ಮಂಗಳವಾರ, ಜುಲೈ 10, 2012

ಆತ್ಮಾವಲೋಕನಕ್ಕೆ ಸಿದ್ಧರಾಗೋಣ


ಓರ್ವ ವಿಶ್ವಾಸಿಯು ಹೃದಯದಲ್ಲಿ ಸದಾ ದೇವಭಯವನ್ನಿರಿಸುತ್ತಾನೆ. ಅವನು ಎಲ್ಲಾ ಕ್ಷೇತ್ರದಲ್ಲೂ ಎಲ್ಲಾ ವ್ಯವಹಾರಗಳಲ್ಲೂ ದೇವನಿಗೆ ಪ್ರಥಮ ಆದ್ಯತೆ ನೀಡುತ್ತಾನೆ. ಪ್ರತೀ ಕೆಲಸಕ್ಕೆ ಮುಂದಾಗುವಾಗಲೂ ಅವನು ದೇವನ ಆಜ್ಞೆ ಏನು ಎಂಬುದನ್ನು ತಿಳಿದ ಬಳಿಕವಷ್ಟೇ ಅದನ್ನು ಮಾಡುತ್ತಾನೆ. ಅವನು ತನಗೂ ದೇವನಿಗೂ ಮಧ್ಯೆ ಇರುವ ಅಂತರವನ್ನು ಕಡಿಮೆಗೊಳಿಸಲು ಬೇಕಾಗುವ ಎಲ್ಲವನ್ನೂ ಮಾಡುತ್ತಾನೆ. ನಮಾಝಿನಲ್ಲಿ ಕೈ ಕಟ್ಟಿದ ಬಳಿಕ “ನನ್ನ ನಮಾಝ್, ನನ್ನ ಬಲಿಕರ್ಮಗಳು, ನನ್ನ ಜೀವನ ಮತ್ತು ನನ್ನ ಮರಣವು ಸರ್ವಲೋಕಗಳ ಪರಿಪಾಲಕನಿಗಾಗಿದೆ” ಎಂದು ಮನಸರಿತು ಹೇಳುತ್ತಾನೆ. ಆದರೆ ಇದು ಕೇವಲ ನಮಾಝಿಗೆ ಮಾತ್ರ ಸೀಮಿತಗೊಳ್ಳದೆ ಅವನ ಜೀವನದ ಎಲ್ಲಾ ರಂಗಗಳಲ್ಲೂ ಗೋಚರವಾಗುತ್ತದೆ. 
ವಿಶ್ವಾಸಿಯು ದೇವನ ಕರುಣೆಯ ಕುರಿತು ಹೆಚ್ಚು ನಿರೀಕ್ಷೆಯಿರಿಸಿರುತ್ತಾನೆ. ಅದರೊಂದಿಗೆ ದೇವನ ಶಿಕ್ಷೆಯ ಕುರಿತು ಸದಾ ಚಿಂತಿತನಾಗಿರುತ್ತಾನೆ. ಹೃದಯವು ಅದರ ಕುರಿತು ಕಂಪಿಸುತ್ತಿರುತ್ತದೆ. ಆಯಿಶಾ(ರ) ವರದಿ ಮಾಡಿದ್ದಾರೆ. ಆಯಿಶಾ(ರ) ಪ್ರವಾದಿಯವರೊಂದಿಗೆ ಕೇಳಿದರು, “ಅಲ್ಲಾಹನ ಸಂದೇಶವಾಹಕರೇ “ತಮ್ಮ ಪ್ರಭುವಿನ ಕಡೆಗೆ ಮರಳಲಿಕ್ಕಿದೆಯೆಂಬ ಪ್ರಜ್ಞೆಯಿಂದ ಕಂಪಿಸುತ್ತಿರುವ ಹೃದಯಗಳಿರುವವರು” (ಅಲ್ ಮೂಮಿನೂನ್- 60) ಎಂದು ಕುರಾನ್ ಹೇಳಿರುವುದು, ವ್ಯಭಿಚಾರ, ಕಳ್ಳತನ, ಮದ್ಯಪಾನ ಮಾಡಿರುವ ವ್ಯಕ್ತಿಗಳ ಕುರಿತಲ್ಲವೇ? ಆಗ ಪ್ರವಾದಿಯವರು(ಸ) ಹೇಳಿದರು. “ಓ ಅಬೂಬಕ್ಕರ್ರ(ರ) ಪುತ್ರಿಯೇ ಅಲ್ಲ. ಇದು ಉಪವಾಸ ಆಚರಿಸುವ, ನಮಾಝ್ ನಿರ್ವಹಿಸುವ, ದಾನ-ಧರ್ಮ ಮಾಡುವ ವ್ಯಕ್ತಿಗಳ ಕುರಿತಾಗಿದೆ. ತನ್ನ ಕರ್ಮಗಳನ್ನು ಅಲ್ಲಾಹನು ಸ್ವೀಕರಿಸಲಿಕ್ಕಿಲ್ಲ ಎಂದು ಅವರು ಭಯಪಡುತ್ತಿರುವರು.”
