ಸೋಮವಾರ, ಮೇ 21, 2012

ವ್ಯಭಿಚಾರಕ್ಕಿಂತ ದೊಡ್ಡ ಪಾಪ


ಇಸ್ಲಾಮ್ ಧರ್ಮವು ವ್ಯಭಿಚಾರವನ್ನು ತೀವ್ರವಾಗಿ ವಿರೋಧಿಸಿದೆ. ಕುರಾನ್ ಅದರ ಬಳಿ ಸುಳಿಯಬಾರದೆಂದು ತಾಕೀತು ಮಾಡಿದೆ. ಪ್ರವಾದಿಯವರು(ಸ) ಹೆಸರಿಸಿರುವ ಏಳು ಮಹಾ ಪಾಪಗಳಲ್ಲಿ ವ್ಯಭಿಚಾರವೂ ಒಂದಾಗಿದೆ. ವಿವಾಹಿತನು ವ್ಯಭಿಚಾರ ನಡೆಸಿದರೆ ವಧೆ ಶಿಕ್ಷೆ ಕಡ್ಡಾಯವಾಗುತ್ತದೆ. ಅದೊಂದು ಅಶ್ಲೀಲ ಕೃತ್ಯವಾಗಿದೆ. ಆದರೆ ಇಸ್ಲಾಮ್ ವ್ಯಭಿಚಾರಕ್ಕಿಂತಲೂ ದೊಡ್ಡ ಪಾಪಗಳೆಂದು ಹೇಳಿರುವ ಕೆಲವು ದುಶ್ಕರ್ಮಗಳಿವೆ. ಅವುಗಳ ಪೈಕಿ ಪರದೂಷಣೆಯು ಪ್ರದಾನವಾದುದಾಗಿದೆ. ಪರದೂಷಣೆ ಎಂದರೇನು? ಎಂದು ಪ್ರವಾದಿಯವರೊಡನೆ(ಸ) ಕೇಳಲಾಯಿತು. ಆಗ ಅವರು ಹೇಳಿದರು “ನೀನು ನಿನ್ನ ಸಹೋದರನ ಬಗ್ಗೆ ಅವನಿಗೆ ಅಸಮಾಧಾನ ಉಂಟಾಗುವಂತಹ ರೀತಿಯಲ್ಲಿ ಪ್ರಸ್ತಾಪಿಸುವುದು. ನಾನು ಪ್ರಸ್ತಾಪಿಸುವಂತಹ ವಿಷಯ ನನ್ನ ಸಹೋದರನಲ್ಲಿದ್ದರೆ ನಿಮ್ಮ ಅಭಿಪ್ರಾಯವೇನು?” ಎಂದು ಕೇಳಲಾಯಿತು. ಅದಕ್ಕೆ ಪ್ರವಾದಿಯವರು(ಸ) ಹೇಳಿದರು. ಅವನಲ್ಲಿ ಆ ವಿಷಯ ಇದ್ದಾಗಲೇ ಅದು ಪರದೂಷಣೆ ಎನಿಸಿಕೊಳ್ಳುತ್ತದೆ. ಇಲ್ಲದಿದ್ದರೆ ಅದು ಆರೋಪವೆನಿಸಿಕೊಳ್ಳುತ್ತದೆ.”
ಇಂದು ನಾವು ಈ ಮಹಾ ಅಪರಾಧವನ್ನು ಕ್ಷುಲ್ಲಕವೆಂದು ಭಾವಿಸಿ ದಿನನಿತ್ಯ ಮಾಡುತ್ತಿದ್ದೇವೆ. ಜನರು ‘ಟೈಂಪಾಸ್’ ಎಂಬ ನೆಲೆಯಲ್ಲಿ ಮಾಡುತ್ತಿರುವುದು ಈ ಪರದೂಷಣೆಯನ್ನಾಗಿದೆ. ಕಟ್ಟೆಗಳಲ್ಲಿ ಕ್ಲಾಸುಗಳಲ್ಲಿ, ದೂರವಾಣಿಯಲ್ಲಿ ನಾವು ಈ ಅಪರಾಧದ ವಕ್ತಾರರಾಗುತ್ತಿದ್ದೇವೆ. ಈ ಅಪರಾಧದ ನೀಚತೆಯನ್ನು ಪ್ರವಾದಿಯವರು(ಸ) ತನ್ನ ಅನುಯಾಯಿಗಳಿಗೆ ಉದಾಹರಣೆ ಸಹಿತ ವಿವರಿಸಿದ್ದಾರೆ.
