತವರ ಕುರಿತು ಈ ರೀತಿ ಹೇಳುತ್ತಾನೆ, “ಅವರು ನಿನಗೆ ತಿಳಿಯದುದನ್ನು ನನ್ನೊಂದಿಗೆ ಸಹಭಾಗಿಯಾಗಿ ಮಾಡಬೇಕೆಂದು ನಿನ್ನ ಮೇಲೆ ಒತ್ತಡ ಹಾಕಿದರೆ ಅವರ ಮಾತನ್ನು ಎಷ್ಟು ಮಾತ್ರಕ್ಕೂ ಕೇಳಬೇಡ. ಆದರೆ ಈ ಲೋಕದಲ್ಲಿ ಅವ ರೊಂದಿಗೆ ಸದ್ವರ್ತನೆ ಮಾಡುತ್ತಿರು.”
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್(ರ) ಹೇಳುತ್ತಾರೆ: ಪ್ರವಾದಿ ಯವರು(ಸ) ಏರು ದನಿಯಲ್ಲಿ ಹೀಗೆ ಹೇಳುವುದನ್ನು ನಾನು ಕೇಳಿದೆ,
" إِنَّ آلَ أَبِي فُلانٍ لَيْسُوا لِي بِأَوْلِيَاءَ , إِنَّمَا وَلِيِّ اللَّهُ وَصَالِحُو الْمُؤْمِنِينَ " . 
 “ಇಂತಿಂತಹ ವ್ಯಕ್ತಿಯ ಕುಟುಂಬವು ನನ್ನ ಸಹಾಯಕರಲ್ಲ. ನನ್ನ ಸಹಾಯಿಗಳು ಅಲ್ಲಾಹ್ ಮತ್ತು ಸಚ್ಚರಿತ ಸತ್ಯವಿಶ್ವಾಸಿಗಳಾಗಿದ್ದಾರೆ. ಆದರೆ ಇಂತಿಂತಹ ವ್ಯಕ್ತಿಗಳಿಗೆ ನನ್ನೊಂದಿಗೆ ಕೌಟುಂಬಿಕ ಸಂಬಂಧವಿದೆ. ನಾನು ಆ ಸಂಬಂಧವನ್ನು ಹಸನುಗೊಳಿಸಿಯೇ ಸಿದ್ಧ.”
ಇಸ್ಲಾಮಿನಲ್ಲಿ ಕುಟುಂಬ ಸಂಬಂಧಕ್ಕೆ ಇಷ್ಟು ಮಹತ್ವ ಇರುವಾಗ ಅದನ್ನು ಮುರಿಯುವುದು ದೊಡ್ಡ ಅಪರಾಧವಾಗುತ್ತದೆ. ಕುಟುಂಬ ಸಂಬಂಧವನ್ನು ಕೆಡಿಸುವುದರಿಂದ ದೇವ ಕೋಪಕ್ಕೆ ಪಾತ್ರರಾಗಬಹುದು. ಮಾಡಿದ ಸತ್ಕರ್ಮಗಳು ನೀರಿನಲ್ಲಿ ಬರೆದಂತಾಗಬಹುದು. ಅಬೂ ಹುರೈರಾ(ರ) ವರದಿ ಮಾಡುತ್ತಾರೆ:
 إِنَّ أَعْمَالَ بَنِي آدَمَ تُعْرَضُ عَلَى اللَّهِ تَبَارَكَ وَتَعَالَى عَشِيَّةَ كُلِّ خَمِيسٍ لَيْلَةَ الْجُمُعَةِ ، فَلا يَقْبَلُ عَمَلَ قَاطِعِ رَحِمٍ 
ಪ್ರವಾದಿಯವರು(ಸ) ಹೇಳಿದರು, “ಮನುಷ್ಯರ ಕರ್ಮಗಳನ್ನು ಎಲ್ಲಾ ಶುಕ್ರವಾರದ ಮುಂಜಾನೆ ಅಲ್ಲಾಹನ ಮುಂದೆ ಪ್ರದರ್ಶಿಸಲಾಗುವುದು. ಆದರೆ ಕುಟುಂಬ ಸಂಬಂಧವನ್ನು ಮುರಿದವನ ಕರ್ಮಗಳನ್ನು ತಿರಸ್ಕರಿಸಲಾಗುವುದು.”