ವಿಶ್ವಾಸಿಗೆ ತನ್ನ ಸೃಷ್ಟಿಕರ್ತನ ಮಹಿಮೆಯ ಕುರಿತು ಅಪಾರ ಜ್ಞಾನ  ಹೊಂದಿರುತ್ತಾನೆ. ದೇವನ ಮುಂದೆ ತನ್ನ ಕುಬ್ಜತನವನ್ನು ಮನಸಾರೆ ಒಪ್ಪಿಕೊಳ್ಳುತ್ತಾನೆ. ತನ್ನ ಜೀವನದ ಗುರಿಯ ಕುರಿತು ಪ್ರಜ್ಞಾವಂತನಾಗಿರುತ್ತಾನೆ. ಆ ಗುರಿಯೆಡೆಗೆ ಸಾಗಲಿಕ್ಕಾಗಿ ಎಲ್ಲಾ ರೀತಿಯ ಕಷ್ಟಗಳನ್ನು ಅನುಭವಿಸಲು ತಯಾರಾಗುತ್ತಾನೆ. ದೇವನ ಆಜ್ಞಾನುಸಾರ ಅವನು ಹಲವಾರು ಕರ್ಮಗಳನ್ನೆಸಗುತ್ತಾನೆ. ಜನರು ಆ ಕರ್ಮಗಳೆಲ್ಲವೂ ಮೌಲ್ಯಯುತವಾದುದೆಂದು ಒಪ್ಪಿಕೊಳ್ಳುತ್ತಾರೆ ಮತ್ತು ಅವನನ್ನು ಗೌರವಿಸುತ್ತಾರೆ. ಆದರೆ ಓರ್ವ ವಿಶ್ವಾಸಿಗೆ ಇವೆಲ್ಲವೂ ನಗಣ್ಯವಾಗಿದೆ. ಅಲ್ಲಾಹನ ಸಂಪ್ರೀತಿಗೆ ಪಾತ್ರವಾಗಲು, ಅವನ ಶಿಕ್ಷೆಯಿಂದ ಪಾರಾಗಲು ಜನರು ತನ್ನ ಬಗ್ಗೆ ಮಾಡುವ ಪ್ರಶಂಸೆಯು ಯಾವುದೇ ಪ್ರಯೋಜನ ನೀಡುವುದಿಲ್ಲ ಎಂದು ಅವನು ದೃಢವಾಗಿ ನಂಬುತ್ತಾನೆ. ತನ್ನ ಕರ್ಮಗಳು ತೋರಿಕೆಯಾಗಿ ಮಾರ್ಪಡುವುದೋ ಎಂಬ ಬಗ್ಗೆ ಸದಾ ಚಿಂತಿತನಾಗಿರುತ್ತಾನೆ. ತೋರಿಕೆಗಾಗಿ ಮಾಡುವ ಕರ್ಮವು ಅತ್ಯಂತ ಸಣ್ಣ ಶಿರ್ಕ್ ಆಗಿದೆಯಷ್ಟೇ. ಅಲ್ಲಾಹನು ನಮ್ಮ ಸೌಂದರ್ಯವನ್ನೊ ಸಂಪತ್ತನ್ನೋ ಪದವಿಗಳನ್ನೋ ನೋಡುವುದಿಲ್ಲ. ಬದಲಾಗಿ ನಮ್ಮ ಹೃದಯಕ್ಕೂ ಕರ್ಮಗಳಿಗೂ ನೋಡುತ್ತಾನೆ. ನಾವು ಎಷ್ಟು ಕರ್ಮಗಳನ್ನೆಸಗಿದ್ದೇವೆ ಎಂಬುದು ಮುಖ್ಯವಲ್ಲ. ಹೇಗೆ ಕರ್ಮಗಳನ್ನೆಸಗಿದ್ದೇವೆ ಎಂಬುದು ಮುಖ್ಯ. ಕರ್ಮಗಳ ಹಿಂದಿರುವ ಉದ್ದೇಶದ ಕಡೆಗೆ ಅಲ್ಲಾಹನು ನೋಡುತ್ತಾನೆ. ಆದ್ದರಿಂದ ವಿಶ್ವಾಸಿಯು ತನ್ನ ಕರ್ಮಗಳು ನಿಶ್ಫಲಗೊಳ್ಳುವುದೇ ಎಂಬ ಕುರಿತು ಸದಾ ಚಿಂತಿತನಾಗಿರುತ್ತಾನೆ.