ಅಬೂ ಹುರೈರ(ರ) ವರದಿ ಮಾಡಿದ್ದಾರೆ. “ಅಸ್ಲಮ್ ಗೋತ್ರದ ಮಾಯಿಝ್ ಬಿನ್ ಮಾಲಿಕ್(ರ) ಪ್ರವಾದಿಯವರ(ಸ) ಬಳಿ ಬಮದು ವ್ಯಭಿಚಾರಕ್ಕಿರುವ ಶಿಕ್ಷೆಯನ್ನು ತನ್ನ ಮೇಲೆ ಜಾರಿಗೊಳಿಸಬೇಕೆಂದು ನಾಲ್ಕು ಬಾರಿ ಬಂದು ಭಿನ್ನವಿಸಿದ್ದರು. ಬಳಿಕ ಪ್ರವಾದಿಯವರು(ಸ) ಅವರಿಗೆ ಕಲ್ಲೆಸೆದು ಕೊಲ್ಲುವ ಶಿಕ್ಷೆ ನೀಡಿದ್ದರು. ಕೆಲ ಕಾಲದ  ಬಳಿಕ ಪ್ರವಾದಿಯವರು(ಸ) ಮತ್ತು ಕೆಲವು ಅನುಯಾಯಿಗಳು (ಮಾಯಿಝ್(ರ) ವಧಿಸಲ್ಪಟ್ಟ ಸ್ಥಳದ ಮೂಲಕ) ನಡೆದು ಹೋಗುತ್ತಿದ್ದರು. ಆಗ ಓರ್ವರು ಹೇಳಿದರು, “ಇವರು ಎಂತಹ ಬುದ್ಧಿಹೀನ ವ್ಯಕ್ತಿ. ಹಲವು ಬಾರಿ ಅವರು ಪ್ರವಾದಿಯವರ(ಸ) ಬಳಿಗೆ ಬಂದರು. ಪ್ರತೀ ಭಾರಿಯೂ ಪ್ರವಾದಿಯವರು(ಸ) ಅವರನ್ನು ಮರಳಿಕಳಿಸಿದರು. ಆದರೂ ಒಂದು ನಾಯಿ ಕೊಲ್ಲಲ್ಪಡುವಂತೆ ಕೊಲ್ಲಲ್ಪಟ್ಟರು. ಇದನ್ನು ಕೇಳಿದ ಪ್ರವಾದಿವರ್ಯರು(ಸ) ಮೌನವ ವಹಿಸಿದರು. ಸ್ವಲ್ಪ ಮುಂದೆ ಹೋದಾಗ ಸತ್ತು ಕೊಳೆತು ನಾರುತ್ತಿರುವ ಕತ್ತೆಯ ಶವವನ್ನು ಕಂಡರು. ಪ್ರವಾದಿರ್ವಯರು(ಸ) ಅವರೊಂದಿಗೆ “ನೀವಿಬ್ಬರು ಈ ಕತ್ತೆಯನ್ನು ತಿನ್ನಿರಿ.” ಆಗ ಅವರು ಕೇಳಿದರು, “ಅಲ್ಲಾಹನ ದೂತರೇ, ಈ ಕತ್ತೆಯ ಶವವನ್ನಾ?” ಪ್ರವಾದಿಯವರು(ಸ) ಹೇಳಿದರು, “ಸ್ವಲ್ಪ ವೊದಲು ನೀವು ನಿಮ್ಮ ಸಹೋದರನ ಅಭಿಮಾನವನ್ನು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿದ್ದೀರಿ. ನೀವು ಹೇಳಿದ ಆ ಮಾತುಗಳು ಇದನ್ನು ತಿನ್ನುವುದಕ್ಕಿಂತ ಗಂಭೀರವಾದುದಾಗಿವೆ. ಮುಹಮ್ಮದನ ಆತ್ಮವು ಯಾರ ಕೈಯಲ್ಲಿದೆಯೋ ಅವನಾಣೆ! ಖಂಡಿತವಾಗಿಯೂ ಮಾಯಿಝ್(ರ) ಸ್ವರ್ಗದ ನದಿಯೊಂದರಲ್ಲಿ ಈಗ ಈಜಾಡುತ್ತಿರಬಹುದು.”
ಓರ್ವ ಮನುಷ್ಯನ ತಪ್ಪುಗಳನ್ನೂ ಕುಂದು ಕೊರತೆಗಳನ್ನೂ ಇತರರ ಮುಂದೆ ಹೇಳುವುದು ದೊಡ್ಡ ಪಾಪಕಾರ್ಯವಾಗಿದೆ. ವಿಶೇಷತಹ ಸತ್ಯವಿಶ್ವಾಸಿಗಳು ಈ ಪಾಪಕ್ಕೆ ಬಲಿ ಬಿಳ ಬಾರದು. ವಿಶ್ವಾಸಿಗಳು ಪರಸ್ಪರ ಸಹೋದರರಂತೆ ಜೀವಿಸಬೇಕಾದವರಾಗಿದ್ದಾರೆ. ಈ ಸಾಹೋದರ್ಯ ಸಂಬಂಧವನ್ನು ಮುರಿಯುವಂತ ದುಶ್ಚಟಗಳು ಅವರಲ್ಲಿ ಇರಲೇಬಾರದು ಸುಳ್ಳು, ಪರದೂಷಣೆಯಂತಹ ಪಾಪಗಳು ವಿಶ್ವಾಸಿಗಳ ಮಧ್ಯೆ ಇರುವ ಸೌಹಾರ್ದತೆಯನ್ನು ನಾಶಪಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ವಿಶ್ವಾಸಿಗಳು ವರ್ಜಿಸಬೇಕಾದ ಪಾಪ ಕೃತ್ಯಗಳ ಕುರಿತು ಅಲ್ಲಾಹನು ಸೂರಃ ಹುಜರಾತಿನ 12ನೇ ಸೂಕ್ತದಲ್ಲಿ ಹೇಳುತ್ತಾನೆ, “ಸತ್ಯವಿಶ್ವಾಸಿಗಳೇ ಹೆಚ್ಚಿನ ಗುಮಾನಿಗಳಿಂದ ದೂರವಿರಿ. ನಿಶ್ಚಯವಾಗಿಯೂ ಕೆಲವು ಗುಮಾನಿಗಳು ಪಾಪವಾಗಿವೆ. ದೋಷಾನ್ವೇಷಣೆ ಮಾಡದಿರಿ. ನಿಮ್ಲಲ್ಲಿ ಯಾರೂ ಯಾರ ಬಗ್ಗೆಯೂ ಪರದೂಷಣೆ ಮಾಡಬಾರದು. ನಿಮ್ಮಲ್ಲಿ ಯಾರಾದರೂ ತನ್ನ ಮೃತ ಸಹೋದರನ ಮಾಂಸ ತಿನ್ನುವನೇ? ನೀವು ಸ್ವತಃ ಅದನ್ನು ಅಸಹ್ಯಪಡುತ್ತೀರಿ. ಅಲ್ಲಾಹನನ್ನು ಭಯ ಪಡಿರಿ. ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನೂ ಕರುಣಾನಿಧಿಯೂ ಆಗಿರುತ್ತಾನೆ.”