ಅಬ್ದುಲ್ಲಾ ಬಿನ್ ಅಬೀ ಔಫ್(ರ) ಹೇಳುತ್ತಾರೆ: ಒಮ್ಮೆ ನಾವು ಪ್ರವಾದಿಯವರೊಂದಿಗೆ(ಸ) ಕುಳಿತಿದ್ದೆವು. ಆಗ ಪ್ರವಾದಿಯವರು(ಸ) ಹೇಳಿದರು,لَا يُجَالِسُنَا الْعَشِيَّةَ قَاطِعُ رَحِمٍ “ಕುಟುಂಬ ಸಂಬಂಧವನ್ನು ಮುರಿದವರು ಇಂದು ನಮ್ಮೊಂದಿಗೆ ಕುಳಿತುಕೊಳ್ಳಬಾರದು.” ಆಗ ಅಲ್ಲಿಂದ ಓರ್ವರು ಎದ್ದು ಹೊರ ನಡೆದರು. ಅವರ ಮಾತೃ ಸಹೋದರಿ ಹಾಗೂ ಅವರ ಮಧ್ಯೆ ಮನಸ್ತಾಪವಿತ್ತು. ಹಾಗೆ ಅವರು ಅದನ್ನು ಸರಿಪಡಿಸಿ ಮರಳಿದರು. ಆಗ ಪ್ರವಾದಿಯವರು(ಸ) ಹೇಳಿದರು,
 إِنَّ الرَّحْمَةَ لَا تَنْزِلُ عَلَى قَوْمٍ فِيهِمْ قَاطِعُ رَحِمٍ“ಕುಟುಂಬ ಸಂಬಂಧವನ್ನು ಕಡಿದುಕೊಂಡವನು ಇರುವಲ್ಲಿಗೆ ಅಲ್ಲಾಹನ ಕರುಣೆಯು ವರ್ಷಿಸುವು ದಿಲ್ಲ” ಅದೇ ರೀತಿ ಪ್ರಮುಖ ಸಹಾಬಿಯಾದ ಅಬ್ದುಲ್ಲಾ ಬಿನ್ ಮಸ್‍ಊದ್ ಸುಬ್‍ಹಿ ನಮಾಝ್‍ನ ಬಳಿಕ ನಡೆಸುತ್ತಿದ್ದ ಧಾರ್ಮಿಕ ಪ್ರವಚನದ ಬಳಿಕ ಪ್ರಾರ್ಥನೆ ನಡೆಸುವುದಕ್ಕಿಂತ ಮುಂಚೆ ಈ ರೀತಿ ಹೇಳುತ್ತಿದ್ದರು,
  أَنْشُدُ اللَّهَ قَاطِعَ الرَّحِمِ إِمَّا قَامَ عَنَّا ، فَإِنَّا نُرِيدُ أَنْ نَدْعُوَا رَبَّنَا ، وَإِنَّ أَبْوَابَ السَّمَاءِ مُرَتَجَةٌ دُونَ قَاطِعِ الرَّحِمِ“ಅಲ್ಲಾಹನ ಮೇಲೆ ಆಣೆ ಹಾಕಿ ಹೇಳುತ್ತಿದ್ದೇನೆ. ಕುಟುಂಬ ಸಂಬಂಧವನ್ನು ಮುರಿದವರು ಇಲ್ಲಿಂದ ಎದ್ದು ಹೋಗಲಿ. ಯಾಕೆಂದರೆ ನಾವು ಅಲ್ಲಾಹನೊಂದಿಗೆ ಪ್ರಾರ್ಥಿಸಲಿದ್ದೇವೆ. ಕುಟುಂಬ ಸಂಬಂಧವನ್ನು ಮುರಿದವನಿಗೆ ಆಕಾಶದ ಬಾಗಿಲುಗಳು ಮುಚ್ಚಲ್ಪಡುತ್ತವೆ.”
ಇದರಿಂದ ಕುಟುಂಬ ಸಂಬಂಧಕ್ಕೆ ಎಷ್ಟು ಮಹತ್ವ ಇದೆಯೆಂದು ಸ್ಪಷ್ಟವಾಗುತ್ತದೆ. ಆದ್ದರಿಂದ ನಾವು ಕುಟುಂಬ ಸಂಬಂಧಿಗಳೊಂದಿಗೆ ಮಾತು ಬಿಟ್ಟಿದ್ದರೆ ಅದನ್ನು ಮರುಸ್ಥಾಪಿಸಬೇಕಾಗಿದೆ. ಇಲ್ಲದಿದ್ದರೆ ನಾವು ನಿರ್ವಹಿಸುವ ಎಲ್ಲಾ ಸತ್ಕರ್ಮಗಳು ನಿಶ್ಫಲವಾಗುವುದು. ಈ ನಿಟ್ಟಿನಲ್ಲಿ ನಾವು ಕುಟುಂಬ ಸಂಬಂಧದ ಸ್ಥಾಪನೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಅದಕ್ಕೆ ಸರ್ವಶಕ್ತನಾದ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