ಕುದ್ಸಿಯಾದ ಹದೀಸ್ನಲ್ಲಿ ಹೀಗಿದೆ. “ಅಲ್ಲಾಹನು ಹೇಳುತ್ತಾನೆ. ನನ್ನ ಪ್ರತಾಪದ ಮೇಲಾಣೆ. ನನ್ನ ದಾಸರ ಮೇಲೆ ಎರಡು ಸಂದರ್ಭಗಳ ಭಯ ಹಾಗೂ ನಿರ್ಭಯವನ್ನು ಒಟ್ಟಿಗೆ ನೀಡಲಿಕ್ಕಿಲ್ಲ. ಇಹಲೋಕದಲ್ಲಿ ನನ್ನ ಭಯವಿರಿಸಿ ಜೀವಿಸಿದವನಿಗೆ ನಾಳೆ ಪರಲೋಕದಲ್ಲಿ ನಾನು ಅವನಿಗೆ ನಿರ್ಭಯ ನೀಡುವೆನು. ಇಹಲೋಕದಲ್ಲಿ ನನ್ನ ಭಯವಿಲ್ಲದೆ ಜೀವಿಸಿದವನಿಗೆ ನಾಳೆ ಪರಲೋಕದಲ್ಲಿ ನಾನು ಭಯವನ್ನು ನೀಡುವೆನು.” ಇನ್ನೊಂದು ಪ್ರವಾದಿ ವಚನವು ಹೀಗಿದೆ. “ಯಾವ ವಸ್ತುವಿನ ಬಗ್ಗೆ ಮನುಷ್ಯನು ಭಯ ಭೀತನಾಗಿರುತ್ತಾನೋ ಆ ವಸ್ತುವಿನಿಂದ ದೂರ ಸರಿಯಲು ಅವನು ಪ್ರಯತ್ನಿಸುತ್ತಾನೆ. ಆದರೆ ಅಲ್ಲಾಹನನ್ನು ಭಯಪಡುವವನು ಅವನಿಂದ ದೂರ ಸರಿಯುವುದಲ್ಲ. ಬದಲಾಗಿ ಅವನ ಬಳಿಗೆ ಓಡಿ ಹೋಗಲು ಬಯಸುತ್ತಾನೆ.”
ಅಲ್ಲಾಹನ ಕುರಿತು ಭಯವೂ, ನಿರೀಕ್ಷೆಯೂ ಸದಾ ನಮ್ಮ ಮನಸ್ಸಿನಲ್ಲಿ ಜಾಗೃತವಾಗಿರಬೇಕು. ನಾವು ಅಲ್ಲಾಹನ ಸಂಪ್ರೀತಿಗಾಗಿ ಏನೆಲ್ಲಾ ಕಸರತ್ತು ನಡೆಸುತ್ತೇವೆ. ಭಯ ಭಕ್ತಿಯಿಂದ ನಮಾಝ್ ನಿರ್ವಹಿಸುತ್ತೇವೆ. ಕೊಡುಗೈ ದಾನಿ ಎಂದು ಜನರಾಡಿಕೊಳ್ಳುವಷ್ಟರ ಮಟ್ಟಿಗೆ ದಾನ-ಧರ್ಮ ನೀಡುತ್ತೇವೆ. ಆದರೆ ಅದರ ಮರುಕ್ಷಣದಲ್ಲೇ ಅವೆಲ್ಲವೂ ನಿಶ್ಫಲಗೊಳ್ಳುವಂತಹ, ನಾವು ಕ್ಷುಲ್ಲಕವೆಂದು ಭಾವಿಸುವ ತಪ್ಪುಗಳನ್ನು ಮಾಡಿ ಬಿಡುತ್ತೇವೆ. ಅಲ್ಲಾಹನ ಕರುಣೆಯ ಮೇಲೆ ಮಾತ್ರ ವಿಪರೀತ ನಿರೀಕ್ಷೆ ಇರಿಸಿ ತಪ್ಪುಗಳನ್ನೆಸಗುತ್ತಾ ಜೀವಿಸುವುದು ವಿಶ್ವಾಸಿಗಳ ಲಕ್ಷಣವಲ್ಲ.