ಇಂದು ಸಮಾಜದ ಬಹುತೇಕ ಮಂದಿಯಲ್ಲಿ ಪರದೂಷಣೆಯೆಂಬ ಆ ಮಹಾ ಪಾಪವು ಹಾಸು ಹೊಕ್ಕಾಗಿದೆ. ಅದರಲ್ಲಿ ವಿಶ್ವಾಸಿಗಳೂ ಸೇರಿದ್ದಾರೆ. ಧಾರ್ಮಿಕ ವಿಷಯಗಳಲ್ಲಿ ಹೆಚ್ಚು ಆಸಕ್ತರಾಗಿರುವವರೂ ಪರದೂಷಣೆಯಲ್ಲಿ ಮುಂದಿರುತ್ತಾರೆ ಎಂಬುದು ಒಂದು ದುರಂತವೇ ಸರಿ. ಅದರ ಅದರ ಗಂಭೀರತೆಯ ಕುರಿತೋ ಅಥವಾ ಅದು ಸಮಾಜದಲ್ಲಿ ಉಂಟು ಮಾಡುವ ಅನಾಹುತಗಳ ಕುರಿತೋ ಅವರು ಆಲೋಚಿಸುತ್ತಿಲ್ಲ. ಈ ಪಾಪವು ಹೆಚ್ಚಾಗಿ ಗೋಚರವಾಗುತ್ತಿರುವುದು ಮಹಿಳೆಯರಲ್ಲಿ ಎಂಬುದು ಖೇದಕರವಾದ ಸಂಗತಿಯಾಗಿದೆ. ಇದರರ್ಥ ಪುರುಷರಲ್ಲಿ ಈ ಸ್ವಭಾವವು ಇಲ್ಲವೆಂದಲ್ಲ. ಪುರುಷರು ದುಡಿಮೆಯ ನಿಭಿಡತೆಯಲ್ಲಿರುತ್ತಾರೆ. ಆದ್ದರಿಂದ ಅವರಿಗೆ ಅದಕ್ಕೆ ಹೆಚ್ಚು ಸಮಯ ದೊರೆಯುವುದಿಲ್ಲ. ಆದರೆ ಸಿಕ್ಕಿದ ಸಮಯವನ್ನು ಅದಕ್ಕೆ ಉಪಯೋಗಿಸುತ್ತಿದ್ದಾರೆ ಎಂಬುದು ಕಟು ಸತ್ಯವಾಗಿದೆ. ಮಹಿಳೆಯರು ಹಾಗಲ್ಲ. ಅವರಿಗೆ ಬಿಡುವು ಹೆಚ್ಚಾಗಿರುತ್ತದೆ. ಈ ಸಂದರ್ಭಗಳಲೆಲ್ಲಾ ಪರದೂಷಣೆಗೆ ಅವರ ನಾಲಗೆಯು ಸಾಕ್ಷಿಯಾಗುತ್ತದೆ. ಸಂಜೆ ವೇಳೆಗಳಲ್ಲೆಲ್ಲಾ ನೆರೆಯವರೊಂದಿಗೆ ಕುಳಿತು ಹರಟೆ ಹೊಡೆಯುವಾಗ ಹೆಚ್ಚಿನ ವೇಳೆ ಇತರರ ತಪ್ಪುಗಳೂ, ಕೊರತೆಗಳೂ ಅಲ್ಲಿ ಪ್ರಸ್ತಾಪಿಸಲ್ಪಡುತ್ತವೆ.
ಮಹಿಳೆಯರ ಕುರಿತು ಒಂದು ಗಾದೆ ಮಾತು ಚಾಲ್ತಿಯಲ್ಲಿದೆ. “ಮೂವರು ಮಹಿಳೆಯರು ಮಾತನಾಡುವಾಗ ಅದು ಸಂಭಾಷಣೆ. ಅವರ ಪೈಕಿ ಓರ್ವಳು ಹೊರಟು ಹೋದಾಗ ಅದು ಪರದೂಷಣೆ.” ಇಂದು ನಡೆಯುವ ವಿಷಯವೇ ಆಗಿದೆ. ಮೂವರೋ ನಾಲ್ವರೋ ಸೇರಿ ಏನಾದರೂ ಮಾತನಾಡುತ್ತಿರುತ್ತಾರೆ. ಅವರಲ್ಲಿ ಯಾರಾದರೂ ಹೋದರೆ ಮತ್ತು ಹೋದ ವ್ಯಕ್ತಿಯ ಕುರಿತು ಅಲ್ಲಿ ಚರ್ಚೆಯಾಗುತ್ತದೆ. ಖಂಡಿತವಾಗಿಯೂ ಇಂತಹ ಸ್ವಭಾವವು ಓರ್ವ ಸತ್ಯವಿಶ್ವಾಸಿಗೆ ಭೂಷಣವಲ್ಲ. ವ್ಯಭಿಚಾರದಂತಹ ಪಾಪಗಳನ್ನು ಬಹಳ ಗಂಭೀರವಾಗಿ ಪರಿಗಣಿಸುವವರು ವ್ಯಭಿಚಾರಕ್ಕಿಂತಲೂ ದೊಡ್ಡ ಈ ಪಾಪವನ್ನು ಕ್ಷುಲ್ಲಕವೆಂದು ಬಗೆದು ಮಾಡುತ್ತಿದ್ದಾರೆ.
ಅಬೂ ಸಯೀದಿಲ್ ಖುದ್ರೀ(ರ) ವರದಿ ಮಾಡಿದ್ದಾರೆ. ಪ್ರವಾದಿಯವರು(ಸ) ಹೇಳಿದರು, “ಪರದೂಷಣೆಯು ವ್ಯಭಿಚಾರಕ್ಕಿಂತ ಗಂಭೀರವಾದ ಪಾಪವಾಗಿದೆ.” ಜನರು ಕೇಳಿದರು, “ಅಲ್ಲಾಹನ ಪ್ರವಾದಿಯವರೇ(ಸ) ಪರದೂಷಣೆಯು ಯಾಕೆ ವ್ಯಭಿಚಾರಕ್ಕಿಂತ ದೊಡ್ಡ ಪಾಪವಾಯಿತು? ಪ್ರವಾದಿಯವರು(ಸ) ಹೇಳಿದರು. ಓರ್ವನು ವ್ಯಭಿಚಾರ ವೆಸಗಿದರೆ ಅಲ್ಲಾಹನು ಅವನ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಆದರೆ ಪರದೂಷಣೆ ಮಾಡಿದವನು. ಅವನು ಯಾರ ಕುರಿತು ಪರದೂಷಣೆ ಮಾಡಿರುವನೋ ಅವನು ಕ್ಷಮಿಸುವವರೆಗೆ ಅಲ್ಲಾಹನು ಪರದೂಷಣೆ ನಡೆಸಿದವನನ್ನು ಕ್ಷಮಿಸಿಲಿಕ್ಕಿಲ್ಲ.”
ಒಟ್ಟಿನಲ್ಲಿ ವ್ಯಕ್ತಿಗಳ ಅಭಿಮಾನವನ್ನು ಅವಹೇಳನ ಮಾಡುವ ಪರದೂಷಣೆಯು ವಿಶ್ವಾಸಿಗಳಲ್ಲಿರಲೇ ಬಾರದು. ಎಲ್ಲಾ ಧಾರ್ಮಿಕ ಕರ್ಮಗಳನ್ನು ಚಾಚೂ ತಪ್ಪದೆ ಮಾಡುತ್ತಿದ್ದರೂ ಪರದೂಷಣೆಯು ನಮ್ಮಲ್ಲಿದ್ದರೆ ಆ ಕರ್ಮಗಳಿಂದೇನೂ ಪ್ರಯೋಜನವಿಲ್ಲ. ಇದು ಕ್ಷುಲ್ಲಕವೆಂದು ಕಂಡರೂ ಇದರಿಂದಾಗುವ ಆಪತ್ತು ಬಹಳ ಗಂಭೀರವಾದುದಾಗಿದೆ. ಆದ್ದರಿಂದ ನಮ್ಮ ಕರ್ಮಗಳು ನಿಶ್ಫಲಗೊಳ್ಳದಿರಬೇಕಾದರೆ ಈ ಪಾಪದಿಂದ ನಾವು ದೂರ ಸರಿಯಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಿಮ್ಮನ್ನು ಅನುಗ್ರಹಿಸಲಿ.

ಬುಧವಾರ, ಮೇ 16, 2012

ಇವರಲ್ಲಿ ನಿಮಗೆ ಯಾರು ಹೆಚ್ಚು ಇಷ್ಟ?