ವಿಶ್ವಾಸಿಗಳು ಅಲ್ಲಾಹನ ಪ್ರೀತಿಗೆ ಪಾತ್ರರಾಗಲು ಸದಾ ಹಂಬಲಿಸುತ್ತಿರುತ್ತಾರೆ. ಅವರ ಇಹಲೋಕ ಜೀವನದ ಸರ್ವಸ್ವವು ಅಲ್ಲಾಹನ ಸಂಪ್ರೀತಿಯಗಳಿಯಾಗಿರುತ್ತದೆ. ಉಮರ್(ರ) ಹೇಳಿರುವರು. “ಆಕಾಶದಿಂದ “ಓ ಜನರೇ ನಿಮ್ಮಲ್ಲಿ ಇಂತಹ ವ್ಯಕ್ತಿಯ ಹೊರತು ಉಳಿದೆಲ್ಲರೂ ಸ್ವರ್ಗಕ್ಕೆ ಪ್ರವೇಶಿಸಿರಿ” ಎಂಬ ಕರೆ ಕೇಳಿದರೆ, ಸ್ವರ್ಗಕ್ಕಿರುವ ಗುಂಪಿನಿಂದ ಕೈಬಿಡಲ್ಪಟ್ಟ ವ್ಯಕ್ತಿ ನಾನಾಗಿರಬಹುದೇ ಎಂದು ನಾನು ಭಯಪಡುತ್ತೇವೆ. ಅದೇ ರೀತಿ “ಓ ಜನರೇ ನಿಮ್ಮಲ್ಲಿ ಇಂತಹ ವ್ಯಕ್ತಿಯ ಹೊರತು ಉಳಿ ಕೆÉೀಳಿದರೆ ಆ ಕೈ ಬಿಡಲ್ಪಟ್ಟ ವ್ಯಕ್ತಿ ನಾನಾಗಿರಬೇಕು ಎಂದು ನಿರೀಕ್ಷೆ ಇರಿಸುತ್ತೇನೆ.”
ಆದ್ದರಿಂದ ನಾವು ನಮ್ಮ ಜೀವನದ ಕಡೆಗೊಮ್ಮೆ ಕಣ್ಣೋಡಿಸಬೇಕಾಗಿದೆ. ನಾವು ಎಸಗುವ ಕರ್ಮಗಳು ಜನರ ಪ್ರಶಂಸೆ ಸಂಪಾದಿಸುವುದಕ್ಕೋಸ್ಕರವಾದರೆ ಅಂತಹ ಕರ್ಮಗಳಿಂದ ಯಾವುದೇ ಪ್ರಯೋಜನವಿಲ್ಲ. ಮಾತ್ರವಲ್ಲ ಅಂಥ ಕರ್ಮಗಳ ಹೆಸರಿನಲ್ಲಿ ಶಿಕ್ಷೆಗೂ ಗುರಿಯಾಗಬಹುದು. ಉಮರ್(ರ) ಹೇಳಿರುವರು, “ನಾವು ವಿಚಾರಣೆಗೆ ಗುರಿಯಾಗುವುದಕ್ಕಿಂತ ಮುಂಚೆಯೇ ನಾವು ಸ್ವತಃ ವಿಚಾರಣೆ ನಡೆಸಬೇಕು.” ಈ ನಿಟ್ಟಿನಲ್ಲಿ ನಮ್ಮ ಕರ್ಮಗಳ ಕುರಿತು ಆತ್ಮಾವಲೋಕನ ನಡೆಸಬೇಕಾಗಿದೆ. ಸತ್ಕರ್ಮಗಳನ್ನು ಮಾಡಿ ಆ ಸತ್ಕರ್ಮಗಳು ನಿಶ್ಪ್ರಯೋಜಕವಾಗುವ ಹತಭಾಗ್ಯರ ಗುಂಪಿಗೆ ಸೇರದಂತೆ ನಾವು ಸದಾ ಜಾಗೃತರಾಗಬೇಕಾಗಿದೆ. ಅದಕ್ಕಾಗಿ ಸರ್ವಲೋಕಗಳ ಪರಿಪಾಲಕರು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