ಈ ಲೋಕದಲ್ಲಿ ಜಯಾಪಜಯಗಳನ್ನು ನಿರ್ಧರಿಸುವಲ್ಲಿ ಮುಖ್ಯವಾಗಿ ಮೂರು ವಿಷಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಅವು ಸಂಪತ್ತು, ಕುಟುಂಬ ಮತ್ತು ಕರ್ಮಗಳಾಗಿವೆ. ಈ ಮೂರು ವಿಷಯಗಳ ನಿರ್ವಹಣೆಗನುಗುಣವಾಗಿ ಮಾನವರಿಗೆ ಸ್ವರ್ಗ-ನರಕ ಪ್ರಾಪ್ತಿಯಾಗುತ್ತದೆ. ಪ್ರವಾದಿಯವರು(ಸ) ಈ ಮೂರು ವಿಷಯಗಳನ್ನು ಗೆಳೆಯರಿಗೆ ಹೋಲಿಸಿದ್ದಾರೆ. ಅಬೂಹುರೈರರಿಂದ(ರ) ವರದಿಯಾಗಿದೆ: ಪ್ರವಾದಿಯವರು(ಸ) ಹೇಳಿದರು, “ಓರ್ವ ಮನುಷ್ಯನ ಸಂಪತ್ತು, ಕುಟುಂಬ, ಕರ್ಮಗಳ ಉಪಮೆಯು ಮೂವರು ಸಹೋದರರು ಅಥವಾ ಗೆಳೆಯರಿರುವ ಓರ್ವನಂತಾಗಿದೆ. ಅವರಲ್ಲಿ ಓರ್ವನು ಹೇಳಿದನು- ನಾನು ನಿನ್ನ ಜೀವನದಲ್ಲಿ ನಿನ್ನೊಂದಿಗೇ ಇರುವೆನು. ಆದರೆ ನೀನು ಮರಣ ಹೊಂದಿದರೆ ನನ್ನ ಮತ್ತು ನಿನ್ನ ಮಧ್ಯೆ ಇರುವ ಸರ್ವ ಸಂಬಂಧಗಳೂ ಮುರಿದು ಹೋಗುವುದು. ಎರಡನೆಯವನು ಹೇಳಿದನು, ನಾನೂ ನಿನ್ನೊಂದಿಗಿರುವೆನು. ಆದರೆ ಆ ಕಾಣುತ್ತಿರುವ ಮರದ ಬಳಿ ತಲುಪಿದರೆ ನನ್ನ ಮತ್ತು ನಿನ್ನ ಮಧ್ಯೆ ಯಾವುದೇ ಸಂಬಂಧವಿರುವುದಿಲ್ಲ. ಮೂರನೆಯವನು ಹೇಳಿದನು- ನೀನು ಜೀವಿಸಿದರೂ ಮರಣಿಸಿದರೂ ನಾನು ಸದಾ ನಿನ್ನೊಂದಿಗೆ ಇರುವೆನು.”
ಮನುಷ್ಯನು ತನ್ನ ಜೀವನದಲ್ಲಿ ಮಾಡುವ ಕರ್ಮಗಳು, ಅವನು ಪ್ರೀತಿಸುವ ಕುಟುಂಬಗಳು, ಅವನು ಹೆಚ್ಚು ಹೆಚ್ಚು ಸಂಪಾದಿಸಿರುವ ಅವನ ಸಂಪತ್ತು ಈ ಮೂರು ವಸ್ತುಗಳ ವಾಸ್ತವಿಕತೆಯನ್ನು ಮೇಲೆ ತಿಳಿಸಲಾದ ಪ್ರವಾದಿ ವಚನವು ವಿವರಿಸುತ್ತದೆ. ಸಂಪತ್ತು ಮನುಷ್ಯನಿಗೆ ತನ್ನ ಜೀವನದಲ್ಲಿ ಹೆಚ್ಚು ಪ್ರಯೋಜನ ನೀಡುವ ಒಂದು ವಸ್ತುವಾಗಿದೆ. ಜೀವನದ ಅವಶ್ಯಕತೆಗಳನ್ನು ಪೂರೈಸಲು ಸಂಪತ್ತು ಅಗತ್ಯವಾಗಿದೆ. ಮನುಷ್ಯನು ಸಂಪತ್ತಿನಲ್ಲಿ ತನ್ನ ಸಂತೋಷವನ್ನು ಕಾಣುತ್ತಾನೆ. ಅದರ ಸಂಪಾದನೆಗಾಗಿ ಆಹೋರಾತ್ರಿ ದುಡಿಯುತ್ತಾನೆ. ಬಡತನ, ಸಂಕಷ್ಟಗಳನ್ನು ಅನುಭವಿಸಲು ಯಾರೂ ತಯಾರಾಗುವುದಿಲ್ಲ. ಅವುಗಳನ್ನು ಹೊಗಲಾಡಿಸಲಿಕ್ಕಾಗಿ ಸಂಪತ್ತಿನ ವೊರೆ ಹೋಗುತ್ತಾರೆ. ಸಂಪತ್ತು ಅಲ್ಲಾಹನ ದೊಡ್ಡ ಅನುಗ್ರಹವಾಗಿದೆ. ಅಲ್ಲಾಹನು ತಾನಿಚ್ಛಿಸಿದವನಿಗೆ ಅದನ್ನು ನೀಡುತ್ತಾನೆ. ಆದರೆ ಈ ಸಂಪತ್ತು ಮನುಷ್ಯನ ಜೀವಿತಾವಧಿಗೆ ಮಾತ್ರ ಸೀಮಿತಗೊಂಡಿದೆ. ಅವನ ಪ್ರಾಣ ಪಕ್ಷಿಯು ಶರೀರದಿಂದ ಬೇರ್ಪಡುವುದರೊಂದಿಗೆ ಅವನಿಗೂ ಅವನ ಸಂಪತ್ತಿಗೂ ಇರುವ ಸಂಬಂಧವೂ ಮುರಿದು ಹೋಗುತ್ತದೆ. ಮರಣಿಸಿ ಹೋಗುವಾಗ ಯಾರೂ ಕೂಡಾ ಸಂಪತ್ತನ್ನು ತನ್ನೊಂದಿಗೆ ಕೊಂಡೊಯ್ದದ್ದಿಲ್ಲ. ಕೊಂಡುಹೋಗಲಿಕ್ಕೂ ಇಲ್ಲ. ಎಷ್ಟೇ ದೊಡ್ಡ ಶ್ರೀಮಂತನಾದರೂ ಗೋರಿ ಸೇರುವಾಗ ಅವನು ಶೂನ್ಯ ಹಸ್ತನಾಗಿಯೇ ಇರುತ್ತಾನೆ. ಜಗತ್ತನ್ನೇ ಜಯಿಸಲು ಹೊರಟ ಅಲೆಗ್ಸಾಂಡರ್ ಚಕ್ರವರ್ತಿ ಮರಣ ಹೊಂದಿದಾಗ ಒಂದು ಸಂದೇಶವನ್ನು ಜಗತ್ತಿಗೆ ರವಾನಿಸಿದ್ದನು. ಒಂದು ಕೈಯನ್ನು ಶವಪೆಟ್ಟಿಗೆಯಿಂದ ಹೊರ ಹಾಕಿದ ಸ್ಥಿತಿಯಲ್ಲೇ ಅವನನ್ನು ದಫನ ಮಾಡಲಾಯಿತು. “ಮನುಷ್ಯರು ಮರಣ ಹೊಂದಿ ಹೋಗುವಾಗ ಬರಿ ಕೈಯಲ್ಲೇ ಹೋಗುತ್ತಾರೆ” ಎಂಬ ಉನ್ನತ ಸಂದೇಶವು ಅದರಲ್ಲಿತ್ತು.
ಈ ಲೋಕವು ಒಂದು ಬಸ್ ಇದ್ದಂತೆ. ನಾವು ಬಸ್ಸಿನಲ್ಲಿ ಹತ್ತಿ ಒಂದು ನಿಗದಿತ ಸ್ಥಳದ ವರೆಗೆ ಪ್ರಯಾಣಿಸುತ್ತೇವೆ. ಅದಕ್ಕಾಗಿ ನಾವು ಟಿಕೇಟನ್ನೂ ಖರೀದಿಸುತ್ತೇವೆ. ಆ ಸ್ಥಳ ತಲುಪುವ ವರೆಗೆ ಆ ಟಿಕೇಟಿಗೆ ಬೆಲೆ ಇರುತ್ತದೆ. ಅಲ್ಲಿ ತಲುಪಿದ ಬಳಿಕ ಆ ಟಿಕೆಟ್ ತನ್ನ ಬೆಲೆ ಕಳೆದುಕೊಳ್ಳುತ್ತದೆ. ನಂತರ ಅದು ಪ್ರಯೋಜನಕ್ಕೆ ಬರುವುದಿಲ್ಲ. ಈ ಲೋಕದ ಸ್ಥಿತಿಯೂ ಹಾಗೆಯೇ ಆಗಿದೆ. ಜೀವನವೆಂಬ ಪ್ರಯಾಣದಲ್ಲಿ ಮರಣ ಎಂಬ ನಿಲ್ದಾಣ ತಲುಪುವ ವರಗೆ ಸಂಪತ್ತೆಂಬ ಟಿಕೇಟ್ ನಮಗೆ ಪ್ರಯೋಜನ ನೀಡುತ್ತದೆ. ಆ ನಿಲ್ದಾಣದಲ್ಲಿ ಇಳಿಯುವುದರೊಂದಿಗೆ ಅದರೊಂದಿಗಿನ ಸಂಬಂಧವೇ ಬೇರ್ಪಡುತ್ತದೆ.
ಸಾಮಾಜಿಕ ಜೀವನದಲ್ಲಿ ಸಂಪತ್ತಿನಂತೆಯೇ ಕುಟುಂಬವೂ ಮುಖ್ಯವಾಗಿದೆ. ಯಾರಿಗೂ ಕೂಡಾ ಕುಟುಂಬವಿಲ್ಲದೆ ಏಕಾಂಗಿಯಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿಲ್ಲ. ಮನುಷ್ಯರ ಮಧ್ಯೆ ಕುಟುಂಬಕ್ಕೆ ಉನ್ನತ ಸ್ಥಾನವಿದೆ. ಜೀವನವನ್ನು ನೆಮ್ಮದಿದಾಯಕಗೊಳಿಸುವ ಹಾಗೂ ಬೀದಿಪಾಲು ಗೊಳಿಸುವ ಶಕ್ತಿಯು ಕುಟುಂಬಕ್ಕಿದೆ. ಜನನದಿಂದ ಮರಣದ ತನಕ ನವ್ಮೊಂದಿಗೆ ಕುಟುಂಬಿಕರು ಇರುತ್ತಾರೆ. ಮರಣ ಹೊಂದಿ ಗೋರಿ ಸೇರುವುದರೊಂದಿಗೆ ಕುಟುಂಬದೊಂದಿಗಿನ ಸಂಬಂಧವು ಮುರಿದು ಹೋಗುತ್ತದೆ. ಕುಟುಂಬವನ್ನು ಜೀವಕ್ಕಿಂತಲೂ ಹೆಚ್ಚು ಪ್ರೀತಿಸಿದರೂ ನಾವು ಮರಣ ಹೊಂದುವಾಗ ಅವರು ನವ್ಮೊಂದಿಗೆ ಬರಲಾರರು. ನಾವು ಏಕಾಂಗಿಯಾಗಿಯೇ ಹೋಗಬೇಕು.
ಮೇಲೆ ತಿಳಿಸಲಾದ ಸಂಪತ್ತು ಮತ್ತು ಕುಟುಂಬಗಳೆಂಬ ಅನುಗ್ರಹಗಳಿಗೆ ಕೆಲವು ಕೊರತೆಗಳಿವೆ. ಅವು ನಮಗೆ ಈ ಲೋಕದಲ್ಲಿ ಮಾತ್ರ ಪ್ರಯೋಜನ ನೀಡುತ್ತವೆ. ಪರಲೋಕದಲ್ಲಿ ಅವು ನಮಗೆ ಯಾವುದೇ ಪ್ರಯೋಜನ ನೀಡಲಿಕ್ಕಿಲ್ಲ. ನಾಳೆ ಪರಲೋಕದಲ್ಲಿ ವಿಚಾರಣೆಗೆ ಗುರಿಯಾಗುವಾಗ ಸಂಪತ್ತು ಅಥವಾ ಕುಟುಂಬವು ಅವನ ನೆರವಿಗೆ ಬರಲಿಕ್ಕಿಲ್ಲ. ತಾನು ಅತ್ಯಂತ ದೊಡ್ಡ ಶ್ರೀಮಂತ ವ್ಯಕ್ತಿ. ನಾನು ಮಸೀದಿಯ ಅಧ್ಯಕ್ಷನೂ ಸಮುದಾಯದ ನೇತಾರನೂ ಆಗಿದ್ದೆ ಎಂಬ ರಿಯಾಯಿತಿಯು ಅಲ್ಲಿ ಲಭಿಸಲಿಕ್ಕಿಲ್ಲ. ಅಲ್ಲಿ ನಮಗೆ ನಾವೇ ಜವಾಬ್ದಾರರಾಗಿರುತ್ತೇವೆ.
ಆದರೆ ಎಲ್ಲಾ ಸಂದರ್ಭಗಳಲ್ಲೂ ಕರ್ಮಗಳು ನವ್ಮೊಂದಿಗಿರುತ್ತವೆ. ಅವು ಉತ್ತಮ ಕರ್ಮಗಳಾಗಿದ್ದರೂ ದುಷ್ಕರ್ಮಗಳಾಗಿದ್ದರೂ ಸರಿಯೇ. ಸಂಪತ್ತು ಮತ್ತು ಕುಟುಂಬಗಳಂತೆ ಮರಣದೊಂದಿಗೆ ಕರ್ಮಗಳ ಸಂಬಂಧವು ಮುರಿದು ಹೋಗುವುದಿಲ್ಲ. ಮರಣದ ಬಳಿಕವೂ ಅವು ನಮ್ಮನ್ನು ಹಿಂಬಾಲಿಸುತ್ತವೆ. ಪರಲೋಕದಲ್ಲಿ ನಮ್ಮ ಕರ್ಮಗಳನ್ನು ಮಾನದಂಡವಾಗಿರಿಸಿ ಶಿಕ್ಷೆ-ರಕ್ಷೆ ನೀಡಲಾಗುತ್ತದೆ. ಮನುಷ್ಯರಿಗೆ ಕರ್ಮಗಳೊಂದಿಗಿನ ನೈಜ ಸಂಬಂಧವು ಸ್ಥಾಪನೆಯಾಗುವುದು ಮರಣದ ಬಳಿಕವೇ ಆಗಿದೆ.
ಪ್ರವಾದಿಯವರು(ಸ) ಹೇಳಿದರು, “ಮರಣ ಹೊಂದಿದ ವ್ಯಕ್ತಿಯನ್ನು ಮೂರು ವಿಷಯಗಳು ಹಿಂಬಾಲಿಸುತ್ತಿರುತ್ತವೆ. ಅವು ಕುಟುಂಬ, ಸಂಪತ್ತು ಮತ್ತು ಕರ್ಮಗಳಾಗಿವೆ. ಬಳಿಕ ಅವುಗಳಲ್ಲಿ ಎರಡು ವಸ್ತುಗಳು ಮರಳುತ್ತವೆ ಮತ್ತು ಒಂದು ಅವನೊಂದಿಗೆ ಉಳಿಯುತ್ತದೆ. ಕುಟುಂಬ ಮತ್ತು ಸಂಪತ್ತು ಮರಳಿ ಬರುತ್ತವೆ. ಕರ್ಮಗಳು ಅವನೊಂದಿಗೆ ಉಳಿಯುತ್ತವೆ.”
ಐಹಿಕ ಜೀವನದಲ್ಲಿ ಮನುಷ್ಯನು ತಿಳಿದೋ ತಿಳಿಯದೆಯೋ ಮಾಡಿದ ಕರ್ಮಗಳೆಲ್ಲವೂ ಮರಣದೊಂದಿಗೆ ಅವನ ಮುಂದೆ ಪ್ರತ್ಯಕ್ಷಗೊಳ್ಳುತ್ತವೆ. ಅಲ್ಲಿಯ ವರೆಗೆ ಅವನು ರಹಸ್ಯವಾಗಿರಿಸಿದ ಕರ್ಮಗಳು ಅವನಿಗೆ ರಕ್ಷೆಯನ್ನೂ ಶಿಕ್ಷೆಯನ್ನೂ ನೀಡುತ್ತವೆ.
ಬರ್ರಾಅï ಬಿನ್ ಆಸಿಬಿಯವರಿಂದ(ರ) ಇಮಾಮ್ ಅಹ್ಮದ್ ವರದಿ ಮಾಡುತ್ತಾರೆ: ಪ್ರವಾದಿಯವರು(ಸ) ಹೇಳಿದರು, “(ಸತ್ಯವಿಶ್ವಾಸಿಯಾದ ಓರ್ವನ ಆತ್ಮವು ಗೋರಿಗೆ ತಲುಪಿದಾಗ) ಉತ್ತಮವಾದ ವಸ್ತ್ರಧರಿಸಿದ ಸುಂದರ ವ್ಯಕ್ತಿಯು ಪರಿಮಳ ಸೂಸುತ್ತಾ ಅಲ್ಲಿಗೆ ಬರುತ್ತಾರೆ. ಬಳಿಕ ಅವರು ಹೇಳುವರು, ‘ಸಂತೋಷಪಡಿರಿ. ಆನಂದದಾಯಕವಾದ ಎಲ್ಲವನ್ನೂ ತಮಗೆ ತಯಾರಿಸಿಡಲಾಗಿದೆ. ಇದು ಭರವಸೆ ನೀಡಲ್ಪಟ್ಟ ಆ ದಿನವಾಗಿದೆ.’ ಆಗ ವಿಶ್ವಾಸಿಯು ಕೇಳುವನು. ‘ತಾವು ಯಾರು? ಸುಂದರವಾದ ತಮ್ಮ ಮುಖವನ್ನು ನೋಡುವಾಗ ಸಂತೋಷವಾಗುತ್ತದೆ.’ ಆಗ ಅವರು ಹೇಳುವರು, ‘ನಾನು ನಿನ್ನ ಸತ್ಕರ್ಮಗಳಾಗಿದ್ದೇನೆ.’ ಆಗ ಸತ್ಯವಿಶ್ವಾಸಿ ಹೇಳುವನು, ‘ಓ ನನ್ನ ಪ್ರಭೂ ಅಂತ್ಯ ದಿನವನ್ನು ಬೇಗನೇ ತಲುಪಿಸಿದ್ದರೆ ಎಷ್ಟು ಒಳ್ಳೆಯದಿತ್ತು. ನನಗೆ ನನ್ನ ಕುಟುಂಬಿಕರ ಬಳಿ ಮರಳಿ ಸುಖವಾಗಿ ಜೀವಿಸಬಹುದಾಗಿತ್ತು.’ (ಆದರೆ ಸತ್ಯನಿಷೇಧಿಯಾದ ಆತ್ಮವು ಗೋರಿಗೆ ತಲುಪಿದಾಗ) ಕೊಳೆಯಾದ ವಸ್ತ್ರಧರಿಸಿ ಕುರೂಪಿಯಾದ ಓರ್ವರು ದುರ್ಗಂಧ ಬೀರುತ್ತಾ ಬರುವರು. ಬಳಿಕ ಅವರು ಹೇಳುವರು, ‘ನಿನಗೆ ನಾಶವಿದೆ. ಇದು ಭರವಸೆ ನೀಡಲಾದ ದಿನವಾಗಿದೆ.’ ಆಗ ಸತ್ಯನಿಷೇಧಿಯು ಕೇಳುವನು. ‘ನೀನು ಯಾರು? ನಿನ್ನ ಕೆಟ್ಟ ಮುಖವನ್ನು ನೋಡುವಾಗಲೇ ಅಸಹ್ಯವಾಗುತ್ತಿದೆ.’ ಆಗ ಅವರು ಹೇಳುವರು, ‘ನಾನು ನಿನ್ನ ದುಷ್ಕರ್ಮಗಳಾಗಿದ್ದೇನೆ.’ ಈ ಸಂದರ್ಭದಲ್ಲಿ ಸತ್ಯನಿಷೇಧಿಯು ‘ಓ ನನ್ನ ಪ್ರಭೂ, ಆ ಅಂತ್ಯದಿನವು ಬೇಗನೇ ಬರದಿದ್ದರೆ ಎಷ್ಟು ಒಳ್ಳೆಯದಿತ್ತು’ ಎಂದು ಅಳುತ್ತಾ ಹೇಳುವನು.”
ಆದ್ದರಿಂದ ತಾತ್ಕಾಲಿಕವಾಗಿ ಈ ಲೋಕದಲ್ಲಿ ಮಾತ್ರ ನವ್ಮೊಂದಿಗಿರುವ ಸಂಪತ್ತು ಮತ್ತು ಕುಟುಂಬಗಳೆಂಬ ಗೆಳೆಯರ ಗಳಿಕೆಗಾಗಿ ನಮ್ಮ ಜೀವನವನ್ನು ವ್ಯರ್ಥಗೊಳಿಸದೆ ಇಹಲೋಕದಲ್ಲೂ ಪರಲೋಕದಲ್ಲೂ ಸದಾ ನವ್ಮೊಂದಿಗಿರುವ ಕರ್ಮಗಳೆಂಬ ಗೆಳೆಯನ ಸಂಪಾದನೆಗಾಗಿ ನಾವು ಪ್ರಯತ್ನಿಸಬೇಕು. ತಾತ್ಕಾಲಿಕವಾದ ಇಹಲೋಕಕ್ಕಾಗಿ ಶಾಶ್ವತವಾದ ಪರಲೋಕವನ್ನು ಕಳೆದುಕೊಳ್ಳಬೇಕೇ?